|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿಶ್ವ ಅಪಸ್ಮಾರ ಜಾಗೃತಿ ದಿನ- ಮಾರ್ಚ್ 26: ಅಪಸ್ಮಾರ ಮತ್ತು ಅಪನಂಬಿಕೆಗಳು

ವಿಶ್ವ ಅಪಸ್ಮಾರ ಜಾಗೃತಿ ದಿನ- ಮಾರ್ಚ್ 26: ಅಪಸ್ಮಾರ ಮತ್ತು ಅಪನಂಬಿಕೆಗಳು


ಪ್ರತಿ ವರ್ಷ ವಿಶ್ವದಾದ್ಯಂತ ಮಾರ್ಚ್ 26ರಂದು “ಅಂತರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನ” ಅಥವಾ ಪರ್ಪಲ್ ಡೇ ಆಚರಿಸುತ್ತಾರೆ ಮತ್ತು ಅಪಸ್ಮಾರ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತದೆ. ಜಗತಿನಾದ್ಯಂತ ಸರಿಸುಮಾರು 65 ಮಿಲಿಯನ್ ಮಂದಿ ಈ ಅಪಸ್ಮಾರ ಖಾಯಿಲೆಯಿಂದ ಬಳಲುತ್ತಿದ್ದು, ಈ ಖಾಯಿಲೆ ಯಾವುದೇ ಜಾತಿ, ಧರ್ಮ, ಭಾಷೆಯ ಜನರಿಗೆ ಸಿಮೀತವಾಗದೆ ಎಲ್ಲರನ್ನು ಕಾಡುತ್ತಿದ್ದು, ಒಂದು ಜಾಗತಿಕ ಆರೋಗ್ಯ ಸಮಸ್ಯೆ ಎಂದರೂ ತಪ್ಪಲ್ಲ. ಪ್ರತಿ ವರ್ಷ ಫೆಬ್ರವರಿ 9ರಂದು “ವಿಶ್ವ ಅಪಸ್ಮಾರ ದಿನ” ಎಂದು ಆಚರಿಸಲಾಗುತ್ತದೆ. ಆದರೆ ಮಾರ್ಚ್ 26ರಂದು ಅಪಸ್ಮಾರ ರೋಗದ ಬಗ್ಗೆ ಅರಿವು ಮೂಡಿಸಿ ಹೆಚ್ಚಿನ ಜನಜಾಗೃತಿ ನೀಡುವ ನಿಟ್ಟಿನಲ್ಲಿ “ಪರ್ಪಲ್ ಡೇ” ಎಂದು ಆಚರಿಸಿ, ವಿಶ್ವದಾದ್ಯಂತ ರನ್ನಿಂಗ್, ಸ್ವೆಂಕ್ಲಿಂಗ್, ಸ್ಲಿಮಿಂಗ್, ಪೈಂಟಿಂಗ್ ಹೀಗೆ ಹತ್ತು ಹಲವಾರು ಕಾರ್ಯಕ್ರಮ ಆಯೋಜಿಸಿ, ಪರ್ಪಲ್ ಬಣ್ಣದ ಬಟ್ಟೆ ಧರಿಸಿ ಅಪಸ್ಮಾರ ಖಾಯಿಲೆಯ ಬಗ್ಗೆ ಜಾಗೃತಿ ಮೂಡಿಸಿ, ರೋಗದ ವಿರುದ್ಧ ಸಮರ ಸಾರಿ, ಜಾಗೃತಿ ಮೂಡಿಸುವ ಯತ್ನವನ್ನು ಮಾಡಲಾಗುತ್ತದೆ.

ಸೆರಬ್ರಲ್ ಪಾಲ್ಸಿ ಎಂಬ ಅನುವಂಶಿಕ ಮೆದುಳು ಸಂಬಂಧಿ ರೋಗ ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡು ಬರುತ್ತದೆ ಮತ್ತು ಇವರಲ್ಲಿ ಶೇಕಡಾ 41 ಭಾಗದಷ್ಟು ಮಕ್ಕಳು ಅಪಸ್ಮಾರ ಖಾಯಿಲೆಯಿಂದ ಬಳಲುತ್ತಾರೆ. ಮಾರ್ಚ್ 25ರಂದು ವಿಶ್ವ ಸೆರಬ್ರಲ್ ಪಾಲ್ಸಿ ದಿನವೆಂದು ಆಚರಿಸಿ, ಮಾರ್ಚ್ 26ರಂದು ಪರ್ಪಲ್ ದಿನ ಎಂದು ಆಚರಿಸಿ ಅಪಸ್ಮಾರದ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಒಂದು ಅಂಕಿ ಅಂಶಗಳ ಪ್ರಕಾರ ವಿಶ್ವದ ಜನ ಸಂಖ್ಯೆಯ ಪ್ರತಿ ನೂರರಲ್ಲಿ ಒಬ್ಬ ಅಪಸ್ಮಾರ ಬಾಧೆಯಿಂದ ಬಳಲುತ್ತಿದ್ದಾರೆ ಮತ್ತು ವಿಶ್ವದಾದ್ಯಂತ 65 ಮಿಲಿಯನ್ ಮಂದಿ ಬಳಲುತ್ತಿದ್ದು, ಇವರಲ್ಲಿ ಶೇಕಡಾ 50 ಮಂದಿ ಯಾವ ಕಾರಣದಿಂದ ಅಪಸ್ಮಾರ ಬಂದಿದೆ ಎನ್ನುವುದು ಗೊತ್ತಿಲ್ಲದಿರುವುದೇ ಸೋಜಿಗದ ಸಂಗತಿ. ಭಾರತ ದೇಶದಲ್ಲಿ ಸುಮಾರು 12 ಮಿಲಿಯನ್ ಮಂದಿ ಈ ಅಪಸ್ಮಾರ ರೋಗದಿಂದ ಬಳಲುತ್ತಿದ್ದಾರೆ.

