|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ದೇವಲೋಕದ ಅಮೃತ ಮಾರುವ ಖದೀಮರಿದ್ದಾರೆ ಎಚ್ಚರ..!

ದೇವಲೋಕದ ಅಮೃತ ಮಾರುವ ಖದೀಮರಿದ್ದಾರೆ ಎಚ್ಚರ..!


ಮೊನ್ನೆ ಕ್ಲಿನಿಕ್ ಅಲ್ಲಿ ರೋಗಿಯೊಬ್ಬರನ್ನು ಪರೀಕ್ಷಿಸುತ್ತಿದ್ದೆ. ಆತ ಉದ್ವೇಗದಿಂದ ನನ್ನಲ್ಲಿ ಕೇಳಿದ್ದ. ಸಾರ್ ನಾನೀಗ ಅರಾಮ್ ಇದ್ದೇನೆ. ಸರ್ ಹಕ್ಕಿಯಂತೆ ಹಾರಾಡುವ ಅನುಭವ ಅಗುತ್ತಿದೆ, ಬಿಪಿ ಶುಗರ್ ಎಲ್ಲ ಕಡಿಮೆ ಆಗುತ್ತಿರುವ ಅನುಭವ ಆಗುತ್ತಿದೆ. ಒಟ್ಟಿನಲ್ಲಿ ನಾನು ದಿನದಿಂದ ದಿನಕ್ಕೆ ಅರೋಗ್ಯವಂತನಾಗುತ್ತಿದ್ದೇನೆ. ಎಲ್ಲ ಆ ಸಂಜೀವಿನಿ ಪೇಯದ ಮಹಿಮೆ ಸರ್ ಎಂದ. ಆತನ ಉದ್ವೇಗ ವನ್ನು ಗಮನಿಸಿದೆ. ಮಾತಲ್ಲಿ ಉದ್ವೇಗವಿತ್ತು. ಅದು ಯಾರೋ ತಲೆಯೊಳಗೆ ಫೀಡ್ ಮಾಡಿಟ್ಟ ಡೈಲಾಗ್ ಗಳು ಎಂದು ಅನ್ನಿಸಿತ್ತು ನಂಗೆ. ಯಾಕೆಂದರೆ ನಾನು ಒಬ್ಸರ್ವ್ ಮಾಡಿದಂತೆ ಅವನ ಬಿಪಿ, ಶುಗರ್ ಆಗಲಿ ಅಥವಾ ಯಾವುದೇ ದೈಹಿಕ ಬದಲಾವಣೆಗಳಿರಲಿಲ್ಲ. ಕೇವಲ ಮಾನಸಿಕ ವಾಗಿ ಬದಲಾಗಿದ್ದ. ಯಾರದ್ದೋ ಸಮ್ಮೋಹನ ಶಕ್ತಿಗೆ ಬಂದಿಯಾಗಿದ್ದ.


ಅವನ ಕೊನೆಯ ವಾಕ್ಯ ನನ್ನ ಸಂಶೋಧನೆಗೆ ಇಂಬು ಕೊಟ್ಟಿತು. ಸಂಜೀವಿನಿ ಪೇಯ. ಅದರ ಬಗ್ಗೆ ತಿಳಿಯ ಬೇಕಿತ್ತು ನನಗೆ. ಅದೇನು ಸಂಜೀವಿನಿ ಪೇಯ? ನನ್ನ ಪ್ರಶ್ನೆ ನೇರ ಟಾರ್ಗೆಟ್ ಗೆ ಇತ್ತು. ಆತನಲ್ಲಿ ಇನ್ನಷ್ಟು ತುಡಿತ, ಉದ್ವೇಗ ವಿತ್ತು ಸರ್ ಇದೊಂದು ದೇವಲೋಕದ ಅಮೃತ ಹಿಮಾಲಯ ದಲ್ಲಿ ಮಾತ್ರ ವರ್ಷಕ್ಕೊಮ್ಮೆ ಸಿಕ್ಕುವ ಅತಿ ವಿಶಿಷ್ಟ ಜಾತಿಯ ಹಣ್ಣಿನ ಜ್ಯೂಸ್ ಸರ್ ಇದು ಪುಣ್ಯಾತ್ಮ ರೊಬ್ಬರು ಕೊಟ್ಟಿದ್ದಾರೆ. ಅಂದಿನಿಂದ ನನ್ನಲ್ಲಿ ಹೊಸ ಹುಮ್ಮಸ್ಸು ಬಂದಿದೆ ಎಂದಾಗ ಅದರ ಬಗ್ಗೆ ತಿಳಿದು ಕೊಳ್ಳುವುದು ಅನಿವಾರ್ಯವಾಗಿತ್ತು ನನಗೆ.

