ಸ್ವಾತಂತ್ರ್ಯ, ಪ್ರಜಾಪ್ರಭುತ್ವವನ್ನು ಅರ್ಥಮಾಡಿಕೊಂಡರೆ ಸಾರ್ಥಕತೆ: ಡಾ. ಲಕ್ಷ್ಮೀನಾರಾಯಣ ಭಟ್ಟ ಹೆಚ್. ಆರ್
ಮಂಗಳೂರು: ಸಮುದ್ರದ ಜಲರಾಶಿಯಂತೆ ಮಾಹಿತಿ, ಅಭಿಪ್ರಾಯಗಳು ನಮ್ಮೆಡೆಗೆ ಹರಿದುಬರುತ್ತವೆ. ಅವನ್ನು ಸೋಸಿ ಬೇಕಾಗಿರುವುದನ್ನು ಮಾತ್ರ ಬಳಸಿಕೊಳ್ಳುವುದು ನಿಜವಾದ ಸವಾಲು. ಸ್ವಾತಂತ್ರ್ಯ, ಪ್ರಜಾಪ್ರಭುತ್ವದಂತಹ ವಿಚಾರಗಳನ್ನೂ ಅರ್ಥಮಾಡಿಕೊಂಡು, ಪಾಲಿಸುವಾಗ ನಾವು ಎಡವಬಾರದು, ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಲಕ್ಷ್ಮೀನಾರಾಯಣ ಭಟ್ಟ ಹೆಚ್. ಆರ್ ಅಭಿಪ್ರಾಯಪಟ್ಟರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಬುಧವಾರ ನಡೆದ 73ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನಡೆಸಿ, ಎನ್ಸಿಸಿ ಕೆಡೆಟ್ಗಳಿಂದ ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ಅವರು, ಇಂತಹ ವಿಚಾರಗಳನ್ನು ಅರ್ಥಮಾಡಿಕೊಂಡಾಗ ಮಾತ್ರ ನಾವು ನಿಜವಾದ ಸ್ವಾತಂತ್ರ್ಯ ಅನುಭವಿಸುತ್ತೇವೆ, ಸಾರ್ಥಕತೆ ದೊರೆಯುತ್ತದೆ, ಎಂದು ಸೂಚ್ಯವಾಗಿ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಅನಸೂಯ ರೈ, ನಮಗೆ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ವ್ಯವಸ್ಥೆ ತಂದುಕೊಟ್ಟವರನ್ನು ಸದಾ ನೆನೆಯೋಣ, ನಮನಗಳನ್ನು ಸಲ್ಲಿಸೋಣ, ಎಂದರು.
ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಲತಾ ಎ. ಪಂಡಿತ್ ಅತಿಥಿಗಳನ್ನು ಸ್ವಾಗತಿಸಿದರು. ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ. ಕುಮಾರಸ್ವಾಮಿ ಎಂ. ಕಾರ್ಯಕ್ರಮ ನಿರೂಪಿಸಿದರು. ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ, ಪೂರ್ವತನ ಪ್ರಾಂಶುಪಾಲ ಡಾ. ಉದಯಕುಮಾರ್ ಎಂ.ಎ ಇರ್ವತ್ತೂರು, ವಿದ್ಯಾರ್ಥಿ ಸಂಘದ ಉಪನಿರ್ದೇಶಕ ಡಾ. ಹರೀಶ್ ಎಂ, ಎನ್.ಸಿ.ಸಿ ನೌಕಾದಳ ಅಧಿಕಾರಿ ಡಾ. ಯತೀಶ್ ಕುಮಾರ್, ಭೂದಳದ ಡಾ. ಜಯರಾಜ್ ಎನ್, ಕ್ರೀಡಾ ವಿಭಾಗದ ಮುಖ್ಯಸ್ಥ ಡಾ. ಕೇಶವಮೂರ್ತಿ, ಎನ್.ಎಸ್.ಎಸ್ ಅಧಿಕಾರಿಗಳಾದ ಡಾ. ಸುರೇಶ್, ಡಾ. ಗಾಯತ್ರಿ ಎನ್ ಮೊದಲಾದವರು ಉಪಸ್ಥಿತರಿದ್ದರು.
ಕೊವಿಡ್ ಲಸಿಕಾ ಅಭಿಯಾನ:
ಗಣರಾಜ್ಯೋತ್ಸವದ ಭಾಗವಾಗಿ ವಿವಿ ಕಾಲೇಜಿನ ಯುವ ರೆಡ್ ಕ್ರಾಸ್ ವತಿಯಿಂದ 15 ರಿಂದ 18 ವರ್ಷ ವಯಸ್ಸಿನೊಳಗಿನ ವಿದ್ಯಾರ್ಥಿಗಳಿಗೆ ಕೊವಿಡ್ ಲಸಿಕೆಯ ಮೊದಲ ಡೋಸ್ ಅನ್ನು ಉಚಿತವಾಗಿ ಕೊಡಲಾಯಿತು. ಪ್ರಾಂಶುಪಾಲರು, ಯುವ ರೆಡ್ ಕ್ರಾಸ್ ಅಧಿಕಾರಿ ಡಾ. ಕುಮಾರಸ್ವಾಮಿ ಎಂ. ಮತ್ತು ಸ್ವಯಂಸೇವಕರು ಹಾಜರಿದ್ದರು. ಸುಮಾರು 95 ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