|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪಾರ್ಕಿನ್‍ಸನ್ಸ್ ಎಂಬ ನಡುಕದ ಖಾಯಿಲೆ

ಪಾರ್ಕಿನ್‍ಸನ್ಸ್ ಎಂಬ ನಡುಕದ ಖಾಯಿಲೆ

ವಿಶ್ವ ಪಾರ್ಕಿನ್‍ಸನ್ಸ್ ದಿನ- ಏಪ್ರಿಲ್ 11



ಪಾರ್ಕಿನ್‍ಸನ್ಸ್ ಎಂಬುದು ಒಂದು ಮೆದುಳಿನ ನರಮಂಡಲಗಳಿಗೆ ಸಂಬಂಧಿಸಿದ ಸಂಕೀರ್ಣ ಖಾಯಿಲೆಯಾಗಿದ್ದು, ಸಾಮಾನ್ಯವಾಗಿ ಇಳಿ ವಯಸ್ಸಿನಲ್ಲಿ ಕಂಡು ಬರುತ್ತದೆ. “ಪಾರ್ಕಿನ್‍ಸನ್ಸ್” ಖಾಯಿಲೆ ಇರುವ ರೋಗಿಗಳಲ್ಲಿ ದೇಹದ ಚಲನವಲನೆಗಳಲ್ಲಿ ವ್ಯತ್ಯಾಸವಾಗುವ ದೇಹ ಸ್ಥಿತಿ ಕಂಡುಬರುತ್ತದೆ. ಮೆದುಳಿನ ಅಸಹಜತೆಯ ಈ ಖಾಯಿಲೆಯಲ್ಲಿ ನಡುಕ, ಕಂಪಿಸುವುದು, ನಡೆದಾಡಲು ಕಷ್ಟವಾಗುವುದು, ಚಲನವಲನೆಗೆ ತೊಂದರೆ ಮತ್ತು ಸಂವಹನದ ತೊಂದರೆ ಉಂಟಾಗಬಹುದು.


ಪುರುಷರಲ್ಲಿ ಜಾಸಿಕಂಡು ಬರುವ ಈ ರೋಗ, ಹೆಚ್ಚು 60 ವರ್ಷಗಳ ನಂತರ ಕಂಡು ಬರುತ್ತದೆ. ಹಿರಿಯ ನಾಗರೀಕರಲ್ಲಿ ಹೆಚ್ಚಾಗಿ ಕಂಡು ಬರುವ ನರಗಳ ದುರ್ಬಲತೆ ಅಥವಾ ಅಸಹಜತೆಯ ರೋಗಗಳಲ್ಲಿ ಪಾರ್ಕಿನ್‍ಸನ್ಸ್ ಕೂಡ ಒಂದಾಗಿದೆ. ಅತೀ ವಿರಳ ಸಂದರ್ಭಗಳಲ್ಲಿ ಯುವಕರಲ್ಲಿ ಬರುವ ಸಾಧ್ಯತೆ ಇದೆ. ಕೆಲವೊಮ್ಮೆ ಅನುವಂಶಿಕವಾಗಿಯೂ ಕುಟುಂಬಸ್ಥರಲ್ಲಿ ಕಾಡಲೂಬಹುದು. ಒಂದು ಕುಟುಂಬದಲ್ಲಿ ನರಗಳ ಖಾಯಿಲೆಯ ಹಿನ್ನಲೆ ಇದ್ದಲ್ಲಿ, ಆ ಕುಟುಂಬದ ಯುವಕ ಯುವತಿಯರಲ್ಲಿ ಈ ನರಗಳ ದೌರ್ಬಲ್ಯತೆ ಪಾರ್ಕಿನ್‍ಸನ್ಸ್ ರೋಗದ ರೂಪದಲ್ಲಿ ಕಾಣಿಸಬಹುದು.


