|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆಹಾರ- ಆರೋಗ್ಯ: ಹಣ್ಣು ತಿಂದರೆ ಬಾಳೇ ಮಧುರ

ಆಹಾರ- ಆರೋಗ್ಯ: ಹಣ್ಣು ತಿಂದರೆ ಬಾಳೇ ಮಧುರ


ಆಫ್ರಿಕಾ ಮತ್ತು ಇಥಿಯೋಪಿಯಾದ ಬಬೂನ್ ಗಳು ಶಿಸ್ಟೋಸೋಮಿಯಾಸಿಸ್ ಕಾಯಿಲೆಯಿಂದ ಬಳಲುತ್ತವೆ.  ಇದು ಒಂದು ಜಾತಿಯ ಸಸ್ಯ ಹುಳುವಿನಿಂದ ಬರುವಂತಹದ್ದು. ಬಬೂನ್ ಗಳೆಂದರೆ ಒಂದು ಜಾತಿಯ ಮಂಗಗಳು. ಅವುಗಳು ಆ ಕಾಯಿಲೆ ಬಂದಾಗ ಸ್ಥಳೀಯವಾಗಿ ಲಭ್ಯವಿರುವ ಒಂದು ಜಾತಿಯ ಹಣ್ಣುಗಳನ್ನು ಸೇವಿಸುತ್ತವೆ. ಕಾಯಿಲೆಯಿಂದ ಗುಣಹೊಂದುತ್ತದೆ. ನಂತರ ವಿಜ್ಞಾನಿಗಳು ಕುತೂಹಲದಿಂದ ಶೋಧನೆ ನಡೆಸಿದಾಗ ಹಣ್ಣುಗಳಲ್ಲಿ ಡಯಾಸ್ಜೆನಿನ್ ಎಂಬ ಅಂಶವು ಪತ್ತೆಯಾಯಿತು ಮತ್ತು ಅದುವೇ ಆ ರೋಗ ಗುಣಪಡಿಸುವುದಕ್ಕೆ ಔಷಧವೆಂದು ತಿಳಿಯಿತು. 


"ಕೊಡಿಯಾಕ್"ನಲ್ಲಿನ ಕರಡಿಗಳು "ಲಿಂಗಷ್ಟಿಕಮ್ ಪೋರ್ಟೆರಿ" ಗಿಡದ ಬೇರುಗಳನ್ನು ಚರ್ಮಕ್ಕೆ ಹಚ್ಚಿ ಕೊಳ್ಳುತ್ತವೆ. ಯಾವ ರೀತಿಯಲ್ಲಿ ಎಂದರೆ ಬೇರನ್ನು ಜಗಿದು, ಉಗಿದು ನಂತರ ಅದನ್ನು ಚರ್ಮಕ್ಕೆ ಹಚ್ಚಿ ಕೊಳ್ಳುತ್ತವೆ. ಬೇರಿನಲ್ಲಿನ ಔಷಧ ಚರ್ಮದಲ್ಲಿನ ತೊಂದರೆ ಕೊಡುವ ಪರೋಪಜೀವಿಗಳನ್ನು ಸಾಯಿಸುತ್ತವೆ.   ಆ ಬೇರುಗಳಿಗೆ ಕೆಮ್ಮು, ನ್ಯೂಮೋನಿಯ, ಅಜೀರ್ಣ, ಮೈಕೈ ನೋವು, ಗಂಟಲು ಕೆರೆತ ಇತ್ಯಾದಿಗಳನ್ನು ಕೂಡ ಗುಣಪಡಿಸುವ ಗುಣವಿದೆಯೆಂದು ಆಮೇಲೆ ಪತ್ತೆಹಚ್ಚಿದರು. ಭಾರತದಲ್ಲಿ ಇದಕ್ಕೆ ಕರಡಿ ಬೇರು, ಚೂಚು ಪಾಟೆ ಎನ್ನುತ್ತಾರೆ.