ಅಪಸ್ಮಾರ ರೋಗದ ಬಗ್ಗೆಗಿನ ಅಪನಂಬಿಕೆಗಳನ್ನು ತೊಡೆದು ಹಾಕಿ, ರೋಗಿಗಳಿಗೆ ಆತ್ಮಸ್ಥೈರ್ಯ ನೀಡಿ, ಪ್ರೀತಿ, ಮಮತೆ, ವಿಶ್ವಾಸ ತೋರಿ, ಅವರಿಗೂ ವಿದ್ಯಾಭ್ಯಾಸಕ್ಕೆ ಅನುವು ನೀಡಿ, ಉದ್ಯೋಗ ಪಡೆಯಲು ಅವಕಾಶ ಮಾಡಿ ಇತರರಂತೆ ಸಮಾಜದಲ್ಲಿ ಅವರು ಕೂಡಾ ವೈವಾಹಿಕ ಕೌಟುಂಬಿಕ ಜೀವನವನ್ನು ಪಡೆಯಲು ಪೂರಕವಾದ ವಾತಾವರಣ ಕಲ್ಪಿಸುವ ಸದುದ್ದೇಶಯನ್ನು ಈ ಆಚರಣೆ ಹೊಂದಿದೆ. ಅಪಸ್ಮಾರ ರೋಗದಿಂದ ಬಳಲುತ್ತಿದ್ದ 9 ವರ್ಷದ ಕಾಸಿಡಿ ಮೆಗಾನ್ ಎಂಬ ಕೆನಡಾ ದೇಶದ ಬಾಲಕಿ ಮತ್ತು ಅಪಸ್ಮಾರ ಸಂಘ, ನೋವಾ ಸ್ಕೊಟಿಯಾ ಇವರುಗಳು ಜಂಟಿ ಆಶ್ರಯದಲ್ಲಿ ಈ ಆಚರಣೆಯನ್ನು 2008ರಲ್ಲಿ ಆರಂಭಿಸಿದರು. ಅಪಸ್ಮಾರ ಖಾಯಿಲೆಯನ್ನು ಪ್ರತಿನಿಧಿಸುವ ಬಣ್ಣ ಲಾವೆಂಡರ್ ಆಗಿದ್ದು, ಈ ಲಾವೆಂಡರ್ ಹೂ ಅತೀ ಎತ್ತರದ ಪ್ರದೇಶಗಳಲ್ಲಿ ಗುಂಪು ಗುಂಪಾಗಿ ಕಂಡು ಬರುತ್ತದೆ. ಅಪಸ್ಮಾರ ರೋಗಿಗಳು ಕೂಡಾ ತಾವು ಒಬ್ಬಂಟಿ ಮತ್ತು ಏಕಾಂಗಿ ಎಲ್ಲ ಎಂಬರ್ಥದಲ್ಲಿ ಈ ಲಾವೆಂಡರ್ ಹೂ ಮತ್ತು ಬಣ್ಣವನ್ನು ಅಪಸ್ಮಾರ ಖಾಯಿಲೆಯ ಜೊತೆ ಸೇರಿಸಲಾಗಿದೆ.    

ಕಳೆದ ಜನವರಿ ತಿಂಗಳ ಕೊನೆ ವಾರದ ಕೊನೆ ದಿನವಾದ ಶನಿವಾರ ಕುಟುಂಬ ಸಮೇತನಾಗಿ ವಾರಾಂತ್ಯದ ಹೋಟೆಲ್ ಊಟ ಮುಗಿಸಿ, ರಾತ್ರಿ 10ರ ಹೊತ್ತಿಗೆ ಮಂಗಳೂರು ನಗರದ ಪಿ.ವಿ.ಎಸ್ ಸರ್ಕಲ್ ಬಳಿ ಬರುತ್ತಿದ್ದೆ. ಒಂದೆಡೆ ಸುಮಾರು 50–60 ಜನ ಗುಂಪುಗೂಡಿಕೊಂಡು ಮೊಬೈಲ್‌ನಿಂದ ಪೋಟೊ ತೆಗೆಯುದರಲ್ಲಿ ಮಗ್ನರಾಗಿದ್ದರು. ಅವರ ನಡುವೆ ನಡುವಯಸ್ಸಿನ ತರುಣನೊಬ್ಬ ನೆಲದಲ್ಲಿ ಅಪಸ್ಮಾರ ಬಂದು ಒದ್ದಾಡುತ್ತಿದ್ದ. ಆತನ ಮುಖ ಚಹರೆ, ವೇಷಭೂಷಣ ನೋಡಿದಾಗ ಆತ ವಿದ್ಯಾವಂತನಂತೆ ಕಾಣುತ್ತಿದ್ದ. ಪಕ್ಕದಲ್ಲಿ ಆತನ ಬೈಕ್, ಮತ್ತು ಮೊಬೈಲ್ ಬಿದ್ದಿತ್ತು. ಬಾಯಿಯಿಂದ ಬಿಳಿಯಾದ ನೊರೆ ಹೊರ ಬರುತ್ತಿತ್ತು. ಜನರು ತಲೆಗೊಂದರಂತೆ ಮಾತನಾಡುತ್ತಿದ್ದರು. ಆತ ಕುಡಿದು ಬಿದ್ದಿದ್ದಾನೆ ಎಂದು ಒಬ್ಬಾತ ಹೇಳುತ್ತಿದ್ದ, ಇನ್ನೊಬ್ಬ ಆತ ಅಪಘಾತವಾಗಿ ಬಿದ್ದಿದ್ದಾನೆ ಅಂತಲೂ, ಮಗದೊಬ್ಬ ಆತ ಮಾನಸಿಕ ಅಸ್ಪಸ್ಥ ಎಂದೂ ರೋಗ ನಿರ್ಣಯವನ್ನೂ ಮಾಡಿದ್ದ. ಯಾರೊಬ್ಬರೂ ಆತನ ಸಹಾಯಕ್ಕೆ ಬರಲೇ ಇಲ್ಲ.

