|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇಂದು ವಿಶ್ವ MSME ದಿನ (ಜೂನ್ 27): ಭಾರತೀಯ ಆರ್ಥಿಕತೆಯ ಹೊಸ ಯುಗದ ವೇಗವರ್ಧಕ

ಇಂದು ವಿಶ್ವ MSME ದಿನ (ಜೂನ್ 27): ಭಾರತೀಯ ಆರ್ಥಿಕತೆಯ ಹೊಸ ಯುಗದ ವೇಗವರ್ಧಕ


ಸಣ್ಣದು ಸುಂದರವಾಗಿಸೋಣ | ಆರ್ಥಿಕ ಬೆಳವಣಿಗೆಯ ವೇಗವರ್ಧಕ | ಭಾರತದ ಆರ್ಥಿಕ ಪ್ರಗತಿಯ ಆಶಾಕಿರಣ 

 



ಪ್ರಗತಿಗೆ ಅನನ್ಯ ಕೊಡುಗೆ

ಪುರಾತನ ಕಾಲದಿಂದಲೂ ಭಾರತ ಉದ್ಯಮಶೀಲ ರಾಷ್ಟ್ರವಾಗಿದೆ. ಸಮಕಾಲೀನ ಭಾರತದಲ್ಲಿಯೂ ಸಣ್ಣ ಉದ್ದಿಮೆ ಕ್ಷೇತ್ರ ಪ್ರಬಲವಾಗಿಯೇ ಇದೆ. ಈ ಕ್ಷೇತ್ರಕ್ಕೆ ಒSಒಇ ಎನ್ನುತ್ತಾರೆ. ಅಂದರೆ ಮೈಕ್ರೋ (ಸೂಕ್ಷ್ಮ) ಸ್ಮಾಲ್ (ಸಣ್ಣ) ಮತ್ತು ಮೀಡಿಯಂ (ಮಧ್ಯಮ) ಉದ್ಯಮಗಳು. ದೇಶದ ಅರ್ಥವ್ಯವಸ್ಥೆಗೆ ಹೆಚ್ಚು ಕೊಡುಗೆ ನೀಡುವಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಪಾತ್ರ ಅನನ್ಯವಾಗಿದೆ. ಬೃಹತ್ ಕೈಗಾರಿಕಾ ಕ್ಷೇತ್ರಕ್ಕಿಂತ ಹೆಚ್ಚು ಉದ್ಯೋಗವಕಾಶಗಳು ಸಣ್ಣ ಮತ್ತು ಮದ್ಯಮ ಉದ್ಯಮಗಳಲ್ಲಿ ಸೃಷ್ಟಿಯಾಗಿದೆ. ಆರ್ಥಿಕತೆಯ ನವಯುಗದಲ್ಲಿ ಭಾರತೀಯ ಆರ್ಥಿಕತೆಯ ವೇಗವರ್ಧಕಗಳಾಗಿ ಹೊರಹೊಮ್ಮಿರುವ MSME ಗಳ ಪಾತ್ರವನ್ನು ಹಾಗೂ ಸವಾಲುಗಳನ್ನು ಗುರುತಿಸಿ ಪೂರಕ ವಾತಾವರಣ ಕಂಡುಕೊಳ್ಳುವ ಅಗತ್ಯ ಇದೆ.


MSME ದಿನ:

