ಪುತ್ತೂರು: 'ಶ್ಯಾಮಾಭಿವಂದನೆ' ಅಭಿನಂದನ ಗ್ರಂಥ ಬಿಡುಗಡೆ ಮತ್ತು ಕವಿಗೋಷ್ಠಿ

Upayuktha
0


ಪುತ್ತೂರು: ವಿಜ್ಞಾನಕ್ಷೇತ್ರದ ಸಂಶೋಧಕ ಹಾಗೂ ಭಟ್ ಬಯೋಟೆಕ್ ಎಂಬ ಔಷಧಗಳ ಕಿಟ್ ತಯಾರಿಕಾ ಉದ್ಯಮವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿ ಯಶಸ್ವಿಯಾಗಿರುವ ಕಾಸರಗೋಡಿನ ಪೊಟ್ಟಿಪ್ಪಲದ ಡಾ. ಶ್ಯಾಮ ಭಟ್ಟರಿಗೆ ಶ್ಯಾಮಾಭಿವಂದನೆ ಎಂಬ ಅಭಿನಂದನ ಗ್ರಂಥ ಸಮರ್ಪಿಸಿ ಅಭಿನಂದಿಸುವ ಕಾರ್ಯಕ್ರಮ ಮತ್ತು ಎರಡು ಕವಿಗೋಷ್ಠಿಗಳು ಪುತ್ತೂರು ಸಮೀಪದ ನವಚೇತನದಲ್ಲಿ ಮೇ 1 ರ ಭಾನುವಾರ ಜರಗಿತು.


ನವಚೇತನ ಹಿರಿಯ ನಾಗರಿಕರ ಸಂಘ ಹಾಗೂ ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ತಾಲೂಕು ಘಟಕ ಜೊತೆಯಾಗಿ ಕಾರ್ಯಕ್ರಮ ಸಂಘಟಿಸಿದ್ದವು.


ಹಿರಿಯರ ಸಾಧನೆಗಳು ಕಿರಿಯರಿಗೆ ಮಾರ್ಗದರ್ಶನ ನೀಡಬೇಕು. ಪ್ರಭಾವ ಪ್ರೇರಣೆ ಒದಗಿಸಬೇಕು. ಶ್ಯಾಮಭಿವಂದನೆ ಎಂಬ ಈ ಅಭಿನಂದನ ಗ್ರಂಥವು ಶ್ಯಾಮಭಟ್ಟರ ಬದುಕಿನ ಮೈಲಿಗಲ್ಲುಗಳನ್ನು ತೋರಿಸುವಲ್ಲಿ ಯಶಸ್ವಿಯಾಗಿದೆ ಎಂದು ಕೃತಿ ಬಿಡುಗಡೆಗೊಳಿಸಿದ ಲೇಖಕ ಹಾಗೂ ಪತ್ರಕರ್ತ ವಿ.ಬಿ. ಅರ್ತಿಕಜೆ ಹೇಳಿದರು.


ಗ್ರಂಥವನ್ನು ಸಂಪಾದಿಸಿದ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಬಡೆಕ್ಕಿಲ ಶ್ರೀಧರ ಭಟ್ ಅವರು ಸಾಧಕರ ಜೀವನವನ್ನು ನಾಡಿಗೆ ಪರಿಚಯಿಸುವ ಅಗತ್ಯವಿದೆ. ಅವರು ತೋರಿಸಿದ ಬೆಳಕಿನಲ್ಲಿ ಮುಂದಿನ ತಲೆಮಾರು ಹೆಜ್ಜೆ ಹಾಕಬೇಕಾಗಿದೆ ಎಂದರು.


ಪುತ್ತೂರಿನ ಶಾಸಕ ಸಂಜೀವ ಮಠನ್ದೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನವಚೇತನ ಹಿರಿಯ ನಾಗರಿಕರ ವಸತಿ ಸಮುಚ್ಚಯವು ಪುತ್ತೂರಿಗೆ ಒಂದು ವರದಾನವಾಗಿದೆ ಎಂದು ಅವರು ಹೇಳಿದರು.