ಯಾರೋ ಅತಿ ಬುದ್ಧಿವಂತನೊಬ್ಬ ಆತನಿಗೆ ಅಪಸ್ಮಾರ ಬಂದಿದೆ ಎಂದು ಕೈಯಲ್ಲಿ ಕಬ್ಬಿಣದ ಸರಳು ನೀಡಿದ್ದ. ಹತ್ತಿಪ್ಪತ್ತು ಮಂದಿ ಯುವಕರು ಮೊಬೈಲ್‌ನಲ್ಲಿ ಆತನ ಪೋಟೊ ಕ್ಲಿಕ್ಕಿಸುತ್ತಿದ್ದರೆ, ಒಂದಿಬ್ಬರು ವಿಡಿಯೋ ಮಾಡಿ, ಮುಖ ಪುಸ್ತಕಕ್ಕೆ (Facebook) ಹಾಕಿ ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಿದ್ದರು. ಯಾರೊಬ್ಬರೂ ಆತನನ್ನು ಮುಟ್ಟುವ ಅಥವಾ ಉಪಚರಿಸುವ ಗೋಜಿಗೆ ಬರಲೇ ಇಲ್ಲ. ಎಲ್ಲರನ್ನೂ ಚದುರಿಸಿ ಆತನಿಗೆ ಸಹಾಯ ನೀಡಿ ನಿಧಾನವಾಗಿ ಕುಳಿತುಕೊಳ್ಳಿಸಲು ಯತ್ನಿಸಿದೆ. ಆತ ಚಡಪಡಿಸುತ್ತಿದ್ದ. ಕ್ಷಣಾರ್ಧದಲ್ಲಿ ಗಾಡ ನಿದ್ರೆಗೆ ಜಾರಿದ್ದ. ಅದೇ ದಾರಿಯಲ್ಲಿ ಬರುತ್ತಿದ್ದ ಆಟೋ ರಿಕ್ಷಾವನ್ನು ನಿಲ್ಲಿಸಿ ಆತನನ್ನು ರಿಕ್ಷಾಕ್ಕೆ ಏರಿಸಿದೆ. ಅಷ್ಟರಲ್ಲಿ ನನ್ನ ಸ್ನಾತಕೋತ್ತರ ವಿದ್ಯಾರ್ಥಿ ಅದೇ ದಾರಿಯಲ್ಲಿ ಬರುತ್ತಿದ್ದವನು ನನ್ನನ್ನು ನೋಡಿ, ಕಾರಿನಿಂದಿಳಿದು ನನ್ನ ಜೊತೆ ರಿಕ್ಷಾದಲ್ಲಿ ಬಂದ. 101ಕ್ಕೆ ದೂರವಾಣಿ ಮಾಡಿದಾಗ ಸರಿಯಾದ ಸ್ಪಂದನ ದೊರಕಲಿಲ್ಲ. ಆ ದಾರಿಯಲ್ಲಿ ಬಂದ ಪೋಲಿಸರೂ ನಮಗ್ಯಾಕೆ ಉಸಾಬರಿ, ವೆನ್‌ಲಾಕ್‌ಗೆ ಸೇರಿಸಿ ಎಂದು ಬಿಟ್ಟಿ ಸಲಹೆ ನೀಡಿದರು.

ಆತನನ್ನು ನಾವು ರಿಕ್ಷಾದಲ್ಲಿ ಹಾಕಿ, ವೆನ್‌ಲಾಕ್‌ಗೆ ಸೇರಿಸಿದಾಗ ಮೈಯಿಡೀ ಬೆವರುತ್ತಿದ್ದರೂ ಮುಖದಲ್ಲಿ ತೃಪ್ತಿಯ ನಗು ಬಂದಿತ್ತು. ಪ್ರಾಥಮಿಕ ಉಪಚಾರದ ಬಳಿಕ, ಆತನ ಸ್ಮೃತಿ ಬಂದ ಮೇಲೆ ಮರುದಿನ ಆತನನ್ನು ಮನೆಗೆ ಕಳುಹಿಸಲಾಯಿತು. (ಮರುದಿನ ಸಾಯಂಕಾಲ ಆತ ನನಗೆ ದೂರವಾಣಿ ಮಾಡಿ ತಿಳಿಸಿದಾಗಲೇ ಆತನ ಸಂಪೂರ್ಣ ವಿಚಾರ ತಿಳಿಯಿತು.) ವಿಪರೀತ ಕೆಲಸದ ಒತ್ತಡ ಮತ್ತು ಅತಿಯಾದ ಹಸಿವಿನಿಂದಾಗಿ ಆತನಿಗೆ ಅಪಸ್ಮಾರ ಬಂದಿರಬೇಕು ಎಂದು ವೈದ್ಯರು ಶಂಕಿಸಿದ್ದರು. ಆತ ಅಪಸ್ಮಾರ ರೋಗಿಯಲ್ಲದಿದ್ದರೂ ಹಿಂದೊಮ್ಮೆಯೂ ವಿಪರೀತ ಕೆಲಸದೊತ್ತಡದ ಸಮಯದಲ್ಲಿ ಈ ರೀತಿಯಾಗಿತ್ತು ಎಂಬ ವಿಚಾರ ಆತನಿಂದಲೇ ತಿಳಿಯಿತು. ಒಟ್ಟಿನಲ್ಲಿ ಆತ ಮದ್ಯ ಸೇವಿಸಿರಲಿಲ್ಲ. ಕುಲೀನ ಮನೆತನದ ಪದವೀಧರ ವ್ಯಕ್ತಿಯಾಗಿದ್ದು, ಯಾರೊಬ್ಬರಿಗೂ ತೊಂದರೆ ಕೊಡದ ಸಜ್ಜನ ಎಂಬುದಂತೂ ಸತ್ಯ. ಆದರೆ ಅಪಸ್ಮಾರದಿಂದ ಬೀದಿಯಲ್ಲಿ ಬಿದ್ದು ಎನೆಲ್ಲಾ ಅನ್ನಿಸಿಕೊಳ್ಳಬೇಕಾಗಿ ಬಂದಿದ್ದು ನಮ್ಮ ಸಮಾಜದ, ಜನರ ಮನೋಸ್ಥಿತಿಗೆ ಹಿಡಿದ ಕೈಗನ್ನಡಿ ಎಂದರೂ ತಪ್ಪಲ್ಲ.


ಏನಿದು ಅಪಸ್ಮಾರ ಖಾಯಿಲೆ?

