ಅಂಬಿಕಾ ಶಿಕ್ಷಣ ಸಂಸ್ಥೆಗಳಿಂದ ಶಾರದಾ ದರ್ಶನ, ಶೃಂಗೇರಿ ಜಗದ್ಗುರುಗಳ ಭೇಟಿ
ಪುತ್ತೂರು: ಹಿಂದೂ ಧರ್ಮ ಸನಾತನವಷ್ಟೇ ಅಲ್ಲ, ಪರಿಪೂರ್ಣವೂ ಹೌದು. ಧರ್ಮದ ನೆಲೆಯಲ್ಲಿ ಮನುಷ್ಯನಲ್ಲಿ ಮೂಡಬಹುದಾದ ಯಾವುದೇ ಆಕ್ಷೇಪಗಳಿಗೂ ಹಿಂದೂ ಧರ್ಮದಲ್ಲಿ ಉತ್ತರಗಳಿವೆ. ಆದ್ದರಿಂದಲೇ ಎಷ್ಟೇ ದಾಳಿಗಳಾದರೂ ಹಿಂದೂ ಧರ್ಮ ಸದೃಢವಾಗಿಯೇ ಬೆಳೆದುನಿಲ್ಲುವುದಕ್ಕೆ ಸಾಧ್ಯವಾಗಿದೆ. ಇಂತಹ ಶ್ರೇಷ್ಟ ಧರ್ಮದ ಮೇಲೆ ಇಂದಿಗೂ ದಾಳಿಗಳಾಗುತ್ತಲೇ ಇದೆ. ಆದರೆ ಅಂತಹ ದಾಳಿಗಳಿಂದ ಹಿಂದೂ ಧರ್ಮವನ್ನು ಕೆಡಿಸಲಾಗದು ಎಂದು ಶೃಂಗೇರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಶೃಂಗೇರಿಗೆ ಭೇಟಿ ನೀಡಿದ ತಂಡವನ್ನುದ್ದೇಶಿಸಿ ಶುಕ್ರವಾರ ಶೃಂಗೇರಿಯ ಗುರುನಿವಾಸದಲ್ಲಿ ಆಶಿರ್ವಚನ ನೀಡಿದರು.
ಎಷ್ಟೇ ಕಲಿತರೂ ಮೂಲ ಸಂಸ್ಕøತಿಯಿಂದ ವಿಮುಖರಾಗಬಾರದು. ಸಂಸ್ಕಾರವನ್ನು ಮರೆತ ಶಿಕ್ಷಣಕ್ಕೆ ಮೌಲ್ಯವಿರುವುದಿಲ್ಲ. ವಿದ್ಯಾರ್ಥಿಗಳೆಲ್ಲರೂ ದೇಶದ ಸಂಪತ್ತು. ಹಾಗಾಗಿ ಈ ದೇಶದ ಸಂಪತ್ತು ರಾಷ್ಟ್ರವನ್ನು ಮತ್ತಷ್ಟು ಉತ್ಕøಷ್ಟತೆಯೆಡೆಗೆ ಒಯ್ಯುವುದಕ್ಕೆ ವಿನಿಯೋಗವಾಗಬೇಕು. ಮೊಬೈಲ್ನಂತಹ ಆಧುನಿಕ ಆಕರ್ಷಣೆಗಳಿಂದ ದೂರವಿದ್ದು ವಿದ್ಯಾರ್ಜನೆಯಲ್ಲಿ ವಿದ್ಯಾರ್ಥಿಗಳು ಗಮನವನ್ನು ಕೇಂದ್ರೀಕರಿಸಬೇಕು. ಭಾರತೀಯ ಸಂಸ್ಕøತಿ ಸಂಸ್ಕಾರಗಳು ಅತ್ಯಂತ ಮೌಲ್ಯಯುತವಾದದ್ದು. ಹಾಗಾಗಿಯೇ ವಿದೇಶೀಯರೂ ಇಂದು ಭಾರತೀಯತೆಯೆಡೆಗೆ ಗಮನ ಹರಿಸುತ್ತಿದ್ದಾರೆ ಎಂದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಕೃತಯುಗ, ತ್ರೇತಾಯುಗ, ದ್ವಾಪರಯುಗ ಹಾಗೂ ಕಲಿಯುಗಗಳ ಅವಧಿಯನ್ನು ಒಟ್ಟು ಸೇರಿಸಿ ಒಂದು ಮಹಾಯುಗ ಎನ್ನುತ್ತೇವೆ. ಅಂತಹ ಒಂದು ಸಾವಿರ ಮಹಾಯುಗಗಳು ಸೇರಿದಾಗ ಬ್ರಹ್ಮನ ಒಂದು ಹಗಲು ಪೂರ್ಣಗೊಳ್ಳುತ್ತದೆ ಹಾಗೂ ಮತ್ತೊಂದು ಸಾವಿರ ಮಹಾಯುಗ ಸಮಾಪ್ತಿಗೊಂಡಾಗ ಆತನ ರಾತ್ರಿ ಪೂರ್ಣಗೊಳ್ಳುತ್ತದೆ. ಈ ರೀತಿಯ ಲೆಕ್ಕಾಚಾರದಲ್ಲಿ ಬ್ರಹ್ಮ ನೂರು ವರ್ಷಗಳ ಆಯಸ್ಸನ್ನು ಹೊಂದಿದ್ದಾನೆ. ಅಂತಹ ಕಾಲಗಣನೆಯನ್ನು ನೋಡುವಾಗ ಮಾನವರಾದ ನಾವು ಎಷ್ಟು ಕಡಿಮೆ ಆಯಸ್ಸು ಹೊಂದಿದ್ದೇವೆಂಬ ಅರಿವಾಗುತ್ತದೆ. ಇಂತಹ ಅಲ್ಪಾವಧಿಯಲ್ಲಿ ಸತ್ಕರ್ಮಗಳನ್ನು ಮಾಡಬೇಕು ಎಂದು ನುಡಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಪ್ರತಿ ವರ್ಷ ಶೃಂಗೇರಿ ಶಾರದಾಂಬೆಯನ್ನು ಹಾಗೂ ಜಗದ್ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಸ್ವೀಕರಿಸುವ ಪರಂಪರೆಯನ್ನು ಅಂಬಿಕಾ ಶಿಕ್ಷಣ ಸಂಸ್ಥೆಗಳು ನಡೆಸಿಕೊಂಡು ಬರುತ್ತಿವೆ. ಅಂಬಿಕಾ ಸಂಸ್ಥೆಗಳ ಮೇಲೆ ಶೃಂಗೇರಿ ಜಗದ್ಗುರುಗಳ ಪೂರ್ಣಾಶೀರ್ವಾದ, ಕೃಪೆಗಳಿರುವುದು ಪುಣ್ಯ ಎಂದು ನುಡಿದರಲ್ಲದೆ ಸಂಸ್ಥೆಯ ವತಿಯಿಂದ ತಂದ ಹೊರೆಕಾಣಿಕೆಯನ್ನು ಸಮರ್ಪಿಸಿದರು.
ಈ ಸಂದರ್ಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ, ಅಂಬಿಕಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಉಪನ್ಯಾಸಕರು, ಉಪನ್ಯಾಸಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಂಬಿಕಾ ಪದವಿ ಕಾಲೇಜಿನ ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಶೈಕ್ಷಣಿಕ ಭೇಟಿ ಕಾರ್ಯಕ್ರಮದ ಆಯೋಜನೆಯಲ್ಲಿ ಸಹಕರಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
Post a Comment