ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿ ಪ್ರಕಾಶಿಸಿದ, ಕದ್ರಿ ನವನೀತ ಶೆಟ್ಟಿ ಸಂಪಾದಿಸಿದ, ಹಿರಿಯ ಕವಿಗಳ ಆರು ಪ್ರಸಂಗಗಳ ಗುಚ್ಛವನ್ನು ಎಡನೀರು ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಬಿಡುಗಡೆ ಮಾಡಿದರು.
ಎಡನೀರಿನಲ್ಲಿ ನಿನ್ನೆ ನಡೆದ ಬ್ರಹ್ಮೈಕ್ಯ ಕೇಶವಾನಂದ ಭಾರತೀ ಶ್ರೀಗಳ ಪುಣ್ಯ ಸ್ಮೃತಿ, ಸಾಕ್ಷ್ಯಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ "ತುಳು ಯಕ್ಷಗಾನ ಪ್ರಸಂಗ ಸಂಪುಟ 2"- ಆರು ಪ್ರಸಂಗಗಳ "ಜೊಂಕಿಲ್" ಬಿಡುಗಡೆ ಮಾಡಲಾಯಿತು.
ಈ ಸಂಪುಟದಲ್ಲಿ ಬಾಯಾರು ಸಂಕಯ್ಯ ಭಾಗವತರ ತುಳು "ಪಂಚವಟಿ ವಾಲಿ ಸುಗ್ರೀವೆರೆ ಕಾಳಗೊ", ನಾರಂಪಾಡಿ ಸುಬ್ಬಯ್ಯ ಶೆಟ್ಟಿಯವರ " ಕೋರ್ದಬ್ಬು ಬಾರಗ", ಅಗರಿ ಶ್ರೀನಿವಾಸ ಭಾಗವತರ "ಬಪ್ಪನಾಡು ಕ್ಷೇತ್ರ ಮಹಾತ್ಮೆ", ಸೀತಾನದಿ ಗಣಪಯ್ಯ ಶೆಟ್ಟಿಯವರ "ತುಳುನಾಡ ಸಿರಿ ಮಹಾತ್ಮೆ" , ಅನಂತರಾಮ ಬಂಗಾಡಿಯವರ "ಕಾಡಮಲ್ಲಿಗೆ" ಹಾಗೂ ಅಡೂರು ಬಳಕಿಲ ಕೃಷ್ಣಯ್ಯ ಅವರ "ದೇವಪಾಂಡ್ಯ ಪ್ರತಾಪ" ಪ್ರಸಂಗಗಳಿವೆ.
ಕವಿ- ಪ್ರಕಾಶಕರ ದಾಖಲಾತಿಯ ದೃಷ್ಟಿಯಿಂದ ಈ ಪ್ರಸಂಗಗಳ ಮೂಲ ಮುದ್ರಿತ ಪ್ರತಿಗಳನ್ನು ಮುನ್ನುಡಿ ಸಹಿತ ಯಥಾವತ್ತಾಗಿ ಮುದ್ರಿಸಲಾಗಿದೆ.
ಅಕಾಡಮಿಯ ಅಧ್ಯಕ್ಷ ಡಾ.ಜಿ.ಎಲ್. ಹೆಗಡೆ ಕುಮಟಾ, ರಿಜಿಸ್ಟ್ರಾರ್ ಎಸ್.ಎಚ್. ಶಿವರುದ್ರಪ್ಪ, ಸಂಪಾದಕ ಅಕಾಡಮಿ ಸದಸ್ಯ ಕದ್ರಿ ನವನೀತ ಶೆಟ್ಟಿ, ಸದಸ್ಯ ಯೋಗೀಶ್ ರಾವ್ ಚಿಗುರುಪಾದೆ, ಹಿರಿಯ ಅರ್ಥಧಾರಿ, ಸಾಹಿತಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ರಾಧಾಕೃಷ್ಣ ಕಲ್ಚಾರ್, ನಾರಂಪಾಡಿಯವರ ಮೊಮ್ಮಗ ಯಕ್ಷಗಾನ ವೇಷಧಾರಿ ಹರೀಶ್ ಶೆಟ್ಟಿ ಮಣದಣಾಪು ಉಪಸ್ಥಿತರಿದ್ದರು.
ಯಕ್ಷಗಾನ ಸಂಘಟಕ, ನಿರೂಪಕ ಜನಾರ್ಧನ ಅಮ್ಮುಂಜೆ ಕೃತಿ ಪರಿಚಯ ಮಾಡಿದರು. ಕಾರ್ತಿಕ್ ಪಡ್ರೆ ನಿರೂಪಿಸಿದರು.
ಸಿರಿಚಂದನ ಕನ್ನಡ ಯುವಬಳಗ (ರಿ), ಕಾಸರಗೋಡು ಅಕಾಡಮಿ ಪ್ರಾಯೋಜಕತ್ವದಲ್ಲಿ ಹಾಗೂ ಶ್ರೀ ಎಡನೀರು ಸಂಸ್ಥಾನದ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ಅಯೋಜಿಸಿತ್ತು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