ಏನಿದು ಪಾರ್ಕಿನ್‍ಸನ್ಸ್ ಖಾಯಿಲೆ?:

ನಮ್ಮ ದೇಹದ ಚಲನವಲನಗಳನ್ನು, ಸ್ನಾಯುಗಳು ಮತ್ತು ನರಗಳು ನಿಯಂತ್ರಿಸುತ್ತದೆ. ಶರೀರದಲ್ಲಿನ ಸ್ನಾಯುಗಳ ಚಲನೆಗೆ ಸಹಾಯಕವಾಗಲು ನರಕೋಶಗಳು ಮೆದುಳಿನಲ್ಲಿ ಡೋಪಾಮೈನ್ ಎಂಬ ರಾಸಾಯನಿಕವನ್ನು ಉಪಯೋಗಿಸುತ್ತೇವೆ. ಆದರೆ ಕಾರಣಾಂತರಗಳಿಂದ ಮೆದುಳಿನ ನರಕೋಶಗಳು ಡೊಪಾಮೈನನ್ನು ನಾಶ ಪಡಿಸಲು ಆರಂಭಿಸಿದಾಗ, ಈ ಪಾರ್ಕಿನ್‍ಸನ್ಸ್ ರೋಗ ಆರಂಭವಾಗುತ್ತದೆ. ಈ ಡೋಪಾಮೈನ್ ನಾಶಕ್ಕೆ ಹಲವಾರು ಕಾರಣಗಳು ಇರಬಹುದು. ಅನುವಂಶಿಕ ಕಾರಣವೂ ಇರಬಹುದು. ಇಲ್ಲವಾದಲ್ಲಿ ದೇಹದ ಪ್ರೋಟಿನ್‍ಗಳು ದೇಹದ ವಿರುದ್ಧವೇ ತೊಡ ತಟ್ಟಿ ಸಮರ ಸಾರಿದಲ್ಲಿ, ದೇಹದ ಜೀವಕೋಶಗಳ ವಿರುದ್ಧವೇ ಆಂಟಿ ಬಾಡಿಗಳು ಅಥವಾ ಪ್ರತಿರೋಧಕಗಳು ಉತ್ಪನ್ನವಾಗಿ ನರಕೋಶಗಳನ್ನು ಮತ್ತು ಜೀವಕೋಶಗಳನ್ನು ಕಾಡುತ್ತವೆ.


ಮೆದುಳಿನ ಭಾಗವಾಗಿರುವ ನರಕೋಶಗಳು ಡೋಪಮೈನ್ ಇಲ್ಲದೆ, ಸರಿಯಾಗಿ ಸಂದೇಶಗಳನ್ನು ರವಾನಿಸಲಾರವು. ಇದರಿಂದ ಸ್ನಾಯುಗಳ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. ಈ ವೈಫಲ್ಯಕ್ಕೆ ಯಾವುದೇ ಚಿಕಿತ್ಸೆ ಮಾಡಿಸದಿದ್ದಲ್ಲಿ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ಯಾವ ಕಾರಣಕ್ಕಾಗಿ ಈ ರೀತಿ ಮೆದುಳಿನ ಕೋಶಗಳು ನಶಿಸುತ್ತವೆ ಎನ್ನುವುದರ ಬಗ್ಗೆ ಬಹಳ ಸಂಶೋಧನೆಗಳು ನಡೆಯುತ್ತ್ತಲೇ ಇದೆ. ಇನ್ನು ಸೂಕ್ತವಾದ ಸಮಂಜಸವಾದ ಕಾರಣ ಸಿಗದಿರುವುದೇ ಸೋಜಿಗದ ಅಂಶವಾಗಿದೆ. ಸಂಶೋಧನೆಗಳಿಂದ ನಾಶಕ್ಕೆ ಕಾರಣವಾದ ನಿಗೂಢ ಅಂಶಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಲ್ಲಿ ಚಿಕಿತ್ಸೆಗೆ ಅನುಕೂಲವಾಗಬಹುದು. ಚಿಕ್ಕ ವಯಸ್ಸಿನಲ್ಲಿ ನರಕೋಶಗಳು ಡೋಪಮೈನ್‍ಗೆ ಹೆಚ್ಚು ಸಂವೇದನಶೀಲವಾಗಿಲ್ಲದ ಕಾರಣ ಪಾರ್ಕಿನ್ಸ್‍ನ್ಸ್ ಖಾಯಿಲೆ ಮಕ್ಕಳಲ್ಲಿ ಕಂಡು ಬರುವುದು ವಿರಳ.


