ಬೆಂಗಳೂರು: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಹಿರಿಯ ಸಾಹಿತಿ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ 70ನೇ ಹುಟ್ಟುಹಬ್ಬದ ಪ್ರಯುಕ್ತ ಅಭಿನಂದನಾ ಕಾರ್ಯಕ್ರಮ ಮತ್ತು ಗ್ರಂಥಗಳ ಲೋಕಾರ್ಪಣೆ ಸಮಾರಂಭವನ್ನು ಜೂನ್ 5, ಭಾನುವಾರ ಸಂಜೆ 5:30ಕ್ಕೆ ನಗರದ ಶಿವಾನಂದ ವೃತ್ತದಲ್ಲಿರುವ ಗಾಂಧಿಭವನದ “ಮಹಾದೇವ ದೇಸಾಯಿ ಸಭಾಂಗಣ”ದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ತುಮಕೂರು ಶ್ರೀಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ವಹಿಸಲಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಡಾ. ಶಿವರಾಜ ವಿ. ಪಾಟೀಲ ಅವರು ಅಧ್ಯಕ್ಷತೆ ವಹಿಸುವರು.
ನಾಡೋಜ ಡಾ. ವೂಡೇ ಪಿ. ಕೃಷ್ಣ ಅವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿರುವ ಪ್ರೊ. ಮಲ್ಲೇಪುರಂ ೭೦ರ ಅಭಿನಂದನಾ ಗ್ರಂಥ “ಸಮಾಹಿತ” ಮತ್ತು ಡಾ. ಸಂತೋಷ ಹಾನಗಲ್-ಸ್ವ್ಯಾನ್ ಕೃಷ್ಣಮೂರ್ತಿ ಅವರ ಸಂಪಾದಕತ್ವದಲ್ಲಿ ಮೂಡಿ ಬಂದಿರುವ ಪ್ರೊ. ಮಲ್ಲೇಪುರಂ ಚಿತ್ರವಿಹಾರ “ಸಪ್ತತಿ” ಗ್ರಂಥಗಳನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪದ್ಮಭೂಷಣ ಡಾ. ಚಂದ್ರಶೇಖರ ಕಂಬಾರ ಅವರು ಲೋಕಾರ್ಪಣೆ ಮಾಡುವರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಅಧ್ಯಾತ್ಮ ಚಿಂತಕಿ ಡಾ. ವೀಣಾ ಬನ್ನಂಜೆ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ. ಕೃಷ್ಣ ಅವರು ಅಭಿನಂದನಾ ನುಡಿಗಳನ್ನಾಡುವರು. ಮುಖ್ಯ ಅತಿಥಿಗಳಾಗಿ ಒರಿಸ್ಸಾ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊಛಾನ್ಸೆಲರ್ ಪ್ರೊ. ಪಿ.ವಿ. ಕೃಷ್ಣಭಟ್ಟ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎನ್. ಕುಮಾರ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಆರಂಭದಲ್ಲಿ ಜಿ. ಕೃಷ್ಣಮೂರ್ತಿ ಮತ್ತು ತಂಡ, ನೆಲಮಂಗಲ ಇವರಿಂದ ರಂಗಗೀತೆಗಳ ಗಾಯನ ಹಾಗೂ ವಿದ್ವಾನ್ ಖಾಸಿಂ ಮಲ್ಲಿಗೆ ಮಡುವು ಅವರಿಂದ ಶಾಸ್ತ್ರೀಯ ಗಾಯನ ಹಾಗೂ ಅಮರ ನಾರಾಯಣ ನಿರ್ಮಾಣದ “ಪ್ರೊ. ಮಲ್ಲೇಪುರಂ ಸಾಕ್ಷ್ಯಚಿತ್ರ ಪ್ರದರ್ಶನ” ನಡೆಯಲಿದೆ ಎಂದು ಪ್ರೊ. ಮಲ್ಲೇಪುರಂ ೭೦ರ ಅಭಿನಂದನಾ ಸಮಿತಿಯ ಅಧ್ಯಕ್ಷರಾದ ಡಾ. ಕೆ.ಜಿ. ಲಕ್ಷ್ಮೀನಾರಾಯಣಪ್ಪ ಮತ್ತು ಕಾರ್ಯದರ್ಶಿಗಳಾದ ಡಾ. ಪ್ರಕಾಶ್ ಆರ್. ಪಾಗೋಜಿ ಮತ್ತು ಡಾ. ಸಂತೋಷ ಹಾನಗಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.