|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತಂಬಾಕು ಮುಕ್ತ ಭಾರತ ಜನುಮಿಸಲಿ

ತಂಬಾಕು ಮುಕ್ತ ಭಾರತ ಜನುಮಿಸಲಿ

ವಿಶ್ವ ತಂಬಾಕು ರಹಿತ ದಿನ- ಮೇ 31



ಮೇ 31 ರಂದು ವಿಶ್ವದಾದ್ಯಂತ ವಿಶ್ವ ತಂಬಾಕು ರಹಿತ ದಿನ ಎಂದು ಆಚರಿಸಲಾಗುತ್ತಿದೆ. ಈ ದಿನದಂದು  ತಂಬಾಕಿನ ಎಲ್ಲಾ ರೀತಿಯ ಉತ್ಪನ್ನಗಳಿಂದ 24 ಗಂಟೆಗಳ ಕಾಲ ದೂರವಿದ್ದು, ತಂಬಾಕಿನ ಉತ್ಪನ್ನಗಳ ಬಳಕೆಯಿಂದ ಉಂಟಾಗುವ ತೊಂದರೆಗಳನ್ನು ಮತ್ತು ದುಷ್ಪರಿಣಾಮಗಳನ್ನು ಜನರಿಗೆ ಬೊಟ್ಟು ಮಾಡಿ ತೋರಿಸುವ ಕಾರ್ಯವನ್ನು ಜಗತ್ತಿನಾದ್ಯಂತ ಮಾಡಲಾಗುತ್ತಿದೆ. 1987 ರಿಂದ ಈ ಆಚರಣೆಯನ್ನು ವಿಶ್ವದಾದ್ಯಾಂತ ಜಾರಿಗೆ ತಂದಿತು. 1987 ರಲ್ಲಿ ಏಪ್ರಿಲ್ 7 ರಂದು ವಿಶ್ವ ತಂಬಾಕು ರಹಿತ ದಿನವೆಂದು ಆಚರಣೆ ಆರಂಬಿಸಲಾಯಿತು, ಆದರೆ 1988 ರಲ್ಲಿ ಈ ದಿನವನ್ನು ಮೇ 31 ಕ್ಕೆ ಬದಲಾವಣೆ ಮಾಡಿ ಪ್ರತೀ ವರ್ಷ ಮೇ 31 ರಂದು “ವಿಶ್ವ ತಂಬಾಕು ರಹಿತ” ದಿನ ಎಂದು ಆಚರಿಸಲಾಗುತ್ತಿದೆ. ಪ್ರತೀ ವರ್ಷ ಏನಾದರೊಂದು ಧ್ಯೇಯ ವಾಕ್ಯವನ್ನು ಇಟ್ಟುಕೊಂಡು ಈ ಆಚರಣೆಯನ್ನು ಆಚರಿಸಿ, ತಂಬಾಕು ಉತ್ಪನ್ನಗಳ  ಬಳಕೆಯಿಂದ ಉಂಟಾಗುವ ಸಾವು ನೋವು, ರೋಗ, ರುಜಿನ, ದುಗುಡ ದುಮ್ಮಾನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಜನರು ತಂಬಾಕು ಉತ್ಪನ್ನಗಳಿಂದ ದೂರ ಉಳಿಯುವಂತೆ ಪ್ರಚೋದಿಸಲಾಗುತ್ತದೆ. 2022ನೇ ಇಸವಿಯ ಧ್ಯೇಯವಾಕ್ಯ “Pಡಿoಣeಛಿಣ ಖಿhe ಇಟಿviಡಿoಟಿmeಟಿಣ” ಅಂದರೆ “ಪರಿಸರವನ್ನು ರಕ್ಷಿಸಿ” ಎಂಬುದಾಗಿದೆ. ತಂಬಾಕು ಬೆಳೆಯುವಾಗ ಪರಿಸರವನ್ನು ಹಾಳುಗೆಡವುತ್ತದೆ ಮತ್ತು ತಂಬಾಕನ್ನು ಸೇವಿಸಿದ ವ್ಯಕ್ತಿಯ ಆರೋಗ್ಯವನ್ನು ಹಾಳು ಮಾಡುತ್ತದೆ ಎಂಬ ವಿಚಾರವನ್ನು ಜನರಿಗೆ ಮನದಟ್ಟು ಮಾಡುವ ಉದ್ಧೇಶ ಇದರ ಹಿಂದೆ ಅಡಗಿದೆ. ಒಂದು ಅಂದಾಜಿನ ಪ್ರಕಾರ ಜಾಗತಿಕವಾಗಿ, ತಂಬಾಕು ಸುಮಾರು 8 ಮಿಲಿಯನ್ ಮಂದಿಯನ್ನು ವರ್ಷ ಒಂದರಲ್ಲಿ ಆಪೋಷನ ತೆಗೆದುಕೊಳ್ಳುತ್ತಿದೆ. ತಂಬಾಕು ಉತ್ಪನ್ನಗಳ ಬಳಕೆಗೆ ಕಡಿವಾಣ ಹಾಕದಿದ್ದಲ್ಲಿ ಈ ಸಂಖ್ಯೆ ದ್ವಿಗುಣವಾಗುತ್ತಲೇ ಹೋಗುತ್ತದೆ.


