ಉದ್ಯಮಿಯಾಗಲು ಹಣಕ್ಕಿಂತ ಛಲ ಮುಖ್ಯ: ಕೈಗಾರಿಕಾ ಸಚಿವ ನಿರಾಣಿ

Upayuktha
0

6000ಕ್ಕೂಹೆಚ್ಚು ವಿದ್ಯಾರ್ಥಿಗಳು ಭಾಗಿ

ಆರ್ಥಿಕವಾಗಿ ಹಿಂದುಳಿದವರಿಗೂ ಶೇ.75ರಷ್ಟು ರಿಯಾಯಿತಿ



ಮಂಗಳೂರು: "ಉದ್ಯಮಿಯಾಗಲು ಹಣಕ್ಕಿಂತ ಛಲ ಮುಖ್ಯ. ದೃಢ ಸಂಕಲ್ಪ ಇದ್ದರೆ ಸಾಕು, ಉದ್ಯಮ ಆರಂಭಿಸಬಹುದು," ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ಆರ್‌. ನಿರಾಣಿ  ತಿಳಿಸಿದ್ದಾರೆ.


ಇಲ್ಲಿನ ಟಿಎಂಎ ಪೈ ಇಂಟರ್‌ ನ್ಯಾಷನಲ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಗುರುವಾರ 'ಉದ್ಯಮಿಯಾಗು ಉದ್ಯೋಗ ನೀಡು' ಹಾಗೂ 'ಕೈಗಾರಿಕಾ ಅದಾಲತ್‌' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 


"ಬೇರೆಯವರ ಕೈ ಕೆಳಗೆ ನೀವು ದುಡಿಯಬೇಕಿಲ್ಲ. ಛಲ ಬಿಡದೆ ಸಾಧಿಸಿದರೆ ನೀವೇ ಉದ್ಯಮ ಸ್ಥಾಪಿಸಿ ಇತರರಿಗೆ ಕೆಲಸ ಕೊಡಬಹುದು. ಇದು ಬುದ್ಧಿ ಜೀವಿನಗಳ ನಾಡು. ಶಿಕ್ಷಣ, ಕೈಗಾರಿಕೆ, ಬ್ಯಾಂಕಿಂಗ್‌ ಸೇರಿದಂತೆ ಬಹುತೇಕ ಎಲ್ಲ  ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಇದು.  ಬಂದರು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೈಲು ಸಂಪರ್ಕ ಹಾಗೂ ಉತ್ತಮ ರಸ್ತೆ ಸೇರಿಂತೆ ಅತ್ಯುತ್ತಮ ಮೂಲಸೌಕರ್ಯ ಹೊಂದಿರುವ  ಪ್ರದೇಶದ ಯುವ ಜನರು ಉದ್ಯಮ ಸ್ಥಾಪನೆಗೆ ಮುಂದಾಗಬೇಕು," ಎಂದರು.  


"ಈ ಕಾರ್ಯಕ್ರಮದಲ್ಲಿ ಉದ್ಯಮಿಗಳಾಗುವುದು ಹೇಗೆ? ಎಲ್ಲಿ ಮತ್ತು ಹೇಗೆ ಯಾವ ಸೌಲಭ್ಯಗಳು ದೊರೆಯುತ್ತವೆ? ಯಾವ ಯಾವ ಕ್ಷೇತ್ರಗಳಲ್ಲಿ ಹೂಡಿಕೆಗೆ ಅವಕಾಶ ಇದೆ ಎಂಬುದನ್ನು ತಜ್ಞರು ವಿವರಿಸಿದ್ದಾರೆ. ಉದ್ದಿಮೆ ಸ್ಥಾಪಿಸಲು ಹಣ ಮುಖ್ಯವಲ್ಲ. ಸಾಧಿಸುವ ಛಲ, ಗುರಿ ಇರಬೇಕು. ಅದಕ್ಕೆ ಪೂರಕವಾಗಿ ನಮ್ಮ ಇಲಾಖೆಯಿಂದ ಎಲ್ಲ ಅಗತ್ಯ ಮಾರ್ಗದರ್ಶನ ನೀಡಲು ಸಿದ್ಧ. ಮುಂದಿನ ಹಂತದಲ್ಲಿ ಬೆಂಗಳೂರಿನ ಕಂದಾಯ ವಿಭಾಗ 2ರಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ," ಎಂದು ಹೇಳಿದರು.


"ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉದ್ದಿಮೆಶೀಲರಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಕೆಐಎಡಿಬಿ)ಯಿಂದ ಕೈಗಾರಿಕೆ ನಿವೇಶನಕ್ಕೆ ಶೇಕಡಾ 75 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಅದೇ ರೀತಿ ಆರ್ಥಿಕವಾಗಿ ಹಿಂದುಳಿದವರಿಗೂ ಶೇ.75ರಷ್ಟು ರಿಯಾಯಿತಿ ನೀಡಲಾಗುವುದು,"ಎಂದು ಅವರು ಹೇಳಿದರು.


"ಮಂಗಳೂರು ಅಲ್ಲದೇ ಉಡುಪಿ ಹಾಗೂ ಪುತ್ತೂರಿನ ವಿದ್ಯಾರ್ಥಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಸುಮಾರು 6000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಬಹಳ ಸಂತಸದ ವಿಚಾರ. ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಂಡಿರುವವರ ಪೈಕಿ ಉದ್ಯಮ ಸ್ಥಾಪಿಸುವ ಆಸಕ್ತಿ ತೋರುವವರಿಗೆ  ಅವರ ಆಯ್ಕೆಯ ಕ್ಷೇತ್ರದಲ್ಲಿ ಒಂದು ತಿಂಗಳವರೆಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಬ್ಯಾಂಕ್‌ ಲೋನ್‌, ಪ್ರಾಜೆಕ್ಟ್‌ ರಿಪೋರ್ಟ್‌ ಸಲ್ಲಿಸುವವರೆಗೆ ಆರಂಭದಿಂದ ಕೊನೆಯವರೆಗೆ ಎಲ್ಲ ರೀತಿಯ ಸಹಕಾರ ಒದಗಿಸಲಾಗುವುದು," ಎಂದು ಅವರು ಭರವಸೆ ನೀಡಿದರು.   



"ಬೆಂಗಳೂರು ನಗರದಂತೆಯೇ ರಾಜ್ಯದ ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹಾಗೂ ಬಂಡವಾಳ ಹೂಡಿಕೆಗೆ ಉತ್ತಮ ವಾತಾವರಣ ನಿರ್ಮಾಣವಾಗಿದೆ. ನೂತನ ಕೈಗಾರಿಕಾ ನೀತಿಯಲ್ಲಿ ಸಾಕಷ್ಟು ವಿಶೇಷ ಅನುಕೂಲಗಳನ್ನು ಮಾಡಲಾಗಿದೆ. ಹೂಡಿಕೆ ಮಾಡುವ ಕೈಗಾರಿಕೆಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡಲಿದೆ,"ಎಂದರು.


"ನಮ್ಮವರೇ ಆದ  ಜ್ಯೋತಿ ಲ್ಯಾಬೊರೇಟರೀಸ್‌ ಉಲ್ಲಾಸ್‌ ಕಾಮತ್, ಇನ್ಫೋಸಿಸ್‍ನ  ಶ್ರೀಮತಿ ಸುಧಾ ನಾರಾಯಣಮೂರ್ತಿ, ಏಕಸ್ ಅರವಿಂದ್‌ ಮೆಳ್ಳಗೇರಿ, ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜಂದಾರ್‌, ವಿಆರ್‌ಎಲ್‌ ಸಮೂಹದ ಮುಖ್ಯಸ್ಥ  ವಿಜಯ ಸಂಕೇಶ್ವರ, ಮುಂತಾದವರೇ ನಮಗೆ ಪ್ರೇರಣೆಯಾಗಬೇಕು. ಇವರೆಲ್ಲರೂ ಹೆಚ್ಚು ಬಂಡವಾಳ ಇಲ್ಲದೇ, ಸಣ್ಣದಾಗಿ ಆರಂಭಿಸಿದ ಉದ್ಯಮ ಇಂದು ಬೃಹತ್‌ ಮಟ್ಟದಲ್ಲಿ ಬೆಳದು ನಿಂತಿದೆ. ಇದಕ್ಕೆ ಅವರ ಛಲ ಸ್ವಾಭಿಮಾನವೇ ಕಾರಣ" ಎಂದರು.