ಲಕ್ಷಣಗಳು ಏನು?:

ಆರಂಭದ ಹಂತದಲ್ಲಿ ಪಾರ್ಕಿನ್‍ಸನ್ಸ್ ಖಾಯಿಲೆಯ ಲಕ್ಷಣಗಳು ಬಹಳ ಸೌಮ್ಯವಾಗಿರುತ್ತದೆ. ಆರಂಭದಲ್ಲಿ ಒಂದೇ ಕಾಲಿನಲ್ಲಿ ಅಥವಾ ಕೈಯಲ್ಲಿ ನಡುಕ ಅಥವಾ ಕಾಲು ಸೆಟೆತ ಹಾಗೂ ಕಾಲು ಎಳೆತ ಕಾಣಿಸಿಕೊಳ್ಳಬಹುದು. ದೇಹದ ಒಂದು ಅಥವಾ ಎರಡು ಭಾಗಗಳಲ್ಲಿ ಪಾರ್ಕಿನ್‍ಸನ್ಸ್ ಲಕ್ಷಣಗಳು ಕಾಣಿಸಲೂಬಹುದು. ದೇಹದ ಸಮತೋಲನ ಮತ್ತು ನಡಿಗೆ ಕಷ್ಟವಾಗಬಹುದು. ಚಲನೆಗೆ ತೊಂದರೆಗಳು, ಚಲನೆ ಆರಂಭಿಸಲು ಕಷ್ಟವಾಗುವುದು, ಕುರ್ಚಿಯಿಂದ ಎದ್ದೇಳಲು ಕಷ್ಟವಾಗುವುದು, ನಡಿಗೆಯನ್ನು ಮುಂದುವರಿಸಲು ತಡಕಾಡುವುದು, ಚಲನೆ ನಿಧಾನವಾಗುವುದು ಇತ್ಯಾದಿ. ಸ್ನಾಯುಗಳಲ್ಲಿ ನೋವು ಮತ್ತು ಸೆಟೆಯುವುದು ಅಥವಾ ಪೆಡಸಾಗುವುದು. ಈ ಲಕ್ಷಣಗಳು ಹೆಚ್ಚಾಗಿ ಕಾಲುಗಳಲ್ಲಿ ಕಾಣಿಸುತ್ತದೆ. ಆಹಾರ ನುಂಗಲು ಕಷ್ಟವಾಗುವುದು, ಜೊಲ್ಲು ಸುರಿಸುವುದು ಮುಖವು ಮುಖವಾಡ ಧರಿಸಿದಂತೆ ನಿರ್ಭಾವುಕವಾಗುವುದು. ರೆಪ್ಪೆ ಮಿಟಿಕಿಸುವುದು, ಮಲಬದ್ಧತೆ, ಕೈಕಾಲುಗಳಲ್ಲಿ ಕಂಪನ, ಚಲನೆ ನಿಧಾನವಾಗುವುದು, ಕೈಯ ಸೂಕ್ಷ್ಮ ಚಲನೆ ಕಡಮೆಯಾಗುವುದು, ಬರವಣಿಗೆ ಕಷ್ಟುವಾಗುವುದು ಹಾಗೂ ಓದಲು ಕಷ್ಟವಾಗುವುದು, ಆಹಾರ ಸೇವನೆಯಲ್ಲಿ ತೊಂದರೆ, ಕೈ ಕಾಲುಗಳು ಸ್ಥಿರವಾಗುವಾಗ ಅಥವಾ ಚಲನೆಯಲ್ಲಿರುವಾಗ ಕಂಪಿಸುವುದು. ಚಲಿಸುವಾಗ ಕೈಕಾಲು ಒಟ್ಟೊಟ್ಟಾಗಿ ಚಲಿಸುವುದು. ಆಯಾಸಗೊಂಡರೆ, ಉದ್ವೇಗದಲ್ಲಿದ್ದರೆ ಅಥವಾ ಒತ್ತಡದ ಸನ್ನಿವೇಶಗಳಲ್ಲಿ ನಡುಕದ ತೀವ್ರತೆ ಹೆಚ್ಚಾಗುತ್ತದೆ. ಕೊನೆಗೆ ತಲೆ, ತುಟಿ, ನಾಲಗೆ ಹಾಗೂ ಕಾಲುಗಳಲ್ಲಿಯೂ ನಡುಕ ಕಂಡು ಬರುತ್ತದೆ. ಧ್ವನಿ ಇಳಿಯುವುದು, ಏರಿಳಿತ ಕಡಮೆಯಾಗುವುದು, ದೇಹ ಬಾಗುವುದು, ಹಾಸಿಗೆಯಿಂದ ಎದ್ದಾಗ ಬೆವರುವುದು, ದೇಹದ ಉಷ್ಣತೆ ಕಡಮೆಯಾಗುವುದು, ದೇಹದ ರಕ್ತದೊತ್ತಡ ಕಡಮೆಯಾಗುವುದು. ಇದರ ಜೊತೆಗೆ ಆತಂಕ, ಒತ್ತಡ, ಉದ್ವೇಗದಿಂದ ಗೊಂದಲ ಉಂಟಾಗುತ್ತದೆ. ಮರೆವು, ಖಿನ್ನತೆ, ತಲೆ ಸುತ್ತುವುದು, ನೆನಪಿನ ಶಕ್ತಿ ಕುಂದುವುದು ಹಾಗೂ ಬುದ್ಧಿ ಮಾಂಧ್ಯತೆಯೂ ಬರಬಹುದು. ಮುಂದುವರಿದ ಹಂತದಲ್ಲಿ ವಿಪರೀತವಾದ ಮರೆಗುಳಿತನ ಮತ್ತು ಮಾನಸಿಕ ಖಿನ್ನತೆ ಉಂಟಾಗಲೂ ಬಹುದು.



