|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಗಳೂರಿನ ರಾಮಕೃಷ್ಣ ಮಠಕ್ಕೆ 75 ವರ್ಷಗಳ ಸಂಭ್ರಮಾಚರಣೆ: ಜೂ 3-4 ಅಮೃತ ಮಹೋತ್ಸವ

ಮಂಗಳೂರಿನ ರಾಮಕೃಷ್ಣ ಮಠಕ್ಕೆ 75 ವರ್ಷಗಳ ಸಂಭ್ರಮಾಚರಣೆ: ಜೂ 3-4 ಅಮೃತ ಮಹೋತ್ಸವ


ಮಂಗಳೂರು: ಮಂಗಳೂರಿನ ರಾಮಕೃಷ್ಣ ಮಠಕ್ಕೆ ಇದೀಗ 75 ವರ್ಷಗಳ ಸಂಭ್ರಮ. ಆ ಪ್ರಯುಕ್ತ ಅಮೃತ ಮಹೋತ್ಸವ ಸಮಾರಂಭವನ್ನು ಶುಭಕೃತ್ ಸಂವತ್ಸರ, ಜ್ಯೇಷ್ಠ ಶುದ್ಧ, ಚತುರ್ಥೀ-ಪಂಚಮಿಯಂದು (ಜೂನ್ 3 ಮತ್ತು 4ರಂದು) ಎರಡು ದಿನಗಳ ಕಾಲ ಆಯೋಜಿಸಲಾಗಿದೆ.


ಅಮೃತ ಸಂಗಮ: ಸಾಧು ಭಕ್ತ ಸಮ್ಮೇಳನ ಎಂಬ ಹೆಸರಿನಲ್ಲಿ ಎರಡು ದಿನಗಳ ಚಿಂತನ-ಮಂಥನ ಕಾರ್ಯಕ್ರಮ- ಸರಳತೆ ಪರಿಕಲ್ಪನೆಯಡಿಯಲ್ಲಿ ನಡೆಯಲಿದೆ.


ಇದೇ ಸಂದರ್ಭದಲ್ಲಿ ಸಾಧು ನಿವಾಸ- 'ಅಮೃತ ಸದನ'ವನ್ನು ಸ್ವಾಮಿ ವೀರೇಶ್ವರಾನಂದ ಅವರು ಉದ್ಘಾಟಿಸಲಿದ್ದಾರೆ. ವಿವೇಕಾನಂದ ಉಚಿತ ತರಬೇತಿ ಕೇಂದ್ರದ ಕಟ್ಟಡ- 'ಅಮೃತ ಭವನ'ಕ್ಕೆ ಭೂಮಿ ಪೂಜೆ ಹಾಗೂ ಶ್ರೀಮಠದ ನೂತನ ಮಹಾದ್ವಾರ- 'ಅಮೃತ ಪಥ'ದ ಲೋಕಾರ್ಪಣೆಯೂ ನಡೆಯಲಿದೆ.


ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಸಂದರ್ಭದಲ್ಲೇ ಮಂಗಳೂರಿನ ರಾಮಕೃಷ್ಣ ಮಠದ ಅಮೃತ ಮಹೋತ್ಸವವೂ ನಡೆಯುತ್ತಿರುವುದು ವಿಶೇಷವಾಗಿದೆ.


ಜೂನ್ 3ರಂದು ಶುಕ್ರವಾರ ಬೆಳಗ್ಗೆ ಅಮೃತ ವರ್ಷದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಪಶ್ಚಿಮ ಬಂಗಾಳದ ಬೇಲೂರು ಮಠದ, ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಉಪಾಧ್ಯಕ್ಷರಾದ ಪರಮಪೂಜ್ಯ ಶ್ರೀಮತ್ ಸ್ವಾಮಿ ಗೌತಮಾನಂದಜಿ ಮಹರಾಜ್ ಅವರ ದಿವ್ಯ ಸನ್ನಿಧಾನವಿರಲಿದೆ. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಮತ್ತು ಪಶ್ಚಿಮ ಬಂಗಾಳದ ಬೇಲೂರು ಮಠದಲ್ಲಿರುವ ರಾಮಕೃಷ್ಣ ಮಠದ ವಿಶ್ವಸ್ಥರಾದ ಸ್ವಾಮಿ ಮುಕ್ತಿದಾನಂದಜಿ ಅವರ ದಿವ್ಯ ಉಪಸ್ಥಿತಿ ಇರಲಿದೆ.


ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು 'ಅಮೃತ ವರ್ಷ' ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಡಾ. ಎನ್. ವಿನಯ್ ಹೆಗ್ಡೆ, ಮಂಗಳೂರು ಮಹಾನಗರಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಸಂಸದ ನಳಿನ್ ಕುಮಾರ್ ಕಟೀಲು, ಮಂಗಳೂರು ದಕ್ಷಿಣದ ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ, ನಿಕಟಪೂರ್ವ ಶಾಸಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಗದಗದ ಪೂರ್ವ ಶಾಸಕ ಡಿ.ಆರ್ ಪಾಟೀಲ್, ಕರ್ನಾಟಕ ವೃತ್ತದ ಪ್ರಧಾನ ಪೋಸ್ಟ್ ಮಾಸ್ಟರ್ ಜನರಲ್‌ ಎಸ್. ರಾಜೇಂದ್ರ ಕುಮಾರ್ ಹಾಗೂ ಉದ್ಯಮಿ, ಸಮಾಜಸೇವಕ ದಯಾನಂದ ಪೈ ಮುಖ್ಯ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ.


ಅಪರಾಹ್ನ 12:00ರಿಂದ 1:30ರ ವರೆಗೆ ನಡೆಯುವ ಮೊದಲನೇ ಗೋಷ್ಠಿಯಲ್ಲಿ 'ಯುಗಾವತಾರಿ- ಸರಳತೆಯ ರಾಯಭಾರಿ' ವಿಷಯದಲ್ಲಿ ಬೆಂಗಳೂರಿನ ಬಸವನಗುಡಿಯ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ನಿತ್ಯಸ್ಥಾನಂದಜಿ,  'ಸರಳತೆ, ಗಾಂಭೀರ್ಯದ ಸಂಗಮ- ಶ್ರೀಮಾತೆ' ವಿಚಾರವಾಗಿ ಚಂಡೀಘಡದ ರಾಮಕೃಷ್ಣ ಮಿಷನ್ ಮುಖ್ಯಸ್ಥರಾದ ಸ್ವಾಮಿ ಅನುಪಮಾನಂದಜಿ, 'ಸರಳತೆಯ ಸಂತನೀತ- ವಿಶ್ವವಿಜೇತ' ಎಂಬ ವಿಷಯದಲ್ಲಿ ದಾವಣಗೆರೆಯ ರಾಮಕೃಷ್ಣ ಆಶ್ರಮದ ಮುಖ್ಯಸ್ಥರಾದ ಸ್ವಾಮಿ ತ್ಯಾಗೀಶ್ವರಾನಂದಜಿ ಅವರು ಉಪನ್ಯಾಸಗಳನ್ನು ಮಂಡಿಸಲಿದ್ದಾರೆ.


ಭೋಜನ ವಿರಾಮದ ಬಳಿಕ ಅಪರಾಹ್ನ 2ರಿಂದ 2:30ರ ವರೆಗೆ ಕುದ್ರೋಳಿ ಗಣೇಶ್ ಅವರಿಂದ ಹರಿಕಥಾ ಜಾದೂ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಗೋವಾದ ರಾಮಕೃಷ್ಣ ಮಿಶನ್ ಮುಖ್ಯಸ್ಥರಾದ ಸ್ವಾಮಿ ಮಹೇಶಾತ್ಮಾನಂದಜಿ ಇದನ್ನು ಉದ್ಘಾಟಿಸಲಿದ್ದಾರೆ.


ಅಪರಾಹ್ನ 2:30ರಿಂದ 4 ಗಂಟೆಯ ವರೆಗೆ ನಡೆಯುವ 2ನೇ ಗೋಷ್ಠಿಯಲ್ಲಿ- ಸರಳತೆ ಮತ್ತು ನಾಯಕತ್ವ ವಿಷಯದಲ್ಲಿ ಗದಗದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದಜಿ; ಸರಳ ಬದುಕಿನ ಹೊರನೋಟ ಮತ್ತು ಒಳನೋಟ ಕುರಿತು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದಜಿ; ಸಂತರಾಜ್ಯದ ಸರಳತೆಯ ಚಕ್ರವರ್ತಿ- ವಿಷಯದಲ್ಲಿ ರಾಣಿಬೆನ್ನೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಪ್ರಕಾಶಾನಂದಜಿ ಅವರು ಉಪನ್ಯಾಸ ಮಂಡಿಸಲಿದ್ದಾರೆ.