ಇನ್ನೋರ್ವ ಮುಖ್ಯ ಅತಿಥಿ ಕಾದಂಬರಿಗಾರ್ತಿ ಶ್ರೀಮತಿ ಎ. ಪಿ. ಮಾಲತಿ ಅವರು ಶ್ಯಾಮ ಭಟ್ಟರದು ಹೆಮ್ಮೆಪಡಬಹುದಾದ ಸಾಧನೆ. ಜೀವನದಲ್ಲಿ ಸಾಧಿಸಲು ಬೇರೆ ಬೇರೆ ಹಾದಿಗಳಿವೆ ಎಂಬುದನ್ನು ವಿಜ್ಞಾನ ಕ್ಷೇತ್ರದ ತನ್ನ ಸಾಧನೆಯ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದರು.


ಭಟ್ ಬಯೋಟೆಕ್ ನ ನಿರ್ದೇಶಕಿ ಶ್ರೀಮತಿ ಸುಶೀಲಾ ಭಟ್ ಮತ್ತು ಜ್ಞಾನಗಂಗಾ ಪುಸ್ತಕ ಮಳಿಗೆಯ ಪ್ರಕಾಶ್ ಕೊಡಂಕಿರಿ ಉಪಸ್ಥಿತರಿದ್ದರು.


ಅಭಿನಂದನೆಗೆ ಉತ್ತರವಾಗಿ ಮಾತಾಡಿದ ಶ್ಯಾಮ ಭಟ್ಟರು ತಂದೆ ತಾಯಿ ಬಂಧುವರ್ಗ ಅಧ್ಯಾಪಕರು ಸ್ನೇಹಿತರು ಮತ್ತು ಸಮಾಜ ತನಗೆ ಉತ್ತೇಜನಕಾರಿಯಾಗಿ ಪ್ರೋತ್ಸಾಹ ನೀಡಿದ ಸಂದರ್ಭಗಳನ್ನು ಸ್ಮರಿಸಿಕೊಂಡರು. ಸಕಾರಾತ್ಮಕ ಮನೋಭಾವ ಇದ್ದಾಗ ಸಾಧನೆಯ ಹಾದಿ ಸುಗಮವಾಗುತ್ತದೆ ಎಂದರು.


ಸಮಾರಂಭದ ಅಧ್ಯಕ್ಷತೆಯನ್ನು ಅರ್ಥಧಾರಿ- ಚಿಂತಕ ಲಕ್ಷ್ಮೀಶ ತೋಳ್ಪಾಡಿ ವಹಿಸಿದ್ದರು. ಜಾತಿ ಮತಗಳನ್ನು ಮೀರಿ ಇಡೀ ಸಮಾಜಕ್ಕೆ ತೋರುಗಂಬವಾಗಿ ನಿಲ್ಲುವುದೇ ಸಾಧಕರ ವೈಶಿಷ್ಟ್ಯ ಎಂದು ಅವರು ಹೇಳಿದರು.


ನವಚೇತನದ ಬಂಧುಗಳು ಶ್ಯಾಮ ಭಟ್ ದಂಪತಿಗಳನ್ನು ಸನ್ಮಾನಿಸಿದರು. ಕೃತಿಯ ಲೇಖಕರಿಗೆ ಈ ಸಂದರ್ಭದಲ್ಲಿ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.


ಆನಂತರ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮತ್ತು ಡಾ. ವಸಂತಕುಮಾರ ಪೆರ್ಲ ಅವರ ಅಧ್ಯಕ್ಷತೆಯಲ್ಲಿ ನವಚೇತನ ಹಿರಿಯ ನಾಗರಿಕರ ಮತ್ತು ಸಾರ್ವಜನಿಕ ವಿಭಾಗದ ಎರಡು ಕವಿಗೋಷ್ಠಿಗಳು ಜರಗಿದವು.


ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಸ್ವಾಗತಿಸಿದರು. ಸ್ವಾತಿ ಸತ್ಯಕಾಮ ನಿರೂಪಿಸಿದರು. ಭಟ್ ಬಯೋಟೆಕ್ ನ ಪವನ್ ಕುಮಾರ್ ವಂದನಾರ್ಪಣೆಗೈದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top