ಆಫ್ರಿಕಾ ದೇಶದಲ್ಲಿರುವ ಕಾಡುಗಳಲ್ಲಿನ ಚಿಂಪಾಂಜಿಗಳು ವೇರ್ನೋನಿಯ ಎಂಬ ಗಿಡದ ಟೊಂಗೆಗಳ ತಿರುಳನ್ನು ತಿಂದು ತಮಗೆ ಉಂಟಾದ ಅತಿಸಾರವನ್ನು ಗುಣಪಡಿಸಿಕೊಳ್ಳುತ್ತವೆ.  


ಹಾಗಾದರೆ ಪ್ರಾಣಿಗಳಿಗಿರುವ ಈ ಒಳನೋಟ ಮಾನವನಿಗೆ ಇಲ್ಲವೇ? ಅಥವಾ ಇದ್ದದ್ದು ಕಳೆದು ಹೋಗಿದೆಯೇ? ಪ್ರಾಣಿಗಳು ಆ ಗಿಡಗಳಲ್ಲಿರುವ ಔಷಧೀಯ ಗುಣಗಳನ್ನು ಅಧ್ಯಯನ ಮಾಡಲು ಯಾವುದೇ ಪ್ರಯೋಗಗಳನ್ನು ಮಾಡಿಲ್ಲ, ರಾಸಾಯನಿಕ ವಿಶ್ಲೇಷಣೆಗಳನ್ನು ಮಾಡಿಲ್ಲ. ಆದರೆ ಅವುಗಳಿಗೆ ಹೇಗೆ ಗೊತ್ತಾಯಿತು? ಇದನ್ನೇ ಒಳನೋಟ ಎನ್ನುವುದು. ತತ್ವಜ್ಞಾನಿ ಒಬ್ಬ ಹೇಳಿದಂತೆ-" Mankind has been taught to forget intuition to develop intellect". ಅಂದರೆ, ಮನುಷ್ಯನು  ಬುದ್ಧಿವಂತಿಕೆಯನ್ನು ಕಲಿಸುವ ಧಾವಂತದಲ್ಲಿ ಒಳನೋಟವನ್ನು ಬಲಿಕೊಡುತ್ತಿದ್ದಾನೆ. 1644 ರಲ್ಲಿ  ಜಾನ್ ಮಿಲ್ಟನ್ ಎಂಬ ಚಿಂತಕ- "ಶಿಕ್ಷಣವೆಂದರೆ ಮಾನವನನ್ನು ತರ್ಕಬದ್ಧವಾಗಿ, ಕೌಶಲ ಪೂರ್ಣವಾಗಿ,  ಯೋಗ್ಯವಾಗಿ, (ಶಾಂತಿ ಮತ್ತು ಯುದ್ಧದ ಎಲ್ಲಾ ಸಮಯಗಳಲ್ಲೂ,) ವರ್ತಿಸುವಂತೆ ಮಾಡುವ ಒಂದು ಪ್ರಕ್ರಿಯೆ" ಎಂದಿದ್ದಾನೆ. ಹಾಗಾದರೆ ಪ್ರಕೃತಿಯಿಂದ ತನಗೆ ಯೋಗ್ಯವಾದುದನ್ನು ಆಯ್ಕೆಮಾಡುವ ಜಾಣ್ಮೆಯನ್ನು ಇಂದಿನ ಶಿಕ್ಷಣ ಕಳೆಯುವಂತೆ ಮಾಡುತ್ತಿದೆಯೇ?. ಯೋಚಿಸಬೇಕಾದ ವಿಚಾರ. 