ಅಂತಾರಾಷ್ಟ್ರೀಯ ಕೌನ್ಸಿಲ್ ಫಾರ್ ಸ್ಮಾಲ್ ಬಿಸಿನೆಸ್ ಪ್ರಕಾರ ಶೇ.95 ರಷ್ಟು ಉದ್ದಿಮೆಗಳು ಅಪೌಚಾರಿಕ ಹಾಗೂ ಅನೌಪಚಾರಿಕ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಾಗಿದ್ದು ಜಾಗತಿಕವಾಗಿ ಶೇ.70ರಷ್ಟು ಉದ್ಯೋಗ ಹಾಗೂ ಶೇ.50ರಷ್ಟು ಜಿಡಿಪಿಗೆ ಕೊಡುಗೆಯನ್ನು ನೀಡುತ್ತವೆ. ಸುಸ್ಥಿರ ಅಭಿವೃದ್ಧಿ ಮತ್ತು ಜಾಗತಿಕ ಆರ್ಥಿಕತೆಗೆ ನೀಡುವ ಕೊಡುಗೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜೂನ್ 27 ನ್ನು MSME ದಿನ ಎಂದು ವಿಶ್ವ ಸಂಸ್ಥೆಯು ಘೋಷಿಸಿದೆ.


“ಸಣ್ಣದು ಸುಂದರ” ಪರಿಕಲ್ಪನೆ:

ಕೈಗಾರಿಕೆಗಳು ಒಂದು ದೇಶದ ಮೂಳೆಗಳಿದ್ದಂತೆ. ಮಾನವ ದೇಹಕ್ಕೆ ಪೂರ್ಣ ಚೈತನ್ಯವನ್ನು ಒದಗಿಸಲು ಮೂಳೆಗಳು ಹೇಗೆ ಅವಶ್ಯಕವೋ ಅಂತೆಯೇ ಆರ್ಥಿಕತೆಗೆ ಚೇತನ ನೀಡಿ ದೀರ್ಘಕಾಲೀನ ಅಭಿವೃದ್ಧಿ ಸಾಧನೆಗೆ ನೆರವಾಗಲು ಕೈಗಾರಿಕೆಗಳು ಅಟಿ ಅಗತ್ಯ. ವಾಸ್ತವವಾಗಿ ಸಣ್ಣ ಉದ್ಯಮ ಕೈ ಹಾಕದ ಕ್ಷೇತ್ರವಿಲ್ಲ. ಅತ್ಯಂತ ಕ್ಲಿಷ್ಟವಾದ ಹಾಗೂ ತಾಂತ್ರಿಕತೆ ಬಹಳವಾಗಿ ಪಾತ್ರವಹಿಸುವ ಕಾರ್ಯವನ್ನು ಕೂಡಾ ಸಣ್ಣ ಉದ್ಯಮಗಳು ನಿಭಾಯಿಸಿವೆ. ಸರಳವಾದ ಯಂತ್ರಗಳ ಸಹಾಯದಿಂದ ಹೆಚ್ಚು ತರಬೇತಿಯಿಲ್ಲದೆ ಕಾರ್ಯನಿರ್ವಹಿಸುವ ಚಾಕಚಕ್ಯತೆಯನ್ನು ಪ್ರದರ್ಶಿಸಿವೆ.


ಮಹಾತ್ಮಾ ಗಾಂಧೀಜಿಯವರ ಸ್ವಾವಲಂಬಿ ಗ್ರಾಮದ ಪರಿಕಲ್ಪನೆ ಹಾಗೂ ಅವರಿಂದ ಪ್ರೇರಿತರಾದ ಶುಮೇಕರ್ ಅವರ “ಸಣ್ಣದು ಸುಂದರ” ಪರಿಕಲ್ಪನೆ ಈ ನಿಟ್ಟಿನಲ್ಲಿ ಬಹಳ ಆಪ್ಯಾಮಾನವಾಗಿ ಕಾಣುತ್ತದೆ. ಪುಟ್ಟ ಪುಟ್ಟ ವ್ಯವಹಾರಗಳು ಇಂದು ರಾಷ್ಟ್ರದ “ಆರ್ಥಿಕ ಇಂಜಿನ್” ಗಳಾಗಿ ನಮಗೆ ಗೋಚರಿಸುತ್ತದೆ. 

