ಮೌಲ್ಯಗಳನ್ನು ವ್ಯಕ್ತಿಗಳ ಮನಸ್ಸಿನಲ್ಲಿ ಆಳವಾಗಿ ಬಿತ್ತುವುದರಲ್ಲಿ ಪುಸ್ತಕಗಳು ಮತ್ತು ಓದಿನ ಪಾತ್ರ ಬಹಳ ಮಹತ್ತರವಾದದ್ದು. ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮ ಎಂಬ ಮಾತನ್ನು ಸದಾ ನೆನಪಿಸಿಕೊಳ್ಳುತ್ತೇನೆ. ಪುಸ್ತಕವೆಂಬುದು ಜ್ಞಾನದ ಕಿಟಕಿ, ಕತ್ತಲ ಗವಿಯಲ್ಲಿ ಬೆಳಕಾಗಬಲ್ಲ ಶಕ್ತಿ ಇರುವಂತದ್ದು ಎಂದು ನನ್ನಲ್ಲಿರುವ ಒಂದು ನಂಬಿಕೆ.
"ನಿನ್ನ ಆಯ್ಕೆಯ ಪುಸ್ತಕ ಯಾವುದೆಂದು ನೀನು ಹೇಳಿದರೆ ನೀನು ಎಂತವನೆಂದು ನಾನು ಹೇಳುತ್ತೇನೆ", ಪುಸ್ತಕವೆಂಬುದು ಜ್ಞಾನದಾಹಿಯ ಸಂಗಾತಿ, ಅರಿವಿನ ಗುರಿಗೆ ಪುಸ್ತಕವೇ ಗುರು, ಎಂದೆಲ್ಲ ಪುಸ್ತಕಗಳ ಬಗ್ಗೆ ಅನೇಕಾನೇಕ ನುಡಿಮುತ್ತುಗಳು ಕಾಣಸಿಗುತ್ತವೆ.
ನನಗೆ ಬಾಲ್ಯದಿಂದಲೇ ಪುಸ್ತಕಗಳೆಂದರೆ ಅತಿಯಾದ ಹುಚ್ಚು. ನಾನು ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿ ಪುಸ್ತಕಗಳನ್ನು ಎಷ್ಟು ಇಷ್ಟ ಪಡುತ್ತಿದ್ದೆ ಎಂದರೆ, ನನ್ನ ಈ ಹುಚ್ಚಾಟವನ್ನು ನೋಡಿ ನೋಡಿ ಬೇಸತ್ತ ಅಪ್ಪ ಕೊನೆಗೆ ಪೇರೆಂಟ್ಸ್ ಮೀಟಿಂಗ್ನಲ್ಲಿ, ಟೀಚರ ಬಳಿ "ಇವಳಿಗೆ ಪುಸ್ತಕ ಕೊಡ್ಬೇಡಿ ಟೀಚರೆ.. ಕತೆ ಪುಸ್ತಕ ಮತ್ತೆ ಆ ಕಾದಂಬರಿ ಪುಸ್ತಕ ಓದ್ಲಿಕೆ ಶುರು ಮಾಡಿದ್ರೆ ಮತ್ತೆ ತಲೆ ಮೇಲೆ 'ಮಾಡು'(ಹಂಚು) ಬಿದ್ರೂಸ ಬೋದ ಇರುದಿಲ್ಲ (ಇದು ನಮ್ಮ ಕಾಸರಗೋಡಿನ ಕನ್ನಡದಲ್ಲಿ ಮಾತಾಡುವ ಶೈಲಿ, ದಕ್ಷಿಣ ಕನ್ನಡದಲ್ಲೂ ಹೆಚ್ಚು ಕಮ್ಮಿ ಇದೇ ಶೈಲಿಯಲ್ಲಿ ಮಾತನಾಡುತ್ತಾರೆ.)" ಎಂದರು. ಆಗ ನನ್ನ ಟೀಚರ್ "ಓ ಅದಕ್ಕೆ ಪರೀಕ್ಷೆಗೆ ಮಾರ್ಕೆ ಇಲ್ಲ ಅಲ್ಲ...!" ಎಂದು ಹುಬ್ಬು ಹಾರಿಸಿದರು.
ಅಪ್ಪ ಆ ರೀತಿ ಹೇಳಲು ಇನ್ನೊಂದು ಕಾರಣವೂ ಇದೆ, ನಾನು ಕಥೆ, ಕಾದಂಬರಿ, ಕವನ ಸಂಕಲನ, ನಗೆಹನಿಗಳು, ಇಂಥಹ ಪುಸ್ತಕಗಳನ್ನು ಓದಲು ಇಷ್ಟ ಪಡುತ್ತಿದೆ. ಪ್ರತಿಯೊಂದು ಪುಸ್ತಕವನ್ನು ಓದುವಾಗ ನನ್ನದೇ ಲೋಕದಲ್ಲಿ ತಲ್ಲೀನಳಾಗಿ ಬಿಡುತ್ತಿದೆ. ಯಾರು ಕರೆದರೂ, ನನ್ನ ಬಳಿ ಸುಳಿದರು ನನ್ನ ಅರಿವಿಗೆ ಬರುತ್ತಿರಲಿಲ್ಲ. ನಾನು ಓದುತ್ತಿರುವಾಗ ಅದರಲ್ಲಿ ಬರುವ ಪ್ರತಿಯೊಂದು ಪಾತ್ರಗಳು ನನ್ನ ಕಣ್ಣಮುಂದೆ ಬಂದು ಹೋಗುತ್ತಿದ್ದವು. ನಾನು ಆ ಕ್ಷಣಗಳನ್ನು ಮನಸಾರೆ ಆನಂದಿಸುತ್ತಿದ್ದೆ...ಸಂಭ್ರಮಿಸುತ್ತಿದೆ. ಪರೀಕ್ಷೆಯ ಸಮಯದಲ್ಲಿ ನಾನು ಪಠ್ಯ ಪುಸ್ತಕಗಳನ್ನು ಓದುತ್ತಿದ್ದದ್ದು ಬಹಳಾ ಕಮ್ಮಿ, ಹಾಗೆಂದು ಮನೆಯಲ್ಲಿ ಇದಕ್ಕೆ ಸಮ್ಮತಿ ನೀಡುತ್ತಿದ್ದರೆಂದಲ್ಲ...!!
ಕದ್ದು ಮುಚ್ಚಿ ಓದುತ್ತಿದ್ದೆ. ಅಮ್ಮ ಒತ್ತಾಯ ಪೂರ್ವಕವಾಗಿ ರೂಮಿನೊಳಗೆ ಕೂತು ಓದು ಎಂದು ಬಾಗಿಲು ಹಾಕಿ ಬಿಡುತ್ತಿದ್ದರು. ಯಾಕೆಂದರೆ ನನ್ನ ಗಮನ ಬೇರೆ ಕಡೆ ಹರಿಯಬಾರದು ಎಂಬ ಕಾರಣಕ್ಕೆ. ಆದರೆ ನಾನು ರಂಗೋಲಿಯ ಕೆಳಗೆ ನುಸುಳುವವಳು ನೋಡಿ....!!
ಹೇಗೋ ಕಥೆ, ಕಾದಂಬರಿ ಎಂಬೀ ಪುಸ್ತಕಗಳು ಪಠ್ಯ ಪುಸ್ತಕಗಳಿಗಿಂತ ಚಿಕ್ಕದು. ಪಠ್ಯ ಪುಸ್ತಕದ ಪುಟಗಳ ನಡುವೆ ಕಥೆ ಪುಸ್ತಕವನ್ನು ಇರಿಸಿ ಓದುತ್ತಿದ್ದದ್ದು ನನ್ನ ದಿನಚರಿ. ಅಮ್ಮ ಆಗೊಮ್ಮೆ, ಈಗೊಮ್ಮೆ ಬಂದು ಹೋಗಿ ಮಾಡುತ್ತಿದ್ದರು. ನಾನು ಓದುತ್ತಿದ್ದೇನೋ, ಅಥವಾ ಇನ್ನಾವುದೋ ಕಿತಾಪತಿ ಮಾಡುತ್ತಿದ್ದೇನೋ ಎಂದು ನೋಡಲು....!! ಆಗ ನಾನು ಪುಸ್ತಕದ ಪುಟಗಳನ್ನು ತಿರುಚಿ ಹಾಕಿ ಪಾಠವನ್ನು ಓದುತ್ತಿದ್ದವಳಂತೆ ನಾಟಕ ಮಾಡುತ್ತಿದ್ದೆ. ಪಾಪ ಅಮ್ಮ...ಮಗಳು ಓದುತ್ತಿದ್ದಾಳೆಂದು ಭಾವಿಸಿ ಸಂತೋಷ ಪಡುತ್ತಿದ್ದರು.
ಕೆಲವೊಮ್ಮೆ ನನ್ನ ಮನಃಸಾಕ್ಷಿ ಇದನ್ನು ಖಂಡಿಸುತ್ತಿತ್ತಾದರು ಪುಸ್ತಕ ಓದುವುದನ್ನು ಬಿಡುತ್ತಿರಲಿಲ್ಲ. ದಿವಸವೂ ಶಾಲೆಯಿಂದ ಬರುವಾಗ ಎರಡು, ಮೂರು ಪುಸ್ತಕಗಳನ್ನು ತರುತ್ತಿದ್ದೆ. ಕೂತಲ್ಲಿ, ನಿಂತಲ್ಲಿ, ನಡೆದುಕೊಂಡು ಬರುವಾಗ ಕೂಡ ಓದುತ್ತಿದ್ದೆ. ಪುಸ್ತಕ ಎನ್ನುವುದು ಅಷ್ಟರ ಮಟ್ಟಿಗೆ ನನ್ನನ್ನು ಆವರಿಸಿತ್ತು. ಇದಕ್ಕೆ ಸಾಥ್ ನೀಡಿದರು ಲೈಬ್ರರಿಯ ಜವಾಬ್ದಾರಿ ಹೊತ್ತ ನನ್ನ ಅಚ್ಚುಮೆಚ್ಚಿನ ಟೀಚರ್ ಉಷಾ. ಅವರು ನನಗೆಂದು ಹುಡುಕಿ ಹುಡುಕಿ ಹೊಸ ಹೊಸ ಪುಸ್ತಕಗಳನ್ನು ನೀಡುತ್ತಿದ್ದದ್ದು ಅದು ಈಗಲೂ ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ.
ಒಂದು ವೇಳೆ ಆ ಸಮಯದಲ್ಲಿ ಮೊಬೈಲ್ ಇರುತ್ತಿದ್ದರೆ ಪುಸ್ತಕ ಓದುವ ಹವ್ಯಾಸ ಇರುತ್ತಿರಲಿಲ್ಲವೇನೋ..! ಅನುಪಮಾ ನಿರಂಜನ್ ಅವರ ದಿನಕ್ಕೊಂದು ಕಥೆ ನನಗೆ ತುಂಬಾ ಇಷ್ಟವಾದ ಪುಸ್ತಕ. ಇದರ ಜತೆಗೆ ಪಂಚತಂತ್ರದ ಕತೆ, ಈಸೋಪನ ಕಥೆ, ಜಾನಪದ ಕಥೆ, ಜಾತಕ ಕತೆಗಳು, ಪ್ರಾಣಿ ಪ್ರಪಂಚದ ಕಥೆಗಳು, ಮಾಯಲೋಕದ ಕತೆಗಳು, ಅಜ್ಜ ಹೇಳಿದ ಕತೆಗಳು, ತೌಸಂಡ್ ಆಂಡ್ ಒನ್ ನೈಟ್ಸ್, ಸಿಂದ್ ಬಾದ್ ಎಂಬ ನಾವಿಕನ ಕತೆಗಳು, ಅಲಾವುದ್ದೀನ್ ಮತ್ತು ಮಾಯ ದೀಪಾ, ಆಲೀಬಾಬ ಮತ್ತು ನಲುವತ್ತು ಕಳ್ಳರು, ಹೂ.... ಹೇಳುತ್ತ ಹೋದರೆ ಎಷ್ಟೊಂದು.. ಇದೆಲ್ಲ ಮರೆಯುವಂತದ್ದೇನು ಅಲ್ಲ. ನಾನು ಓದಿದ ಕತೆಗಳನ್ನು ನನ್ನ ಸ್ನೇಹಿತರಿಗೆ ಹೇಳುವುದೆಂದರೆ ನನಗೆಲ್ಲಿಲ್ಲದ ಉತ್ಸಾಹ.ಇವುಗಳನ್ನೆಲ್ಲ ನನಗೆ ಹಂಚಿಕೊಳ್ಳಬೇಕೆಂದು ಅನಿಸಿದ್ದು ಹೀಗೆ!!
ನನ್ನ ಸಂಸ್ಕೃತ ಉಪನ್ಯಾಸಕರು ತರಗತಿ ನಡೆಯುತ್ತಿದ್ದ ಸಂದರ್ಭದಲ್ಲಿ ಒಂದೊಂದು ಪುಸ್ತಕಗಳ ಹೆಸರನ್ನು ಹೇಳಿ ಇದನ್ನು ಓದಲೇ ಬೇಕಾದಂತಹ ಅತ್ಯುತ್ತಮ ಪುಸ್ತಕಗಳು ಎಂದರು.
ನನಗೆ ತಡೆಯಲಾಗಲಿಲ್ಲ.. ಅವರು ಹೇಳಿದ ಪುಸ್ತಕಗಳ ಪಟ್ಟಿಯಲ್ಲಿ ಅಪ್ಪ ಅಂದ್ರೆ ಆಕಾಶ ಎಂಬ ಪುಸ್ತಕವೂ ಒಂದು. ಅವರು ಮೊದಲೇ ಹೇಳಿದ್ದರು, ಯಾರಿಗಾದರೂ ಇವನ್ನು ಓದುವ ಆಸೆಯಿದ್ದರೆ ಬಂದು ಕೇಳಿ ಎಂದು. ನಾನು ಕೂಡ ಕುತೂಹಲ ತಡೆಯಲಾರದೆ ಅವರ ಬಳಿಗೆ ಹೋಗಿ "ಅಪ್ಪ ಅಂದ್ರೆ ಆಕಾಶ" ಎಂಬ ಪುಸ್ತಕ ಪಡೆದುಕೊಂಡೆ.
ಅದು "ಎ. ಆರ್ ಮಣಿಕಾಂತ್" ಅವರು ಬರೆದ ಪುಸ್ತಕ. ನನಲ್ಲಿನ ಕುತೂಹಲ ಇನ್ನಷ್ಟು ಹೆಚ್ಚಿತು. ಯಾಕೆಂದರೆ ಮಣಿಕಾಂತ್ ರ ಕಲ್ಲುಸಕ್ಕರೆ ಎಂಬ ಅಂಕಣದಲ್ಲಿ ಬರುತ್ತಿದ್ದ ಲೇಖನಗಳನ್ನು ಬಹು ಆಸಕ್ತಿಯಿಂದ ಓದುತ್ತಿದ್ದವಳು ನಾನು. ಅವರ ಬರವಣಿಗೆಯ ಶೈಲಿಗೆ ಮಾರುಹೋಗಿದ್ದೆ. ಅವರು ಸರಳವಾಗಿ ಮನಮುಟ್ಟುವಂತೆ ಸಂದೇಶವನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾದಂತಹ ಲೇಖಕ.
ಹೀಗೆ ಪುಟಗಳನ್ನು ತಿರುಗಿಸುತ್ತಾ ನಿಂತಿದ್ದೆ. ಅದರ ಒಳಪುಟಗಳಲ್ಲಿದ್ದ ಒಂದೊಂದು ಲೇಖನಗಳ, ಕತೆಗಳ ಹೆಸರು ಆಕರ್ಷಣೀಯವಾಗಿದ್ದವು. ಅದರಲ್ಲಿ ಮೊದನೆಯದ್ದು "ಪ್ರಾರ್ಥನೆ".
ನಾನು ಒಂದು ಫಾರಗ್ರಾಫ್ ಓದಿ ಮುಗಿಸುವಷ್ಟರಲ್ಲಿ ಬೆಲ್ ಹೊಡೆದಿತ್ತು. ಇನ್ನೇನು ಉಪನ್ಯಾಸಕರು ಬರುವವರಿದ್ದರು.ನಾನು ಅವಸರವಸರವಾಗಿ ತರಗತಿಯ ಕಡೆಗೆ ಹೆಜ್ಜೆ ಹಾಕಿದೆ. ಉಪನ್ಯಾಸಕರು ಬರುವವರೆಗೆ ಎಷ್ಟಾಗುತ್ತೋ ಅಷ್ಟು ಓದಿ ಮುಗಿಸೋಣವೆಂದು ನಿರ್ಧರಿಸಿದೆ. ಆ ಕಥೆ ಎಷ್ಟು ಚೆನ್ನಾಗಿತ್ತು ಎಂದರೆ ಓದಲು ಆರಂಭಿಸಿದ ಮೇಲೆ ನಿಲ್ಲಿಸುವ ಮನಸ್ಸಾಗಲೇ ಇಲ್ಲ. ಉಪನ್ಯಾಸಕರು ಬಂದರು, ತರಗತಿ ಆರಂಭಿಸಿದರು, ಆದರೆ ನಾನು ಪಾಠ ಕೇಳಲೇ ಇಲ್ಲ. ಒಂದಾದಮೇಲೆ ಇನ್ನೊಂದು.. ಮತ್ತೊಂದು... ಮಗದೊಂದು ಪುಟಗಳನ್ನು ತಿರುವಿ ಹಾಕುತ್ತಲೇ ಹೋದೆ. ನನ್ನ ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಪ್ರತಿಯೊಂದು ಲೇಖನ- ಕಥೆ ಕೂಡ ಮನಸಿಗೆ ನಾಟುವಂತಿತ್ತು. ಉತ್ಸಾಹದ ಚಿಲುಮೆ ಬತ್ತಿದವರ ಪಾಲಿನ ಸಂಜೀವಿನಿ ಆಗುವಂತಿತ್ತು. ತರಗತಿ ಮುಗಿದ ಮೇಲೂ ಆ ಪುಸ್ತದ ಮೇಲಿಂದ ಕಣ್ಣು ತೆಗೆಯುವ ಸಾಹಸ ಮಾಡ ಬೇಕೆಂದು ನನಗನಿಸಲೇ ಇಲ್ಲ.
ಹೊಗಳಲು ಪದಗಳೇ ಸಾಲದು...!!
ನಾನು ಓದುವ ಪರಿಯನ್ನು ನೋಡಿ ನನ್ನ ಸ್ನೇಹಿತೆ ಕೂಡ ಈ ಪುಸ್ತಕ ಬಗ್ಗೆ ಆಸಕ್ತಿ ತೋರಿಸಿದಳು ಜತೆಗೆ ತನಗೂ ಕೊಡುವಂತೆ ಕೇಳಿಕೊಂಡಳು. ಅಂತೆಯೇ ಈ ಪುಸ್ತಕದ ಫೋಟೋವನ್ನು ಇನ್ಸ್ಟಾಗ್ರಾಮ್ ನ ಸ್ಟೋರಿಯಲ್ಲಿ ಹಾಕಿದೆ, ನನ್ನ ಸೀನಿಯರ್ ಕೂಡ ಈ ಪುಸ್ತಕವನ್ನು ನೀಡುವಂತೆ ಕೇಳಿ ಕೊಂಡರು.
ಅದ್ಭುತವಾದ ಈ ಪುಸ್ತಕದಲ್ಲಿರುವ ಪ್ರತಿಯೊಂದು ಪಾತ್ರಗಳೂ ಕೂಡ ಒಂದೊಂದು ಪಾಠವನ್ನು ಕಲಿಸುತ್ತದೆ. ತನ್ನ ಕೈಯಿಂದ ಏನೂ ಸಾಧ್ಯವಿಲ್ಲ ಎಂದು ಕುಗ್ಗಿದವರಿಗೆ ನಿನ್ನಿಂದ ಎಲ್ಲ ಸಾಧ್ಯ ಎಂಬ ಹುರುಪು ತುಂಬುವ ಶಕ್ತಿ ಇದೆ.
ಒಟ್ಟಿನಲ್ಲಿ ಹೇಳಬೇಕಾದರೆ ನಾನು ಓದಿದ ಪುಸ್ತಕಗಳ ಪೈಕಿ "ದಿ ಬೆಸ್ಟ್ ಬುಕ್ " ಎಂದರೆ "ಅಪ್ಪ ಅಂದ್ರೆ ಆಕಾಶ" ಸಾಧ್ಯವಾದರೆ ಎಲ್ಲರೂ ಒಂದು ಸಲ ಈ ಪುಸ್ತಕನ್ನು ಓದಿನೋಡಿ...!!
ಮೌಲ್ಯಯುತ ಪಾಠಗಳನ್ನು ಕಲಿಸಿ, ಬದುಕನ್ನು ಬದುಕುವ ಬಗೆಯ ಸಾರುವಂತಹ ಲೇಖನಗಳು, ಕಥೆಗಳನ್ನು ಬರೆಯುವ ಎ. ಆರ್ ಮಣಿಕಾಂತ್ ಅವರ ಅಪ್ಪಟ ಅಭಿಮಾನಿಯಾಗಿ ಹೋದೆ. ಅವರ ಬರವಣಿಗೆ ಶೈಲಿಗೆ ಮರುಳಾಗಿ ಹೋದೆ....!!
-ಶುಭ್ರ.ಪುತ್ರಕಳ
ದ್ವಿತೀಯ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