ಅಪಸ್ಮಾರ ಎಂದರೆ ಪದೇ ಪದೇ ಮೆದುಳಿನ ನರಕೋಶಗಳು ಅತ್ಯಧಿಕ ಪ್ರಮಾಣದಲ್ಲಿ ಹೊರಹಾಕುವ ವಿದ್ಯುತ್ ಪ್ರಚೋದನೆಯ ಫಲವಾಗಿ ಮೆದುಳಿನ ಕಾರ್ಯದಲ್ಲಿ ಉಂಟಾಗುವ ತಾತ್ಕಲಿಕ ನಿಲುಗಡೆ ಅಥವಾ ವ್ಯತ್ಯಯದ ಪರಿಣಾಮವಾಗಿ ಆ ವ್ಯಕ್ತಿ ಅನುಭವಿಸುವ ಸೃತಿ ಸೆಳತ ಮತ್ತು ಸೆಳೆವು. ಇದನ್ನೇ ಮೂರ್ಛೆ ರೋಗ, ಪಿಟ್ಸ್, ಅಪಸ್ಮಾರ, ಮಲರೋಗ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಆಂಗ್ಲ ಭಾಷೆಯಲ್ಲಿ ಎಪಿಲೆಪ್ಸಿ (EPILEPSY) ಎಂದು ಕರೆಯುತ್ತಾರೆ. ಜನಸಾಮಾನ್ಯ ಆಡುಭಾಷೆಯಲ್ಲಿ ‘ಪಿಟ್ಸ್’ ಎನ್ನುತ್ತಾರೆ.  


ನಮ್ಮ ಮೆದುಳು ಎನ್ನುವುದು ಒಂದು ಸಂಕೀರ್ಣವಾದ ನರಮಂಡಲ. ಅದರಲ್ಲಿ ನರಕೋಶಗಳ ಮಧ್ಯೆ ವಿದ್ಯುತ್ ಪ್ರಸರಣ ನಿಯಮಿತವಾಗಿ ನಡೆಯುತ್ತಿರುತ್ತದೆ. ವಿದ್ಯುತ್ ಆವೇಗಗಳ ಹರಡುವಿಕೆ ಅತೀ ಚಿಕ್ಕ ಪ್ರದೇಶಕ್ಕೆ ಸೀಮಿತವಾಗಿರುತ್ತದೆ. ಆದರೆ ದೊಡ್ಡ ಸೆಳವು ಬಂದಾಗ ನರಕೋಶಗಳ (Neurons) ದೊಡ್ಡ ಗುಂಪು ಪದೇ ಪದೇ ಸೆಳತಕೊಳ್ಳಗಾಗಿ ಅವೇಶಗೊಂಡು, ಚುರುಕುಗೊಂಡು ತುಂಬಾ ವ್ಯಾಪಕ ಪ್ರಮಾಣದಲ್ಲಿ ವಿದ್ಯುತ್ ಚೇತನವನ್ನು ಹೊರಹಾಕುತ್ತದೆ. ಅದನ್ನು ತಡೆಯುವ ಶಕ್ತಿ ನರಕೋಶಗಳ ಮದ್ಯೆ ಕುಗ್ಗಿ ಹೋಗಿರುತ್ತದೆ. ಪ್ರತಿಯೊಬ್ಬ ಮನುಷ್ಯನಲ್ಲಿ ಸೆಳವಿನ ಕಾರ್ಯವ್ಯಾಪ್ತಿಗೊಂದು ಮಿತಿಯಿರುತ್ತದೆ. ಅಪಸ್ಮಾರ ರೋಗಿಗಳಲ್ಲಿ ಈ ಮಿತಿ ತುಂಬ ತಳಹಂತದಲ್ಲಿದ್ದು, ಅವರು ಬೇರೆ ಬೇರೆ ಕಾರಣದಿಂದಾಗಿ ದೊರೆಯುವ ಅನೇಕ ಬಗೆಯ ಪ್ರಚೋದನೆಗಳಿಗೆ ಸೆಳವನ್ನು ತೋರ್ಪಡಿಸುತ್ತಾರೆ.


ಅಸಹಜವಾಗಿರುವ ಅವರ ನರಮಂಡಲದ ನರಕೋಶಗಳು, ಬಹಳ ಬೇಗನೆ ಪ್ರಚೋದನೆಗೊಳಗಾಗುತ್ತದೆ. ಅಪಸ್ಮಾರದ ಸೆಳವಿನ ಕಾರ‍್ಯಬಾಹುಳ್ಯ ಮೆದುಳಿನ ಒಂದು ಭಾಗಕ್ಕೆ ಮಾತ್ರ ಸೀಮಿತವಾಗಿರಬಹುದು. ಅಥವಾ ಅದು ವ್ಯಾಪಕವಾಗಿ ಹರಡಿ ಮೆದುಳಿನ ಎರಡು ಗೋಳಗಳಿಗೆ ವ್ಯಾಪಿಸಿಗೊಂಡು ಅತಿಯಾದ ಮಾರಕವಾದ, ವಿಪರೀತ ಸೆಳವನ್ನು ತೋರ್ಪಡಿಸಬಹುದು. ಮೆದುಳಿನ ನರಕೋಶಗಳ ಈ ಚಟುವಟಿಕೆಗಳನ್ನು ಮೆದುಳಿನ ವಿದ್ಯುತ್‌ಮಾಪನ (EEG) ದಲ್ಲಿ ನಿಖರವಾಗಿ ದಾಖಲಿಸಬಹುದಾಗಿದೆ. ಅದೇ ರೀತಿ ನರಮಂಡಲದ ನರಕೋಶಗಳ ತುದಿಯಲ್ಲಿನ ಚಿಕ್ಕ ಚಿಕ್ಕ ಕೋಣೆಗಳಲ್ಲಿ ನರಕೋಶಗಳನ್ನು ಪ್ರಚೋದಿಸುವ ರಸವಾಹಕವಾದ ಅಸೆಟೈಲ್ ಕೋಲಿನ್ ಮತ್ತು ಪ್ರಚೋದನೆಯನ್ನು ಕಡಿಮೆಯಾಗಿಸುವ ಗಾಮಾ ಅಮಿನೋ ಬ್ಯುಟರಿಕ್ ಆಸಿಡ್ (EABA) ಎಂಬ ರಸವಾಹಕಗಳಲ್ಲಿ ಸಾಮಾನ್ಯವಾಗಿ ಸಮತೋಲನವಿರುತ್ತದೆ. ಆದರೆ ಅಪಸ್ಮಾರವಿರುವ ರೋಗಿಗಳಲ್ಲಿ ಈ ಸಮತೋಲನ ಕಂಡು ಬರುವುದಿಲ್ಲ ಮತ್ತು ಅದೇ ಕಾರಣಕ್ಕಾಗಿ ವ್ಯಕ್ತಿ, ಪದೇ ಪದೇ ನರಮಂಡಲದ ನರಕೋಶಗಳ ವಿಪರೀತ ಸೆಳೆತಕೊಳ್ಳಗಾಗಿ ಅಪಸ್ಮಾರಕ್ಕೆ ತುತ್ತಾಗುತ್ತಾರೆ.