ಎಫ್‌ಡಿಐಗೆ ಆದ್ಯತೆ:

"ವಿದೇಶಿ ನೇರ ಹೂಡಿಕೆಯಲ್ಲಿ  ಒಟ್ಟು ಶೇ.42 ರಷ್ಟು ಹೂಡಿಕೆಯನ್ನು ಆಕರ್ಷಿಸುವ ಮೂಲಕ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. 2021-2022ರ ಹಣಕಾಸು ವರ್ಷದಲ್ಲಿ ಸತತ ಎರಡು ತ್ರೈಮಾಸಿಕಗಳಲ್ಲಿ, ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಆಕರ್ಷಿಸಿದೆ ಎಂಬುದು ಹೆಮ್ಮೆಯ ವಿಷಯ," ಎಂದರು.  


ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ, ಎಂಎಸ್‌ಇ ನಿರ್ದೇಶಕರಾದ ಆರ್‌, ವಿನೋತ್‌ ಪ್ರಿಯಾ, ಕೆಎಸ್‌ಎಸ್‌ಐಡಿಸಿ ವ್ಯವಸ್ಥಾಪಕ ನಿರ್ದೇಶಕರಾದ ಸಿ. ಸತ್ಯಭಾಮ, ಕೆಐಎಡಿಬಿ ಸಿಇಓ ಡಾ.ಎನ್‌ ಶಿವಶಂಕರ್‌, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಎಂಎಸ್‌ಎಂಇ ಮತ್ತು ಪಿಪಿ) ಅಪರ ನಿರ್ದೇಶಕ ಹೆಚ್‌. ಎಂ. ಶ್ರೀನಿವಾಸ್‌, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು, ಮಂಗಳೂರಿನ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಗೋಕುಲ್‌ ದಾಸ್‌ ನಾಯಕ್‌, ಉಡುಪಿಯ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ನಾಗರಾಜ ನಾಯಕ್‌  ಹಾಗೂ ಟೆಕ್ಸಾಕ್‌ ಸಿಇಓ ರಮಾನಂದ ನಾಯಕ್, ಜ್ಯೋತಿ ಲ್ಯಾಬೊರೇಟರೀಸ್‌ ಉಲ್ಲಾಸ್‌ ಕಾಮತ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು.


ಕೈಗಾರಿಕಾ ಅದಾಲತ್‌

ಉದ್ಯಮಿಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೈಗಾರಿಕಾ ಇಲಾಖೆಯು ಮಂಗಳೂರು ಕಂದಾಯ ವಿಭಾಗದಲ್ಲಿ ಗುರುವಾರ 'ಕೈಗಾರಿಕಾ ಅದಾಲತ್‌' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


"ಕೈಗಾರಿಕಾ ಅದಾಲತ್‌ ಮೂಲಕ ಸರ್ಕಾರವೇ ಉದ್ಯಮಿಗಳ ಮನೆ ಬಾಗಿಲಿಗೆ ಹೋಗಿ ಉದ್ಯಮಿಗಳ ಸಮಸ್ಯೆ ಆಲಿಸಿ, ಸಮಸ್ಯೆ ಇತ್ಯರ್ಥ ಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿದೆ,"ಎಂದು ಸಚಿವರು ತಿಳಿಸಿದರು.  