ಇಂದಿನ ಜಾಗತೀಕರಣಗೊಂಡ ಮತ್ತು ವೈಭವೀಕೃತಗೊಂಡ ಆಧುನಿಕ ಜಗತ್ತಿನಲ್ಲಿ ಸಿಗರೇಟ್ ಸೇವನೆ ಅಥವಾ ತಂಬಾಕು ಉತ್ಪನ್ನಗಳ ಸೇವನೆ ಪ್ಯಾಷನ್ ಮತ್ತು ಪ್ರತಿಷ್ಠೆಯಾಗಿ ಮಾರ್ಪಾಡಾಗಿದೆ. ದೃಶ್ಯ ಮಾಧ್ಯಮ, ಜಾಹಿರಾತು ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ತಂಬಾಕು ಉತ್ಪನ್ನಗಳ ವೈಭವೀಕರಣದಿಂದಾಗಿ ಇಂದಿನ ಯುವಕ ಯುವತಿಯರು ಬಹು ಬೇಗ ದಾರಿ ತಪ್ಪಿ, ಧೂಮಪಾನದ ಮೊಜಿಗೆ ಬಲಿಯಾಗಿ ಲಕ್ಷಾಂತರ ಮಂದಿ ನತದೃಷ್ಟರು ದಿನ ನಿತ್ಯ ಸಾವಿನ ಕೂಪಕ್ಕೆ ಬಲಿಯಾಗುತ್ತಿದ್ದಾರೆ. ಹೀಗೆ ದಾರಿ ತಪ್ಪುತ್ತಿರುವ ಯುವ ಜನತೆಯನ್ನು ಎಚ್ಚರಿಸಿ, ಅರಿವು ಮೂಡಿಸಿ, ತಂಬಾಕು ಉತ್ಪನ್ನಗಳಿಂದ ದೂರ ಉಳಿಯುವಂತೆ ಮಾಡಿ ತಂಬಾಕಿನ ಬಳಕೆಯಿಂದ ಉಂಟಾಗುವ ಸಾವು, ನೋವು ಪ್ರಾಣ ಹಾನಿ ಮತ್ತು ಮನುಷ್ಯ ಶಕ್ತಿಯ ಸೋರುವಿಕೆಯನ್ನು ತಪ್ಪಿಸಿ, ಸುಂದರ ಸದೃಢ ಆರೋಗ್ಯ ಪೂರ್ಣ ಸಮಾಜವನ್ನು ಕಟ್ಟುವ ಅರ್ಥ ಪೂರ್ಣ ಉದ್ದೇಶವನ್ನು ಈ ವಿಶ್ವ  ತಂಬಾಕು ರಹಿತ ದಿನಾಚರಣೆಯ ಹಿಂದೆ ಇದೆ ಎಂದರೂ ತಪ್ಪಾಗಲಾರದು.