ಆರೋಗ್ಯವೆಂದರೆ ಕೇವಲ ಕಾಯಿಲೆ ಇಲ್ಲದಿರುವುದು ಮಾತ್ರವೇ? ಖಂಡಿತಾ ಅಲ್ಲ. ಸಮಾಜದಲ್ಲಿ ರಚನಾತ್ಮಕ ಕಾರ್ಯಗಳನ್ನು ಮಾಡಬಲ್ಲ ಶ್ರದ್ಧೆ, ಉತ್ಸಾಹ, ಧನಾತ್ಮಕ ಭಾವಗಳು ಮನುಷ್ಯನಿಗೆ ಇದ್ದಾಗ ಮಾತ್ರ  ಆತ ನಿಜವಾಗಿಯೂ ಆರೋಗ್ಯವಂತ ಎನಿಸಿಕೊಳ್ಳುತ್ತಾನೆ. ಇತ್ತೀಚೆಗೆ ಪ್ರಸಿದ್ಧ ತಂಪು ಪಾನೀಯ ಕಂಪನಿಯೊಂದಕ್ಕೆ, ಅಂತರ್ಜಲವನ್ನು ಕಾನೂನುಬಾಹಿರವಾಗಿ ಬಳಸಿಕೊಂಡದ್ದಕ್ಕೆ  25 ಕೋಟಿ ರೂಪಾಯಿ ದಂಡವನ್ನು ಸರಕಾರ ವಿಧಿಸಿತು. ಹಾಗಾದರೆ ಇಷ್ಟೊಂದು ದೊಡ್ಡ ಮೊತ್ತದ ದಂಡ ಕಟ್ಟುವ ಸಾಮರ್ಥ್ಯವನ್ನು, ಕೇವಲ ನೀರನ್ನು ಬಳಸಿ, ಅದಕ್ಕೆ ನಮ್ಮ ದೇಹದ ಆರೋಗ್ಯಕ್ಕೆ ಯಾವ ರೀತಿಯಲ್ಲೂ ಪ್ರಯೋಜನವಿಲ್ಲದ ಬಣ್ಣ ಮತ್ತು ಕೃತಕ ಸಿಹಿಯನ್ನು ಸೇರಿಸಿ ತಯಾರಿಸುವ ತಂಪು ಪಾನೀಯಗಳು ಕೊಟ್ಟಿತು ಎಂದಾಯಿತಲ್ಲವೇ? ಇಲ್ಲಿ ನಾವು ಜಾಗೃತರಾಗಬೇಕಾದ ಅಂಶವಿದೆ.  


ಯಾವುದು ನಮ್ಮ ಆಹಾರದ ಪ್ರಾಮುಖ್ಯ ಭಾಗವಾಗಬೇಕಾಗಿತ್ತು, ಅಂತಹ ಹಣ್ಣು-ತರಕಾರಿಗಳು ಇಂದು ನಮ್ಮ ಆಹಾರ ಪದ್ಧತಿಯಿಂದ ದೂರ ಸರಿಯುತ್ತಿದೆ. ತಾಜಾತನಕ್ಕಿಂತ ಕೃತಕತೆಯ ಅಟ್ಟಹಾಸ ಮೆರೆಯುತ್ತಿದೆ. ಹಣ್ಣು ತರಕಾರಿಗಳಲ್ಲಿ ಜೀವಸತ್ವ, ಲವಣಾಂಶ, ನಾರಿನಂಶ ಪ್ರಮುಖ ಅಗತ್ಯ ಅಂಶಗಳು. ವಿಟಮಿನ್ ಎ, ವಿಟಮಿನ್ ಸಿ, ಫೋಲೇಟ್, ಪೊಟ್ಯಾಶಿಯಂ, ಮೆಗ್ನೀಷಿಯಂ, ವಿಟಮಿನ್ ಬಿ, ವಿಟಮಿನ್ ಇ ಮೊದಲಾದ ಅಂಶಗಳು ಬೇರೆ ಬೇರೆ ಪ್ರಮಾಣದಲ್ಲಿರುತ್ತವೆ.  


ಹಣ್ಣು ತರಕಾರಿಗಳಲ್ಲಿ

1. ಸಂತೃಪ್ತ ಕೊಬ್ಬಿನ ಅಂಶ, ಉಪ್ಪು, ಸಕ್ಕರೆ ಅಂಶಗಳು ಕಡಿಮೆಯಾಗಿರುವುದರಿಂದ ತೂಕ ಕಡಿಮೆ ಮಾಡಿಕೊಳ್ಳಲು ಸಹಕಾರಿ. 

2. ಉರಿಯೂತವನ್ನು ಕಡಿಮೆ ಮಾಡುವ ಗುಣ ಹೊಂದಿದೆ (antiinflammatory) 

3. ರಕ್ತದಲ್ಲಿನ ಹೆಚ್ಚಿನ ಕೊಲೆಸ್ಟರಾಲ್ ಮಟ್ಟವನ್ನು ಹಾಗೂ ರಕ್ತದೊತ್ತಡವನ್ನು ತಗ್ಗಿಸುತ್ತದೆ.