ಅಪಸ್ಮಾರ ಉಂಟಾಗಲು ಕಾರಣಗಳೇನು?

1. ಆನುವಂಶಿಕ ಕಾರಣಗಳು.

2. ಹೆರಿಗೆಯ ಸಮಯದಲ್ಲಿ ಉಂಟಾಗುವ ಮೆದುಳಿಗೆ ಆಗುವ ಹಾನಿಯಿಂದಾಗಿ, ಅಪಸ್ಮಾರ ಖಾಯಿಲೆ ಬರಬಹುದು. ಇದು ಹೆರಿಗೆಯ ಸಮಯದಲ್ಲಿ ಮಗುವಿನ ತಲೆಯನ್ನು ಹೊರತೆಗೆಯುವ ಇಕ್ಕುಳದೆÆತ್ತಡದಿಂದಾಗಿ ಮೆದುಳಿಗೆ ಆಗುವ ಹಾನಿ ಅಥವಾ ಗರ್ಭಾಶಯದಲ್ಲಿರುವಾಗಲೇ ಉಂಟಾಗುವ ಅಮ್ಲಜನಕದ ಕೊರತೆಯಿಂದಾಗಿಯೂ, ಬಾಲ್ಯದಲ್ಲಿ ಅಪಸ್ಮಾರ ಬರುವ ಸಾಧ್ಯತೆ ಇದೆ.


3. ಬಾಲ್ಯದಲ್ಲಿ ತಲೆಗೆ ಬಿದ್ದ ಪೆಟ್ಟು ನಂತರದ ದಿನಗಳಲ್ಲಿ ಅಥವಾ ಅನೇಕ ತಿಂಗಳು ಅಥವಾ ವರ್ಷಗಳ ಬಳಿಕ ಸೆಳವಿನ ರೂಪದಲ್ಲಿ ಕಾಣಿಸಿಕೊಳ್ಳಬಹುದು.


4. ವಿಪರೀತವಾದ ಜ್ವರದಿಂದಲೂ ಕೆಲವೊಮ್ಮೆ ಅಪಸ್ಮಾರ ಬರುವ ಸಾಧ್ಯತೆ ಇದೆ. 

5. ಕೆಲವೊಂದು ಮೆದುಳಿನ ಶಸ್ತ್ರ ಚಿಕ್ಸಿತೆಯ ಬಳಿಕ, ಮೆದುಳಿಗೆ ಉಂಟಾದ ಗಾಯದಿಂದಾಗಿ ಅಪಸ್ಮಾರ ಬರಬಹುದು.


6. ಮೆದುಳಿಗೆ ರಕ್ತ ಸಂಚಾರ ಅಥವಾ ಆಮ್ಲಜನಕ ಕೊರತೆ ಉಂಟಾದಾಗ ಕೂಡಾ ಅಪಸ್ಮಾರ ಬರಬಹುದು. ನಮ್ಮ ಹೃದಯದಿಂದ ಹೊರಹಾಕುವ ರಕ್ತದಲ್ಲಿ 50 ಶೇಕಡಾ ಪ್ರಮಾಣ, ಮೆದುಳಿಗೆ ಸರಬರಾಜಾಗುತ್ತದೆ. ಸಾಮಾನ್ಯವಾಗಿ ವ್ಯಕ್ತಿಯ ಮೆದುಳು 1ರಿಂದ 1.5 ಕೆಜಿ ತೂಕ ಹೊಂದಿರುತ್ತದೆ ಮತ್ತು ಪ್ರತಿ 100 ಗ್ರಾಮ್ ಮೆದುಳಿಗೆ ಕನಿಷ್ಠ ೩೦ಒಐ ರಕ್ತದ ಅವಶ್ಯಕತೆ ಪ್ರತಿ ನಿಮಿಷಕ್ಕೆ ಇರುತ್ತದೆ. ಮೂರು ನಿಮಿಷಕ್ಕಿಂತ ಜಾಸ್ತಿ ಮೆದುಳಿಗೆ ರಕ್ತ ಸಂಚಾರ ವ್ಯತ್ಯಯವಾದಲ್ಲಿ, ಶಾಶ್ವತವಾಗಿ ಮೆದುಳಿನ ಜೀವಕೋಶಗಳಿಗೆ ಹಾನಿಯಾಗಬಹುದು. ಒಟ್ಟಿನಲ್ಲಿ ಮೆದುಳು ನಮ್ಮ ದೇಹದ ಅತ್ಯಂತ ಕ್ರಿಯಾಶೀಲವಾದ ಅಂಗವಾಗಿದ್ದು ಆಮ್ಲಜನಕದ ಕೊರತೆಯಿಂದ, ಬಹಳ ಬೇಗ ಹಾನಿಗೊಳಗಾಗುವ ಸಾಧ್ಯತೆ ಇರುತ್ತದೆ. ರಕ್ತದ ಕೊರತೆ ಕಾಣಿಸಿದ ಕೂಡಲೇ ಅಪಸ್ಮಾರದ ರೂಪದಲ್ಲಿ ಮೆದುಳು ತನ್ನ ಅಕ್ರೋಶ ಮತ್ತು ಅಸಹಕಾರವನ್ನು ಹೊರಹಾಕುತ್ತದೆ ಎಂದರೂ ತಪ್ಪಲ್ಲ.


