ಕವನ: ಅಂಗಡಿಗಳಲ್ಲಿ ಸಾಮಾನಿಲ್ಲ

Upayuktha
0



ಚಿಲ್ಲರೆ ಗೂಡಂಗಡಿಗಳನ್ನು ಇಟ್ಟುಕೊಂಡಿದ್ದಾರೆ

ನಮ್ಮ ಸಾಹಿತಿಗಳು

ಪದವಿ ಪ್ರಶಸ್ತಿಗಳು ಬಿಕರಿಗಿವೆ

ಕಾಸಿಗೊಂದು ಕೊಸರಿಗೊಂದು

ಫಲಕಗಳನ್ನು ಕೊಂಡುಕೊಳ್ಳುತ್ತ

ದೇಶಾವರಿ ನಗುಗಳನ್ನು ನಕ್ಕುಕೊಳ್ಳುತ್ತ

ತಮ್ಮ ಬೆನ್ನು ತಾವೇ ಚಪ್ಪರಿಸಿಕೊಳ್ಳುತ್ತ


ಅಂಗಡಿಗಳಲ್ಲಿ ಸಾಮಾನಿಲ್ಲ

ಬರಿದಾಗಿವೆ ಪೆಟ್ಟಿಗೆ ಭರಣಿಗಳು

ತಟ್ಟಿ ಕಳಚಿ ಬೀಳುವಂತಿದೆ

ಸೂರು ಸೋರುತ್ತಿದೆ

ಅಂಗಡಿಯಲ್ಲಿ ಯಜಮಾನನಿಲ್ಲ


ಹಾರು ಹೊಡೆಯುತ್ತಿವೆ ರಸ್ತೆ ಬೀದಿಗಳು

ವ್ಯಾಪಾರವಿಲ್ಲ ಜನರ ಓಡಾಟವಿಲ್ಲ

ಪಕ್ಕದವನಿಗೆ ಹೇಳಿ ತೆರಳಿದ್ದಾನೆ

ರಾಜಕೀಯ ಪ್ರಚಾರಕ್ಕೆ

ಸದ್ದಿಲ್ಲದೆ


ಅಳಿದುಳಿದ ಒಬ್ಬನೋ ಇಬ್ಬರೋ

ಹೊಡೆಯುತ್ತಿದ್ದಾರೆ

ಕಸ ಧೂಳು

ಒರೆಸುತ್ತಿದ್ದಾರೆ

ಇರುವೆ ಮುತ್ತಿದ ಪೆಪ್ಪರಮಿಂಟು

ಚರುಮುರಿ ತಿಂದು ಬಿಸಾಡಿದ ಪೇಪರಿನ ತುಂಡು

ಲಾಲಿಪಾಪಿನ ದಂಟು


ರಸ್ತೆ ಅಗಲವಾಗುತ್ತಿದೆ

ಅಂಗಡಿಗಳನ್ನು ತೆರವುಗೊಳಿಸಬೇಕಂತೆ

ಬಿಸಿಲೇರುತ್ತಿದೆ ಮೋಡವೂ

ಬರಬಹುದು ಮಳೆ ಇಂದು

ಅಥವಾ ನಾಳೆ.


- ಡಾ. ವಸಂತಕುಮಾರ ಪೆರ್ಲ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter
Tags

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top