4. ದೇಶದ ಕೋಶಗಳನ್ನು ಸುಸ್ಥಿತಿಯಲ್ಲಿಡುವ ಫ್ಲೇವೋನಾಯ್ಡ್ ಔಷಧೀಯ ಜಾಡಮಾಲಿ (antioxidant) ಅಂಶಗಳು ಇವೆ.

5. ಹೃದಯದ ಕಾಯಿಲೆ, ಸಕ್ಕರೆ ಕಾಯಿಲೆ, ಕ್ಯಾನ್ಸರ್‌ಗಳ ಸಾಧ್ಯತೆಯನ್ನು ಕಡಿಮೆ ಮಾಡುವುದು.

6. ದೇಹದಲ್ಲಿನ ನೀರಿನ ಪ್ರಮಾಣವನ್ನು ಉಳಿಸುವುದು.

ಪ್ರತಿದಿನ, ಪ್ರತಿ ಹೊತ್ತು, ಪ್ರತಿ ಋತುಮಾನ ಕಾಲದಲ್ಲಿ, ಸ್ಥಳೀಯವಾಗಿ ಲಭ್ಯವಿರುವ ಹಣ್ಣುಗಳು ನಿಮ್ಮ ತಟ್ಟೆಯಲ್ಲಿ ಇರಲಿ. ಆಪಲ್, ಬಾಳೆಹಣ್ಣು, ಕಿತ್ತಳೆ, ಮಾವು, ಅನನಾಸು, ಚಿಕ್ಕು, ಪೇರಳೆ ಹಣ್ಣು, ಪಾಪಾಯ, ದಾಳಿಂಬೆ, ಟೊಮ್ಯಾಟೋ- ಪ್ರಮುಖವಾದವು. ತಾಜಾ ಹಣ್ಣುಗಳು ರುಚಿಕರವೂ, ಪೌಷ್ಟಿಕಾಂಶಭರಿತವು ಆಗಿರುವವು.  


ಶರ್ಕರಪಿಷ್ಟ ಮತ್ತು ಉಪ್ಪು ಕಡಿಮೆ ಇರುವ ಆಹಾರಗಳಿಗೆ ಆದ್ಯತೆ ಇರಲಿ. ಹೆಚ್ಚುತ್ತಿರುವ ಸಕ್ಕರೆ ಕಾಯಿಲೆ ಮತ್ತು ಮಹಿಳೆಯರಲ್ಲಿ ಕಂಡುಬರುವ ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ ತೊಂದರೆಗಳನ್ನು ಈ ಮೂಲಕ ತಡೆಗಟ್ಟಬಹುದು.


ಬಾಳೆ ಹಣ್ಣಿನಲ್ಲಿ ಇರುವ ಸಕ್ಕರೆ ನಿಧಾನವಾಗಿ ಜೀರ್ಣವಾಗಿ, ನಿಧಾನವಾಗಿ ರಕ್ತಗತವಾಗುವುದು. ಈ ಕಾರಣದಿಂದ ಸಕ್ಕರೆಯ ಮಟ್ಟ ಒಮ್ಮೆಲೆ ರಕ್ತದಲ್ಲಿ ಏರುವುದಿಲ್ಲ. ಆದಕಾರಣ ಹಣ್ಣುಗಳಲ್ಲಿನ ಸಕ್ಕರೆ, ಸಕ್ಕರೆ ಕಾಯಿಲೆ ಇಲ್ಲದವರಲ್ಲಿ ಸಕ್ಕರೆ ಪ್ರಮಾಣವನ್ನು ಹಠಾತ್ತನೆ ಏರಗೊಡುವುದಿಲ್ಲ. ತರಬೂಜ, ನಿಂಬೆ, ಕಿತ್ತಳೆ ಕಡಿಮೆ ಸಕ್ಕರೆ ಹೊಂದಿರುವ ಹಣ್ಣುಗಳು. ದಾಳಿಂಬೆ ಹಣ್ಣು ಬೀಜವು ಸಕ್ಕರೆಯನ್ನು ನಿಯಂತ್ರಿಸುವ ಇನ್ಸುಲಿನ್  ಹಾರ್ಮೋನಿಗೆ ದೇಹದ ಕೋಶಗಳನ್ನು ಸಂವೇದನಾಶೀಲವಾಗಿಸುವುದರಿಂದ ಸಕ್ಕರೆ ನಿಯಂತ್ರಣದಲ್ಲಿ ಸಹಕಾರಿ.  ಬಟಾಟೆಯನ್ನು ಸಕ್ಕರೆ ಕಾಯಿಲೆ ಇದ್ದವರು ಸೇವಿಸಬೇಡಿ. ಕ್ಯಾರೆಟ್ ಸ್ವಲ್ಪ ಪ್ರಮಾಣದಲ್ಲಿ ಅಡ್ಡಿ ಇಲ್ಲ. 