ಕಂಡು ಹಿಡಿಯುವುದು ಹೇಗೆ?:

ದೈಹಿಕ ಪರೀಕ್ಷೆಗಳು ಮತ್ತು ದೇಹದ ರೋಗದ ಲಕ್ಷಣಗಳನ್ನು ಆಧರಿಸಿ ನುರಿತ ವೈದ್ಯರು ಪಾರ್ಕಿನ್‍ಸನ್ಸ್ ರೋಗವನ್ನು ಕಂಡು ಹಿಡಿಯುತ್ತಾರೆ. ವಿಶೇಷವಾಗಿ ವಯಸ್ಕರಲ್ಲಿ ಈ ಖಾಯಿಲೆಯ ಲಕ್ಷಣಗಳನ್ನು ಗುರುತಿಸುವುದು ಸ್ವಲ್ಪ ಕಷ್ಟವಾಗಬಹುದು. ಆದರೆ ಖಾಯಿಲೆ ತೀವ್ರವಾದರೆ ರೋಗದ ಲಕ್ಷಣಗಳು ಸ್ಪಷ್ಟವಾಗಿ ತಿಳಿದುಬರುತ್ತದೆ.


ಚಿಕಿತ್ಸೆ ಹೇಗೆ?:

ಪಾರ್ಕಿನ್‍ಸನ್ಸ್ ರೋಗಕ್ಕೆ ಸೂಕ್ತ ಚಿಕಿತ್ಸೆ ಇನ್ನೂ ಬಂದಿಲ್ಲ. ರೋಗದ ಲಕ್ಷಣಗಳನ್ನು ನಿಯಂತ್ರಿಸುವುದೇ ಚಿಕಿತ್ಸೆಯ ಪ್ರಾಥಮಿಕ ಉದ್ದೇಶವಾಗಿರುತ್ತದೆ. ಔಷಧಿಗಳು ಮೆದುಳಿನ ಡೊಪಮೈನ್ ಮಟ್ಟವನ್ನು ಹೆಚ್ಚಿಸಿ, ರೋಗದ ಲಕ್ಷಣಗಳನ್ನು ನಿಯಂತ್ರಿಸುತ್ತವೆ. ದಿನದ ಕೆಲವು ಸಮಯದಲ್ಲಿ ಔಷಧಿಯ ಪ್ರಭಾವವು ತಗಲದ ಕಾರಣ, ಲಕ್ಷಣಗಳು ಮರುಕಳಿಸುವ ಸಾಧ್ಯತೆ ಇದೆ. ನುರಿತ ವೈದ್ಯರು, ಔಷಧಿಯ ಪ್ರಮಾಣ, ಅಂತರ ಮತ್ತು ಔಷಧಿಯ ವಿಧಾನವನ್ನು ಮತ್ತು ತೆಗೆದುಕೊಳ್ಳುವ ರೀತಿಯನ್ನು ಮಾರ್ಪಾಡು ಮಾಡಿ ರೋಗವನ್ನು ಹತೋಟಿಗೆ ತರುತ್ತಾರೆ. ವೈದ್ಯರ ಅನುಮತಿ ಇಲ್ಲದೆ ಔಷಧಿಯನ್ನು ಬದಲಿಸಬೇಡಿ ಮತ್ತು ಜಾಸ್ತಿ ಔಷಧ ತೆಗೆದುಕೊಳ್ಳಲೇ ಬಾರದು. ಚಿಕಿತ್ಸೆ ಯಶಸ್ವಿಯಾಗಿರಲು ನಿಮ್ಮ ಸಹಕಾರವೇ ಅವಶ್ಯಕ. ವೈದ್ಯರ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಿ ಯಾವುದೇ ಕಾರಣಕ್ಕೆ ಔಷಧಿಯನ್ನು ನಿಲ್ಲಿಸಬಾರದು. ಕೆಲವೊಮ್ಮೆ ಔಷಧಿಗಳಿಂದ ತೀವ್ರ ವಾಂತಿ, ವಾಕರಿಕೆ, ಅತೀಸಾರ, ಭೇದಿ, ಉನ್ಮಾದ, ಭ್ರಮೆ, ಮುಂತಾದ ಅಡ್ಡ ಪರಿಣಾಮ ಬರುವ ಸಾಧ್ಯತೆ ಇದೆ. ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಪರಿಹಾರ ತೆಗೆದುಕೊಳ್ಳಿ. ಸ್ವಯಂ ಔಷಧಿಗಾರಿಕೆ ಪ್ರಾಣಾಪಾಯ ತಂದೊಡ್ಡಬಹುದು. ಈ ರೋಗದ ಚಿಕಿತ್ಸೆಯಲ್ಲಿ ರೋಗಿಯ, ವೈದ್ಯರ ಮತ್ತು ರೋಗಿಯ ಕುಟುಂಬಸ್ಥರ ಸಂಪೂರ್ಣ ಸಹಕಾರ ಮತ್ತು ಹೊಂದಾಣಿಕೆ ಅತೀ ಅಗತ್ಯವಾಗಿರುತ್ತದೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಖಾಯಿಲೆ ತೀವ್ರವಾಗಿ ವ್ಯಕ್ತಿ ಸಂರ್ಪೂಣವಾಗಿ ಅಂಗ ವಿಕಲನಾಗುತ್ತಾನೆ. ಒಂದು ಹಂತದಲ್ಲಿ ಮೆದುಳಿನ ಎಲ್ಲ ಕಾರ್ಯ ಚಟುವಟಿಕೆಗಳು ನಿಂತು ಹೋಗಿ ವ್ಯಕ್ತಿ ಬೇಗನೆ ಮರಣ ಹೊಂದಬಹುದು. ಹೆಚ್ಚಿನ ಜನರು ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸುತ್ತಾರೆ ಎನ್ನುವುದೇ ಸಮಾಧಾನಕರ ಅಂಶ.


ನಿರ್ವಹಣೆ ಹೇಗೆ?:

ಜೀವನಶೈಲಿಯನ್ನು ಬದಲು ಮಾಡಿಕೊಳ್ಳಲೇಬೇಕು. ಮಾನಸಿಕ ಒತ್ತಡವನ್ನು ಕಡಮೆ ಮಾಡಿಕೊಂಡು, ಸಾಕಷ್ಟು ವಿಶ್ರಾಂತಿ ಪಡೆಯಬೇಕು. ದೇಹದ ಸಧ್ಯದ ಪರಿಸ್ಥಿತಿ ಮತ್ತು ಚಲನೆಗೆ ಪೂರಕವಾದ ಒಗ್ಗುವ ರೀತಿಯ ವ್ಯಾಯಾಮಗಳನ್ನೇ ಮಾಡಬೇಕು. ದೇಹವನ್ನು ವಿಪರೀತವಾಗಿ ದಂಡಿಸಿಕೊಳ್ಳಬೇಡಿ. ಉತ್ತಮವಾದ ಸಮತೋಲಿತವಾದ ವಿಟಮಿನ್ ಮತ್ತು ಪ್ರೋಟಿನ್‍ಯುಕ್ತ ಪೋಷಕಾಂಶಗಳಿರುವ ಆಹಾರವನ್ನು ಹೆಚ್ಚು ಸೇವಿಸಿ. ಆಹಾರ ನುಂಗಲು ಕಷ್ಟವಾದಲ್ಲಿ ಆಹಾರ ತಜ್ಞರ ಬಳಿ ಸಲಹೆ ಕೇಳಿ ದೇಹಕ್ಕೆ ಒಗ್ಗುವ ಆಹಾರವನ್ನೇ ತಿನ್ನತಕ್ಕದ್ದು. ನಿಮ್ಮ ಆಹಾರ, ಪಾನೀಯಗಳಲ್ಲಿ ದೇಹ ಸ್ಥಿತಿಗೆ ಪೂರಕವಾದ ರೀತಿಯಲ್ಲಿ ಬದಲಾವಣೆ ಮಾಡತಕ್ಕದ್ದು. ದೈಹಿಕ ಚಿಕಿತ್ಸೆ, ವಾಕ್ ಚಿಕಿತ್ಸೆ ಮತ್ತು ವೃತ್ತಿಪರವಾದ ಚಿಕಿತ್ಸೆಗಳನ್ನು ತಜ್ಞ ವೈದ್ಯರ ಬಳಿ ಪಡೆದುಕೊಂಡು, ಜೀವನಶೈಲಿಯನ್ನು ಬದಲಿಸಿ. ಮನೆಯಲ್ಲಿ ಹೆಚ್ಚು ಓಡಾಡುವ ಜಾಗಗಳಲ್ಲಿ ಬಿದ್ದು ಗಾಯಗಳಾಗುವುದನ್ನು ತಪ್ಪಿಸಲು ಅಲ್ಲಲ್ಲಿ ಕೈ ಹಿಡಿಕೆಗಳನ್ನು ಅಳವಡಿಸಬೇಕು. ಶೌಚಾಲಯವನ್ನು ಶುಚಿಯಾಗಿಡತಕ್ಕದ್ದು.