ಅದೇನು? ಎಂದೆ. ಮೊಬೈಲ್ಅಲ್ಲಿ ಅದರ ಫೋಟೋ ತೋರಿಸಿದ. ಸುಂದರ ಬಾಟಲಿ ಒಂದರ ಒಳಗೆ ಇತ್ತು ಈ ಅಮೃತ ಬಾಟಲಿ ತುಂಬಾ ಅದ್ಭುತವಾಗಿ ಕಾಣುತ್ತಿತ್ತು. ರೇಟ್ ನೋಡಿದೆ ತಲೆ ತಿರುಗಿತು. ಕಣ್ಣು ಉಜ್ಜಿ  ನೋಡಿಕೊಂಡೆ, ನಿಜಕ್ಕೂ ದೇವಲೋಕದ ಅಮೃತವೇ ಇರಬಹುದೋ ಏನೋ! 12,750 ರೂ. 700 ml ಗೆ


ಬಾಟಲಿ ಯನ್ನು ಸೂಕ್ಷ್ಮ ವಾಗಿ ಗಮನಿಸಿದೆ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ಬಾಂಬೆಯದ್ದು. ಅದರ   ಇನ್ಗ್ರಾಡಿಯೆಂಟ್ ನೋಡಿದೆ ಚಿಕ್ಕ ಅಕ್ಷರಗಳಲ್ಲಿ ಬರೆದಿತ್ತು. ಅದು ಶುಗರ್ ಬೇಸ್ಡ್ ನೇರಳೆ ಹಣ್ಣಿನರ್ಬತ್‼️ ಆ ನೇರಳೆ ಹಣ್ಣಿನ 750ml ಅದೇ ಶರ್ಬತ್ ಅಂಗಡಿಯಲ್ಲಿ 135 ರೂ ಸಿಗುತ್ತಿತ್ತು ಇಲ್ಲಿ MRP 12000. ಒಮ್ಮೆ ತಲೆ ಸುತ್ತಿತ್ತು ನನಗೆ.


200 ರೂ ಔಷಧ ಕೊಟ್ಟರೂ ಅದಕ್ಕೆ ಪರ್ಯಾಯ ಕಮ್ಮಿ ಹಣದ ಔಷಧ ಹುಡುಕುವ ಮಂದಿ ಇರುವಾಗ, 130 ರೂ ಯ ನೇರಳೆ ಹಣ್ಣಿನ ಶರ್ಬತ್ ಅನ್ನು 12000 ದ ಔಷಧಿ ಖರೀದಿಸುವಂತೆ  ಮಾಡುವ ಇಂತಹ, ಅಮೃತ ಮಾರುವ ಮಂದಿಯನ್ನು ಮೀಟ್ ಆಗಲೇ ಬೇಕೆಂದು ನಿರ್ಧರಿಸಿ ಅವರಲ್ಲಿ ಆ ಔಷದಿ ಕೊಟ್ಟ ಪುಣ್ಯಾತ್ಮನ ನಂಬರ್ ಕೇಳಿದೆ. ಸರ್ ನಾಳೆ ಅವನನ್ನ ನಿಮ್ಮ ಕ್ಲಿನಿಕ್ ಗೆ ಕರ್ಕೊಂಡು ಬಂದು ಲೈವ್ ಡೆಮೋ  ಕೊಡಿಸುತ್ತೇನೆ ಎಂದಾಗ ಸಂತೋಷದಿಂದ ಒಪ್ಪಿಕೊಂಡೆ ಆ ಮಾತಲ್ಲೇ ಅರಮನೆ ಕಟ್ಟುವ ಮಂದಿಯನ್ನೊಮ್ಮೆ ನೋಡಬೇಕಿತ್ತು ನನಗೆ.


