ಮಂಗಳೂರು: ಗ್ರಾಹಕರು ತಮಗೇನಾದರೂ ಮೋಸವಾದರೆ ಅವರ ರಕ್ಷಣೆಗೆ ಕಾನೂನು ಮಾಪನಶಾಸ್ತ್ರ ಕಾಯ್ದೆಯಿದೆ. ಈ ಕಾನೂನಿನಡಿ ದೂರು ದಾಖಲಿಸಿ, ಗ್ರಾಹಕರು 'ಗ್ರಾಹಕರ ವೇದಿಕೆ'ಯಡಿ ಪರಿಹಾರ ಪಡೆಯಬಹುದಾಗಿದೆ ಎಂದು ದಕ್ಚಿಣ ಕನ್ನಡದ ಕಾನೂನು ಮಾಪನಶಾಸ್ತ್ರ ಸಹಾಯಕ ನಿಯಂತ್ರಕ ಕೆ ಜಿ ಕುಲಕರ್ಣಿ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ಸಂಘ ಮತ್ತು ಗ್ರಾಹಕ ವೇದಿಕೆಗಳು ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಗುರುವಾರ, 'ಲೀಗಲ್ ಮೆಟ್ರಾಲಜಿ ಆಂಡ್ ಇಟ್ಸ್ ಅಪ್ಲಿಕೇಶನ್ಸ್' ಎಂಬ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಗ್ರಾಹಕರ ಹಿತರಕ್ಷಣೆಗಾಗಿ ಇರುವ ಈ ಕಾನೂನಿನ ಬಗ್ಗೆ ಅರಿವು ಹೆಚ್ಚಿಸುವ ಅಗತ್ಯವಿದೆ ಎಂದರು.
ಮುಖ್ಯ ಅತಿಥಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಉದಯ್ ಕುಮಾರ್ ಎಂ. ಎ ಮಾತನಾಡಿ, ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗದಿದ್ದರೆ ಮೋಸಹೋಗುವ ಸಾಧ್ಯತೆಗಳು ಹೆಚ್ಚು ಎಂದು ಎಚ್ಚರಿಸಿದರು. ಕಾಲೇಜಿನ ವಾಣಿಜ್ಯ ಸಂಘ ಮತ್ತು ಗ್ರಾಹಕ ವೇದಿಕೆಯ ಸಹಾಯಕ ನಿರ್ದೇಶಕ ಡಾ. ಎ. ಸಿದ್ಧಿಕ್ ಅವರೂ ವಂಚನೆಯ ವಿರುದ್ಧ ಧ್ವನಿಯೆತ್ತಲು ಕಾನೂನಿನ ನೆರವು ಪಡೆದುಕೊಳ್ಳಬಹುದು ಎಂದರು.
ಕಾನೂನು ಮಾಪನಶಾಸ್ತ್ರ (ಮಂಗಳೂರು- 2) ನಿರೀಕ್ಷಕ ಜಯರಾಜ್, ಪ್ರಾಂಶುಪಾಲೆ ಡಾ. ಅನಸೂಯ ರೈ, ಉಪನ್ಯಾಸಕರಾದ ಡಾ. ಸೌಮ್ಯಾ ಪ್ರವೀಣ್, ಪೂಜಾರಿ ಜಯಶ್ರೀ ಮುದ್ದು ಮೊದಲಾದವರು, ವಾಣಿಜ್ಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