ಸಂಗೀತವು ನಮ್ಮ ಜೀವನವನ್ನು ಸುಧಾರಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಅದು ನಿಜವಾಗಿಯೂ ಹೆಚ್ಚು ಕಾಲ ಬದುಕಲು ಸಹಾಯ ಮಾಡುತ್ತದೆಯೇ ? ಇದು ನಿಜವೇ ? ಈ ವಿಷಯದ ಕುರಿತು ನಡೆಸಲಾದ ಅನೇಕ ಅಧ್ಯಯನಗಳು ಸಂಗೀತ ಕಛೇರಿಗಳಿಗೆ ಹಾಜರಾಗುವವರು ಅಥವಾ ಸಂಗೀತವನ್ನು ಕೇಳುವವರು ಇತರರಿಗಿಂತ ಹೆಚ್ಚು ಕಾಲ ಬದುಕುತ್ತಾರೆ ಎಂದು ಸಾಬೀತುಪಡಿಸಿದೆ. ಸಾಮಾನ್ಯವಾಗಿ ಸಂಗೀತವನ್ನು ಕೇಳುವವರು ಖಿನ್ನತೆಗೆ ಒಳಗಾಗುವುದಿಲ್ಲ. ಅವರು ಉತ್ತಮ ಮಾನಸಿಕ ಆರೋಗ್ಯವನ್ನು ಹೊಂದಿರುತ್ತಾರೆ.
ಸಂಗೀತವು ಮಾತು, ಸ್ಮರಣೆ ಮತ್ತು ಸಂವಹನವನ್ನು ಸುಧಾರಿಸುತ್ತದೆ. ಸಂಗೀತವು ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಎರಡರನ್ನು ಸುಧಾರಿಸುತ್ತದೆ. ಸಂಗೀತವು ಸಂತೋಷವನ್ನು ಹೆಚ್ಚಿಸುತ್ತದೆ ಮತ್ತು ಆದ್ದರಿಂದ ಯೋಗಕ್ಷೇಮವನ್ನು ಸುಧಾರಿಸುತ್ತದೆ. ಸಂಗೀತವು ಸ್ವಯಂ ಮೌಲ್ಯದ (self worth) ಭಾವನೆ ಮತ್ತು ಇತರರಿಗೆ (closeness feeling) ಭಾವನೆಯನ್ನು ಸುಧಾರಿಸುತ್ತದೆ. ಇದು ನಮ್ಮ ಜೀವನಕ್ಕೆ ಸ್ಫೂರ್ತಿ ನೀಡಿ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ. ಗಾಯನವು ಉಸಿರಾಟದ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಹಾಡುತ್ತಿರುವಾಗ ನಾವು ದೀರ್ಘವಾದ ಉಸಿರಾಟವನ್ನು ತೆಗೆದುಕೊಳ್ಳುತ್ತೇವೆ. ಆಳವಾದ ಉಸಿರಾಟವು ರಕ್ತ ಪರಿಚಲನೆ ಮತ್ತು ದೇಹದಲ್ಲಿ ಆಮ್ಲಜನಕದ ಹರಿವನ್ನು ಸುಧಾರಿಸುತ್ತದೆ.
ಹಾಡುವಿಕೆಯು ಕಿರಿಯ ಸ್ನಾಯುಗಳನ್ನು ಬೆಳೆಯಲು ಉತ್ತೇಜಿಸುತ್ತದೆ ಮತ್ತು ಮುಖದ ಸ್ನಾಯುಗಳನ್ನು (face muscles relaxation) ಸಡಿಲಗೊಳಿಸುತ್ತದೆ. ದಿನನಿತ್ಯ ಹಾಡುವುದರಿಂದ ಗಂಟಲು ಮತ್ತು ಅಂಗುಳಿನ (palate) ಸ್ನಾಯುಗಳು ಬಲಗೊಳ್ಳುತ್ತವೆ. ಉಸಿರುಕಟ್ಟುವಿಕೆ ಮತ್ತು ಗೊರಕೆ ನಿಲ್ಲುತ್ತದೆ. ಸಂಗೀತವು ಹೃದಯರಕ್ತನಾಳದ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಮೆದುಳಿಗೆ ರಕ್ತ ಪರಿಚಲನೆ ಸುಧಾರಿಸುತ್ತದೆ. ನಿಮ್ಮನ್ನು ಚಟುವಟಿಕೆಯಿಂದ ಇಡುತ್ತದೆ, ಮೆದುಳಿನ ಆಮ್ಲಜನಕವನ್ನು ಹೆಚ್ಚಿಸುತ್ತದೆ.