ದೇಶದಲ್ಲಿ ಕೃಷಿ ಬಿಟ್ಟರೆ ಅತ್ಯಧಿಕ ಪ್ರಮಾಣದಲ್ಲಿ ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಕ್ಷೇತ್ರವೇ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ. ಇವನ್ನು ‘ವಿಶ್ವದ ಪ್ರಗತಿಯ ಇಂಜಿನ್’ ಎಂದೇ ಗುರುತಿಸಲಾಗಿದೆ.


ಸುಸ್ಥಿರ ಮತ್ತು ಸೇರ್ಪಡೆಯುಳ್ಳ ಪ್ರಗತಿಗೆ ಪೂರಕ

ಭಾರೀ ಪ್ರಮಾಣದ ಬಂಡವಾಳದ ಹೂಡಿಕೆಯ ಅಗತ್ಯವಿಲ್ಲದ ಹಳ್ಳಿ ಹಾಗೂ ಸಣ್ಣ ನಗರಗಳಲ್ಲಿ ಸುಲಭವಾಗಿ ಆರಂಭಿಸಬಹುದಾದ MSME ಗಳು ದುಡಿಯುವ ಕೈಗಳಿಗೆ ಭಾರೀ ಪ್ರಮಾಣದ ಉದ್ಯೋಗ ನೀಡುವ ಕೇಂದ್ರಗಳಾಗಿ ಬೆಳೆದು ನಿಂತಿವೆ.


2020ರ ಹಣಕಾಸು ವರ್ಷದಲ್ಲಿ 6.34 ಕೋಟಿ ‘ಎಂಎಸ್‍ಎಂಇ’ ಹೊಂದಿರುವ ಭಾರತವು ಜಾಗತಿಕವಾಗಿ ಚೈನಾದ ನಂತರ ಅತೀ ಹೆಚ್ಚು ಸಂಖ್ಯೆಯ ಚಟುವಟಿಕೆಯನ್ನು ಹೊಂದಿರುವ ದೇಶವಾಗಿದೆ. 12 ಕೋಟಿ ಜನರಿಗೆ ಉದ್ಯೋಗ ನೀಡುವ ಈ ಕ್ಷೇತ್ರ ದೇಶೀಯ ಉತ್ಪನ್ನಕೆ ಸುಮಾರು ಶೇ.30 ಹಾಗೂ ಒಟ್ಟಾರೆ ರಪ್ತಿಗೆ ಶೇ.40 ಕೊಡುಗೆ ನೀಡುವ ಮೂಲಕ ಭಾರತದ ಆರ್ಥಿಕ ಬೆಳವಣಿಗೆಯ ವೇಗವರ್ಧಕಗಳಾಗಿ ಹೊರಹೊಮ್ಮಿದೆ. ದೇಶದ ಶೇ.95 ಕೈಗಾರಿಕೆಗಳು ಈ ವಲಯದಲ್ಲಿಯೇ ಇವೆ. ಶೇ.50ಕ್ಕಿಂತಲೂ ಹೆಚ್ಚು ಉದ್ಯಮಗಳು ಗ್ರಾಮೀಣ ಭಾಗದಲ್ಲಿದ್ದು ಗ್ರಾಮೀಣ ಆರ್ಥಿಕತೆಯ ಪ್ರಗತಿಗೆ ಪೂರಕವಾಗಿವೆ. ಇದು ಸುಸ್ಥಿರ ಹಾಗೂ ಅಂತರ್ಗತ ಅಭಿವೃದ್ಧಿ ಉತ್ತೇಜಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ.


ಈ ವಲಯವು ರಾಷ್ಟ್ರೀಯ ಆರ್ಥಿಕ ರಚನೆಯ ಬೆನ್ನೆಲುಬಾಗಿದೆ ಮತ್ತು ಜಾಗತಿಕ ಆರ್ಥಿಕ ಆಘಾತಗಳು ಹಾಗೂ ಪ್ರತಿಕೂಲತೆಗಳನ್ನು ನಿವಾರಿಸಲು ಸ್ಥಿತಿಸ್ಥಾಪಕತ್ವವನ್ನು ಒದಗಿಸುವ ಮೂಲಕ ಭಾರತಿಯ ಆರ್ಥಿಕತೆಗೆ ಭದ್ರಕೋಟೆಯಾಗಿ ಕಾರ್ಯನಿರ್ವಹಿಸುತ್ತದೆ.