“ದಕ್ಷಿಣ ಕನ್ನಡ, ಉಡುಪಿಯಿಂದ ನಾನಾ ಇಲಾಖೆಗಳಿಗೆ ಸಂಬಂಧಿಸಿದ  ಒಟ್ಟು 39 ಅರ್ಜಿಗಳು ಬಂದ್ದವು. ಈಗಾಗಲೇ ಕೆಲವರ ಸಮಸ್ಯೆಗೆ ಪರಿಹಾರ ಸೂಚಿಸಲಾಗಿದೆ. ಇನ್ನು ಕೆಲವು ಅರ್ಜಿಗಳ ಕುರಿತು ಕೈಗಾರಿಕಾ ಅದಾಲತ್‌ನಲ್ಲಿ  ನೇರವಾಗಿ ಉದ್ಯಮಿಗಳ ಜತೆ ಚರ್ಚಿಸಿ, ಪರಿಹಾರ ಸೂಚಿಸಲಾಗಿದೆ,” ಎಂದರು.  


"ವಿದ್ಯುತ್‌ ಸರಬರಾಜು ಕಂಪನಿ, ಪೌರಾಡಳಿತ ಇಲಾಖೆ, ನಗರಾಭಿವೃದ್ಧಿ ಇಲಾಖೆ, ನಗರ ಯೋಜನಾ ಇಲಾಖೆ, ಕಾರ್ಮಿಕ ಇಲಾಖೆ, ಕಾರ್ಖಾನೆ ಮತ್ತು ಬಾಯ್ಲರ್‌ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ಮುಂತಾದ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ವಹಿಸಲಾಗುತ್ತದೆ," ಎಂದು ಸಚಿವರು ಭರವಸೆ ನೀಡಿದರು.  


ಉದ್ಯಮಿಯಾಗು ಉದ್ಯೋಗ ನೀಡು ಕಾರ್ಯಕ್ರಮದ ತಾಂತ್ರಿಕ ಸಭೆ ವಿವರ: 


‘ಯಶಸ್ಸು ಸಾಧಿಸಲು ಉದ್ಯಮಗಳ ಮನಸ್ಥಿತಿ ಹೇಗಿರಬೇಕು’ ವಿಷಯದ ಬಗ್ಗೆ ಕನೆಕ್ಟ್‌ ಧಾರವಾಡದ ನಿರ್ದೇಶಕರಾದ ಶ್ರೀ ಮಹೇಶ್‌ ಮಸಾಳ್‌ ಮಾತನಾಡಿದರು.


ಆಹಾರ ಸಂಸ್ಕರಣೆ ಕುರಿತು ಮೈಸೂರಿನ ಸಿಎಸ್‌ಐಆರ್‌-ಸಿಎಫ್‌ಟಿಆರ್‌ಐ ಎನ್‌ಜಿಐ. ಸಿಂಗ್ ಮಾಹಿತಿ ನೀಡಿದರು. 


ಪ್ರವಾಸೋದ್ಯೋಮದಲ್ಲಿನ ಅವಕಾಶಗಳ ಬಗ್ಗೆ ಬೀಜ್‌ ಟೂರಿಸಂ ಯೋಜನೆಯ ಮಾಜಿ ಸಿಇಓ ಯತೀಶ್‌ ಬೈಕಂಪಾಡಿ ಮಾತನಾಡಿದರು. 


ಮೀನುಗಾರಿಕೆ ವಲಯದಲ್ಲಿನ ಉದ್ಯಮ ಅವಕಾಶಗಳ ಬಗ್ಗೆ ಮಂಗಳೂರಿನ ಕಾಲೇಜ್ ಆಫ್‌ ಫಿಶರೀಸ್‌ನ ಮಾಜಿ ಡೀನ್‌ ಡಾ. ಎಸ್‌. ಎಂ. ಶಿವಪ್ರಕಾಶ ಮಾತನಾಡಿದರು.  


ಯಶಸ್ವಿ ಉದ್ಯಮಿಗಳಾದ ಸತ್ಯಶಂಕರ್‌ ಭಟ್‌, ಕಲಬಾವಿ ಪ್ರಕಾಶ್‌ ರಾವ್‌, ದೀಕ್ಷಿತ್‌ ರೈ ತಮ್ಮ ಯಶೋಗಾಥೆ ಹಂಚಿಕೊಂಡರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top