ಬೆಳ್ಳುಳ್ಳಿ, ತುಳಸಿ, ಟೊಮ್ಯಾಟೋಗಳಲ್ಲಿ ಅಧಿಕವಾಗಿ ಇರುವ ಕ್ರೋಮಿಯಂ ಅಂಶವು ಶರ್ಕರಪಿಷ್ಟ ಮತ್ತು ಕೊಬ್ಬಿನ ಕಣಗಳನ್ನು ಭೇದಿಸಲು ಸಹಕರಿಸುತ್ತವೆ. ಮಿದುಳಿನ ಕ್ರಿಯೆಗೆ ಅಗತ್ಯವಾಗಿದೆ. ಸಕ್ಕರೆಯನ್ನು ನಿಯಂತ್ರಿಸುವ ಇನ್ಸುಲಿನ್ ಹಾರ್ಮೋನ್ ಪರಿಣಾಮಕಾರಿಯಾಗಿ ಕೆಲಸ ಮಾಡಲು ಪ್ರಚೋದಿಸುತ್ತದೆ. ಕ್ರೋಮಿಯಂ ಅಂಶವು ಸ್ವಲ್ಪ ಪ್ರಮಾಣದಲ್ಲಿ ಸೇಬು ಬಾಳೆಹಣ್ಣು, ದ್ರಾಕ್ಷೆಗಳಲ್ಲೂ ಇದೆ. ಆದಕಾರಣ ಸಕ್ಕರೆ ಕಾಯಿಲೆ ಇಲ್ಲದಿರುವಾಗಲೇ ಇವುಗಳನ್ನು ಹಿತಮಿತವಾಗಿ ಸೇವಿಸುವುದರಿಂದ ಸಕ್ಕರೆ ಕಾಯಿಲೆ ಬಾರದಂತೆ ತಡೆಗಟ್ಟಬಹುದು. ಸಕ್ಕರೆ ಕಾಯಿಲೆ ಉಲ್ಬಣಾವಸ್ಥೆಗೆ ತಲುಪಿ, ಸಕ್ಕರೆ ಅಂಶ ರಕ್ತದಲ್ಲಿ ಗರಿಷ್ಠ ಮಟ್ಟ ತಲುಪಿದಾಗ ಹಣ್ಣುಗಳನ್ನು ಸೇವಿಸುವುದಕ್ಕೆ ತೊಡಗುವುದಲ್ಲ. 


-ಡಾ. ಆರ್.ಪಿ.ಬಂಗಾರಡ್ಕ. M. S. (Ayu) 

ಆಯುರ್ವೇದ ತಜ್ಞ ವೈದ್ಯರು

ಪ್ರಸಾದಿನೀ ಆಯುರ್ನಿಕೇತನ  

ಆಯುರ್ವೇದ ಆಸ್ಪತ್ರೆ,  ನರಿಮೊಗರು,  ಪುತ್ತೂರು. 

rpbangaradka@gmail.com

mob:8904474122 (o),9740545979(P) 

website:www.prasadini.com

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 تعليقات

إرسال تعليق

Post a Comment (0)

أحدث أقدم