|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುನೀತ್ ರಾಜಕುಮಾರ್ ಅಭಿನಯದ "ಜೇಮ್ಸ್" ಕನ್ನಡ ಚಿತ್ರದಲ್ಲಿ "ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ" ಗೀತೆ

ಪುನೀತ್ ರಾಜಕುಮಾರ್ ಅಭಿನಯದ "ಜೇಮ್ಸ್" ಕನ್ನಡ ಚಿತ್ರದಲ್ಲಿ "ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ" ಗೀತೆ

ಅತ್ಯಂತ ಜನಪ್ರಿಯವಾಗಿರುವ ಈ ಗೀತೆಯನ್ನು ದಾಸರ ಪದವೆಂದು ತಪ್ಪಾಗಿ ಭಾವಿಸಿ ಚಿತ್ರ ತಂಡ ಜೇಮ್ಸ್ ಚಿತ್ರದಲ್ಲಿ ಇದನ್ನು ಬಳಸಿಕೊಂಡಿತ್ತು. ಆದರೆ ನಂತರ ತಪ್ಪಿನ ಅರಿವಾಗಿ ಚಿತ್ರದ ನಿರ್ದೇಶಕರು ಗೀತ ರಚನೆಕಾರ ಡಾ. ಗಜಾನನ ಶರ್ಮಾ ಅವರನ್ನು ಭೇಟಿ ಮಾಡಿ, ವಾಸ್ತವ ವಿಚಾರವನ್ನು ತಿಳಿಸಿ ತಪ್ಪಿಗೆ ಕ್ಷಮೆಕೋರಿದ್ದಲ್ಲದೆ, ಡಾ. ಶರ್ಮಾ ಅವರನ್ನು ಅಭಿಮಾನ ಪೂರ್ವಕ ಸಮ್ಮಾನಿಸಿ ಗೌರವಿಸಿರು. ಈ ವಿಷಯವನ್ನು ಸ್ವತಃ ಶರ್ಮರೇ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.


ಚಿತ್ರ ಸೌಜನ್ಯ: ಸುಪ್ರಭಾ ಕೆ.ವಿ ಅವರ ಯೂಟ್ಯೂಬ್ ವಾಹಿನಿ


"ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ" ಗೀತೆಯನ್ನು ಇದುವರೆಗೂ ನಾಲ್ಕು ಕೋಟಿಗೂ ಹೆಚ್ಚು ಶೋತೃಗಳು ಕೇಳಿದ್ದಾರೆ, ಹಲವು ಭಾಷೆಗಳಿಗೆ ಅನುವಾದಗೊಂಡಿದೆ, ನೂರಾರು ಕಂಠಗಳು ಅದಕ್ಕೆ ಧ್ವನಿಯಾಗಿವೆ, ಸಾವಿರಾರು ಜನ ಅದನ್ನು ಕೇಳಿ ನೆಮ್ಮದಿ ಕಂಡಿದ್ದಾರೆ, ಎಂಬುದೆಲ್ಲ ಈಗ ಇತಿಹಾಸ. ಆದರೆ ಅದೇ ಹಾಡಿನ ತುಣುಕನ್ನು ಇತ್ತೀಚೆಗೆ ಬಿಡುಗಡೆಗೊಂಡು ದಾಖಲೆ ನಿರ್ಮಿಸುತ್ತಿರುವ, ಕನ್ನಡದ ಕಣ್ಮಣಿ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರದಲ್ಲಿ ಬಳಸಿದ್ದನ್ನು ಕೇಳಿ ಸಂತೋಷವಾಯಿತು.


ಜೇಮ್ಸ್ ಚಿತ್ರ ಬಿಡುಗಡೆಯಾದ ದಿನದಿಂದಲೇ ಹತ್ತಾರು ಮಂದಿ ಮಾತನಾಡಿ, 'ಈ ಚಿತ್ರದ ಒಂದು ಹೃದಯಸ್ಪರ್ಶಿ ಸನ್ನಿವೇಶದಲ್ಲಿ 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ' ಹಾಡನ್ನು ಬಳಸಿದ್ದಾರೆ' ಎಂದು ಅಭಿನಂದಿಸಿದಾಗ ನನಗೆ ಸಂತೋಷ ಮತ್ತು ಆಶ್ಚರ್ಯ ಒಟ್ಟಿಗೇ ಆಗಿತ್ತು. ಒಂದು ಕ್ಷಣ, 'ಹಾಡು ಬಳಸುವ ಕುರಿತು ನಿರ್ದೇಶಕರು ಒಂದು ಮಾತನ್ನು ತಿಳಿಸುವ ಕನಿಷ್ಟ ಸೌಜನ್ಯವನ್ನೂ ತೋರಲಿಲ್ಲವಲ್ಲ' ಎಂಬ ಭಾವ ಮೂಡಿ ಮರೆಯಾದದ್ದು ಸುಳ್ಳಲ್ಲ.‌



