ಧರ್ಮಸ್ಥಳ: ಜೈನ ಧರ್ಮದ ಆರಾಧ್ಯ ದೇವರಾದ ಗೊಮ್ಮಟೇಶ್ವರ ಸ್ವಾಮಿಯ ಬಗ್ಗೆ ಅಶ್ಲೀಲ ಮತ್ತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಮುಸ್ಲಿಂ ಮುಖಂಡ ಆಯೂಬ್ ಖಾನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಧರ್ಮಸ್ಥಳದ ಶ್ರೀ ಬಾಹುಬಲಿ ಸೇವಾ ಸಮಿತಿ ಪೊಲೀಸರಿಗೆ ದೂರು ಸಲ್ಲಿಸಿದೆ.
ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಮತಿ ವಿಕಲರಿಗೆ ಸರಿಯಾದ ಪಾಠ ಕಲಿಸುವಂತೆ ಸಮಿತಿಯ ಪದಾಧಿಕಾರಿಗಳು ಪೊಲೀಸರಿಗೆ ಆಗ್ರಹಿಸಿದ್ದಾರೆ.
ಸಮಿತಿಯು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪ್ರಕಟಣೆಯ ವಿವರ ಇಂತಿದೆ:
ಜೈನ ಧರ್ಮದ ಆರಾಧ್ಯ ದೇವರಾದ ಗೊಮಟೇಶ್ವರ ಸ್ವಾಮಿಯ ಬಗ್ಗೆ ಅಶ್ಲೀಲ, ಅವಹೇಳನಕಾರಿಯಾಗಿ ಸಂದರ್ಶನವೊಂದರಲ್ಲಿ ಆಯೂಬ್ ಖಾನ್ ಹೇಳಿಕೆ ನೀಡಿದ್ದು ಜೈನ ಧರ್ಮದ ಧಾರ್ಮಿಕ ಭಾವನೆಗಳಿಗೆ ನೋವು ಉಂಟಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉಳಿದ ಸಮುದಾಯಗಳಂತೆ ಜೈನಧರ್ಮವು ಧಾರ್ಮಿಕ ಪರಂಪರೆ ಹಾಗೂ ಭಗವಾನ್ ಮಹಾವೀರರ ವಾಣಿಯಂತೆ ಬದುಕು ಮತ್ತು ಬದುಕಲು ಬಿಡು ಎನ್ನುವ ತತ್ವ-ಸಿದ್ಧಾಂತ ದೊಂದಿಗೆ ಎಲ್ಲಾ ಧರ್ಮದವರೊಂದಿಗೆ ಸಾಮರಸ್ಯದಿಂದ ಬಾಳುತ್ತಿರುವ ಆಹಿಂಸಾಮಯ ಜೈನ ಧರ್ಮವಾಗಿದೆ. ಜೈನ ಧರ್ಮದ ಭಗವಾನ್ ಬಾಹುಬಲಿಯ ಸಂದೇಶಗಳ ಆದ ಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ, ಮೈತ್ರಿಯಿಂದ ಪ್ರಗತಿ, ಧ್ಯಾನದಿಂದ ಸಿದ್ದಿ, ಎಂಬುದು ಜಗತ್ತಿಗೆ ಶಾಂತಿ ನೆಮ್ಮದಿಯನ್ನು ತಂದಿರುವಂತಹದ್ದು. ದಿನಾಂಕ 8. 2 .22 ರಂದು ಅಯೂಬ್ ಖಾನ್, ಅಶ್ಲೀಲ, ದುರುದ್ದೇಶ ಹೇಳಿಕೆ ನೀಡುವ ಮೂಲಕ ಜೈನ ಸಮಾಜದ ಭಾವನೆಗಳಿಗೆ ನೋವುಂಟು ಮಾಡಿದೆ ಮತ್ತು ಧರ್ಮ-ಧರ್ಮಗಳ ನಡುವೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡುವ ಸಮಾಜದ ಸ್ವಾಸ್ಥ್ಯ ಕದಡುವ ಹೇಳಿಕೆ ನೀಡಿರುವ ಅಯೂಬ್ ಖಾನ್, ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಮುಂದೆ ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಮತಿ ವಿಕಲ್ಪರಿಗೆ ಇದೊಂದು ಪಾಠವಾಗಬೇಕಿದೆ.
ಈ ಬಗ್ಗೆ ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಶ್ರೀ ಬಾಹುಬಲಿ ಸ್ವಾಮಿ ಸೇವಾ ಸಮಿತಿಯ ವತಿಯಿಂದ ದೂರು ನೀಡಲಾಗಿದೆ. ಈ ಸಂದರ್ಭದಲ್ಲಿ ಮಹಾವೀರ ಅಜ್ರಿ, ಉದಯ ಜೈನ್, ಪದ್ಮಪ್ರಸಾದ್, ಮಲ್ಲಿನಾಥ ಜೈನ್, ಹರ್ಷಿತ್ ಜೈನ್, ರಾಜೇಂದ್ರ ಶೆಟ್ಟಿ, ಅಕ್ಷಯ್ ಜೈನ್, ಮಲ್ಲಿಕ್ ಜೈನ್, ನಾಗರಾಜ್ ಉಪಸ್ಥಿತರಿದ್ದರು.