ಬೆಂಗಳೂರಿನಲ್ಲಿ ತುಳು ಭವನ ನಿರ್ಮಾಣವಾಗಬೇಕು: 30ನೇ ವರ್ಷದ ಬೆಂಗಳೂರು ತುಳು ಪರ್ಬದಲ್ಲಿ ಮೊಳಗಿದ ಬೇಡಿಕೆ

Upayuktha
0

ಬೆಂಗಳೂರು: ಕರಾವಳಿ ಜಿಲ್ಲೆಗಳಿಂದ ಹಲವು ಮಂದಿ ಕೇಂದ್ರ ಹಾಗೂ ರಾಜ್ಯ ಸಚಿವರಾಗಿ ರಾಜಕೀಯ ಪ್ರವೇಶಿಸಿದ್ದರೂ ಬೆಂಗಳೂರಿನಲ್ಲಿ ಒಂದು ತುಳು ಭವನ ನಿರ್ಮಿಸಲು ಇದುವರೆಗೂ ಸಾಧ್ಯವಾಗಿಲ್ಲ ಎಂದು ಬೆಂಗಳೂರು ಬಿಲ್ಲವ ಸಂಘದ ಅಧ್ಯಕ್ಷ ವೇದಕುಮಾರ್ ಬೇಸರ ವ್ಯಕ್ತಪಡಿಸಿದರು.


ಬೆಂಗಳೂರಿನ 'ತುಳುವೆರೆಂಕುಲು' ಸಂಘದ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ (ಮೇ 15) ಆಯೋಜಿಸಲಾಗಿದ್ದ 30ನೇ ವರ್ಷದ ಬೆಂಗಳೂರು ತುಳು ಪರ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ತುಳು ಸಂಘಟನೆಗಳ ಮೂಲಕ ಬೆಂಗಳೂರು ನಗರದಲ್ಲಿ ತುಳು ಭವನ ನಿರ್ಮಿಸಲು ಹಲವು ಪ್ರಯತ್ನಗಳು ನಡೆದಿವೆ. ಆದರೆ ಫಲ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮತ್ತಷ್ಟು ಗಮನ ಹರಿಸುವ ಅಗತ್ಯವಿದೆ. ಮುಂಬರುವ ಎಲ್ಲ ತುಳು ಕಾರ್ಯಕ್ರಮಗಳು ಉದ್ದೇಶಿತ ತುಳು ಭವನದಲ್ಲಿಯೇ ನಡೆಯುವಂತಾಗಬೇಕು ಎಂದು ವೇದಕುಮಾರ್ ಆಶಿಸಿದರು.


ತುಳು ಕೇವಲ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ತುಳುವರ ಆತ್ಮದ ಭಾಷೆಯಾಗಿ ಉಳಿದುಕೊಳ್ಳಬೇಕು. ಕೆಲವು ಪೋಷಕರು ಸಾರ್ವಜನಿಕವಾಗಿ ತುಳು ಭಾಷೆಯ ಉಳಿವಿಗೆ ಹೋರಾಟ ಮಾಡುತ್ತಾರೆ; ಆದರೆ ತಮ್ಮ ಮಕ್ಕಳಿಗೆ ತುಳು ಭಾಷೆ ಕಲಿಸುತ್ತಿಲ್ಲ ಹೀಗಾದರೆ, ಶ್ರೀಮಂತವಾದ ತುಳು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವುದು ಹೇಗೆ ಎಂದು ಅವರು ಪ್ರಶ್ನಿಸಿದರು.


ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ತುಳು-ಕನ್ನಡ ಸಾಂಸ್ಕೃತಿಕ ಸಂಘಟಕ ಸರ್ವೋತ್ತಮ ಶೆಟ್ಟಿ, ಚಿಂತಕ ಸಿ. ಲಕ್ಷ್ಮಣ ಪೂಜಾರಿ, ತುಳುವೆರೆಂಕುಲು ಮಾಜಿ ಅಧ್ಯಕ್ಷ ಮಾಧವ ಕುಲಾಲ್‌, ಡಾ. ಕೆ.ಎನ್. ಅಡಿಗ, ಕುಲಾಲ ಸಮಾಜದ ಅಧ್ಯಕ್ಷ ಪುರುಷೋತ್ತಮ ಚೇಂಡ್ಲ, ಯಕ್ಷಗಾನ ಶಿಕ್ಷಕಿ ಗೌರಿ ಸಾಸ್ತಾನ ಅವರಿಗೆ ಬಲಿಯೇಂದ್ರ ಪುರಸ್ಕಾರ ನೀಡಿ ಗೌರವಿಸಲಾಯಿತು.


ಸಚಿವ ವಿ. ಸುನಿಲ್ ಕುಮಾರ್ ತುಳು ಪರ್ಬವನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ತುಳುವೆರೆಂಕುಲು ಸಂಘದ ಗೌರವಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಯು.ಟಿ ಖಾದರ್, ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್, ಸದಸ್ಯೆ ಕಾಂತಿ ಶೆಟ್ಟಿ, ತುಳುವೆರೆಂಕುಲು ಅಧ್ಯಕ್ಷ ವೈ ಜಯಂತ್ ರಾವ್, ಪ್ರಧಾನ ಕಾರ್ಯದರ್ಶ ಪಳ್ಳಿ ವಿಶ್ವನಾಥ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ, ಬೆಂಗಳೂರು ದಕ್ಷಿಣ ಕನ್ನಡಿಗರ ಸಂಘದ ಅಧ್ಯಕ್ಷ ಬಾ. ರಾಮಚಂದ್ರ ಉಪಾಧ್ಯ ಮುಂತಾದವರು ಭಾಗವಹಿಸಿದ್ದರು. 


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top