ತಂಬಾಕು ಮತ್ತು ತಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟು, ಗುಟ್ಕ ಪಾನ್‍ಪರಾಗ್, ಚೈನಿ, ಜರ್ದ, ಪಾನ್‍ಬೀಡ ಇವೆಲ್ಲವು ಕ್ಷಣಿಕ ಸುಖ ನೀಡುವ, ಜೀವಂತ ವ್ಯಕ್ತಿಯನ್ನು ಕ್ಷಣ ಕ್ಷಣಕ್ಕೂ ಕೊಲ್ಲುವ  ಮತ್ತು ಯಾವುದೇ ಕ್ಷಣದಲ್ಲಿ ಸ್ಪೋಟಿಸುವ ಬಾಂಬ್ ಇದ್ದಂತೆ ಎಂದರೆ ಅತಿಶಯೋಕ್ತಿಯಾಗದು, ಜಗತ್ತಿನಲ್ಲಿ ಚಿಕಿತ್ಸೆ ಇಲ್ಲದ ಅತ್ಯಂತ ಮಾರಕ ರೋಗವಾದ ಕ್ಯಾನ್ಸರಿಗೆ ಕಾರಣವಾಗುವ ಬಹಳ ಮೂಲಭೂತ ವಸ್ತು ಎಂದರೆ ತಂಬಾಕು ಉತ್ಪನ್ನಗಳು ಎನ್ನುವುದು ಸೂರ್ಯ ಚಂದ್ರರಷ್ಟೇ ನಿಜವಾದ ಮಾತು ಎಂಬ ಕಟು ಸತ್ಯವನ್ನು ಜನರು ಮರೆಯಲೇಬಾರದು. ಜಗತ್ತಿನಲ್ಲಿ ಅತ್ಯಂತ ಸುಲಭವಾಗಿ ಸಾವು ಮತ್ತು ರೋಗವನ್ನು ತಡೆಗಟ್ಟಬಹುದಾದ ಕಾರಣಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಅಗ್ರ ಸ್ಥಾನದಲ್ಲಿದೆ ಎಂದರೆ ತಪ್ಪಾಗಲಾರದು. ಈ ತಂಬಾಕು ಉತ್ಪನ್ನಗಳ ಬಳಕೆಯಿಂದ ಹಲವಾರು ರೀತಿಯ ಕ್ಯಾನ್ಸರುಗಳಾದ ಬಾಯಿ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಗಂಟಲಿನ ಕ್ಯಾನ್ಸರ್, ಹೃದಯಾಘಾತ, ಮೆದುಳಿನ ಆಘಾತ ಅಥವಾ ಸ್ಟ್ರೋಕ್, ಶ್ವಾಸಕೋಶದ ರೋಗಗಳು , ಅಂದತ್ವ ಮುಂತಾದ ಹಲವಾರು ತೊಂದರೆಗಳಿಗೆ ಸದ್ದಿಲ್ಲದೆ ಮುನ್ನುಡಿ ಬರೆಯುತ್ತದೆ. 


