ಮಂಗಳೂರು: ಅಕಾಲಿಕ ಮರಣ ಹೊಂದಿದ ಯಕ್ಷಗಾನ ಲೋಕದ ಮೇರು ಪ್ರತಿಭೆ ಬಲಿಪ ಪ್ರಸಾದ ಭಾಗವತರಿಗೆ ಕಸಾಪದ ಮಂಗಳೂರು ತಾಲೂಕು ಘಟಕದ ವತಿಯಿಂದ ಕಸಾಪ ದ.ಕ. ಜಿಲ್ಲಾ ಕಚೇರಿ ಭಾರತೀ ಕಾಲೇಜು ನಂತೂರು ಇಲ್ಲಿ ನಡೆಯಿತು.
ಕಸಾಪ ಮಂಗಳೂರು ಘಟಕದ ಕಾರ್ಯದರ್ಶಿಗಳಾದ ಡಾ. ಮುರಲಿಮೋಹನ ಚೂಂತಾರು ಅವರು ಮಾತನಾಡಿ, ಬಲಿಪ ಪರಂಪರೆಯ ಸಮರ್ಥ ಉತ್ತರಾಧಿಕಾರಿಯಾಗಿ ಬಲಿಪ ಪ್ರಸಾದ ಭಟ್ಟರು ಒಬ್ಬ ವ್ಯಕ್ತಿಯಾಗಿ ಹಾಗೂ ಕಲಾವಿದರಾಗಿ ಯಕ್ಷಗಾನ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅನನ್ಯವಾದುದು. ಅವರ ಅಕಾಲಿಕ ಮರಣದಿಂದ ಯಕ್ಷಗಾನ ಕ್ಷೇತ್ರ ಮಾತ್ರವಲ್ಲ ಸಾಹಿತ್ಯಕ್ಷೇತ್ರಕ್ಕೂ ತುಂಬಲಾರದ ನಷ್ಟ ಎಂದು ಹೇಳಿದರು.
ಸದಾ ನಗುಮೊಗದ ಮೆಲುಮಾತಿನ ಪ್ರಸಾದ ಬಲಿಪರು ಅಪ್ಪಟ ಅಪರಂಜಿ. ತನ್ನ 17ನೇ ವಯಸ್ಸಿನಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯನ್ನು ಸೇರಿ ನಿರಂತರವಾಗಿ ಮೂರು ದಶಕಗಳ ಕಾಲ ಪ್ರತಿಷ್ಠಿತ ಬಲಿಪ ಸಾಂಪ್ರದಾಯಿಕ ಪರಂರೆಯ ಶೈಲಿಗೆ ಸಾಕ್ಷಿಯಾದವರು ಎಂದು ಅಭಿಪ್ರಾಯಪಟ್ಟರು.
ಕಸಾಪ ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಡಾ. ಮಂಜುನಾಥ ರೇವಣಕರ್ ರವರು ಪುಷ್ಪಾಂಜಲಿಯನ್ನು ಸಮರ್ಪಿಸಿ, ಬಲಿಪರ ಮೇರು ವ್ಯಕ್ತಿತ್ವವನ್ಮು ನೆನಪಿಸಿಕೊಂಡರು. ಕಸಾಪದ ದ.ಕ.ದ ಜಿಲ್ಲಾ ಕಾರ್ಯದರ್ಶಿಗಳಾದ ರಾಜೇಶ್ವರಿಯವರು ಪ್ರಸಾದ ಭಾಗವತರ ಒಡನಾಟದ ತತ್ವ ನೆನಪುಗಳನ್ನು ಬಿಚ್ಚಿಡುತ್ತಾ ಬಲಿಪರು ಮಗುಮನಸ್ಸಿನ ವ್ಯಕ್ತಿತ್ವದವರು ಎಂದರು.
ಕಸಾಪದ ಜಿಲ್ಲಾ ಪ್ರತಿನಿಧಿ ಅರುಣಾ ಕುಮಾರಿ ಮತ್ತು ಕಸಾಪ ಮಂಗಳೂರು ಘಟಕದ ಕಾರ್ಯದರ್ಶಿ ಗಣೇಶ ಪ್ರಸಾದ ಜೀ, ಕೋಶಾಧಿಕಾರಿ ಸುಬ್ರಾಯ ಭಟ್, ಡಾ. ಮೀನಾಕ್ಷಿ ರಾಮಚಂದ್ರ ಮುಂತಾದ ಪದಾಧಿಕಾರಿಗಳು ಪುಷ್ಪನಮನ ಸಲ್ಲಿಸಿದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