ಮಂಗಳೂರು: ಮಂಗಳೂರಿನ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ ಬಿ.ಇ./ಬಿ.ಆರ್ಕ್/ಎಮ್.ಬಿ.ಎ./ಎಮ್.ಸಿ.ಎ./ಎಮ್.ಟೆಕ್ ವಿದ್ಯಾರ್ಥಿಗಳ “ಫ್ರೆಷರ್ಸ್ ಡೇ-2022” ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ಶನಿವಾರ (ಮಾ.12) ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀನಿವಾಸ ವಿಶ್ವವಿದ್ಯಾಲಯದ ಸಹಕುಲಪತಿ ಹಾಗೂ ಎ. ಶಾಮರಾವ್, ಫೌಂಡೇಷನ್ನ ಉಪಾಧ್ಯಕ್ಷರಾದ ಡಾ. ಎ. ಶ್ರೀನಿವಾಸ ರಾವ್ ರವರು ಮಾತನಾಡುತ್ತಾ ತಮಗೆ ಕ್ಲಿಷ್ಟಕರವಾದ ವಿಷಯಗಳನ್ನು ಪ್ರೀತಿಸುತ್ತಾ ವಿಷಯವನ್ನು ಕರಗತಮಾಡಿಕೊಳ್ಳುವಂತೆ ಸಲಹೆ ನೀಡಿದರು. ಇದರೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡುವುದರೊಂದಿಗೆ ಕೌಶಲ್ಯಯುಕ್ತ ಸುಶಿಕ್ಷಿತರಾಗುವಂತೆ ವಿದ್ಯಾರ್ಥಿಗಳಿಗೆ ಹಲವು ಕಿವಿಮಾತುಗಳನ್ನು ತಿಳಿಸಿದರು.
ಪ್ರಾಂಶುಪಾಲರಾದ ಡಾ. ಶ್ರೀನಿವಾಸ ಮಯ್ಯ ಡಿ. ಅವರು ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸುತ್ತಾ, ಸಂಸ್ಥೆಯ ತ್ವರಿತ ಪ್ರಗತಿಯ ಪಕ್ಷಿನೋಟವನ್ನು ಮಂಡಿಸುತ್ತಾ ಸಂಸ್ಥೆಯಲ್ಲಿ ಲಭ್ಯವಿರುವ ವ್ಯವಸ್ಥೆ ಹಾಗೂ ಅವಕಾಶಗಳು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ನಿಯಮಾವಳಿಗಳನ್ನು ವಿವರಿಸಿದರು.
ವಿದ್ಯಾರ್ಥಿನಿಯರಾದ ಶ್ರೀರಕ್ಷ ಪಿ. ಆಚಾರ್ಯ ಮತ್ತು ದಿಶಾ ರಾವ್ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಸೈನ್ಸ್ ಡೇ ಪ್ರಯುಕ್ತ ಹಮ್ಮಿಕೊಂಡಿದ್ದ ಹಲವು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಡಾ. ಎ. ಶ್ರೀನಿವಾಸ ರಾವ್ ಬಹುಮಾನಗಳನ್ನು ವಿತರಿಸಿ ಅಭಿನಂದಿಸಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸೂರ್ಯನಾರಾಯಣ ಕೆ. ವಂದನಾರ್ಪಣೆಗೈದರು. ಈ ಕಾರ್ಯಕ್ರಮವನ್ನು ಪ್ರೊ. ಪದ್ಮನಯನ ಮತ್ತು ಪ್ರೊ. ರಮ್ಯಶ್ರೀ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