ತಂಬಾಕು ಮತ್ತು ಶ್ವಾಸಕೋಶದ ತೊಂದರೆಗಳು

ಶ್ವಾಸಕೋಶದ ಕ್ಯಾನ್ಸರ್‍ಗೆ ಅತ್ಯಂತ ಪ್ರಮಖ ಮತ್ತು ಸಾಮಾನ್ಯ ಕಾರಣವೆಂದರೆ ಧೂಮಪಾನ ಹಾಗೆಂದ ಮಾತ್ರಕ್ಕೆ ದೂಮಪಾನ ಮಾಡದವರಿಗೆ ಶ್ವಾಸಕೋಶದ ಕ್ಯಾನ್ಸರ್ ಬರಬಾರದೆಂದಿಲ್ಲ. ಸಾವಿರದಲ್ಲಿ ಒಬ್ಬರಿಗೆ ಬರಲೂಬಹುದು ಆದರೆ ನೂರರಲ್ಲಿ ತೊಂಬತ್ತು ಮಂದಿ ಶ್ವಾಸಕೋಶದ ಕ್ಯಾನ್ಸರ್ ಇರುವವರಿಗೆ ತಂಬಾಕಿನ ಚಟ ಇದ್ದೇ ಇರುತ್ತದೆ. ಇದಲ್ಲದೇ ತಂಬಾಕಿನ ಅತಿಯಾದ ಬಳಕೆಯಿಂದ ಶ್ವಾಸಕೋಶದ ಒಳಭಾಗದಲ್ಲಿ ಉರಿಯೂತ ಉಂಟಾಗಿ ಶ್ವಾಸಕೋಶದ ದ್ರವ್ಯಗಳು ಗಟ್ಟಿಯಾಗಿ ಬಹಳಷ್ಟು ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಇದನ್ನು ಆಂಗ್ಲ ಭಾಷೆಯಲ್ಲಿ ಅಔPಆ ಎಂದು ಕರೆಯುತ್ತಾರೆ. ಕನ್ನಡದಲ್ಲಿ “ದೀರ್ಘ ಕಾಲಿಕ ಉಸಿರಾಟ ತಡೆಗಟ್ಟುವ ಶ್ವಾಸಕೋಶದ ಖಾಯಿಲೆ” ಎಂದು ಕರೆಯುತ್ತಾರೆ. ತಂಬಾಕು ಸೇವಿಸುವ ನೂರು ಮಂದಿಯಲ್ಲಿ 95 ಮಂದಿಗೆ ಈ ರೋಗ ಬಂದೇ ಬರುತ್ತದೆ. ಇನ್ನು ಮಕ್ಕಳಲ್ಲಿ ಶ್ವಾಸಕೋಶ ಬಹಳ ಚಂಚಲವಾಗಿರುತ್ತದೆ. ಬೇರೆಯವರು ಧೂಮಪಾನ ಮಾಡಿದ ಹೊಗೆಯಿಂದಲೇ ಮಕ್ಕಳ ಶ್ವಾಸಕೋಶ ಹಾನಿಯಾಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದಲೇ ಮಕ್ಕಳಿಗೆ ಪದೇ ಪದೇ ಶ್ವಾಸಕೋಶದ ಸೋಂಕು ಮತ್ತು ಅಸ್ತಮಾ ಬರುವ ಸಾಧ್ಯತೆ ಇರುತ್ತದೆ, ಹೆತ್ತವರು ತಂದೆ ತಾಯಂದಿರು ಸದಾಕಾಲ ಧೂಮಪಾನ ಮಾಡುವುದರಿಂದ ಸಣ್ಣ ಮಕ್ಕಳಿಗೂ ಶ್ವಾಸಕೋಶದ ತೊಂದರೆ ಹೆಚ್ಚು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಮೊದಲೇ ಕ್ಷಯ ರೋಗದಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ತಂಬಾಕು ಸೇವನೆ ಅಥವಾ ಧೂಮಪಾನ ಮಾಡುವುದರಿಂದ ಮತ್ತಷ್ಟು ಶ್ವಾಸಕೋಶಕ್ಕೆ ಹಾನಿಯಾಗಿ ಶ್ವಾಸಕೋಶದ ವೈಫಲ್ಯಕ್ಕೆ ಕಾರಣವಾಗುತ್ತದೆ.


