|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸ್ವಚ್ಛ ಭಾರತ: ಕಾರ್ಕಳದ ಮಾದರಿ!

ಸ್ವಚ್ಛ ಭಾರತ: ಕಾರ್ಕಳದ ಮಾದರಿ!



2014ರ ಆಗಸ್ಟ್ 15ರಂದು ಕೆಂಪು ಕೋಟೆಯಲ್ಲಿ ಭಾಷಣ ಮಾಡುತ್ತ ಪ್ರಧಾನಿ ನರೇಂದ್ರ ಮೋದಿಯವರು ‘ಸ್ವಚ್ಛ ಭಾರತ ಅಭಿಯಾನ’ಕ್ಕೆ ಕರೆಯಿತ್ತರು. “ಇದು ಮಹಾತ್ಮ ಗಾಂಧೀಜಿಯವರ ಕನಸು. ಇದನ್ನು ನನಸಾಗಿಸುವುದು ನಮ್ಮೆಲ್ಲರ ಹೊಣೆ’ ಎಂದರು. ಅದಕ್ಕೆ ಕಾರಣವೂ ಇತ್ತು: “ಪಾಯಿಖಾನೆಯಿರಲಿ ಯಾವುದೇ ಸ್ಥಳವಿರಲಿ ಗಲೀಜು ಮಾಡುವವರಿಗಿಂತ ಅದನ್ನು ಸ್ವಚ್ಛಗೊಳಿಸುವವರು ಯಾವತ್ತಿಗೂ ಹೆಚ್ಚು ಗೌರವಾರ್ಹರು" - ಇದು ಗಾಂಧೀಜಿಯವರು ಕಸ್ತೂರಬಾಗೆ ಹಿಂದೊಮ್ಮೆ ಹೇಳಿದ್ದ ಮಾತು.


“ಸ್ವಚ್ಛತೆಯೂ ಕೆಂಪುಕೋಟೆಯ ಮೇಲಿಂದ ಮಾಡುವ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮಾತನಾಡುವಂತಹ ಒಂದು ವಿಷಯವೇ?" ಎಂದು ಆಗ ಹಲವರು ಮೂಗುಮುರಿದಿದ್ದರು, ಮೋದಿ ದ್ವೇಷವೆಂಬ ನಂಜನ್ನು ಮೈತುಂಬ ತುಂಬಿಕೊಂಡ ಪರಮ ಕೊಳಕು ಮನಸ್ಸಿನವರು.  


ಆದರೆ ದೇಶದ ಸಾಮಾನ್ಯ ಜನತೆ ಸ್ವಚ್ಛತೆಯ ಮಹತ್ತ್ವವನ್ನು ಕ್ರಮೇಣ ಅರಿಯತೊಡಗಿತು. ಜನಸಾಮಾನ್ಯರು ಸ್ವಚ್ಛತಾ ಅಭಿಯಾನದಲ್ಲಿ ತಮ್ಮಿಂದಾದ ಅಳಿಲುಸೇವೆ ಸಲ್ಲಿಸತೊಡಗಿದರು. ನೋಡನೋಡುತ್ತಿದ್ದಂತೆ ದೇಶದ ರೈಲುನಿಲ್ದಾಣಗಳು ಮತ್ತಿತರ ಸಾರ್ವಜನಿಕ ಸ್ಥಳಗಳು ಸ್ವಚ್ಛತೆಯಿಂದ ಲಕಲಕ ಹೊಳೆಯತೊಡಗಿದವು. ಇದೊಂದು ನಿರಂತರ ಪ್ರಕ್ರಿಯೆ ಆಗಬೇಕೆಂದು ಹೆಚ್ಚುಹೆಚ್ಚು ಜನರಿಗೆ ಅರಿವು ಮೂಡಿತು.


