ಸಿಡಿಲ ಸಂತ ಸ್ವಾಮಿ ವಿವೇಕಾನಂದರಿಗೆ ನುಡಿ ನಮನ
ಏಳಿ ಎದ್ದೇಳಿ ಕೆಚ್ಚೆದೆಯ ಕುವರರೇ
ಜಡನಿದ್ದೆ ಸಾಕಿನ್ನು ಎಚ್ಚೆತ್ತು ಬನ್ನಿ
ಕೇಳಿರೆಲ್ಲರು ಈಗ ತಾಯ ಮಕ್ಕಳು ನಾವು
ಪೊಡಮಡುತ ಸೇವೆಗಣಿಯಾಗೋಣ ಬನ್ನಿ||೧||
ಸಂಘರ್ಷ ಸಂತಾಪ ಮಾಡದೆಯೆ ಸಾಗುತಿರೆ
ಭಂಗವಿರೆ ನಡೆಯುತಿಹ ಹಾದಿಯೆಡೆಗೆ
ಹೊಂಗನಸ ಬಿತ್ತುತ್ತ ಹೃದಯವನು ಕೂಡಿಸುತ
ಹಂಗಿರದ ಬಾಳುವೆಯ ಸತ್ಪಥದಕಡೆಗೆ ||೨||
ನಾಯಕನ ನುಡಿಗೆಂದು ಕಾಯದಿರು ನೀನೆಂದು
ನ್ಯಾಯ ಹಾದಿಯನರಸಿ ನೀ ಸಾಗು ಮುಂದೆ
ಜಾಯಮಾನದ ಗುಣವ ಮೆಚ್ಚಲದು ಬಹುಮಂದಿ
ಕಾಯುತಿಹ ಕರೆಯನ್ನು ಸ್ವೀಕರಿಸುತ||೩||
ನೂರಾರು ವರುಷಗಳು ಸಂದಿಹುದು ದಾಸ್ಯದಲಿ
ಬೇರೂರಿ ಬಿಟ್ಟಿಹುದು ಅಂಧಕಾರದ ಕಡಲು
ಪಾರು ಮಾಡಲೇ ಬೇಕು ಬನ್ನಿರೈ ಸೋದರರೇ
ಸೇರುತ್ತ ಎಲ್ಲರೂ ಭಾರತಾಂಬೆಯ ಮಡಿಲು ||೪||
ಸಿಡಿಲಬ್ಬರದ ಮಾತು ಕಣ್ಣ ಕೋಲ್ಮಿಂಚು
ಬಡಿದೆಚ್ಚರಿಸಿ ಬೆಳಕು ಪ್ರವಹಿಸುತಿರಲು
ಅಡಿಗೆರಗಿ ಧಾವಿಸುತ ನಿಂದರು ಕೈಜೋಡಿಸಿ
ನುಡಿದಂತೆ ನಡೆಯುತ್ತ ಮಾತೆ ಭಾರತಿಯ ಪೊರೆಯಲು||೫||
- ಲಕ್ಷ್ಮೀ ವಿ ಭಟ್
ತಲಂಜೇರಿ, ಮಂಜೇಶ್ವರ
ಕಾಸರಗೋಡು
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