ವಿಶ್ವ ತಂಬಾಕು ರಹಿತ ದಿನದ ಚಿಹ್ನೆ

ಆಶ್‍ಟ್ರೇ ಅಥವಾ ಸಿಗರೇಟ್ ಬೂದಿಯನ್ನು ಸಂಗ್ರಹಿಸುವ ಪಾತ್ರೆಯಲ್ಲಿ ಕೆಂಪು ಗುಲಾಬಿ ಹೂ ಅಥವಾ ಈಗ ತಾನೇ ಅರಳಿದ ಹೊಚ್ಚ ಹೊಸದಾದ ಹೂವನ್ನು ಇಟ್ಟು ಈ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತಿದೆ. ಇದೇ ದಿನ ಈ” ಸಿಗರೇಟ್ ಬೂದಿ ಸಂಗ್ರಹ” ಪಾತ್ರೆಯಲ್ಲಿ ಹೂವನ್ನು   ಸಾಂಕೇತಿಕವಾಗಿ ಇಟ್ಟು ಜನರಲ್ಲಿ ಸಿಗರೇಟ್ ಸೇವನೆಯಿಂದ ನೀವು ನಿಮ್ಮ ಜೀವನವನ್ನು ಸುಟ್ಟು ಹಾಳು ಮಾಡಿಕೊಳ್ಳಬೇಡಿ, ಯಾವಾಗಲೂ ನಳನಳಿಸುವ ಹೊಚ್ಚ ಹೊಸ ಹೂವಿನಂತೆ ನಿಮ್ಮ ಬದುಕು ನಳನಳಿಸುತ್ತಿರಲಿ ಎಂಬ ಸಂದೇಶವನ್ನು ಈ ಮೂಲಕ ಸಮಾಜಕ್ಕೆ ನೀಡಲಾಗುತ್ತದೆ. ಆಂಗ್ಲ ಭಾಷೆಯಲ್ಲಿ ಒಂದು ಮಾತಿದೆ “ Iಈ ಙಔU ಖಿUಖಓ ಅIಉಂಖಇಖಿಖಿಇS Iಓಖಿಔ ಂSಊಇS, ಅIಉಂಖಇಖಿಖಿಇ WIಐಐ ಖಿUಖಓ ಙಔU Iಓಖಿಔ ಂSಊಇS”, ನೀವು ಸಿಗರೇಟನ್ನು ಹೊತ್ತಿಸಿ ಬೂದಿಮಾಡಿದ್ದಲ್ಲಿ ಸಿಗರೇಟ್ ನಿಮ್ಮ ಜೀವನವನ್ನೇ ಬೂದಿಮಾಡುತ್ತದೆ ಎಂಬ ಮಾತನ್ನು ಜನರು ಸರಿಯಾಗಿ  ವಿವೇಚಿಸಿ ಅರ್ಥೈಸಿಕೊಂಡಲ್ಲಿ ಈ ವಿಶ್ವ ತಂಬಾಕು ರಹಿತ ದಿನದ ಆಚರಣೆ ಹೆಚ್ಚು ಅರ್ಥಗರ್ಭಿತವಾದೀತು. ವಿಶ್ವ ಸಂಸ್ಥೆ ಈ “ ವಿಶ್ವ ತಂಬಾಕು ರಹಿತ ದಿನ”ಕ್ಕೆ  ವಿಶೇಷವಾದ ಸ್ಥಾನವನ್ನು ನೀಡಿದೆ, ಜಾಗತಿಕವಾಗಿ ವಿಶ್ವದಾದ್ಯಂತ ಸುಮಾರು 08 ದಿನಗಳನ್ನು ವಿಶ್ವ ಸಂಸ್ಥೆ ಅತ್ಯಂತ ಮುತುವರ್ಜಿ ವಹಿಸಿ ಆಚರಿಸುತ್ತದೆ. ಈ ದಿನಗಳು ಯಾವುದೆಂದರೆ ವಿಶ್ವ ಆರೋಗ್ಯ ದಿನ( ಎಪ್ರಿಲ್ 07), ವಿಶ್ಯ ರಕ್ತದಾನಿಗಳ ದಿನ(ಜೂನ್ 14), ವಿಶ್ವ ಲಸಿಕಾ ದಿನ ಅಥವಾ ವಾರ (ಏಪ್ರಿಲ್ ಕೊನೆ ವಾರ) ವಿಶ್ವ ಕ್ಷಯ ರೋಗ ದಿನ (ಮಾರ್ಚ್ 24), ವಿಶ್ವ ಮಲೇರಿಯ ದಿನ (ಏಪ್ರಿಲ್ 25), ವಿಶ್ವ ಹೆಪಟೈಟೀಸ್ ದಿನ (ಜುಲೈ 28), ವಿಶ್ವ ಏಡ್ಸ್ ದಿನ (ಡಿಸೆಂಬರ್ 02) ಮತ್ತು ವಿಶ್ವ ತಂಬಾಕು ರಹಿತ ದಿನ (ಮೇ 31).


ತಂಬಾಕಿನಿಂದ ಉಂಟಾಗುವ ತೊಂದರೆಗಳೆನು?