ಈ ನಡುವೆ ಅಂದರೆ ಕಳೆದ ವಾರ ಸಿನಿಮಾದ ನಿರ್ದೇಶಕ ಚೇತನ್ ಮಾತನಾಡಿ 'ಸರ್, ನಮ್ಮಿಂದ ಒಂದು ಅಪರಾಧವಾಗಿದೆ.‌ ನಿಮಗೆ ತಿಳಿಸಿ, ನಿಮ್ಮ ಅನುಮತಿ ಪಡೆಯದೆ ನಿಮ್ಮ ಜನಪ್ರಿಯ ಹಾಡೊಂದನ್ನು ಜೇಮ್ಸ್ ಚಿತ್ರದಲ್ಲಿ ಬಳಸಿಕೊಂಡಿದ್ದೇವೆ. ಅದು ದಾಸರ ಹಾಡು ಎಂಬ ತಪ್ಪು ಕಲ್ಪನೆಯಿಂದ ಹೀಗಾಗಿದೆ. ದಯವಿಟ್ಟು ಕ್ಷಮಿಸಿ. ನಾನು ಮುಂದಿನವಾರ ಬಂದು ನಿಮ್ಮನ್ನು ಭೇಟಿಯಾಗುತ್ತೇನೆ' ಎಂದು ಹೇಳಿದರು. ನನಗೂ, 'ಹಾಗೂ ಆಗಿರಬಹುದು, ಅದು ತಪ್ಪು ತಿಳುವಳಿಕೆಯಿಂದ ಆಗಿದ್ದು ನಿಜವಿದ್ದೀತು. ಉದ್ದೇಶಪೂರ್ವಕ ಆಗಿರಲಿಕ್ಕಿಲ್ಲ' ಅನ್ನಿಸಿತು.


ಹಾಗಿದ್ದೂ ಸಿನಿಮಾ ಅದ್ಭುತ ಯಶಸ್ಸು ಕಾಣುತ್ತಿರುವ ಈ ಸಂದರ್ಭದಲ್ಲಿ ಅದರ ನಿರ್ದೇಶಕ ಬರುವುದುಂಟೇ, ಸುಮ್ಮನೆ ಹೇಳುತ್ತಿದ್ದಾರೆ. ಹೋಗಲಿ, ಅಪ್ಪುವಿನಂತಹ ಶ್ರೇಷ್ಠ ನಟನ ಚಿತ್ರದಲ್ಲಿ ನನ್ನ ಹಾಡೂ ಬಳಕೆ ಆಯಿತಲ್ಲ' ಎಂದು ಸಮಾಧಾನ ತಾಳಿ ಸುಮ್ಮನಿದ್ದೆ.


ಇಂದು ಬೆಳಿಗ್ಗೆ ಸಿನಿಮಾ ಮತ್ತು ಟಿ ವಿ ಮಾದ್ಯಮದಲ್ಲಿ  ಹೆಸರಾದ ನನ್ನ ಬಂಧು ಮತ್ತು ಯುವ ಸ್ನೇಹಿತ ವಿನಾಯಕರಾಮ್ ಕಲಗಾರು ಮಾತನಾಡಿ, 'ಇವತ್ತು ಸಂಜೆ ನಾನು ಮತ್ತು ಜೇಮ್ಸ್ ನಿರ್ದೇಶಕ ಚೇತನ್ ನಿಮ್ಮ ಮನೆಗೆ ಬರುತ್ತೇವೆ' ಎಂದ. ಹೇಳಿದ ಮಾತಿನಂತೆ ಸಂಜೆ ಏಳು ಗಂಟೆಗೆ ನಿರ್ದೇಶಕ ಚೇತನ್, ವಿನಾಯಕ ರಾಮ್ ಮತ್ತು ಸಹ ನಿರ್ದೇಶಕ ಆದಿತ್ಯ ಮನೆಗೆ ಬಂದು ತಪ್ಪು ಗ್ರಹಿಕೆಯಿಂದ ಸಂಭವಿಸಿದ ತಪ್ಪಿಗೆ  ಕ್ಷಮೆ ಕೋರಿದರು. ಸೌಜನ್ಯದಿಂದ ನಾಲ್ಕು ಒಳ್ಳೆಯ ಮಾತುಗಳನ್ನಾಡಿ, ಬೇಡವೆಂದರೂ ಕೇಳದೆ ಒತ್ತಾಯದಿಂದ  ನನ್ನನ್ನು ಸನ್ಮಾನಿಸಿ, ಕ್ಷಮಿಸುವಂತೆ ಹೇಳಿ ನಮಸ್ಕರಿಸಿ ಆಶೀರ್ವಾದ ಬೇಡಿದರು. ಬೇಡ ಬೇಡವೆಂದರೂ ಬಿಡದೆ   ಸಾಕಷ್ಟು ಗೌರವಧನವನ್ನೂ ನೀಡಿದರು. ನಾನದನ್ನು ಬಯಸಿಯೂ ಇರಲಿಲ್ಲ, ನಿರೀಕ್ಷಿಸಿಯೂ ಇರಲಿಲ್ಲ. ಹಾಗಾಗಿ ನಾವು ದಂಪತಿಗಳು ಅವರಿಗೆ, "ಈ ಹಾಡನ್ನು ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಶ್ರೀಗಳ ಸೂಚನೆಯಂತೆ ಶ್ರೀಮಠದ ಗೀತೆಯಾಗಿ ಬರೆದದ್ದು. ಹಾಗಾಗಿ ನೀವೆಷ್ಟೇ ಗೌರವಧನ ಕೊಟ್ಟರೂ ಅದು ನಮ್ಮ ಮಠದ ಗೋಸೇವೆಗೆ ಸಲ್ಲುತ್ತದೆ. ನೀವು ಕೊಟ್ಟ ಈ ಹಣವೂ ಶ್ರೀಮಠದ ಗೋಸೇವೆಗೆ ಸಂದಾಯವಾಗಲಿದೆ"  ಎಂದೆವು.  