7. ಅತಿಯಾದ ಮದ್ಯಪಾನ, ಅತಿಯಾದ ಔಷಧಿ ಸೇವನೆ, ಖಿನ್ನತೆ ಹೊಗಲಾಡಿಸುವ ಔಷಧಿಗಳ ದುರ್ಬಳಕೆ ಕೂಡಾ ಅಪಸ್ಮಾರಕ್ಕೆ ಕಾರಣವಾಗಬಹುದು. ನಿಯಮಿತವಾಗಿ ನಿರಂತರವಾಗಿ, ಮದ್ಯಪಾನ ಮಾಡುವ ಮದ್ಯವ್ಯಸನಿಗಳು ಮದ್ಯಪಾನವನ್ನು ಏಕಾಏಕಿ ಬಿಟ್ಟಾಗ ಕೂಡಾ ವ್ಯಕ್ತಿಯಲ್ಲಿ ಅಪಸ್ಮಾರ ಗೋಚರಿಸಬಹುದು. ಅದೇ ರೀತಿ ನಿದ್ರಾಹೀನತೆಗೆ ಉಪಯೋಗಿಸುವ ಗಾರ್ಡಿನಾಲ್ ಸೋಡಿಯಂ ಎಂಬ ಫಿನೋಬಾರ್ಬಿಟೋನ್ ಅಥವಾ ಬೆನ್ಜೊಡಯಜಪಿನ್ ಔಷಧಿ ಸೇವನೆ ನಿಲ್ಲಿಸಿದಾಗಲೂ ಅಪಸ್ಮಾರ ಕಾಣಿಸಿಕೊಳ್ಳಬಹುದು.


8. ಮೆದುಳಿನ ಉರಿಯೂತ (Meningitis) ಮೆದುಳಿನ ಪೊರೆ ಉರಿಯೂತ, ಮೆದುಳಿನ ಕೀವುಗಳು, ಮೆದುಳಿನ ಹೊರಮೈಯಲ್ಲಿನ ಪೊರೆಯಲ್ಲಿ ರಕ್ತ ಶೇಖರಣೆ (Sub Dural Hematoma), ಮೆದುಳಿಗೆ ಗಾಯವಾಗಿ ಊದಿಕೊಂಡಾಗ, (ಅಪಘಾತಗಳಲ್ಲಿ) ಮೆದುಳಿನ ಒಳಗಿನ ಒತ್ತಡ ಜಾಸ್ತಿಯಾದಾಗ ಅಪಸ್ಮಾರ ಕಾಣಿಸಿಕೊಳ್ಳಬಹುದು.


9. ರಕ್ತದಲ್ಲಿ ಗ್ಲೋಕೋಸ್, ಕ್ಯಾಲ್ಸಿಯಂ, ಸೋಡಿಯಂ ಪ್ರಮಾಣ ಕಡಿಮೆಯಾದಾಗ ರಕ್ತದಲ್ಲಿ ಕಲ್ಮಶಗಳು  ಜಾಸ್ತಿಯಾದಾಗ ಯೂರಿಯಾ, ಯೂರಿಕ್ ಆಸಿಡ್ ಮುಂತಾದ ಕಲ್ಮಶಗಳು, ಕಿಡ್ನಿ ವೈಫಲ್ಯದಿಂದಾಗಿ ರಕ್ತದಲ್ಲಿ ಏರಿಕೆಯಾಗಿ, ಅಪಸ್ಮಾರ ಕಾಣಿಸಬಹುದು.


10. ಲೀವರ್ (ಯಕೃತ್ತು) ವಿಪರೀತ ಮದ್ಯ ಸೇವನೆಯಿಂದಾಗಿ ನಾಶಗೊಂಡು ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಂಡಾಗ ರಕ್ತದಲ್ಲಿ ಕಲ್ಮಶಗಳು ಅಥವಾ ಔಷಧಗಳ ಶೇಖರಣೆಗೊಂಡು ಅಪಸ್ಮಾರ ಉಂಟಾಗುವ ಸಾಧ್ಯತೆ ಇರುತ್ತದೆ.


ಅಪಸ್ಮಾರ ಬಂದಾಗ ಏನು ಮಾಡಬೇಕು?

ಅಪಸ್ಮಾರ ಬಂದಾಗ ತಕ್ಷಣ ಮಾಡಬೇಕಾದ ತುರ್ತು ಕೆಲಸವೆಂದರೆ, ರೋಗಿಯ ದೇಹದ ಭಾಗಕ್ಕೆ ಯಾವುದೇ ರೀತಿಯ ಅಪಾಯ ಆಗದಂತೆ ಆತನನ್ನು ನೋಡಿಕೊಳ್ಳಬೇಕು. ಚೂಪಾದ ವಸ್ತುಗಳು, ಕಲ್ಲು, ನೀರು, ಬೆಂಕಿ, ಇತ್ಯಾದಿಗಳಿಂದ ದೂರವಿರಿಸಬೇಕು. ಬಿಗಿಯಾದ ಉಡಪನ್ನು ಸಡಿಲಿಸಬೇಕು. ಆತನು ಉಸಿರಾಡಲು ಅನುಕೂಲವಾಗುವಂತೆ, ಉಸಿರು ಸರಾಗವಾಗಿ ಚಲನೆ ಉಂಟಾಗಲು ಪೂರಕವಾಗುವಂತೆ ತಲೆಯನ್ನು ಒಂದು ಕಡೆ ವಾಲಿಸಿ ಹಿಡಿಯಬೇಕು. ನಾಲಗೆ ಕಚ್ಚಿಕೊಳ್ಳದಂತೆ ತಡೆಯಲು, ಹಲ್ಲುಗಳ ನಡುವೆ ಕರವಸ್ತ್ರ ಅಥವಾ ಬಟ್ಟೆಯನ್ನು ಇಡಬಹುದು. ನಾಲಗೆ ಕಡಿಯದಂತೆ ತಡೆಯಲು ಮರದ ತುಂಡು, ನಾಲಗೆ ಇಕ್ಕುಳ ಮತ್ತು ದೇಹದ ಚಲನೆ ನಿರ್ಬಂಧಿಸುವ ಸಾಧನಗಳಿಂದ, ಉಪಕಾರಕ್ಕಿಂತ ಹೆಚ್ಚು ಅಪಾಯವಾಗುವ ಸಾಧ್ಯತೆ ಇರುತ್ತದೆ. ಸೆಳವು ಕಾಲದಲ್ಲಿ ಸುರಿಯುವ ವಿಪರೀತ ಜೊಲ್ಲುರಸ, ಗಂಟಲಿಗೆ ಹೋಗಿ ಉಸಿರಾಟಕ್ಕೆ ತೊಂದರೆಯಾಗಬಹುದು.

