ಸಮಯ ತುಂಬಾ ಜನರನ್ನು ಪರಿಚಯಿಸುತ್ತದೆ, ಸಂದರ್ಭ ಆ ಜನರ ನಿಜವಾದ ಮುಖವನ್ನು ಪರಿಚಯಿಸುತ್ತದೆ
ಆ ಮೀನೊಂದು ಬಲೆಯಲ್ಲಿ ಸಿಕ್ಕಿಬಿದ್ದು ವಿಲವಿಲನೆ ಒದ್ದಾಡುತ್ತಿತ್ತು. ಅದೇ ಹೊಳೆಯಲ್ಲಿದ್ದ ಅದರ ಗೆಳೆಯರೆಲ್ಲ ಬಳಿ ಬಂದರು. ಅಲ್ಲೇ ಇದ್ದ ದಷ್ಟ ಪುಷ್ಟವಾಗಿದ್ದ ಮೀನೊಂದು ಮನಸೊಳಗೆ ನಗುತ್ತಿತ್ತು. ಪೆದ್ದ ಸಣಕಲು ದೇಹದೊಂದಿಗೆ ಬದುಕು ಮುಗಿಸಿದ ಎಂದು ಕೊಂಡಿತು. ತನ್ನ ಬಗ್ಗೆ ಅತಿಯಾದ ಅಹಂಕಾರವಿತ್ತು ಅದಕ್ಕೆ.
ಇನ್ನೊಂದು ಮೀನು ಕೂಡ ಬಳಿ ಬಂತು. ಅದು ನಗುತ್ತಿತ್ತು, ನಿನ್ನೆ ತನಕ ಹಾರಾಡುತ್ತಿದ್ದ ಮುಠ್ಠಾಳ. ಇಂದಿಗೆ ಅವನ ಹಾರಾಟ ಮುಗಿಯಿತು. ಎಂದು ಅದು ಕೂಡ ಎದುರಲ್ಲಿ ದುಃಖದ ನಾಟಕವಾಡುತ್ತಿತ್ತು ಆದರೆ ಒಳಗೊಳಗೇ ಖುಷಿ ಪಡುತ್ತಿತ್ತು.
ಇದೆಲ್ಲ ಆ ಏಡಿ (crab) ಮೀನಿಗೆ ಸರಿ ತೋರಲಿಲ್ಲ ತನ್ನ ಗೆಳೆಯ ಬಲೆಯೊಳಗೆ ಒದ್ದಾಡುವುದು ಅದಕ್ಕೆ ನೋಡಲಾಗಿರಲಿಲ್ಲ.. ತಕ್ಷಣ ತನ್ನ ಹರಿತವಾದ ಕೊಂಡಿಯಲ್ಲಿ ಬಲೆಯನ್ನು ಕತ್ತರಿಸಿ ಗೆಳೆಯನನ್ನು ಬಿಡಿಸಿಕೊಂಡಿತು. ಈ ಬಾರಿ ಬಲೆಯಲ್ಲಿ ಸಿಕ್ಕಿ ಬಿದ್ದಿದ್ದ ಮೀನಿಗೂ ಗೊತ್ತಾಗಿತ್ತು, ನಿಜವಾದ ಗೆಳೆಯರು ಯಾರು ಎಂದು.
ಇಂತಹ ಪ್ರಸಂಗಗಳು ನಮ್ಮಲ್ಲೂ ನಡೆಯುತ್ತವೆ. ನೀವು ಬಿದ್ದಾಗ. ನಗೆಯಾಡುವ ಗೆಳೆಯರು, ಭಾರೀ ಹಾರಾಡುತ್ತಿದ್ದ ಎನ್ನುವ ಬಂಧುಗಳು, ಎದುರಿಂದ ದುಃಖದ ನಾಟಕ ಆಡುತ್ತ ಒಳಗೊಳಗೇ ಖುಷಿ ಪಡುವ ಮಂದಿ.
ಹಾಗೆ ಬಿದ್ದಾಗ ಕೈಹಿಡಿದೆತ್ತಿ ನಾನಿದ್ದೇನೆ ಬಾ ಹೋಗೋಣ ಜೊತೆಯಲ್ಲಿ ಎಂದು ಕೈಹಿಡಿದೆತ್ತುವ ಮಂದಿ. ನೆನಪಿಡಿ ಅದೆಷ್ಟೋ ಬಾರಿ ಇಂತಹ ಪ್ರಸಂಗಗಳು ಬಂದಾಗ ನಿಮ್ಮವ ಯಾರು ಎಂಬ ಸತ್ಯದರ್ಶನ ವಾಗಬಹುದು. ಅಥವಾ ಆ ಸತ್ಯ ದರ್ಶನ ಆಗದೆ ಈ ಲೋಕದ ಋಣ ಮುಗಿಯಬಹುದು. ಆದರೆ ಒಂದು ಮಾತ್ರ ನೆನಪಿಡಿ.
ನಿಮ್ಮ ಅಸಹಾಯಕತೆಯನ್ನು ದುರ್ಬಳಕೆ ಮಾಡುವ ಮಿತ್ರರನ್ನು ನಿಮ್ಮ ಹತ್ತಿರ ಬರಲು ಬಿಟ್ಟರೆ ಕೋಲು ಕೊಟ್ಟು ಪೆಟ್ಟು ತಿಂದಂತೆ.
ಹಾಗಾಗಿ ನೆನಪಿಡಿ: ಸಮಯ ತುಂಬಾ ಜನರನ್ನು ಪರಿಚಯಿಸುತ್ತದೆ, ಸಂದರ್ಭ ಆ ಜನರ ನಿಜವಾದ ಮುಖವನ್ನು ಪರಿಚಯಿಸುತ್ತದೆ.
-ಡಾ. ಶಶಿಕಿರಣ್ ಶೆಟ್ಟಿ
ಹೋಂ ಡಾಕ್ಟರ್ ಫಾಂಡೇಶನ್, ಉಡುಪಿ.
9945130630
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