ನಿಷ್ಕಾಮ ಸೇವೆಗೆ ಸಂದ ಗೌರವ :ಡಾ.ಚೂಂತಾರು

Upayuktha Writers
0

 

ಮಂಗಳೂರು: ಎಲೆಮರೆಯ ಕಾಯಿಯಂತೆ ಗೃಹರಕ್ಷಕರು ಸಮಾಜದ ಆಸ್ತಿ ಪಾಸ್ತಿ  ಹಾಗೂ ಜನರ ಜೀವ ರಕ್ಷಣೆಯಲ್ಲಿ ವರ್ಷದ ಎಲ್ಲಾ 365 ದಿನವೂ ನಿರಂತರವಾಗಿ ಕೆಲಸ ಮಾಡುತ್ತಿರುತ್ತಾರೆ. ಅವರು ಯಾವತ್ತೂ ಮುನ್ನಲೆಗೆ ಬರುವುದೇ ಇಲ್ಲ. ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ, ಕಾರಾಗೃಹ ಇಲಾಖೆ, ಸಾರಿಗೆ ಇಲಾಖೆ ಹೀಗೆ ಹತ್ತು ಹಲವು ಇಲಾಖೆಗಳಲ್ಲಿ ದಿನ ನಿತ್ಯ ಸೇವೆ ಸಲ್ಲಿಸುವುದರ ಜೊತೆಗೆ, ಪ್ರಾಕೃತಿಕ ದುರಂತಗಳು ಮತ್ತು ಮಾನವ ನಿರ್ಮಿತ ದುರಂತಗಳ ಸಮಯದಲ್ಲಿ ಆಪತ್ ಬಾಂಧವರಂತೆ ಸೇವೆ ಮಾಡುತ್ತಾರೆ. ಕನಿಷ್ಠ ಗೌರವ ಧನಕ್ಕೆ ನಿಷ್ಕಾಮ ಸೇವೆ ಸಲ್ಲಿಸುವ ಗೃಹರಕ್ಷಕರು ನಿಜವಾಗಿಯೂ ಅಭಿನಂದನೆಗೆ ಅರ್ಹರು. ಕಳೆದ 25 ವರ್ಷಗಳಿಂದ ಗೃಹರಕ್ಷಕದಳಕ್ಕೆ ನೀಡಿದ ನಿಷ್ಕಾಮ ಸೇವೆಯನ್ನು ಗುರುತಿಸಿ ಘನವೆತ್ತ ಕರ್ನಾಟಕ ಸರಕಾರ ಮಂಗಳೂರು ಘಟಕದ ಸೀನಿಯರ್ ಪ್ಲಟೂನ್ ಕಮಾಂಡರ್ ಶ್ರೀ ಮಾರ್ಕ್ ಸೇರಾ ಮತ್ತು ಬೆಳ್ತಂಗಡಿ ಘಟಕದ ಪ್ರಭಾರ ಘಟಕಧಿಕಾರಿ ಶ್ರೀ ಜಯಾನಂದ ಲಾಯಿಲ ಅವರಿಗೆ 2021ನೇ ಸಾಲಿನ ಮುಖ್ಯಮಂತ್ರಿಗಳ ಪದಕ ನೀಡಿರುವುದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕರ ನಿಷ್ಕಾಮ ಸೇವೆಗೆ ಸಂದ ನಿಜವಾದ ಗೌರವ ಎಂದು ಗೃಹರಕ್ಷಕದಳದ ಸಮಾದೇಷ್ಟರು ಮತ್ತು ಪೌರರಕ್ಷಣಾ ಪಡೆಯ ಮುಖ್ಯ ಪಾಲಕರಾದ ಶ್ರೀ ಡಾ. ಮುರಲೀ ಮೋಹನ್ ಚೂಂತಾರು ಅಭಿಪ್ರಾಯಪಟ್ಟರು.




ದಿನಾಂಕ 20-04-2022ನೇ ಬುಧವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಚೇರಿ, ಮೇರಿಹಿಲ್, ಮಂಗಳೂರು ಇಲ್ಲಿ 2021ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆಯಾದ ಮಂಗಳೂರು ಘಟಕದ ಸೀನಿಯರ್ ಪ್ಲಟೂನ್ ಕಮಾಂಡರ್ ಶ್ರೀ ಮಾರ್ಕ್ ಸೇರಾ ಮತ್ತು ಬೆಳ್ತಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ಜಯಾನಂದ ಲಾಯಿಲ ಇವರುಗಳನ್ನು ಸನ್ಮಾನಿಸಲಾಯಿತು.