ನಿಯಮಿತವಾಗಿ ಒರೆಸಿ, ಗಾಳಿಯ ಸರಾಗ ಚಲನೆಗೆ ಅನುವು ಮಾಡಿಕೊಡಬೇಕು. ಎತ್ತರದ ಜಾಗದಲ್ಲಿ ವ್ಯಕ್ತಿ ಬಿದ್ದಿದ್ದರೆ, ವ್ಯಕ್ತಿಯನ್ನು ಸಮತಟ್ಟಾದ ನೆಲದಲ್ಲಿ ಮಲಗಿಸಿ ದೇಹಕ್ಕೆ ಯಾವುದೇ ಏಟಾಗದಂತೆ ತಡೆಯಬೇಕು. ಅಪಸ್ಮಾರದಿಂದ ಹೊರಳಾಡುತ್ತಿರುವ ವ್ಯಕ್ತಿಯ ಕೈಗೆ ಚೂಪಾದ ಕಬ್ಬಿಣದ ಸರಳನ್ನು ನೀಡಿ ಸೆಳತ ನಿಲ್ಲಿಸಲು ಪ್ರಯತ್ನಿಸುವುದು ಮೂರ್ಖತನದ ಪರಮಾವಧಿಯಾಗಿರುತ್ತದೆ. ಅದೇ ರೀತಿ ಮುಖದ ಮೇಲೆ ನೀರು ಸುರಿಯುವುದರಿಂದ ಉಸಿರಾಟಕ್ಕೆ ಮತ್ತಷ್ಟು ತೊಂದರೆಯಾಗಬಹುದು. ಅಪಸ್ಮಾರದ ಬಂದು ವ್ಯಕ್ತಿ ಕಂಪಿಸುತ್ತಿರುವಾಗ ವ್ಯಕ್ತಿಯನ್ನು ಕುಳಿತುಕೊಳ್ಳಿಸುವುದಕ್ಕೆ ಪ್ರಯತ್ನಿಸಬಾರದು. ನೆಲದ ಮೇಲೆ ಮಲಗಿಸಿ ಅಪಸ್ಮಾರ ನಿಲ್ಲುವ ವರೆಗೆ ವ್ಯಕ್ತಿಯನ್ನು ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ಅಪಸ್ಮಾರದ ತೀವ್ರತೆ ಕಡಿಮೆಯಾದ ಬಳಿಕ ಆಸ್ಪತ್ರಗೆ ಸೇರಿಸಿ ಕೂಲಂಕುಷವಾಗಿ ಅಪಸ್ಮಾರಕ್ಕೆ ಕಾರಣವಾದ ಸ್ಥಿತಿ ಮತ್ತು ಕಾರಣಗಳನ್ನು ತಿಳಿದು ಚಿಕ್ಸಿತೆ ನೀಡಬೇಕಾಗುತ್ತದೆ.

 

ಅಪಸ್ಮಾರ ರೋಗಿಗಳು ಏನು ಮಾಡಬಾರದು?

ನಿರಂತರವಾಗಿ ಅಪಸ್ಮಾರ ರೋಗಕ್ಕೆ ತುತ್ತಾಗುವವರು, ವೈದ್ಯರ ಸೂಚನೆಯಂತೆ ನಿಯಮಿತವಾಗಿ ಔಷಧಿ ಸೇವಿಸಬೇಕು. ವೈದ್ಯರು ನೀಡಿದ ಮಾತ್ರೆಗಳನ್ನು ಅನೇಕ ವರ್ಷಗಳ ಕಾಲ ದಿನ ಬಿಡದೇ ಸೇವಿಸಬೇಕಾದ ಅನಿವರ‍್ಯತೆ ಇರುತ್ತದೆ. ಔಷಧಿ ಸೇವನೆ ನಿಲ್ಲಿಸಿದ ಕೂಡಲೇ ಅಪಸ್ಮಾರಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಪಸ್ಮಾರದ ರೋಗದ ಚಿಕ್ಸಿತೆ ದೀರ್ಘಕಾಲಿಕವಾಗಿದ್ದು ವೈದ್ಯ, ರೋಗಿ ಮತ್ತು ರೋಗಿಯ ಕುಟುಂಬದ ಸದಸ್ಯರ ನಡುವೆ  ಹೊಂದಾಣಿಕೆ ಅತಿ ಅಗತ್ಯ. ಅಪಸ್ಮಾರ ರೋಗಿ ಒಬ್ಬರೇ ಈಜಾಡುವುದು, ಬೆಟ್ಟ ಹತ್ತುವುದು, ಗಾಡಿಚಾಲನೆ ಮಾಡುವುದು, ಚಲಿಸುವ ಯಂತ್ರಗಳೊಡನೆ ಒಡಾಡುವುದು, ಎತ್ತರ ಪ್ರದೇಶದಲ್ಲಿ ಕೆಲಸ ಮಾಡುವುದು, ಸಂಪೂರ್ಣವಾಗಿ ನಿಷಿದ್ಧವಾಗಿರುತ್ತದೆ. ಅಪಸ್ಮಾರ ರೋಗಿಗಳನ್ನು ಯಾವಾತ್ತೂ ಮನೆಯಲ್ಲಿ ಒಬ್ಬಂಟಿಯಾಗಿ ಬಿಡಬಾರದು. ಸ್ನಾನ ಗ್ರಹದಲ್ಲಿಯೂ ಬಾಗಿಲು ಚಿಲಕ ಹಾಕದೇ ಸ್ನಾನ ಮಾಡಬೇಕಾದ ಅನಿವಾರ‍್ಯತೆ ಇರುತ್ತದೆ. ಒಟ್ಟಿನಲ್ಲಿ ಅಪಸ್ಮಾರ ರೋಗಿಗಳು ತಮ್ಮ ಆರೋಗ್ಯದ ಹಿತದೃಷ್ಠಿಯಿಂದಾಗಿ ಯಾವತ್ತೂ ಕುಟುಂಬಿಕರ ಮತ್ತು ಸ್ನೇಹಿತರ ಕಣ್ಗಾವಲಿನಲ್ಲಿಯೇ ಇರಬೇಕಾದ ಅಗತ್ಯತೆಯಂತೂ ಇದೆ.