ಮಾರನೆಯ ದಿನವೇ ಆತ ಆ ಅಮೃತ ಮಾರುವ ಏಜೆಂಟರನ್ನು ಕರೆದು ತಂದಿದ್ದ. ತಮ್ಮ ಕೋಟು ಟೈ ಜೊತೆಗೆ laptop ಬೇರೆ. ಮೊದಲು ಇಂಗ್ಲಿಷ್ ನಲ್ಲಿ ಮಾತಾಡಿ ಪರಿಚಯ ಮಾಡಿಕೊಂಡಿದ್ದ. ನಂತರ ಅವನ ನೆಟ್ವರ್ಕ್ ಮಾರ್ಕೆಟ್ ಬಿಸಿನೆಸ್, ಅದರ ಲಾಭ, ಪ್ರಪಂಚದ ಕೋಟಿಪತಿಗಳು ಇರುವ ಏಕ ಮಾತ್ರ ಬಿಸಿನೆಸ್ ಎಂದೂ ಇವನ ಬಿಲ್ಡ್ ಅಪ್ ನೋಡುತ್ತಿದ್ದರೆ, ಬಿಲ್ ಗೇಟ್ಸ್ ಬಿಟ್ಟರೆ ಮುಂದಿನ ಕೊಟ್ಯಾದಿ ಪತಿ ಇವನೇ ಇರಬೇಕೆಂದೆನಿಸಿದ್ದೆ ನಾನು. ಆದರೆ ಹೊರಗೆ ಇಟ್ಟಿದ್ದ ಅವನ 100 ರೂಗಳ ಸ್ಲಿಪ್ಪರ್ ಹೇಳುತಿತ್ತು ಈತನನ್ನು ಯಾರೋ ಬ್ರೈನ್‌ವಾಶ್ ಮಾಡಿ ಕಳುಹಿಸಿದ್ದಾರೆ ನನ್ನ ಬ್ರೈನ್ ವಾಶ್ ಮಾಡಲು ಎಂದು.


ಮತ್ತೆ ನಾನಂದೆ ನಾನು ಕೆಲವು ದಿನದ ನಂತರ ಹೇಳುತ್ತೇನೆ ಎಂದು. ಹಾಗೆ ನನ್ನನ್ನು ಅವರ ತಿಂಗಳ ಮೀಟಿಂಗ್ ಗೆ ಬರುವಂತೆಯೂ, ಅಲ್ಲಿ ಈ ಅಮೃತ ಸೇವನೆಯಿಂದ ಗುಣಮುಖರಾದ ಹಲವಾರು ಜನರೊಂದಿಗೆ ಸಂದಿಸಬಹುದು ಎಂದೂ, ಹೇಳಿ ಮೀಟಿಂಗ್ ನ ಸಮಯದೊಂದಿಗೆ ಸಮೀಪದ 3 ಸ್ಟಾರ್ ಹೋಟೆಲ್ ನ ವಿಳಾಸವೂ ಕೊಟ್ಟು ಅಂದು ಬರಲು ತಿಳಿಸಲಾಯಿತು. ನನಗೆ ಇವರ ಥಿಯರಿ ತಿಳಿಯುವ ಆಸಕ್ತಿ ಹೆಚ್ಚಿದ್ದರಿಂದ ಇವರ ಮೀಟಿಂಗ್ ಅಟೆಂಡ್ ಮಾಡಲೇಬೇಕೆಂದು ನಿರ್ಧರಿಸಿದ್ದೆ.


ಅದು ನಗರದ ಪ್ರಸಿದ್ಧ ಹೋಟೆಲ್ ಅತ್ಯುತ್ತಮವಾದ ವೇದಿಕೆಯಲ್ಲಿ ಒಂದಷ್ಟು ಜನರಿದ್ದರು. ಕಾರ್ಯಕ್ರಮ ನಿರ್ವಾಹಕ ಕ್ರಿಕೆಟ್ ಕಾಮೆಂಟರಿಯಂತೆ ಕಂಪೆನಿ ಬಗ್ಗೆ ಹೇಳುತ್ತಿದ್ದ. ತಮ್ಮ ಕಂಪೆನಿಯೇ ನಂಬರ್ 1, ದೇಶದಲ್ಲಿ ಲಾಕ್ ಪತಿ, ಕೋಟ್ಯಾಧಿಪತಿಗಳನ್ನೂ ಸೃಸ್ಟಿಸಿದ್ದು ಅದೆಷ್ಟೋ ಜನರಿಗೆ ಕಾರುಗಳನ್ನೂ ಕೊಟ್ಟದ್ದು ತಮ್ಮ ಸಾಧನೆ ಎಂಬಂತೆ ಬಿಂಬಿಸಲಾಗಿತ್ತು. ಅಲ್ಲಿ ಕಾಯಿಲೆಯಿಂದ ಗುಣಮುಖರಾದವರ ಭಾಷಣ ಅದ್ಬುತವಾಗಿತ್ತು. ಅಲ್ಲಿ ಒಮ್ಮೆ ಒಳಗೆ ಬಂದನೆಂದರೆ ಹೊರ ಹೋದ ಮೇಲೂ ಆ ಕಾರ್ಯಕ್ರಮ ನಿರ್ವಾಹಕನ ಧ್ವನಿ ನಮ್ಮೊಳಗೇ ಇದ್ದು ಬಿಡುತ್ತಿತ್ತು. ಒಳಗೆ ಬಂದವರಲ್ಲಿ 60% ಗೂ ಅಧಿಕ ಜನರನ್ನು ಮಂಗ ಮಾಡುವುದರಲ್ಲಿ  ಕಂಪೆನಿ ಯಶಸ್ಸಾಗಿತ್ತು.


