ಉಡುಪಿ: ಪ್ರಜಾಪ್ರಭುತ್ವದ ಮೌಲ್ಯಗಳಾದ ಸಮತೆ, ಸಮಾನತೆ, ಸ್ವಾತಂತ್ರ್ಯ, ಭಾತೃತ್ವ, ಮತ ನಿರಪೇಕ್ಷತೆ, ಸಾರ್ವಭೌಮ, ಜಾತ್ಯತೀತತೆಯಿಂದ ರೂಪಿತವಾದ ಶೈಕ್ಷಣಿಕ ನಾಯಕತ್ವ ಗುಣಾತ್ಮಕ ಶಿಕ್ಷಣಕ್ಕೆ ಬುನಾದಿಯಾಗಿದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇದರ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರಶಾಂತ ನೀಲಾವರ ತಿಳಿಸಿದರು.
ಸಮಾಜವೊಂದು ಆರೋಗ್ಯಕರವಾಗಿ ಮತ್ತು ಸೌಹಾರ್ದಯುತವಾಗಿ ಬೆಳವಣಿಗೆ ಕಾಣಬೇಕಿದ್ದರೆ ಶಿಕ್ಷಣ ಸಮಾಜದ ಜನರಿಗೆ ಅತ್ಯಂತ ಮುಖ್ಯ ಅಂಶವೆನಿಸಿದೆ ಎಂದು ಅವರು ಪ್ರತಿಪಾದಿಸಿದರು. ಕಾಲೇಜಿನ ರಾಷ್ಟಿಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತ್ತಿದ್ದರು.
ಶಿಕ್ಷಣದಿಂದ ವ್ಯಕ್ತಿಯು ತನ್ನ ಜೀವನದ ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ, ಅಷ್ಟೆ ಅಲ್ಲ ಸಮಾಜದ ಸರ್ವಾಂಗೀಣ ಒಳಿತಿಗಾಗಿ ಕೆಲಸ ಮಾಡುವುದನ್ನು ಜನ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಪಡೆಯುತ್ತಾರೆ. ಆದ್ದರಿಂದ ಶಿಕ್ಷಣವು ಮಹತ್ವದ ಅಗತ್ಯ ಎ೦ದೇ ಪರಿಗಣಿತವಾಗಿದೆ ಅಲ್ಲದೆ ಗುಣಾತ್ಮಕ ಶಿಕ್ಷಣದ ಮಾದರಿಯ, ಗುಣಲಕ್ಷಣಗಳು, ಅದರ ಧ್ಯೇಯ, ಅಗತ್ಯಗಳು ಹಾಗೂ ಕಾರ್ಯವಿಧಾನಗಳನ್ನು ಶೈಕ್ಷಣಿಕ ನಾಯಕರಲ್ಲಿ ಮನಗಾಣಿಸುವ ಅವಶ್ಯಕತೆ ಇದೆ ಎಂದು ಅವರು ಪ್ರತಿಪಾದಿಸಿದರು. ಕಾರ್ಯ ಕ್ರಮದ ಅಧ್ಯಕ್ಷ ಕ್ಷತೆ ವಹಿಸಿದ್ದ ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಉಮೇಶ್ ಪೈ ಅವರು, ಶಿಕ್ಷಣ, ಈಗ ಸರ್ಕಾರದ ಒಂದು ಸೇವಾ ಚಟುವಟಿಕೆಯಾಗಿ ಮಾತ್ರ ಉಳಿದಿಲ್ಲ. ಬದಲಾಗಿ ಅದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕಾಗಿದೆ ಎಂದರು.
1994ರಲ್ಲಿ ಶಿಕ್ಷಣವನ್ನು ಒಂದು ಮೂಲಭೂತ ಹಕ್ಕನ್ನಾಗಿ ಪರಿವರ್ತನೆ ಮಾಡಲು ಮತ್ತೊಂದು ಪ್ರಮುಖ ಪ್ರಯತ್ನ ನಡೆಯಿತು. ಭಾರತದ ಸರ್ವೋಚ್ಚ ನ್ಯಾಯಾಲಯದ ಒಂದು ಪ್ರಮುಖ ತೀರ್ಪಿನಲ್ಲಿ ಶಿಕ್ಷಣವು ಜೀವಿಸುವ ಹಾಗೂ ಸ್ವತಂತ್ರದ ಹಕ್ಕಿನಿಂದ ಹೊರಹೊಮ್ಮುವ ಒಂದು ಮೂಲಭೂತ ಹಕ್ಕು ಎಂದು ಪರಿಗಣಿಸಿದೆ. ಈ ತೀರ್ಪಿನಿಂದಾಗಿ ಸಂವಿಧಾನದ 45ನೇ ಕಲಂನಲ್ಲಿ ಸೂಚಿಸಿದಂತೆ ಶಿಕ್ಷಣ ಕೇವಲ ಒಂದು ಸೇವೆಯಲ್ಲದೆ, ಜಾರಿಗೊಳಿಸಲೇ ಬೇಕಾದ ಹಕ್ಕಾಗಿ ಮಾರ್ಪಾಡಾಯಿತು. 2002ರ 86ನೇ ಸಂವಿಧಾನದ ತಿದ್ದುಪಡಿ ಕಾಯಿದೆಯು 'ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವು' ಮಕ್ಕಳ ಮೂಲಭೂತ ಹಕ್ಕು ಎಂದು ಘೋಷಿಸಿತು ಎಂದು ವಿವರಿಸಿದರು.
ಯೋಜನಾಧಿಕಾರಿಗಳಾದ ಸುಷ್ಮಾ ಮತ್ತು ಡಾ.ಮಹೇಶ ಕುಮಾರ್ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