ಜಾಗತಿಕವಾಗಿ ವಿಶ್ವದಲ್ಲಿ ವಾರ್ಷಿಕವಾಗಿ 8 ಮಿಲಿಯನ್ ಅಂದರೆ 80 ಲಕ್ಷ ಮಂದಿ ತಂಬಾಕಿನ ಬಳಕೆಯಿಂದ ಸಾಯುತ್ತಾರೆ ಇದರಲ್ಲಿ 8ಲಕ್ಷ ಮಂದಿ, ತಾವು ತಂಬಾಕು ಸೇವನೆ ಮಾಡದಿದ್ದರೂ, ಇತರರು ತಂಬಾಕು ಸೇವಿಸಿದ ಪರಿಣಾಮವಾಗಿ, ಅವರಿಗೂ ತಂಬಾಕಿನ ರಾಸಾಯನಿಕಯುಕ್ತ ಹೊಗೆ ಶ್ವಾಸಕೋಶಕ್ಕೆ ಸೇರಿ, ಸಾವಿನಲ್ಲಿ ಪರಿರ್ಯವಸನವಾಗುವುದು, ಬಹಳ ದುರದೃಷ್ಟಕರ ಮತ್ತು ವಿಷಾದನೀಯ ವಿಚಾರವಾಗಿದೆ. ತಂಬಾಕು ಸೇವನೆಯಿಂದ ಸಾವಿನ ಮನೆಗೆ ನೇರವಾಗಿ ರಹದಾರಿ ಸಿಗುವ ಕಾರಣದಿಂದಲೇ ನಮ್ಮ ಹಿರಿಯರು “ಧೂಮಪಾನದ ನಗೆ, ಮನೆ ಮುಂದೆ ಹೊಗೆ” ಎಂದು ಬಹಳ ಅರ್ಥಗರ್ಭಿತವಾಗಿ ಹೇಳಿದ್ದಾರೆ. ಆದರೂ ನಮ್ಮ ಯುವ ಜನತೆ “ರಾತ್ರಿ ಕಂಡ ಬಾವಿಗೆ ಹಗಲು ಬೀಳುವಂತೆ, ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಅರಿವಿದ್ದೂ ಪುನಃ ಪುನಃ ತಂಬಾಕು ಬಳಸಿ ಸಾವಿನ ದವಡೆಗೆ ಸಿಗುತ್ತಿರುವುದು ಬಹಳ ಶೋಚನೀಯವಾದ ವಿಚಾರವಾಗಿರುತ್ತದೆ. ನಮ್ಮ ಭಾರತ ದೇಶವೊಂದರಲ್ಲಿಯೇ 10 ರಿಂದ 12 ಕೋಟಿ ತಂಬಾಕು ಬಳಕೆದಾರರು ಇದ್ದು ಸುಮಾರು 1 ಕೋಟಿ ಜನರು ತಂಬಾಕು ಸಂಬಂಧಿ ರೋಗಗಳಿಗೆ ತುತ್ತಾಗುತ್ತಾರೆ. ಈ ತಂಬಾಕು ಉತ್ಪನ್ನಗಳ ಅತಿಯಾದ ಬಳಕೆಯಿಂದಾಗಿಯೇ ಹಿಂದಿನ ಕಾಲದಲ್ಲಿ 50 ಮತ್ತು 60 ರ ಹರೆಯದಲ್ಲಿ ಬರುತ್ತಿದ್ದ ಕ್ಯಾನ್ಸರ್ ಈಗ 30-40 ರ ಆಸು ಪಾಸಿನಲ್ಲಿ ಬರುತ್ತಿರುವುದು ಬಹಳ ಖೇದಕರ ವಿಚಾರ  ಅದರಲ್ಲೂ ಬಾಯಿ ಕ್ಯಾನ್ಸರ್, ಗಂಟಲು ಕ್ಯಾನ್ಸರ್ ಮತ್ತು ಶ್ವಾಸಕೋಶ ಕ್ಯಾನ್ಸರ್, ಯುವ ಜನರಲ್ಲಿ ಹೆಚ್ಚು ಕಾಣಿಸುತ್ತಿರುವುದು ಬಹಳ ನೋವಿನ ವಿಚಾರ. ಅಧಿಕ ತಂಬಾಕು ಬಳಕೆಯಿಂದಾಗಿ, ಅಧಿಕ ರಕ್ತದೊತ್ತಡ, ಹೃದಯಘಾತ, ರಕ್ತದಲ್ಲಿ ಹೆಚ್ಚಿದ ಕೊಬ್ಬಿನ ಅಂಶÀ, ಎದೆ ಗೂಡಿನ ಕ್ಯಾನ್ಸರ್, ಬಾಯಿ ಕ್ಯಾನ್ಸರ್ ಗಂಟಲು ಮತ್ತು ಶಬ್ದ ಚೀಲದ ಕ್ಯಾನ್ಸರ್, ಶ್ವಾಸಕೋಶ ಸಂಬಂಧಿ ಉಸಿರಾಟ ತೊಂದರೆ, ಅಂದತ್ವ, ದೃಷ್ಟಿ ಮಾಂದ್ಯತೆ ಎಲುಬು ಸವೆತ ಅಥವಾ ಟೊಳ್ಳು ಮೂಳೆ ರೋಗ ಮುಂತಾದ ಹತ್ತು ಹಲವಾರು ರೋಗಗಳು ಕಂಡು ಬರುತ್ತದೆ. ಇನ್ನು ಮಹಿಳೆಯರಲ್ಲಿ ಗರ್ಭಾಶಯದ ಕ್ಯಾನ್ಸರ್, ಮುಟ್ಟಿನ ತೊಂದರೆ, ಲೈಂಗಿಕ ನಿರಾಸಕ್ತಿ, ಬಂಜೆತನ, ಅಕಾಲಿಕ ಗರ್ಭಪಾತ ಮುಂತಾದ ಹತ್ತು ಹಲವು ಸಮಸ್ಯೆಗಳು ಒಟ್ಟಾಗಿ ಕಾಣಿಸುತ್ತದೆ.