ಒಟ್ಟೂ ಈ ಘಟನೆಯಲ್ಲಿ ನನಗೆ ಅನ್ನಿಸಿದ್ದು ಇಷ್ಟು....

ಹೃದಯ ವೈಶಾಲ್ಯ ಇರುವ ಸಜ್ಜನರ ಜೊತೆ ಒಡನಾಡಿದವರ ಮನಸ್ಸು ಹೃದಯಗಳೂ ವಿಶಾಲವಾಗುತ್ತದೆ. ಅಪ್ಪುವಿನಂತಹ ಘನ ವ್ಯಕ್ತಿತ್ವದ ಜೊತೆ ಒಡನಾಡಿ, ನನ್ನ ಮಗನ ವಯಸ್ಸಿನ ಈ ಯುವ ನಿರ್ದೇಶಕರೂ ಅದೆಷ್ಟು ನಯವಿನಯ ಮತ್ತು ಸೌಜನ್ಯವನ್ನು ರೂಢಿಸಿಕೊಂಡಿದ್ದಾರೆ. ತಾನು ನಿರ್ದೇಶಿಸಿದ ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಈ ಸಮಯ,  ಅವರಿಗೆ ವಿಜಯದ ಮತ್ತು ನೆತ್ತಿಗೇರುವ ಹೊತ್ತು. ಆದರೂ ಬಂದು, ಸನ್ಮಾನಿಸಿ, ಸೌಜನ್ಯದಿಂದ ಮಾತನಾಡಿ ಗೌರವಿಸಿದ ಈ ತರುಣ ಇಂತಹ ಅನೇಕ ಯಶಸ್ಸನ್ನು ಪಡೆಯಲು ತಕ್ಕುದಾದ ಅರ್ಹತೆ ಗಳಿಸಿದ್ದಾರೆ. ಈ ವಿನಯವಂತರಿಗೆ ಇನ್ನಷ್ಟು ಯಶಸ್ಸು ಲಭಿಸಲಿ ಎಂಬುದೇ ನಮ್ಮ ಕುಟುಂಬದ ಹಾರೈಕೆ. ಸಿನಿಮಾದ ಕಡೆಯಲ್ಲಿ  ಹೆಸರನ್ನು ಹಾಕಿದ್ದಕ್ಕಿಂತ ಹೆಚ್ಚು ಸಂತೋಷ, 'ಇವತ್ತಿನ ಯುವಕರು ತಮ್ಮ ಸಣ್ಣ ತಪ್ಪನ್ನೂ ಗ್ರಹಿಸಿ ತಿದ್ದಿಕೊಳ್ಳುವ ಮನಃಸ್ಥಿತಿಯನ್ನು ಹೊಂದಿದ್ದಾರೆ' ಎಂಬುದನ್ನು ಪ್ರತ್ಯಕ್ಷ ಅನುಭವಿಸಿದಾಗ ಸಿಕ್ಕಿತು. ಇರಲಿ, ಆದದ್ದೆಲ್ಲ ಒಳಿತೇ ಆಯಿತು.

"ಒಳಿತಿನೆಡೆ ಮುನ್ನಡೆವ ಮನವ ಕೊಡು ರಾಮ

ಸೆಳೆತಕ್ಕೆ ಸಿಗದಂತ ಸ್ಥಿರತೆ ಕೊಡು ರಾಮ

ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ 

ನಾಳೆಗಳು ಪುಣ್ಯಗಳ ಹಾದಿಯಾಗಲಿ ರಾಮ"


ಶುಭಕೃತು ಸಂವತ್ಸರ ಸರ್ವರಿಗೂ ಒಳಿತು ತರಲಿ....

-ಡಾ. ಗಜಾನನ ಶರ್ಮ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم