ಮಂಗಳೂರು: ಕಾಸರಗೋಡಿನ ಹಿರಿಯ ಸಮಾಜಸೇವಕ, ಸೇವಾ ದುರಂಧರ ಕಿಳಿಂಗಾರು ಸಾಯಿರಾಂ ಗೋಪಾಲಕೃಷ್ಣ ಭಟ್ ಅವರಿಗೆ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಇಂದು ಸಂಜೆ ಸಾರ್ವಜನಿಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷರಾದ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತ, ದಿವಂಗತ ಸಾಯಿರಾಂ ಭಟ್ ಅವರ ಜೊತೆಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡರು.
ತಮ್ಮ ಸ್ವಂತ ಜಾಗದಲ್ಲೇ ಹಲವರಿಗೆ ಉಚಿತ ಮನೆಗಳನ್ನು ಕಟ್ಟಿಸಿಕೊಟ್ಟು ಅದರ ಹಕ್ಕುಪತ್ರಗಳನ್ನೂ ಒದಗಿಸಿಕೊಟ್ಟಿರುವ ಸಾಯಿರಾಂ ಭಟ್ಟರು, 260ಕ್ಕೂ ಹೆಚ್ಚು ಬಡವರಿಗೆ ಉಚಿತ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಯಾವುದೇ ಜಾತಿ-ಮತ ಭೇದವಿಲ್ಲದೆ ಬಡವರಿಗೆ, ದೀನರಿಗೆ ನೆರವಾಗುತ್ತಿದ್ದ ಅವರಲ್ಲಿ ಅಹಂಕಾರದ ಲವಲೇಶವೂ ಇರಲಿಲ್ಲ. ಕಷ್ಟಗಳನ್ನು ಹೇಳಿಕೊಂಡು ಬಂದವರಿಗೆ ಅವರು ಆಡುತ್ತಿದ್ದ ಸಾಂತ್ವನದ ನುಡಿಗಳೇ ಚೈತನ್ಯದಾಯಕವಾಗಿರುತ್ತಿದ್ದವು. ಅತ್ಯಂತ ಸಾತ್ವಿಕ, ದೈವಾಂಶ ಸಂಭೂತ ವ್ಯಕ್ತಿತ್ವದ ಸಾಯಿರಾಂ ಭಟ್ಟರ ಅಗಲಿಕೆ ಸಮಾಜಕ್ಕೆ ಆಗಿರುವ ತುಂಬಲಾರದ ನಷ್ಟ ಎಂದು ಕಲ್ಕೂರ ಅವರು ನುಡಿನಮನ ಸಲ್ಲಿಸಿದರು.
ಹಿರಿಯ ವಿದ್ವಾಂಸ, ಡಾ. ಎಂ ಪ್ರಭಾಕರ ಜೋಷಿ, ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಪ್ರೊ. ಎಂ.ಬಿ. ಪುರಾಣಿಕ್, ಜಿ.ಕೆ ಭಟ್ ಸೇರಾಜೆ, ಪ್ರಭಾಕರ ಪೇಜಾವರ, ಸುಧಾಕರ ಪೇಜಾವರ, ಶ್ರೀಕಾಂತ್ ನೆಟ್ಟಣಿಗೆ, ಭರತಾಂಜಲಿ ನೃತ್ಯ ಸಂಸ್ಥೆಯ ಶ್ರೀಧರ ಹೊಳ್ಳ, ವಿಷ್ಣು ಭಟ್, ಬಿ. ಸುಬ್ರಹ್ಮಣ್ಯ ಭಟ್, ಕೆ. ತಾರಾನಾಥ ಹೊಳ್ಳ, ಕೌಶಿಕ್ ಕಲ್ಲೂರಾಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಸಾಯಿರಾಂ ಭಟ್ಟರಿಗೆ ನುಡಿನಮನ ಸಲ್ಲಿಸಿದರು.