ಕೊನೆ ಮಾತು

ತಂಬಾಕು ಎನ್ನುವುದು ಕ್ಯಾನ್ಸರ್, ಹೃದಯಾಘಾತ ಮುಂತಾದ ಮಾರಣಾಂತಿಕ ಖಾಯಿಲೆಗಳಿಗೆ ಕಾರಣವಾಗುವ ಮೂಲಭೂತ ವಸ್ತು ಎಂಬುವುದು ಸಾರ್ವಕಾಲಿಕ ಸತ್ಯ. ಒಬ್ಬ ಸಾಮಾನ್ಯ ಧೂಮಪಾನಿ ಉಳಿದವರಿಂದ 10 ವರ್ಷಗಳ ಮೊದಲೇ ಸಾಯುತ್ತಾನೆಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ತಂಬಾಕು ಉತ್ಪನ್ನಗಳ ಸೇವನೆಯಿಂದ ಖಂಡಿತವಾಗಿಯೂ ಹತ್ತಾರು ಖಾಯಿಲೆಗಳು ಬಂದೇ ಬರುತ್ತದೆ. ಎಂಬ ಸತ್ಯದ ಅರಿವು ಇದ್ದೂ, ಜನರು ಅದಕ್ಕೆ ದಾಸರಾಗಿ ಹತ್ತಾರು ರೋಗಗಳನ್ನು ದಿನ ನಿತ್ಯ ಆಹ್ವಾನಿಸಿಕೊಳ್ಳುತ್ತಿರುವುದು ವೈದ್ಯ ಲೋಕಕ್ಕೆ ಜೀರ್ಣಿಸಿಕೊಳ್ಳಲಾಗದ ಕಟು ಸತ್ಯ ಎಂದರೆ ತಪ್ಪಾಗಲಾರದು. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ನಿಷೇದ, ತಂಬಾಕು ಜಾಹಿರಾತು ನಿರ್ಭಂದÀ, ಶಾಲೆಗಳ ಸುತ್ತ್ತ ತಂಬಾಕು ಉತ್ಪನ್ನಗಳ ಮಾರಾಟ ನಿಷೇದ ಇವೆಲ್ಲವನ್ನು ಸರಕಾರ ಮಾಡಿದರೂ, ಜನರು ತಮ್ಮ ಇಚ್ಚಾಶಕ್ತಿಯನ್ನು ಬಳಸಿಕೊಂಡು, ತಮ್ಮ ಜವಾಬ್ದಾರಿ ಅರಿತು ತಂಬಾಕು ಉತ್ಪನ್ನಗಳಿಂದ ದೂರ ಇರಬೇಕು. ಕಾನೂನಿನ ಶಿಕ್ಷೆಗೆ ಹೆದರಿ ಯಾರೂ ತಂಬಾಕು ಬಳಸದೆ ಇರಲಾರರು. ಈ ವಿಚಾರದಲ್ಲಿ ಜನರ ಪಾಲುದಾರಿಕೆ ಮತ್ತು ಪಾಲುಗೊಳ್ಳುವಿಕೆ ಅತೀ ಅಗತ್ಯ ಎಲ್ಲವನ್ನು ಕಾನೂನಿನ ಮೂಲಕ ನಿಯಂತ್ರಿಸಲು ಸಾಧ್ಯವಿಲ.