ವಿಶೇಷ ಆಹಾರ ಸೇವಿಸುವ ಉಪಕರಣಗಳು, ಹಾಸಿಗೆ ಎತ್ತರಿಸುವ ಸಾಧನ, ಗಾಲಿಕುರ್ಚಿ, ಶವರ್ ಕುರ್ಚಿ, ವಾಕರ್ ಇತ್ಯಾದಿ ಸಹಾಯಕ ಸಾಧನಗಳನ್ನು ಬಳಸಿ ಮನೆಯಲ್ಲಿ ಯಾವತ್ತೂ ಸಹಾಯಕರನ್ನು ಇಟ್ಟುಕೊಂಡು ಓಡಾಡಿ. ನಿಮ್ಮ ದೈಹಿಕ ಮತ್ತು ಮಾನಸಿಕ ಅಸಹಜತೆಯನ್ನು ಎದುರಿಸಲು ಸಾಮಾಜಿಕ ಕಾರ್ಯಕರ್ತರು, ಮನೆ ಪರಿಚಾರಿಕೆಯರು ಮತ್ತು ಮಿತ್ರ ಸಮಾಲೋಚಕರÀನ್ನು ಬಳಸಿಕೊಳ್ಳಿ. ಬದುಕನ್ನು ಧೈರ್ಯವಾಗಿ ಎದುರಿಸಿ. ತಮ್ಮ ದೈಹಿಕ ನ್ಯೂನತೆಗಳನ್ನು ದೊಡ್ಡದು ಮಾಡಿ ಮಾನಸಿಕವಾಗಿ ಕೊರಗಿದಲ್ಲಿ ಮಾನಸಿಕ ಶಾಂತಿ ನೆಮ್ಮದಿ ಹಾಳಾಗಿ ಆರೋಗ್ಯದ ಮೇಲೂ ದುಷ್ಟರಿಣಾಮ ಬೀರಬಹುದು. ಧನಾತ್ಮಕ ಚಿಂತನೆ, ಯೋಗ, ಧ್ಯಾನ ಪ್ರಾಣಯಾಮ, ಸಂಗೀತ ಆಲಿಸುವಿಕೆ, ನಿಮಗೆ ಇಷ್ಟವಾದ ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡು, ನಿಮ್ಮ ದೈಹಿಕ ಅಂಗವೈಕಲ್ಯವನ್ನು ಧೈರ್ಯದಿಂದ ಎದುರಿಸಿ. ಇತರರ ಎದುರು ಅಸಾಯಕರಾಗಿ ಅವರಿಂದ ಹೆಚ್ಚಿನ ಸಹಾಯ ಅನುಕಂಪ, ಕರುಣೆ ಮತ್ತು ಸ್ವಾಂತನಕ್ಕಾಗಿ ಹೆಚ್ಚು ಹಾತೊರೆಯಬೇಡಿ. ಯಾಕೆಂದರೆ ನಿಮ್ಮ ನಿರೀಕ್ಷೆ ಹುಸಿಯಾದಾಗ ನಿಮಗೆ ಮತ್ತಷ್ಟು ಮಾನಸಿಕವಾಗಿ ನೋವು ಕಾಡಬಹುದು.