ಸಾಯಂಕಾಲ 4:30ರಿಂದ 5:30ರ ವರೆಗೆ 3ನೇ ಗೋಷ್ಠಿಯಲ್ಲಿ ಸರಳತೆಗೊಲಿದ ಶ್ರೀಕೃಷ್ಣ ಎಂಬ ವಿಷಯದಲ್ಲಿ ಉಡುಪಿಯ ಆಧ್ಯಾತ್ಮಿಕ ಚಿಂತಕಿ ಡಾ. ವೀಣಾ ಬನ್ನಂಜೆ ಹಾಗೂ ಸರಳತೆಯಿಂದ ಜೀವನ ಸಾಮರಸ್ಯ ಎಂಬ ವಿಷಯದಲ್ಲಿ ಮೈಸೂರಿನ ಸಂಸ್ಕೃತ ವಿದ್ವಾಂಸರಾದ ಡಾ. ಪ್ರಸನ್ನಾಕ್ಷಿ ಕೆ.ಎಲ್ ಉಪನ್ಯಾಸ ನೀಡಲಿದ್ದಾರೆ.


ಬಳಿಕ 5:30ರಿಂದ 6:15ರ ವರೆಗೆ  ಯತಿಪೂಜಾ ಕಾರ್ಯಕ್ರಮ ಜರಗಲಿದೆ. ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ವಿಶೇಷ ಅಭ್ಯಾಗತರಾಗಿ ಆಗಮಿಸಲಿದ್ದಾರೆ. ಪುತ್ತೂರಿನ ವೇ.ಮೂ ಶ್ರೀಕೃಷ್ಣ ಉಪಾಧ್ಯಾಯ ಅವರಿಂದ ವೇದಮಂತ್ರ ಘೋಷ, ಬಳಿಕ ಸ್ವಾಮಿ ರಘುರಾಮಾನಂದಜಿ ಅವರಿಂ ಸಂಧ್ಯಾರತಿ ಕಾರ್ಯಕ್ರಮ ನೆರವೇರಲಿದೆ.


ಸಂಜೆ 7:00ರಿಂದ 8:30 ರ ವರೆಗೆ ಸಂಗೀತ ಸಂಧ್ಯಾ- ಪುಣೆಯ ವಿದುಷಿ ಮಂಜೂಷಾ ಪಾಟೀಲ್ ನಡೆಸಿಕೊಡಲಿದ್ದಾರೆ.


ಜೂನ್ 4ರಂದು ಶನಿವಾರ ಮುಂಜಾನೆ 6:30ರಿಂದ 7:00 ಗಂಟೆಯ ವರೆಗೆ ಉಷಃ ಕೀರ್ತನೆ, ಬಳಿಕ ನಿರ್ದೇಶಿತ ಧ್ಯಾನ ಕಾರ್ಯಕ್ರಮ ಇರುತ್ತದೆ.


ಬೆಳಗ್ಗೆ 8:15ರಿಂದ 9:45ರ ವರೆಗೆ ವಿಶೇಷ ಗೋಷ್ಠಿ ಜರಗಲಿದೆ. ರಾಮಕೃಷ್ಣ ಮಠ ಮಂಗಳೂರು- 75 ವರ್ಷಗಳ ಪಯಣ ಕುರಿತು ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ; ಮಠದ ನೂತನ ಕಾರ್ಯಕ್ರಮಗಳು ಹಾಗೂ ಪ್ರಯೋಗಗಳ ಕುರಿತು ಸ್ವಾಮಿ ಏಕಗಮ್ಯಾನಂದಜಿ; ಮಂಗಳೂರು ರಾಮಕೃಷ್ಣ ಮಠ- ಸ್ಪೂರ್ತಿಯ ಕೇಂದ್ರ ಎಂಬ ವಿಷಯದಲ್ಲಿ ಮಠದ ಸ್ವಯಂಸೇವಕರಾದ ರಂಜನ್ ಬೆಳ್ಳರ್ಪಾಡಿ ಅವರು ಮಾತನಾಡಲಿದ್ದಾರೆ.


ಅನಂತರ 4 ಹಾಗೂ 5ನೇ ಗೋಷ್ಠಿಗಳು ಜರಗಲಿವೆ. ಅಪರಾಹ್ನ 1:45ರ ಬಳಿಕ ಸ್ವಾಮಿ ಮುಕ್ತಿಪದಾನಂದಜಿ ಅವರಿಂದ ಹರಿಕಥೆ, 6ನೇ ಗೋಷ್ಠಿ ನಡೆಯಲಿದೆ.


