|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿವೇಕಾನಂದ ಕಾಲೇಜಿನಲ್ಲಿ ಸ್ವಾತಂತ್ರ್ಯವೀರ ಸಾವರ್ಕರ್ ಜಯಂತಿ ಆಚರಣೆ

ವಿವೇಕಾನಂದ ಕಾಲೇಜಿನಲ್ಲಿ ಸ್ವಾತಂತ್ರ್ಯವೀರ ಸಾವರ್ಕರ್ ಜಯಂತಿ ಆಚರಣೆ

‘ಕ್ಷಾತ್ರಚೇತನ ಸಾವರ್ಕರ್’ ವಿಚಾರಗೋಷ್ಠಿ ಉದ್ಘಾಟಿಸಿದ ಪತ್ರಕರ್ತೆ ಶ್ರೀಲಕ್ಷ್ಮೀ ರಾಜ್‍ಕುಮಾರ್



ಪುತ್ತೂರು: ವೀರ ಸಾವರ್ಕರ್‍ರಂತಹ ಮಹಾನ್ ಚೇತನರ ತ್ಯಾಗಕ್ಕೆ ಭಾರತೀಯರು ಸದಾ ಋಣಿಯಾಗಿರಬೇಕು. ಭಾರತೀಯರಿಗೆ ಸ್ವಾತಂತ್ರ ಹೋರಾಟದ ಮೂಲಕ ಪುನರ್ಜನ್ಮ ನೀಡಿದ ಸಾವರ್ಕರ್ ಅವರ ಕೊಡುಗೆ ಅವಿಸ್ಮರಣೀಯ. ಇಂತಹ ಮಹಾನ್‍ ಚೇತನರನ್ನು ದೇಶ ವಿರೋಧಿಯಾಗಿ ಬಿಂಬಿಸುತ್ತಿರುವುದು ವಿಷಾದನೀಯ ಎಂದು ಶ್ರೀಟಾಕ್ಸ್ ವಾಹಿನಿಯ ಸಂಪಾದಕಿ, ಪತ್ರಕರ್ತೆ ಶ್ರೀಲಕ್ಷ್ಮೀ ರಾಜ್‍ಕುಮಾರ್ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ಐಕ್ಯುಎಸಿ ಘಟಕ, ಕಾಲೇಜು ವಿದ್ಯಾರ್ಥಿ ಸಂಘ ಹಾಗೂ ಕಾಲೇಜು ಎಬಿವಿಪಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಸಾವರ್ಕರ್ ಜಯಂತಿಯ ಅಂಗವಾಗಿ ಏರ್ಪಡಿಸಲಾಗಿದ್ದ ‘ಕ್ಷಾತ್ರ ಚೇತನ ಸಾವರ್ಕರ್ ಎಂಬ ಒಂದು ದಿನದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ‘ಸಾವರ್ಕರ್ ಮತ್ತು ಆರೋಪಗಳು’ ಎನ್ನುವ ವಿಷಯದ ಬಗ್ಗೆ ಶನಿವಾರ ಮಾತನಾಡಿದರು.


ಸ್ವಾತಂತ್ರ ಹೋರಾಟ ಇನ್ನೂ ಮುಗಿದಿಲ್ಲ. ಸಾವರ್ಕರ್ ಜೀವನದ ಹಲವು ಸತ್ಯಗಳನ್ನು ರಾಜಕೀಯ ಹುನ್ನಾರಗಳ ಮೂಲಕ ತಡೆಹಿಡಿಯಲಾಗಿದೆ. ಈ ಸತ್ಯಗಳ ಶೋಧನೆಯಾದಾಗ ನಿಜವಾದ  ಬೌದ್ಧಿಕ ಸ್ವಾತಂತ್ರ ದೊರೆಯುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಜ್ಞಾನವೇ ಅಸ್ತ್ರ. ಸದ್ಯ ಮಾಹಿತಿಯ ಯುದ್ದ ನಡೆಯುತ್ತಿದ್ದು, ಪ್ರಜಾಪ್ರಭುತ್ವದ ಹೆಸರಿನಲ್ಲಿ ರಾಜಕೀಯ ನಾಯಕರಿಂದ ತಪ್ಪು ಮಾಹಿತಿಗಳ ರವಾನೆ ಆಗುತ್ತಿರುವುದು ಮಹಾಪರಾಧ. ಭ್ರಷ್ಟಾಚಾರದಂತಹ ಆರೋಪ ಹೊತ್ತು ಜೈಲು ಸೇರಿದ ನಾಯಕರಿಗೆ ಭಾರತ ಮಾತೆಯನ್ನು ತಾಯಿಯಂತೆ ಪೂಜಿಸುತ್ತಿದ್ದ ಸಾವರ್ಕರ್ ಬಗ್ಗೆ ಮಾತನಾಡುವ ಯೋಗ್ಯತೆಯಿಲ್ಲ ಎಂದು ಅಭಿಪ್ರಾಯ ಪಟ್ಟರು.