ಮತ್ತೆ ಸುಮಾರು 4 ವಾರಗಳ ಕಾಲ ನಿರಂತರ ಕಾಲ್ ಮಾಡಿ ಪೀಡಿಸಲಾಗುತ್ತದೆ. ಅಷ್ಟರಲ್ಲಿ ಇವುಗಳ ಸೀಕ್ರೆಟ್ ಸ್ಪಷ್ಟವಾಗಿತ್ತು.

 

🔴 ಮೊದಲನೆಯದಾಗಿ ಆಯುರ್ವೇದ ದ ಶಕ್ತಿದಾಯಕ,  ಅಡ್ಡ ಪರಿಣಾಮವಿಲ್ಲದ ಔಷಧಗಳು ಇವರ ಟಾರ್ಗೆಟ್ ಗಳಾಗಿರುತ್ತದೆ..

🔴 100,120 ರೂಪಾಯಿಗೆ ಸಿಗುವ ಅಮೃತ ಬಳ್ಳಿ, ನೋನಿ, ನೇರಳೆ, ಅಮಲಕಿ, ಜ್ಯೂಸುಗಳನ್ನೂ ಅತ್ಯಾಕರ್ಷಕ ಪ್ಯಾಕ್‌ಗಳಲ್ಲಿ ಮಾರಲಾಗುತ್ತದೆ.

🔴 100 ರೂ ಯಾ ಅದೇ ಜ್ಯೂಸ್‌ಗೆ 10 ಪಟ್ಟು (1000), 100 ಪಟ್ಟು (10000) ಅದಕ್ಕಿಂತಲೂ ಹೆಚ್ಚು MRP  ಹಾಕ ಲಾಗುತ್ತದೆ.

🔴 ಆದರಲ್ಲಿ 50%  ಅನ್ನು ಕಂಪೆನಿ, ಕಮಿಷನ್‌ಗೆ, ಪ್ರಚಾರಕ್ಕೆ (ಜನರನ್ನು ಮಂಗ ಮಾಡಲು) ಖರ್ಚು ಮಾಡಲಾಗುತ್ತಿತ್ತು.

🔴 ಉಳಿದ 50%  ನೇರ ಕಂಪೆನಿ ಯಾ ಹೆಸರಲ್ಲಿ ವಂಚಕರ ಪಾಲಾಗುತ್ತಿತ್ತು. (ಅಂದರೆ 12000 ರೂಯಲ್ಲಿ ಬರೋಬ್ಬರಿ 6000 ರೂ).

🔴 ಅದರ ನಂತರ ಇವರು ಬಿಸಾಡುವ  50%  ಹಣ ಹೆಕ್ಕಲು  ತಂಡ ತಯಾರು  ಮಾಡಿರುತ್ತಾರೆ ..ಅದರಲ್ಲಿ ರಾಜ ಜಾಸ್ತಿ ತಿಂದರೆ, ಮಂತ್ರಿ ನಂತರ, ಸೈನಿಕರು ನಂತರ ತಿನ್ನು ತಿರುತ್ತಾರೆ. ಕೊನೆಗೆ ಜನಗಳು ತಮ್ಮ ಹಣ ಕಳೆದುಕೊಂಡಿರುತ್ತಾರೆ. ಅವರೆಲ್ಲರ ಒಟ್ಟು ಟಾರ್ಗೆಟ್ ಜನರನ್ನು ಮಂಗ ಮಾಡುವುದಷ್ಟೇ ಆಗಿರುತ್ತದೆ.

🔴 ಕೋಟಿ,ಕಾರು ತೋರಿಸಿ ಕನಸು ಕಂಡಿರುವ ಸಾಮಾನ್ಯ ಜನ ಅಷ್ಟರಲ್ಲೇ 10, 12 ಸಾವಿರ ಕಳೆದು  ಕೊಂಡಿರುತ್ತಾರೆ. 


