ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ನಲ್ವತ್ತನೆಯ ಘಟಿಕೋತ್ಸವವನ್ನು ಎಪ್ರಿಲ್ ತಿಂಗಳಿನಲ್ಲಿ ನಡೆಸಲು ಉದ್ದೇಶಿಸಲಾಗಿದ್ದು ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜಿತ, ಘಟಕ ಮತ್ತು ಸ್ವಾಯತ್ತ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಪದವಿ ಪ್ರಮಾಣ ಪತ್ರ ಪಡೆಯಲು ಬಯಸುವ ವಿದ್ಯಾರ್ಥಿಗಳು ಮಾರ್ಚ್ 7 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ತಾವು ಪದವಿ ಪೂರೈಸಿದ ಕಾಲೇಜುಗಳ ಪ್ರಾಂಶುಪಾಲರಿಂದ/ವಿಭಾಗ ಮುಖ್ಯಸ್ಥರಿಂದ/ ವಿಶ್ವವಿದ್ಯಾನಿಲಯದ ವೆಬ್ಸೈಟ್ನಿಂದ ನಿಗದಿತ ಅರ್ಜಿ ನಮೂನೆ ಪಡೆದು ʼಹಾಜರಿʼ ಅಥವಾ ʼಗೈರುಹಾಜರಿʼ ಎಂದು ನಮೂದಿಸಿ ಅರ್ಜಿ ಸಲ್ಲಿಸಬಹುದು. ಸ್ವಾಯತ್ತ ಕಾಲೇಜುಗಳ ಆಕಾಂಕ್ಷಿಗಳು ಅರ್ಜಿಗಳನ್ನು ಪ್ರಾಂಶುಪಾಲರ ಮೂಲಕವೇ ಸಲ್ಲಿಸಬೇಕು. ಅರ್ಜಿಗಳಲ್ಲಿ ʼಹಾಜರಿʼ ಎಂದು ನಮೂದಿಸಿದ ಅಭ್ಯರ್ಥಿಗಳಿಗೆ ಪದವಿ ಪ್ರಮಾಣಪತ್ರಗಳನ್ನು ಘಟಿಕೋತ್ಸವ ಮುಗಿದ ಕೂಡಲೇ ವಿತರಿಸಲಾಗುವುದು.
ಆ ವಿದ್ಯಾರ್ಥಿಗಳು ಘಟಿಕೋತ್ಸವದ ಹಿಂದಿನ ದಿನ ಪೂರ್ವಾಹ್ನ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯೊಳಗೆ ಪರೀಕ್ಷಾಂಗ ವಿಭಾಗದ ಘಟಿಕೋತ್ಸವ ವಹಿಯಲ್ಲಿ ಸಹಿ ಮಾಡಬೇಕು. ಪುನರಾವರ್ತಿತ ಅಭ್ಯರ್ಥಿಗಳು, ಆದರೆ ಮಾರ್ಚ್ 7ರೊಳಗೆ ಪದವಿ ಪಡೆಯಲು ಅರ್ಹರಾದ ವಿದ್ಯಾರ್ಥಿಗಳು ʼಗೈರುಹಾಜರಿಯಲ್ಲಿʼ ಪದವಿ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಬಹುದು.
ಬಿ.ಪಿ ಎಡ್ ಮತ್ತು ಬಿ.ಎಡ್ ಪದವೀಧರರಲ್ಲಿ ಪದಕ/ ಬಹುಮಾನ ಪಡೆಯಲು ಅರ್ಹರಾದ ಮತ್ತು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಮಾತ್ರ ಘಟಿಕೋತ್ಸವಕ್ಕೆ ಪ್ರವೇಶ ಪಡೆಯಲು ಅರ್ಹರು. ಘಟಿಕೋತ್ಸವದ ಅಧಿಕೃತ ದಿನಾಂಕವನ್ನು ವಿವಿಯ ವೆಬ್ಸೈಟ್ ಹಾಗೂ ಮಾಧ್ಯಮಗಳ ಮೂಲಕ ಪ್ರಕಟಿಸಲಾಗುವುದು, ಎಂದು ವಿಶ್ವವಿದ್ಯಾನಿಲಯದ ಪ್ರಕಟಣೆ ತಿಳಿಸಿದೆ.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