ಕೊನೆಮಾತು:

ಪಾರ್ಕಿನ್‍ಸನ್ಸ್ ಖಾಯಿಲೆ ಭಾರತ ದೇಶವೊಂದರಲ್ಲಿಯೇ ವರ್ಷಕ್ಕೆ 1 ಮಿಲಿಯನ್ ಮಂದಿಯಲ್ಲಿ ಕಂಡು ಬಂದಿರುತ್ತದೆ. ಅನುವಂಶಿಕ ಮತ್ತು ವಾತಾವರಣದ ಕಾರಣಗಳಿಂದ ಉಂಟಾಗುವ ಈ ರೋಗಕ್ಕೆ ಸಂಪೂರ್ಣ ಪರಿಹಾರ ಇನ್ನೂ ಕಂಡು ಹಿಡಿದಿಲ್ಲ. ಆದರೆ ರೋಗದ ತೀವ್ರತೆಯನ್ನು ಕಡಮೆ ಮಾಡುವ ಔಷಧಿಗಳು ಸಾಕಷ್ಟು ಲಭ್ಯವಿದೆ. 2013ರಲ್ಲಿ ವಿಶ್ವದಾದ್ಯಂತ 53 ಮಿಲಿಯನ್ ಮಂದಿ ಈ ರೋಗಕ್ಕೆ ತುತ್ತಾಗಿದ್ದು ಸುಮಾರು 1 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಸಾವನ್ನಪ್ಪಿರುತ್ತಾರೆ. ಸಾಮಾನ್ಯವಾಗಿ 60 ವರ್ಷದ ಬಳಿಕವೇ ಬರುವ ಈ ರೋಗ 40, 50ರ ಆಸುಪಾಸಿನಲ್ಲಿ ಬರಬಾರದೆಂದು ಏನಿಲ್ಲ. 1817ರಲ್ಲಿ ಈ ರೋಗದ ಬಗ್ಗೆ ಸುದೀರ್ಘವಾಗಿ ವಿವರಣೆ ನೀಡಿದ ಇಂಗ್ಲೇಂಡಿನ ವೈದ್ಯ ಜೇಮ್ಸ್ ಪಾರ್ಕಿನ್‍ಸನ್ಸ್ ಅವರ ನೆನಪಿನಲ್ಲಿ ಈ ರೋಗಕ್ಕೆ ಪಾರ್ಕಿನ್‍ಸನ್ಸ್ ಖಾಯಿಲೆ ಎಂದು ಹೆಸರಿಡಲಾಗಿದೆ. An Essay on the Shaking Palsy ಎಂದು ಆಂಗ್ಲಭಾಷೆಯಲ್ಲಿ ನಡುಕದ ರೋಗದ ಬಗೆಗಿನ ಪ್ರಬಂಧ ಎಂದು ವಿವರಣೆ ನೀಡಿದ್ದ ಪಾರ್ಕಿನ್‍ನ್ಸ್ ಅವರ ನೆನಪಿಗಾಗಿ ಈ ಹೆಸರು ನೀಡಲಾಗಿದೆ. ಈ ವೈದ್ಯ ಜೇಮ್ಸ್ ಪಾರ್ಕಿನ್‍ಸನ್ಸ್ ಅವರ ಜನ್ಮ ದಿನವಾದ ಎಪ್ರಿಲ್ 11ನ್ನು ವಿಶ್ವ ಪಾರ್ಕಿನ್‍ಸನ್ಸ್ ದಿನ ಎಂದೂ ಆಚರಿಸಿ ರೋಗದ ಬಗ್ಗೆ ಜಾಗೃತಿಯನ್ನು ವಿಶ್ವದಾದ್ಯಂತ ಮಾಡಿಸಲಾಗುತ್ತದೆ.

   

-ಡಾ|| ಮುರಲೀ ಮೋಹನ್ ಚೂಂತಾರು

BDS, MDS, DNB, MOSRCSEd (U.K), FPFA, M.B.

ಮೊ : 9845135787

drmuraleechoontharu@gmail.com

ಸುರಕ್ಷ ದಂತ ಚಿಕಿತ್ಸಾಲಯ

ಹೊಸಂಗಡಿ – 671 323 

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post