ಅನಂತರದಲ್ಲಿ ನಡೆದ ವಿದ್ಯಾರ್ಥಿ ವಿಚಾರ ಮಂಡನೆಯಲ್ಲಿ ಮಂಗಳೂರು ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ವಿದ್ಯಾರ್ಥಿ ಪೃಥ್ವೀಶ್ ಧರ್ಮಸ್ಥಳ ‘ಸಮಾಜ ಸುಧಾರಕ ಸಾವರ್ಕರ್’ ಎಂಬ ವಿಷಯದ ಕುರಿತು ಮಾತನಾಡಿದರು. ಕೊಣಾಜೆ ಮಂಗಳಗಂಗೋತ್ರಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕೌಶಿಕ್ ಜಿ ಎನ್ ‘ಸಾವರ್ಕರ್ ಸಾಹಿತ್ಯ ಮತ್ತು ಸ್ವಾತಂತ್ರ್ಯ ಸಂಗ್ರಾಮ’ ಎಂಬ ವಿಷಯದ ಕುರಿತು ವಿಚಾರ ಮಂಡಿಸಿದರು.


ವಿಚಾರಗೋಷ್ಠಿಯ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಪೋಸ್ಟ್ ಕಾರ್ಡ್ ಮತ್ತು ಟಿವಿ ವಿಕ್ರಮವಾಹಿನಿಯ ಮುಖ್ಯಸ್ಥ ಮಹೇಶ್ ವಿಕ್ರಮ್ ಹೆಗ್ಡೆ ಮಾತನಾಡಿ, ಸಾವರ್ಕರ್‌ ಅವರಂತಹ ದೇಶಭಕ್ತನನ್ನು ಪ್ರಸ್ತುತ ದಿನಗಳಲ್ಲಿ ಹೇಡಿ ಎಂದು ಬಿಂಬಿಸುತ್ತಿರುವುದು ಅಪರಾಧ. ಸಾವರ್ಕರ್ ಜೀವಮಾನದಲ್ಲಿ ಅನುಭವಿಸಿದ ನೋವಿನ ಬಗ್ಗೆ ಕಿಂಚಿತ್ತೂ ಅರಿವಿಲ್ಲದ ವ್ಯಕ್ತಿಗಳ ನಡೆ ನಿಜಕ್ಕೂ ವಿಷಾದನೀಯ. ಸಾವರ್ಕರ್ ಹಿಂದೂ ರಾಷ್ಟ್ರದ ಕನಸು ಹೊತ್ತವರು, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳು ಧರ್ಮಶಿಕ್ಷಣದಿಂದ ವಂಚಿತರಾಗಿದ್ದಾರೆ. ಯುವಕರು ಸನಾತನ ಧರ್ಮದ ಶ್ರೇಷ್ಠತೆಯನ್ನು ತಿಳಿದುಕೊಳ್ಳಬೇಕು ಮತ್ತು ಅದರ ಪರಿಪಾಲನೆಯಾಗಬೇಕು ಎಂದು ತಿಳಿಸಿದರು.


ಎಬಿವಿಪಿ ಮಂಗಳೂರು ವಿಭಾಗದ ಸಂಚಾಲಕ ಹರ್ಷಿತ್  ಕೊಯಿಲ ಮಾತನಾಡಿ, ಸ್ವಾತಂತ್ರ ಸಂಗ್ರಾಮದಲ್ಲಿ ಕಠಿಣ ಶಿಕ್ಷೆಗೆ ಒಳಗಾದ ಸಾವರ್ಕರ್‌ ಅವರನ್ನು ಸ್ವಾತಂತ್ರ್ಯೋತ್ತರ ದಿನಗಳಲ್ಲಿ ನೋಡಿಕೊಂಡ ರೀತಿ ನಿಜಕ್ಕೂ ವಿಷಾದನೀಯ. ಬುದ್ಧಿಜೀವಿಗಳು ಸತ್ಯ ತಿಳಿಯದೆ ಮಾತನಾಡುತ್ತಿರುವುದು ಸಮಾಜಕ್ಕೆ ಕಂಟಕ. ರಾಷ್ಟ್ರೀಯ ಚಿಂತನೆಗಳು ಶಿಕ್ಷಣ ಹಂತದಲ್ಲೇ ಆರಂಭವಾಗಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಪದ್ಧತಿ ಮತ್ತು ಪಠ್ಯಕ್ರಮ ಬದಲಾಗಬೇಕು ಎಂದು ಅಭಿಪ್ರಾಯಪಟ್ಟರು.


ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಶಿವಪ್ರಸಾದ್ ಕೆ ಎಸ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್, ಸಮಾಜದ ಕಣ್ಣು ತೆರೆಯುವ ಚಿಂತನೆಗಳು ವಿದ್ಯಾರ್ಥಿಗಳಲ್ಲಿ ಮೂಡುತ್ತಿರುವುದು ಶ್ಲಾಘನೀಯ. ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರರ ಕುರಿತು ತಿಳಿದುಕೊಳ್ಳುವ ಕಾರ್ಯ ವಿದ್ಯಾರ್ಥಿಗಳಿಂದ ಆಗಬೇಕು. ಇಂತಹ ಕಾರ್ಯಕ್ರಮಗಳ ಮುಖೇನ ದೇಶಕ್ಕೆ ಪ್ರಾಣ ತೆತ್ತವರನ್ನು ಸ್ಮರಿಸುವ ಕಾರ್ಯವಾಗುತ್ತಿದೆ. ಇದು ಆಚರಣೆಗೆ ಮಾತ್ರ ಸೀಮಿತವಾಗದೆ, ಜೀವನದುದ್ದಕ್ಕೂ ಅಳವಡಿಸುವಂತಾಗಲಿ ಎಂದು ನುಡಿದರು.


ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ ಟಿವಿ ವಿಕ್ರಮ ವಾಹಿನಿಯ ನಿರೂಪಕಿ ಮುಮ್ತಾಜ್ ನೆಲ್ಲಿಯಡ್ಕ ಮತ್ತು ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಆಶಿಶ್ ಎನ್ ಎಂ ಉಪಸ್ಥಿತರಿದ್ದರು.


ಈ ಸಂದರ್ಭ ಸಾವರ್ಕರ್ ಜಯಂತಿಯ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಹಾಗೂ ವಿಚಾರಗೋಷ್ಠಿಯಾಧಾರಿತ ರಸಪ್ರಶ್ನೆ ಸ್ಪರ್ಧೆಯ ವಿಜೇತರನ್ನು ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಪದವಿ ಪತ್ರಿಕೋದ್ಯಮ ವಿಭಾಗದ ಪ್ರಾಯೋಗಿಕ ಪತ್ರಿಕೆ 'ವಿಕಸನ' ಮತ್ತು ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ 'ವಿಕಾಸ' ಹಾಗೂ ಪದವಿ ಹಾಗೂ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳ ರಾಷ್ಟ್ರ ಪ್ರಶಸ್ತಿ ವಿಜೇತ 'ಮೌನ' ಕಿರುಚಿತ್ರದ ಟೀಸರ್ ಬಿಡುಗಡೆಗೊಳಿಸಲಾಯಿತು.


ಕಾರ್ಯಕ್ರಮದಲ್ಲಿ ಪದವಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಅಶ್ವಿನಿ ವೈಯಕ್ತಿಕ ಗೀತೆ ಹಾಡಿದರು. ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಮಂಜುನಾಥ್  ಜೋಡುಕಲ್ಲು ಸ್ವಾಗತಿಸಿ, ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ತಾರ ಕರುಣ್ ವಂದಿಸಿದರು. ದ್ವಿತೀಯ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿನಿ ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು.


ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರು

ಪದವಿಪೂರ್ವ ವಿಭಾಗ:

ಆರ್ ಶ್ರೇಷ್ಠ ಶೆಣೈ - ಪ್ರಥಮ

ಅಮಿತ್ ಹರಿದಾಸ್ ಆರವರೆ - ದ್ವಿತೀಯ

ಕೃತಿ ಜಿ ರಾವ್ – ತೃತೀಯ


ಪದವಿ ವಿಭಾಗ:

ಪನ್ನಗ ಪಿ ರಾಯ್ಕರ್ - ಪ್ರಥಮ

ಅನ್ನಪೂರ್ಣ ಬಿ ಆರ್ - ದ್ವಿತೀಯ

ಸುಶ್ರಿತಾ ಭಾರದ್ವಾಜ್ ಡಿ ಎಸ್ – ತೃತೀಯ


ಸ್ನಾತಕೋತ್ತರ ವಿಭಾಗ:

ಪೂಜಾ ತೀರ್ಥಹಳ್ಳಿ - ಪ್ರಥಮ

ನವೀನ್ ಆರ್ ಭಟ್ - ದ್ವಿತೀಯ

ಸಿಂಚನಾ ಎ – ತೃತೀಯ


ವಿಚಾರಗೋಷ್ಠಿಯಾಧಾರಿತ ರಸಪ್ರಶ್ನೆ ಸ್ಪರ್ಧೆ

ಪ್ರಜ್ವಲ್ ಶೇಖ - ಪ್ರಥಮ

ಸುಲಕ್ಷಣಾ - ದ್ವಿತೀಯ

ಯಶಸ್ವಿ – ತೃತೀಯ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post