ತೆರೆದ ಮಾರುಕಟ್ಟೆಯ ಒತ್ತಡಗಳಿಂದಾಗಿ ಪೂರೈಕೆದಾರರು ಗುಣಮಟ್ಟದ ಸರಕು ಹಾಗೂ ಸೇವೆಗಳನ್ನು ಸ್ಪರ್ಧಾತ್ಮಕ ದರದಲ್ಲಿ ಪೂರೈಸಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಸಹಜವಾಗಿ ವೆಚ್ಚ ನಿಯಂತ್ರಕಗಳಾಗಿ ತಮ್ಮ ಅನುಕೂಲಕರ ಸ್ಥಳ ಆಯ್ಕೆಯೊಂದಿಗೆ ಶ್ರಮ ಉಳಿತಾಯಕ್ಕೆ ಪೂರಕವಾದ ಯಾಂತ್ರೀಕರಣದ ಅನ್ವೇಷಣೆ ಹಾಗೂ ಆಧುನೀಕರಣದ ಸವಾಲುಗಳನ್ನು ಸರಿಯಾಗಿ ಎದುರಿಸಿದರೆ ಮಾತ್ರ ನಿರಂತರತೆಯನ್ನು ಕಾಯ್ದುಕೊಳ್ಳಲು ಸಾಧ್ಯ. ಈ ಒತ್ತಡಗಳ ನಡುವೆಯೂ ಈ ವರ್ಗದ ಚಟುವಟಿಕೆಗಳು ಪ್ರಾದೇಶಿಕವಾಗಿ ಉದ್ಯೋಗ ಸೃಷ್ಠಿಸುವಲ್ಲಿ ಸಿಂಹಪಾಲನ್ನು ಪಡೆದುಕೊಂಡಿದೆ.


ಉದ್ಯಮಸ್ನೇಹಿ ವಾತಾವರಣ:

ವಿಶ್ವಬ್ಯಾಂಕ್ ಬಿಡುಗಡೆಗೊಳಿಸುವ 190 ದೇಶಗಳ ಜಾಗತಿಕ ವ್ಯವಹಾರ ವರದಿಯಲ್ಲಿ (ಆoiಟಿg ಃusiಟಿess ಖeಠಿoಡಿಣ) ಭಾರತದ ಶ್ರೇಯಾಂಕವು 2014ರಲ್ಲಿ 142ನೇ ಸ್ಥಾನದಿಂದ 2020ರಲ್ಲಿ 63ನೇ ಸ್ಥಾನಕ್ಕೆ ಏರಿದೆ. ಇದರಿಂದಾಗಿ ವಿಶ್ವದ ಅಗ್ರ 10 ಸುಧಾರಣಾಕಾರ ದೇಶಗಳ ಪಟ್ಟಿಯಲ್ಲಿ ಭಾರತ ಸತತವಾಗಿ ಮೂರು ವರ್ಷಗಳಿಂದ ಸ್ಥಾನವನ್ನು ಗಳಿಸುತ್ತಾ ಬಂದಿರುವುದು ಹೆಮ್ಮೆಯ ಸಂಗತಿ. ಬೆಂಬಲಿಸುವ ಗುರಿಯನ್ನು ಹೊಂದಿರುವ ಉದ್ಯಮ ಸ್ನೇಹಿ ನೀತಿಗಳು ಉತ್ಪಾದಕೆಯ ಸುಧಾರಣೆಗಳನ್ನು ಪಡೆದುಕೊಳ್ಳುವ ಮತ್ತು ಜಾಗತಿಕ ಮೌಲ್ಯ ಸರಪಣಿಗಳಿಗೆ ಪ್ರವೇಶಿಸುವ ಉದ್ಧೇಶದಿಂದ ಉತ್ಪಾದನೆಯತ್ತ ಆರ್ಥಿಕ ಬೆಳವಣಿಗೆಯನ್ನು ಮರು ಸಮತೋಲನಗೊಳಿಸುತ್ತದೆ.


ಹೂಡಿಕೆಯನ್ನು ಆಕರ್ಷಿಸುವುದರ ಜೊತೆಗೆ ಉತ್ಪಾದಕತೆ ಹಾಗೂ ಸ್ಪರ್ಧಾತ್ಮಕತೆಯನ್ನು ಸುಧಾರಿಸಲು ಉದಾರೀಕೃತ ವಿದೇಶಿ ಬಂಡವಾಳ ಹೂಡಿಕೆ ನೀತಿಯ ಚೌಕಟ್ಟಿನಲ್ಲಿ ಪ್ರಯತ್ನಗಳು ಸಾಗಬೇಕು. ಇದರೊಂದಿಗೆ ಪ್ರಮಾಣದ ಆರ್ಥಿಕತೆಯ ಲಾಭ ಪಡೆಯಲು ಒಂದೇ ರೀತಿಯ ಉತ್ಪನ್ನ ಹಾಗೂ ಸೇವೆಯನ್ನು ಒದಗಿಸುವ ಕಿರು ಸಂಸ್ಥೆಗಳ ಗುಂಪುಗಳನ್ನು ಉತ್ತೇಜಿಸುವ ಪ್ರಕ್ರಿಯೆ ದೀರ್ಘಾವಧಿಯಲ್ಲಿ ಉತ್ತಮ ಫಲವನ್ನು ನೀಡಬಹುದು.  

ಸ್ಥಳೀಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದರೊಂದಿಗೆ ಜಾಗತಿಕ ಪಾಲುದಾರರೊಂದಿಗೆ ತಂತ್ರಜ್ಞಾನದ ಸಹಯೋಗಕ್ಕೆ ಒತ್ತು ನೀಡುವುದರೊಂದಿಗೆ ತಮ್ಮ ಉತ್ಪಾದಕತೆ ಹಾಗೂ ಉತ್ಪಾದನೆಯನ್ನು ಹೆಚ್ಚಿಸಿ ಜಾಗತಿಕ ಮೌಲ್ಯ ಸರಪಳಿಯ ಭಾಗವಾಗುವತ್ತ ಗಮನ ಹರಿಸಬೇಕಾಗಿದೆ.


ಅತಿ ಸಣ್ಣ ಉದ್ಯಮಗಳಿಗೆ ಬೇಕು ಕಾಯಕಲ್ಪ:

ಭಾರತದ ಆರ್ಥಿಕತೆಗೆ ಅತೀ ಸಣ್ಣ ಘಟಕಗಳÀ ಕೊಡುಗೆ ಅಪಾರ. ಕಡಿಮೆ ಉದ್ಯೋಗಿಗಳನ್ನು (ಸಾಮಾನ್ಯವಾಗಿ 10 ರವರೆಗೆ) ಹೊಂದಿರುವ ಸೂಕ್ಷ್ಮ ಉದ್ಯಮಗಳು ಕಡಿಮೆ ಬಂಡವಾಳದಿಂದ ಪ್ರಾರಂಭಿಸಬಹುದಾಗಿದೆ ಪೂರೈಕೆ ಮತ್ತು ಮಾರುಕಟ್ಟೆ ಸರಪಳಿ ಸ್ಥಳೀಯವಾಗಿರುವುದರಿಂದ ಇತರ ಚಟುವಟಿಕೆಗಳಿಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸುತ್ತವೆ.