🔴 ಹೇಗೆ ಮಂಗ ಮಾಡಬೇಕೆಂದು ಹೇಳಿಕೊಡಲು ಈ ಮೀಟಿಂಗ್ ನಡೆಸುತ್ತಾರೆ. 50%ಅಲ್ಲಿ ಎಲ್ಲ ವ್ಯವಸ್ಥಿತವಾಗಿ ಆಗಿರುತ್ತದೆ.


ನೆನಪಿಡಿ ಇಂತಹ ಸುಮಾರು 10 ರಿಂದ 15 ದೇವಲೋಕದ ಅಮೃತ ಮಾರುವ ಖದೀಮರು ನೆಟ್ವರ್ಕ್  ಮಾರ್ಕೆಟ್ ಎಂಬ ಹೆಸರಿನಡಿ ನಮ್ಮ ನಿಮ್ಮ ಸುತ್ತ ಮುತ್ತ ತಿರುಗುತ್ತಿದ್ದಾರೆ. ಈಗಾಗಲೇ 4 ಜನಕ್ಕೆ ಕಾರು ಕೊಟ್ಟು 4 ಸಾವಿರ ಮಂದಿಯ ಮನೆ ಮಠ ತಿಂದ ಅಗ್ರಿ ಗೋಲ್ಡ್, ಸ್ಪೀಕ್ ಏಷ್ಯಾ ದಂತಹ ಡೋಂಗಿ ಕಂಪನಿ ಗಳು ನಮ್ಮ ಕಣ್ಣ ಮುಂದೆ ಇರುವಾಗ ಈ ಕಪಟಿಗಳ ಮಾತು ನಂಬಿ ನಿಮ್ಮ ಅಮೂಲ್ಯ ಹಣ ಕಳೆದುಕೊಳ್ಳುವ ಮುನ್ನ 100 ಬಾರಿ ಯೋಚಿಸಿ.


ಕಂಪೆನಿ ನಮಗೆ ಕಾರ್ ಕೊಡುತ್ತಿದೆ ಎಂದರೆ ನಮ್ಮಿಂದ ಕಂಪೆನಿ ವಿಮಾನವನ್ನೇ ಕೊಂಡುಕೊಂಡಿರುತ್ತದೆ. ಹಾಗಾಗಿ ಅವರ ಉದ್ದೇಶ ನಿಮ್ಮನ್ನು ಉದ್ದಾರ ಮಾಡುವುದಂತೂ ಅಲ್ಲವೇ ಅಲ್ಲ. ಇನ್ನು ಸ್ವದೇಶೀ ಎಂಬ ಹೆಸರಿನೊಂದಿಗೆ ದೇವಲೋಕದ ಅಮೃತ ಮಾರುವ ಖದೀಮರು ನಿಮ್ಮ ಮನೆ ಬಾಗಿಲಿಗೂ ಬರಬಹುದು.


ಹಗಲು ಕಂಡ ಬಾವಿಗೆ ರಾತ್ರಿ ಹೋಗಿ ಬೀಳುವ ಮೊದಲು ಎಚ್ಚರ ಎಚ್ಚರ ಎಚ್ಚರ.


-ಡಾ.ಶಶಿಕಿರಣ್ ಶೆಟ್ಟಿ, ಉಡುಪಿ

9945130630


ಸತ್ಯ ಯಾವತ್ತಿದ್ದರೂ ಸತ್ಯವೇ ಅಲ್ಲವೇ? ಸತ್ಯ ಬರೆಯುವವರು ಗೊಡ್ಡು ಬೆದರಿಕೆಗಳಿಗೆ ಜಗ್ಗಲಾರರು ನೆನಪಿಡಿ. ನನ್ನ ವರ್ಷದ ಹಿಂದಿನ ವೈರಲ್ ಆದ ಲೇಖನ. ಇದಕ್ಕೆ ಅದೆಷ್ಟೋ ಫ್ಯಾನ್ ಗಳು ಹಾಗೆ ವಿರೋಧಿಗಳು (ನೆಟವರ್ಕ್ ಮಾರ್ಕೆಟ್ ಮಂದಿ) ಹುಟ್ಟಿಕೊಂಡಿದ್ದು ಇಂದಿಗೂ ಕೆಲವು ಅತಿಬುದ್ದಿವಂತ ಮಂದಿ ಕಾಲ್ ಮಾಡಿ ನನ್ನನ್ನು ವಿಚಾರಿಸುವ ಜನರಿದ್ದಾರೆ. -ಡಾ. ಶಶಿಕಿರಣ್ ಶೆಟ್ಟಿ.

0 Comments

Post a Comment

Post a Comment (0)

Previous Post Next Post