ವಿಜಯಪುರ: ಅಭಿಮಾನಿಯೊಬ್ಬರು ತಮ್ಮ ಮನೆಯಂಗಳದಲ್ಲೇ ನಟ ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿ ನಿರ್ಮಿಸಿಕೊಂಡು ಅಭಿಮಾನ ಮೆರೆದಿದ್ದಾರೆ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ಸಿದ್ಧಾಪುರ ವಡ್ಡರಟ್ಟಿಯ ಪೂಜಾರಿ ರಾಮಜ್ಜರ ವಂಶದ ಸಮಾಜ ಸೇವಕ ಆರ್.ಟಿ ನಾಗರಾಜ್ ಹಾಗೂ ಮಲ್ಲಮ್ಮ ದಂಪತಿ ಇಬ್ಬರೂ ಪುನೀತ್ ರಾಜ್ ಕುಮಾರ್ ಬಹುದೊಡ್ಡ ಅಭಿಮಾನಿಗಳು.
ಅವರು ಅಪ್ಪು ಅವರ ನಿಧನದ ನಂತರ ಮನೆಯಂಗಳದಲ್ಲೇ ಅವರ ಪುತ್ಥಳಿಯನ್ನು ಪ್ರತಿಷ್ಠಾಪಿಸಿದ್ದಾರೆ. ಇದನ್ನು ಮಾಜಿ ಶಾಸಕ ಕೆ.ವಿ ರವೀಂದ್ರನಾಥ್ ಬಾಬು , ಕೆಪಿಸಿಸಿ ಸದಸ್ಯ ಲೋಕೇಶ್ ವಿ. ನಾಯಕರ ನೇತೃತ್ವದಲ್ಲಿ ಅನಾವರಣ ಮಾಡಲಾಗಿದೆ.
ಕೋಟ್ಯಾಂತರ ಕನ್ನಡಿಗರ ಹೃದಯದಲ್ಲಿ ಅಪಾರ ಅಭಿಮಾನವನ್ನು ಸಂಪಾದಿಸಿರುವ ನಟ ಪುನೀತ್ ರಾಜ್ ಕುಮಾರ್ ಸಾವು ಎಲ್ಲರನ್ನು ದಿಗ್ಭ್ರಮೆಗೊಳಿಸಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅಭಿಮಾನವನ್ನು ಮೆರೆಯುತ್ತಲೇ ಇದ್ದಾರೆ.