ಎಲ್ಲರ ಕೈಯಲ್ಲೂ ಮೊಬೈಲ್ ಫೋನ್, ಕಿವಿಗೊಂದು ಇಯರ್ ಫೋನ್, ಜಗವನ್ನೇ ಮೊಬೈಲ್ನಲ್ಲಿ ನೋಡಿ ಆನಂದಿಸು ಯುವಜನತೆ. ಮತ್ತೆಲ್ಲಿದೆ ಪಕ್ಕದಲ್ಲಿ ಕೂತವನ ಜೊತೆ ಮಾತನಾಡಲು ಸಮಯ. ಮೊಬೈಲ್ ಫೋನ್ ನಿಂದ ಎಲ್ಲೋ ದೂರದಲ್ಲಿರುವ ಸ್ನೇಹಿತನ ಜೊತೆ ಮಾತನಾಡುವ ನಾವು, ನಮ್ಮ ಹತ್ತಿರದಲ್ಲಿ ಇರುವ ಸ್ನೇಹಿತನ ಜೊತೆ ಸಮಯ ಕಳೆಯಲು ಪ್ರಯತ್ನಿಸುವುದಿಲ್ಲ.
ಮೊದಲೆಲ್ಲ ಮಾತಿಗೆ ಬರವಿರಲಿಲ್ಲ. ಯಾರೇ ಸಿಕ್ಕರು, ನಕ್ಕರು ಅಲ್ಲಿ ಮಾತು ಶುರುವಾಗುತ್ತಿತ್ತು. ಮಾತಿಲ್ಲದೆ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿರಲಿಲ್ಲ. ಅದೆಷ್ಟು ಕಷ್ಟ-ಸುಖಗಳು ನೋವು-ನಲಿವು ಎಲ್ಲಾ ಹಂಚಿಕೊಳ್ಳಲಾಗುತ್ತಿದದ್ದು ಮಾತಿನಿಂದ ಮಾತ್ರ. ಹಾಗಾಗಿ ಹಿರಿಯರು ಮಾತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು.
ಪ್ರಸ್ತುತ ಜಗದಲ್ಲಿ ಮಾತಿನ ಮೌಲ್ಯ ಕುಗುತ್ತಿರುವುದಂತೂ ನಿಜ. ಹಿರಿಯರಿಂದ ಹಿಡಿದು ಕಿರಿಯರವರೆಗೂ ಮಾತಿಗಿಂತ ತಂತ್ರಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ತಂತ್ರಜ್ಞಾನದ ಬೆಳವಣಿಗೆಯಿಂದ ಸಂವಹನದ ಮಹತ್ವವನ್ನು ಅಸಡ್ಡೆಯಿಂದ ನೋಡುತ್ತಿದ್ದಾರೆ. ಮಾತು ಮರೆತ ಜಗಕ್ಕೆ ಅದೆಷ್ಟೋ ಸಮಸ್ಯೆಗಳು , ಗೊಂದಲಗಳು ಪರಿಹಾರವಾಗದೆ ಉಳಿದುಬಿಟ್ಟಿದೆ.
ತಂತ್ರಜ್ಞಾನದೊಂದಿಗೆ ಸಾಗುವುದು ಎಷ್ಟು ಅಗತ್ಯವೋ, ಅದೇ ರೀತಿ ಕೆಲವೊಂದು ವಿಷಯಗಳನ್ನು ಮರೆಯದೆ ಅದರ ಪ್ರಾಮುಖ್ಯತೆಯನ್ನು ಕುಗ್ಗಿಸದೆ ನಡೆಯುವುದು ಅಷ್ಟೇ ಮುಖ್ಯ. ಮಾತು ಮನೆ ಕಟ್ಟಬಹುದು, ಹಾಗೆ ಮನೆಯನ್ನು ಉರುಳಿಸಬಹುದು, ಹಾಗಾಗಿ ಎಲ್ಲಿ ಯಾವುದನ್ನು ಯಾವಾಗ ಮಾತನಾಡಬೇಕು ಎಂಬ ಪರಿಜ್ಞಾನದೊಂದಿಗೆ ಸಂವಹನ ನಡೆಸಬೇಕು.
ತಂತ್ರಜ್ಞಾನದ ಒಲವಿನಿಂದ ಮಾತು ಮರೆತಿರುವ ಜಗತ್ತು, ಇನ್ನೊಮ್ಮೆ ಎಚ್ಚೆತ್ತು ಮಾತನಾಡುವ ಪ್ರಯತ್ನ ಮಾಡಬೇಕಿದೆ. ಹೊಸ ವಿಷಯಗಳನ್ನು ಮಾತಿನ ಮೂಲಕ ಹುಡುಕಬೇಕಾಗಿದೆ. ಹಾಗಾಗಿ ಮಾತನಾಡುವುದನ್ನು ಮರೆಯದೆ, ಮಾತನಾಡುತ್ತಾ ಇನ್ನಷ್ಟು ಅನ್ವೇಷಣೆಗಳನ್ನು ಮಾಡಬೇಕು. ಮಾತಿನಿಂದ ಮನೆಮನಗಳನ್ನು ಗೆಲ್ಲಬೇಕು.
-ದೀಕ್ಷಿತಾ ಜೇಡರಕೋಡಿ
ವಿವೇಕಾನಂದ ಕಾಲೇಜು ಪುತ್ತೂರು
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