ಉತ್ಪಾದನೆ ಆಧಾರಿತ ಸೂಕ್ಷ್ಮ ಉದ್ಯಮಗಳು ಎಂಎಸ್‍ಎಂಇ ಗಳಲ್ಲಿ ಶೇ.99.7ರಷ್ಟಿದ್ದರೆ, 97.5ರಷ್ಟು ಉದ್ಯೋಗ, ಉತ್ಪಾದನೆಯಲ್ಲಿ ಶೇ. 90.1 ಹಾಗೂ ಆದಾಯ ಉತ್ಪಾದನೆಯಲ್ಲಿ ಶೇ.91.9 ಪಾಲನ್ನು ಹೊಂದಿದೆ.


ಎಂಎಸ್‍ಎಇ ಯಲ್ಲಿರುವ ಎಲ್ಲಾ ಘಟಕಗಳನ್ನು ಒಂದೇ ತಕ್ಕಡಿಯಲ್ಲಿ ತೂಗಲು ಸಾಧ್ಯವಿಲ್ಲ. ಕಡಿಮೆ ಬಂಡವಾಳ ಮತ್ತು ಕೌಶಲ ಬೇಕಾಗಿರುವ ಸೂಕ್ಷ್ಮ ಘಟಕಗಳು ಸ್ಥಳೀಯವಾಗಿ ಉದ್ಯೋಗ ಹಾಗೂ ಆದಾಯ ಸೃಷ್ಟಿ ಮಾಡುವ ಹಾಗೂ ಆ ಮೂಲಕ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುವ ವಲಯವಾಗಿದೆ. ಹೆಚ್ಚಿನ ಶಿಕ್ಷಣ ತರಬೇತಿಗಳ ಅವಕಾಶವಿಲ್ಲದವರು ಅಥವಾ ತಮ್ಮೂರಿನಲ್ಲಿಯೇ ಅನಿವಾರ್ಯವಾಗಿ ನೆಲಸಬೇಕಾದವರು ಸಹಜವಾಗಿ ಜೀವನೋಪಾಯಕ್ಕಾಗಿ ಹಮ್ಮಿಕೊಂಡ ಚಟಿವಟಿಕೆಗಳಿವು. ವಿವಿಧ ಚಟುವಟಿಕೆಗಳಲ್ಲಿ ಹಂಚಿ ಹೋಗಿರುವ ಇವರ ಆದಾಯದ ಉತ್ಪಾದನೆಯೂ ಚೌಕಾಶಿ ಸಾಮರ್ಥ್ಯವೂ ಕಡಿಮೆಯೆ.


ವಿವಿಧ ಹಂತಗಳ ಲಾಕ್ ಡೌನ್ ಪ್ರಕ್ರಿಯೆ ಈ ವಲಯನ್ನು ಬಲಿಪಶುವಾಗಿಸಿದೆ. ನಮ್ಮ ಸುತ್ತಲಿನ ವ್ಯವಹಾರದಲ್ಲಿ ತೊಡಗಿರುವ ಕುಶಲಕರ್ಮಿಗಳು, ಆಹಾರ ಸಂಸ್ಕರಣಾ ಘಟಕಗಳು, ಬೀದಿ ಬದಿಯ ಅಂಗಡಿಗಳು, ಗ್ಯಾರೇಜ್, ಬ್ಯೂಟಿ ಪಾರ್ಲರ್ ಗಳು ಇವೇ ಮೊದಲಾದ ಚಟುವಟಿಕೆಗಳು ಅಪಾರವಾದ ಹಾನಿಗೊಳಗಾಗಿವೆ. ಕೋವಿಡ್-19ರ ಆರ್ಥಿಕ ಸಂಕಷ್ಟದಿಂದ ಆರ್ಥಿಕತೆ ನವಚೈತನ್ಯ ನೀಡಲು ಸರಕಾರವು ಘೋಷಿಸಿದ ‘ಆತ್ಮನಿರ್ಭರ ಭಾರತ’ ಉಪಕ್ರಮದಡಿಯಲ್ಲಿ ಕೆಲವು ಯೋಜನೆಗಳನ್ನು ಘೋಷಿಸಿದೆ. ಅನುಮೋದನೆಗಳು ಮತ್ತು ಅನುಮತಿಗಳಿಗಾಗಿ ಏಕಗವಾಕ್ಷಿ ವ್ಯವಸ್ಥೆಯನ್ನು ರಚಿಸುವ ನಿಟ್ಟಿನಲ್ಲಿ ಸರಕಾರ ಕಾರ್ಯೋನ್ಮುಖವಾಗಿದೆ.