ಹಾಡುವಿಕೆಯು ನಮ್ಮ ದೇಹದಲ್ಲಿ ಆನಂದ ಮತ್ತು ಒತ್ತಡ ಕಡಿಮೆ ಮಾಡುವ ಹಾರ್ಮೋನ್ ಅನ್ನು ಬಿಡುಗಡೆಮಾಡುತ್ತದೆ. ಇದು ಶಾಂತಗೊಳಿಸುವ ಪರಿಣಾಮವನ್ನು ನೀಡುತ್ತದೆ. ರಕ್ತದೊತ್ತಡ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ನಮ್ಮ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಹೀಗಾಗಿ ಬ್ಯಾಕ್ಟೀರಿಯಾ ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹಾಡುವಿಕೆಯು ಸಾಮಾಜಿಕ ಜೀವನವನ್ನು ಸುಧಾರಿಸುತ್ತದೆ. ಒಂಟಿತನವನ್ನು ತಡೆಯುತ್ತದೆ ಮತ್ತು ಸಮಾಜದಲ್ಲಿ ಸಂವಹನ ನಡೆಸಲು ನಮಗೆ ಸಹಾಯ ಮಾಡುತ್ತದೆ. ಆದ್ದರಿಂದ ಸಂಗೀತವು ನಮ್ಮನ್ನು ಹೆಚ್ಚು ದಿನ ಬದುಕಲು ಸಹಾಯ ಮಾಡುತ್ತದೆ ಎಂಬುದರಲ್ಲಿ ಸಂಶಯವಿಲ್ಲ.
ರಾಗ - ಮೋಹನಕಲ್ಯಾಣಿ
ಆ-ಸರಿ₂ ಗ₂ ಪದ₂ ಸ
ಅವ-ಸನಿ₂ ದ₂ ಪಮ₂ ಗ₂ ರಿ₂ ಸ
ರಾಗ ಮೋಹನಕಲ್ಯಾಣಿಯು 65 ನೇ ಮೇಳಕರ್ತ ರಾಗದ ಮೇಚಕಲ್ಯಾಣಿಯ ಜನ್ಯ ರಾಗವಾಗಿದೆ. ಈ ರಾಗವು ಮೋಹನ ರಾಗ ಮತ್ತು ಕಲ್ಯಾಣಿ ರಾಗಗಳ ಸಂಯೋಜನೆಯಾಗಿದೆ. ಹಿಂದೂಸ್ಥಾನಿ ಸಂಗೀತದಲ್ಲಿ ಈ ರಾಗವನ್ನು ಭೂಪಕಲ್ಯಾಣ ಅಥವಾ ಶುದ್ಧ ಕಲ್ಯಾಣ ಎಂದು ಕರೆಯಲಾಗುತ್ತದೆ. ನಮ್ಮ ಶಕ್ತಿಯನ್ನು ಮರುರೂಪಿಸುವ ಆಹ್ಲಾದಕರ ರಾಗವೂ ಆಗಿದೆ.
ಈ ರಾಗದ ಪ್ರಯೋಜನಗಳು
• ಆತ್ಮವಿಶ್ವಾಸವನ್ನು ಹೆಚ್ಚಿಸುವ ಮಂಗಳಕರ ರಾಗ.
• ಈ ರಾಗವು ಜೀವನದಲ್ಲಿ ರೋಗ, ಭಯ, ಬಡತನ ಮುಂತಾದ ನಕಾರಾತ್ಮಕ ಅಂಶಗಳನ್ನು ನಾಶಮಾಡುವ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ.
• ಜನರಲ್ಲಿರುವ ಎಲ್ಲಾ ರೀತಿಯ ಭಯಗಳನ್ನು ನಾಶಪಡಿಸುತ್ತದೆ.
-ಡಾ.ರಶ್ಮಿ ಭಟ್
ಕೌನ್ಸೆಲಿಂಗ್ ಮನಶ್ಶಾಸ್ತ್ರಜ್ಞೆ
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