್ಲ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ತಾವೇ ನಿರ್ಭಂದ ಹಾಕಿಕೊಳ್ಳಬೇಕು, ತಮಗೆ ಕ್ಯಾನ್ಸರ್ ಬರದಂತೆ ಸರಕಾರ ನೋಡಿಕೊಳ್ಳಬೇಕೆಂಬುದು ಮೂರ್ಖತನದ ಪರಮಾವದಿ ಜನರ ಪಾಲ್ಗೊಳ್ಳುವಿಕೆ ಇಲ್ಲದಿದ್ದಲ್ಲಿ ಯಾವ ಕಾನೂನು ಇದ್ದರೆ ಏನು ಪ್ರಯೋಜನ? ಈ ಎಲ್ಲಾ ವಿಚಾರವನ್ನು ಅರ್ಥೈಸಿಕೊಂಡು, ನಾವೆಲ್ಲ ಸೇರಿ ತುಂಬು ಹುಮ್ಮಸ್ಸಿನಿಂದ ತಂಬಾಕಿನ ಎಲ್ಲಾ ಉತ್ಪನ್ನಗಳನ್ನು ಬಹಿಷ್ಕರಿಸೋಣ. ಎಲ್ಲಾ ಓಕೆ ತಂಬಾಕು ಯಾಕೆ? ಎಂಬ ಘೋಷವಾಕ್ಯದೊಂದಿಗೆ ಹೊಸ ಜೀವನ ಆರಂಭಿಸೋಣ. ಈ ದಿನವೇ ತಂಬಾಕಿನ ಉತ್ಪನ್ನಗಳಿಗೆ ಗುಡ್‍ಬೈ ಹೇಳಿ,  ಮುಂದೆಂದೂ ತಂಬಾಕಿನ ಉತ್ಪನ್ನ ಬಳಸುವುದಿಲ್ಲ ಎಂಬ ಪ್ರತಿಜ್ಞೆ ಮಾಡೋಣ. ಹಾಗಾದಲ್ಲಿ ಮಾತ್ರ ಈ ‘ವಿಶ್ವ ತಂಬಾಕು ರಹಿತ ದಿನ’ ಆಚರಣೆಗೆ ಹೆಚ್ಚು ಮೌಲ್ಯ ಬಂದಿತು. ಇಲ್ಲವಾದರೆ ಎಲ್ಲಾ ಆಚರಣೆಯಂತೆ ಹತ್ತೊರೊಟ್ಟಿಗೆ ಹನ್ನೊಂದು ಎಂಬಂತೆ ಕೇವಲ ಬೂಟಾಟಿಕೆಗೆ ಮಾತ್ರ ಈ ಆಚರಣೆ ಸೀಮಿತವಾದೀತು. ಹಾಗಾಗದಿರಲಿ ಎಂದು ತುಂಬು ಹೃದಯದಿಂದ ಹಾರೈಸೋಣ ಮತ್ತು ಒಂದು ತಂಬಾಕು ಮುಕ್ತ, ವ್ಯಸನ ಮುಕ್ತ ಆರೋಗ್ಯವಂತ ಭಾರತವನ್ನು ರೂಪಿಸುವಲ್ಲಿ ನಾವೆಲ್ಲಾ ಕೈ ಜೋಡಿಸೋಣ. ಅದರಲ್ಲಿಯೇ ನಮ್ಮ ಊರಿನ, ನಮ್ಮ ನಾಡಿನ, ನಮ್ಮ ರಾಜ್ಯದ ಹಾಗೂ ನಮ್ಮ ದೇಶದ ಉನ್ನತಿ ಅಡಗಿದೆ.


-ಡಾ: ಮುರಲೀ ಮೋಹನ್ ಚೂಂತಾರು 

BDS,MDS,DNB,MOS RCSEd (UK) MBA

ಸುರಕ್ಷಾ ದಂತ ಚಿಕಿತ್ಸಾಲಯ, ಹೊಸಂಗಡಿ,  

ಮಂಜೇಶ್ವರ, 671323

ದಂತವೈದ್ಯರು ಮತ್ತು ಬಾಯಿ ಮತ್ತು ದವಡೆ ಶಸ್ತ್ರ ಚಿಕಿತ್ಸಕರು 

ಮೊ.ನಂ. 9845135787

E-mail:  drmuraleemohan@gmail.com

www.surakshadental.com



0 تعليقات

إرسال تعليق

Post a Comment (0)

أحدث أقدم