ಸಂಜೆ 4:45ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ವಿಧಾನಸಭೆಯ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.


ಸಂಜೆ 7ರಿಂದ 8ರ ವರೆಗೆ ಆಳ್ವಾಸ್ ಸಾಂಸ್ಕೃತಿಕ ವೈಭವ- ಶ್ರೀರಾಮ ಪಟ್ಟಾಭಿಷೇಕ- ಯಕ್ಷರೂಪಕ ಪ್ರದರ್ಶನವಿದೆ.

ಹಿನ್ನೆಲೆ:

ಇಂದಿಗೆ 125 ವರ್ಷಗಳ ಹಿಂದೆ 1897 ರಲ್ಲಿ ಸ್ವಾಮಿ ವಿವೇಕಾನಂದರು ರಾಮಕೃಷ್ಣ ಮಹಾಸಂಘ ಎಂಬ ಸಂನ್ಯಾಸಿಗಳ ಸಂಘವನ್ನು ಸ್ಥಾಪಿಸಿದರು ಹಾಗೂ ಆ ಸಂಘದ ನೇತೃತ್ವದಲ್ಲಿ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಎಂಬ ಅವಳಿ ಸಂಸ್ಥೆಗಳನ್ನು ತನ್ನ ಗುರುಗಳಾದ ಅಧ್ಯಾತ್ಮದ ಮೇರು ಶಿಖರ ಶ್ರೀರಾಮಕೃಷ್ಣ ಪರಮಹಂಸರ ಹೆಸರಿನಲ್ಲಿ ಸ್ಥಾಪಿಸಿದರು. ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ `ಆತ್ಮನೋ ಮೋಕ್ಷಾರ್ಥಂ ಜಗದ್ದಿತಾಯ ಚ' ಎನ್ನುವ ಧೈಯದೊಂದಿಗೆ ಜಗತ್ತಿನಾದ್ಯಂತ ಶಾಖೋಪಶಾಖೆಗಳನ್ನು ಹೊಂದಿರುವ ಪ್ರತಿಷ್ಠಿತ ಆಧ್ಯಾತ್ಮಿಕ ಹಾಗೂ ಜನಸೇವಾ ಸಂಸ್ಥೆಗಳಾಗಿ ಕಾರ್ಯನಿರ್ವಸುತ್ತಿವೆ.


ಮಂಗಳೂರಿನನಲ್ಲಿ ಇಂದಿಗೆ ಎಪ್ಪತ್ತೈದು ವರ್ಷಗಳ ಹಿಂದೆ (3-6-1947) ಸ್ವರ್ಗಿಯ ರಾವ್ ಬಹದ್ದೂರ್ ಡಾ| ಕೇಶವ್ ಪೈ ಹಾಗೂ ಇತರೆ ಭಕ್ತರ ಒತ್ತಾಸೆಯಿಂದ ಅಂದಿನ ರಾಮಕೃಷ್ಣ ಮಹಾಸಂಘದ ಹಿರಿಯ ಯತಿವರೇಣ್ಯರು ಮಂಗಳೂರು ನಗರದಲ್ಲಿ ರಾಮಕೃಷ್ಣ ಮಠವನ್ನು ಪ್ರಾರಂಭಿಸಿದರು. ಪ್ರಸಕ್ತ ಮಂಗಳಾದೇವಿ ದೇವಸ್ಥಾನದ ಬಳಿಯಿರುವ ಏಳು ಎಕರೆ ವಿಸ್ತೀರ್ಣದ ಆವರಣವನ್ನು 11-8-1951ರಂದು ದಿ. ಸಾವಕಾರ್ ವೆಂಕಟೇಶ್ ಪೈ ಇವರು ಹಿಂದೂ ಸೇವಾ ಸಂಘದ ಮೂಲಕ ಶ್ರೀಮಠಕ್ಕೆ ಹಸ್ತಾಂತರಿಸಿದರು. ಹೀಗಾಗಿ ಅದೇ ವರುಷ ಮತ್ತೊಂದು ಸಂಸ್ಥೆಯಾದ ರಾಮಕೃಷ್ಣ ಮಿಷನ್ ಕೂಡ ಮಂಗಳೂರಿನಲ್ಲಿ ಕಾರ್ಯಾರಂಭಿಸಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


 

0 تعليقات

إرسال تعليق

Post a Comment (0)

أحدث أقدم