ಜೀವನಾಡಿಗೆ ಬೇಕು ಕಾಯಕಲ್ಪ:

ಅರ್ಥವ್ಯವಸ್ಥೆಯ ಮಹಾಯಾತ್ರೆಯಲ್ಲಿ ಬಲಹೀನ ವರ್ಗ ಸೇರದೆ ಅಭಿವೃದ್ಧಿಯ ಪರಿಕಲ್ಪನೆ ಅರ್ಥಪೂರ್ಣವೆನಿಸದು. ಉದ್ಯೋಗಗಳನ್ನು ಸೃಷ್ಟಿಸುವ, ವಿತರಣಾ ನ್ಯಾಯವನ್ನು ಒದಗಿಸಿ ಆರ್ಥಿಕ ಬೆಳವಣಿಗೆಗೆ ಪೂರಕವಾದ ಗ್ರಾಮೀಣ ಸಣ್ಣ ಉದ್ಯಮಗಳನ್ನು ಸುಧಾರಿಸಬೇಕು. ಅವು ಆರ್ಥಿಕತೆಗೆ ತಮ್ಮದೇ ಕೊಡುಗೆ ನೀಡುವುದಲ್ಲದೆ, ಗ್ರಾಮೀಣ ಸಮುದಾಯಗಳ ಸ್ಥಿತಿಗತಿ ಚೈತನ್ಯಗಳನ್ನು ಸುಧಾರಿಸುತ್ತವೆ, ನಗರ ವಲಸೆಗಳನ್ನು ಸುಧಾರಿಸುತ್ತವೆ. ಇದನ್ನೇ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಪ್ರತಿಪಾದಿಸಿದ್ದರು. ಈ ನಿಟ್ಟಿನಲ್ಲಿ ಭಾರತೀಯ ಆರ್ಥಿಕತೆಯ ಹೊಸ ಯುಗದ ವೇಗವರ್ಧಕಗಳೆಂದು ಮಾನ್ಯ ಮಾಡಲ್ಪಟ್ಟ ‘ಎಂಎಸ್‍ಎಂಇ’ ಗಳಲ್ಲಿ ಸೇರ್ಪಡೆಯುಳ್ಳ ಅಭಿವೃದ್ಧಿಗೆ ಒತ್ತು ನೀಡುವ ಸೂಕ್ಷ ಘಟಕಗಳ ಬೆಳವಣಿಗೆಗೆ ಪೂರಕವಾದ ವಾತಾವರಣ ಒದಗಿಸಿದಾಗ ಸಹಜವಾಗಿ ನಿಜವಾದ ಅರ್ಥದಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಪಡೆಯಲು ಸಾಧ್ಯ.

******************************************************************

-ಡಾ.ಎ. ಜಯ ಕುಮಾರ ಶೆಟ್ಟಿ

ಮುಖ್ಯಸ್ಥರು, ಅರ್ಥಶಾಸ್ತ್ರ ವಿಭಾಗ

ಶ್ರೀ.ಧ.ಮಂ.ಕಾಲೇಜು, ಉಜಿರೆ

9448154001/ ajkshetty@sdmcujire.in


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post