ಕೊನೆ ಮಾತು:

ಅಪಸ್ಮಾರ ಎನ್ನುವುದು ಕೇವಲ ಒಂದು ರೋಗವಲ್ಲ. ಇದು ಹಲವಾರು ರೋಗಗಳಲ್ಲಿ ಕಾಣಿಸಿಕೊಳ್ಲುವ ಪ್ರಥಾಮಿಕ ಲಕ್ಷಣವಾಗಿದೆ. ಮೆದುಳಿಗೆ ಅಘಾತವಾದಾಗ ಮತ್ತು ಮೆದುಳಿನ ಕಾರ್ಯಕ್ಷಮತೆಗೆ ಧಕ್ಕೆಯಾದಾಗ ಅಥವಾ ಮೆದುಳಿನ ನರಮಂಡಲದ ನರಕೋಶಗಳ ಸಂವಹನದ ಕೊರತೆಯಿಂದಾಗಿ ಈ ಅಪಸ್ಮಾರ ರೋಗ ಕಾಣಿಸಿಕೊಳ್ಳುತ್ತದೆ. ಅಪರೂಪಕ್ಕೊಮ್ಮೆ ಬರುವ ಅಲ್ಪ ಪ್ರಮಾಣದ ಅಪಸ್ಮಾರವನ್ನು ನಿರಂತರವಾದ ಔಷಧಿ ಸೇವನೆ ಮತ್ತು ಆರೋಗ್ಯ ಪೂರ್ಣ ಜೀವನಶೈಲಿಯಿಂದ ಹತೋಟಿಯಲ್ಲಿಡಬಹುದು. ಇಂತಹ ರೋಗಿಗಳಲ್ಲಿ ದೈನಂದಿನ ಕರ‍್ಯ ಚಟುವಟಿಕೆಗಳಲ್ಲಿ ಹೆಚ್ಚಿನ ಬದಲಾವಣೆಯ ಅವಶ್ಯಕತೆ ಇರುವುದಿಲ್ಲ. ಆದರೆ ತೀವ್ರತರಹದ ಅಪಸ್ಮಾರ ರೋಗವಿರುವವರು, ಪದೇ ಪದೇ ಅಪಸ್ಮಾರಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ರೋಗಿಗಳು ಯಾವತ್ತೂ ಕುಟುಂಬಿಕರ ಮತ್ತು ಸ್ನೇಹಿತರ ಹದ್ದಿನ ಕಣ್ಣಿನ ಕಣ್ಗಾವಲಿನಲ್ಲಿಯೇ ಇರಬೇಕಾದ ಅನಿವಾರ‍್ಯತೆ ಇದೆ. ಇವರು ಔಷಧಿ ಸೇವನೆ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಬಹಳ ಶಿಸ್ತುಬದ್ಧರಾಗಿರಬೇಕಾದ ಅನಿವಾರ‍್ಯತೆ ಇದೆ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಈ ರೋಗಿಗಳು ಅಪಸ್ಮಾರಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು ಇರುತ್ತದೆ.


ಅಪಸ್ಮಾರ ರೋಗಿಗಳ ಬಗೆಗಿನ ಕೀಳರಿಮೆ ಯಾವತ್ತೂ ಒಳ್ಳೆಯದಲ್ಲ. ಈ ರೋಗ ಹೊಂದಿದ ರೋಗಿಗಳನ್ನು ಯಾವುದೇ ವಯಸ್ಸು, ಲಿಂಗ, ಜಾತಿ, ಭೇದವಿಲ್ಲದೆ ಪರಿಪೂರ್ಣ ಜೀವನ ನಡೆಸಲು ಅನುವು ಮಾಡಿಕೊಡಬೇಕು. ರೋಗಿಗಳಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿ ಧೈರ್ಯ ತುಂಬಬೇಕು. ಆತನಲ್ಲಿನ ಸಕಾರಾತ್ಮಕ ವಿಚಾರಗಳ ಬಗ್ಗೆ ತಿಳಿಹೇಳಿ, ಆತ್ಮವಿಶ್ವಾಸ ತುಂಬಿ, ಒಳ್ಳೆಯ ವಿಚಾರಗಳನ್ನು ಜಾಗೃತಗೊಳಿಸಬೇಕು. ಅಂತಹ ರೋಗಿಗಳನ್ನು ಅತ್ಯಂತ ಪ್ರೀತಿ, ವಿಶ್ವಾಸ, ಆದರ ಮಮತೆ ಮತ್ತು ಕರುಣೆಯಿಂದ ನೋಡಿಕೊಳ್ಳಬೇಕು. ಅವರ ರೋಗದ ಬಗೆಗಿನ ತಿರಸ್ಕಾರ ಮತ್ತು ಜಿಗುಪ್ಸೆ ಯಾವತ್ತೂ ಸಲ್ಲದು. ಅಂತಹ ರೋಗಿಗಳಿಗೆ ಮಾನಸಿಕ ಧೈರ್ಯ, ಸಾಂತ್ವನ ನೀಡಿ ಜೀವನೋತ್ಸಾಹದ ಬುಗ್ಗೆ  ಆರದಂತೆ ನೋಡಿಕೊಳ್ಳುವ ಸಾಮಾಜಿಕ ಹೊಣೆಗಾರಿಕೆ ನಮಗೆಲ್ಲರಿಗೂ ಇದೆ. ಆ ಮೂಲಕ ರೋಗಿಯಲ್ಲಿ ಆತ್ಮವಿಶ್ವಾಸ ಹೆಚ್ಚಿದಾಗ ಆತನಲ್ಲಿ ಜೀವನೋತ್ಸಾಹ ಉಕ್ಕಿದಲ್ಲಿ, ಖಂಡಿತವಾಗಿಯೂ ಅಪಸ್ಮಾರ ರೋಗದಿಂದ ಚೇತರಿಸಿಕೊಳ್ಳಲು ಸಹಾಯಕವಾಗಬಲ್ಲದು. ಹೀಗೆ ಅಪಸ್ಮಾರ ರೋಗಿಗಳಿಗೆ ಸಹಾನುಭೂತಿ, ಸ್ನೇಹ ಮತ್ತು ಸಹಕಾರ ನೀಡುವುದಲ್ಲಿಯೇ ಮನುಷ್ಯತ್ವದ ಸೆಲೆ ಅಡಗಿದೆ.


-ಡಾ|| ಮುರಲೀ ಮೋಹನ್ ಚೂಂತಾರು 

ಸುರಕ್ಷಾದಂತ ಚಿಕಿತ್ಸಾಲಯ

ಹೊಸಂಗಡಿ –  671 323

ಮೊ : 09845135787


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




hit counter

0 تعليقات

إرسال تعليق

Post a Comment (0)

أحدث أقدم