ಬೆಳ್ತಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ಜಯಾನಂದ ಲಾಯಿಲ ಇವರು ದಿನಾಂಕ :01-11-1989 ರಲ್ಲಿ ಇಲಾಖೆಗೆ ಸೇರಿ ಸುಮಾರು 33ವರ್ಷಗಳ ಕಾಲ ನಿಷ್ಕಾಮ ಸೇವೆಯನ್ನು ಸಲ್ಲಿಸಿರುತ್ತಾರೆ, ಸದರಿಯವರು ಪ್ರವಾಹ ರಕ್ಷಣಾ ಕರ್ತವ್ಯ, ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ, ಕಾನೂನು ಸುವ್ಯವಸ್ಥೆ ಕರ್ತವ್ಯಗಳಾದ ಚುನಾವಣೆ ಕರ್ತವ್ಯಗಳನ್ನು ನಿರ್ವಹಿಸಿರುತ್ತಾರೆ ಮತ್ತು ಮಂಗಳೂರು ಘಟಕದ ಸೀನಿಯರ್ ಪ್ಲಟೂನ್ ಕಮಾಂಡರ್ ಶ್ರೀ ಮಾರ್ಕ್ ಸೇರಾ ಇವರು ದಿನಾಂಕ : 01-03-1999 ರಲ್ಲಿ ಇಲಾಖೆಗೆ ಸೇರಿ ಸುಮಾರು 23 ವರ್ಷಗಳ ಕಾಲ ನಿಷ್ಕಾಮ ಸೇವೆಯನ್ನು ಸಲ್ಲಿಸಿರುತ್ತಾರೆ. ಸದರಿಯವರು ಪ್ರವಾಹ ರಕ್ಷಣಾ ಕರ್ತವ್ಯ, ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ, ಕಾನೂನು ಸುವ್ಯವಸ್ಥೆ ಕರ್ತವ್ಯಗಳಾದ ಚುನಾವಣೆ, ಗಣೇಶ ಹಬ್ಬ ಬಂದೋಬಸ್ತ್, ದಸರಾ ಬಂದೋಬಸ್ತ್ ಕರ್ತವ್ಯಗಳನ್ನು ನಿರ್ವಹಿಸಿರುತ್ತಾರೆ. ಸಾಮಾಜಿಕ ಕಳಕಳಿ ಇರುವ ಇವರ ಸೇವಾ ಮನೋಭಾವ ಮತ್ತು ಪ್ರಾಮಾಣಿಕತೆಗೆ ಸಾರ್ವಜನಿಕರಿಂದಲೂ ಪ್ರಶಂಸನೆಯನ್ನು ಪಡೆದಿರುತ್ತಾರೆ ಹಾಗೂ ಇವರು ಇತರ ಗೃಹರಕ್ಷಕರಿಗೆ ಮಾದರಿ ಎಂದು ಸಮಾದೇಷ್ಟರು ತಿಳಿಸಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಉಪ ಸಮಾದೇಷ್ಟರಾದ ಶ್ರೀ ರಮೇಶ್ ಅವರು ವಂದನಾರ್ಪಣೆ ಸಲ್ಲಿಸಿದರು.



ಈ ಸಂದರ್ಭದಲ್ಲಿ ಕಚೇರಿ ಅಧೀಕ್ಷಕರಾದ ಶ್ರೀ ರತ್ನಾಕರ, ಪ್ರಥಮ ದರ್ಜಿ ಸಹಾಯಕಿ ಶ್ರೀಮತಿ ಅನಿತಾ ಟಿ. ಎಸ್, ದಲಾಯತ್ ಮೀನಾಕ್ಷಿ, ಬೆಳ್ತಂಗಡಿ ಘಟಕದ ಗೃಹರಕ್ಷಕರಾದ ಚಾಕೋ ಕೆ. ಜೆ, ಜಗದೀಶ್, ಪ್ರಮೋದ್ ಟಿ ಹಾಗೂ ಮಂಗಳೂರು ಘಟಕದ ಗೃಹರಕ್ಷಕರಾದ ವಿನಯ್ ಚಂದ್ರ, ಜ್ಞಾನೇಶ್, ದಿವಾಕರ್, ದುಷ್ಯಂತ್, ಸುಲೋಚನಾ, ಜಯಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು.

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top