ಕರ್ನಾಟಕದ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಮೊನ್ನೆ ಮಾರ್ಚ್ 10ರಿಂದ "ಕಾರ್ಕಳ ಉತ್ಸವ" ನಡೆಯುತ್ತಿದೆ. ಇದು, ಕಾರ್ಕಳ ಕ್ಷೇತ್ರದ ಶಾಸಕ ಮತ್ತು ಪ್ರಸಕ್ತ ಕರ್ನಾಟಕ ಸರಕಾರದ ‘ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ’ ಸುನೀಲ್ ಕುಮಾರ್ ಅವರ ಕಲ್ಪನೆಯ ಕೂಸು. ಕಾರ್ಕಳ ಸುತ್ತಮುತ್ತಲಿನ ಸಹಸ್ರಾರು ಉತ್ಸಾಹಿಗಳು ಸಮಷ್ಟಿಯಾಗಿ ಚಂದಗಾಣಿಸಿಕೊಡುತ್ತಿರುವ ಸಾಂಸ್ಕೃತಿಕ ಉತ್ಸವ. ಇದರ ಭಾಗವಾಗಿ ಇಂದು ಶುಕ್ರವಾರ ಮಾರ್ಚ್ 18ರಂದು ಅತ್ಯಂತ ವೈಭವೋಪೇತ ಮೆರವಣಿಗೆಯೊಂದು ನಡೆಯಿತು. ಇಲ್ಲಿರುವ ಒಂದು ಚಿಕ್ಕ ವಿಡಿಯೊ ಕ್ಲಿಪ್ ಮತ್ತು ಸ್ಥಿರಚಿತ್ರ ಅದೇ ಮೆರವಣಿಗೆಯ ಒಂದು ದೃಶ್ಯ. ಕಾರ್ಕಳ ತಾಲೂಕಿನ ಎಲ್ಲ "ಸ್ವಚ್ಛವಾಹಿನಿ" ವಾಹನಗಳು, ಮತ್ತು ಮೆರವಣಿಗೆಯ ವೇಳೆ ರಸ್ತೆಯ ಮೇಲೆ ಬಿದ್ದಿದ್ದ ಅತಿ ಚಿಕ್ಕ ಕಸವನ್ನೂ ತತ್‌ಕ್ಷಣವೇ ತೆಗೆದು ಸ್ವಚ್ಛಗೊಳಿಸುತ್ತಿರುವ ಸ್ವಚ್ಛತಾ ಕರ್ಮಚಾರಿಗಳು ಮತ್ತು ಸ್ವಯಂಸೇವಕರು.


ನೀವು ಇದುವರೆಗೆ ಅದೆಷ್ಟೋ ಮೆರವಣಿಗೆಗಳನ್ನು ಪ್ರತ್ಯಕ್ಷವಾಗಿ ಅಥವಾ ಚಿತ್ರಗಳಲ್ಲಿ ನೋಡಿರಬಹುದು. ಆದರೆ ಇಂಥದೊಂದು ‘ಸ್ವಚ್ಛತಾ ಅಭಿಯಾನ’ವೂ ಮೆರವಣಿಗೆಯ ಭಾಗವಾಗಿರುವುದನ್ನು ಬಹುಶಃ ನೋಡಿರಲಾರಿರಿ. ಈಗ ನೋಡಿ ಕಣ್ತುಂಬಿಸಿಕೊಳ್ಳಿ. 


“ಪಾಯಿಖಾನೆಯಿರಲಿ ಯಾವುದೇ ಸ್ಥಳವಿರಲಿ ಗಲೀಜು ಮಾಡುವವರಿಗಿಂತ ಅದನ್ನು ಸ್ವಚ್ಛಗೊಳಿಸುವವರು ಯಾವತ್ತಿಗೂ ಹೆಚ್ಚು ಗೌರವಾರ್ಹರು" ಎಂಬ ಗಾಂಧೀಜಿಯವರ ಮಾತನ್ನು ನಾವೆಲ್ಲರೂ ಸದಾ ನೆನಪಿಟ್ಟುಕೊಳ್ಳೋಣ. ಜೀವನದಲ್ಲಿ ಅಳವಡಿಸಿಕೊಳ್ಳೋಣ. 

- ಶ್ರೀವತ್ಸ ಜೋಶಿ. 18 ಮಾರ್ಚ್ 2022

[ಮೂಲ: ಕಾರ್ಕಳ; ಈಗ ವಾಷಿಂಗ್ಟನ್ ಡಿಸಿ.ನಿವಾಸಿ]

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 Comments

Post a Comment

Post a Comment (0)

Previous Post Next Post