|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಾಷ್ಟ್ರೀಯ ಕ್ಯಾನ್ಸರ್ ಜನ ಜಾಗೃತಿ ದಿನ - ನವೆಂಬರ್ 7

ರಾಷ್ಟ್ರೀಯ ಕ್ಯಾನ್ಸರ್ ಜನ ಜಾಗೃತಿ ದಿನ - ನವೆಂಬರ್ 7



ಕ್ಯಾನ್ಸರ್ ಎನ್ನುವುದು ವಿಶ್ವದ ಮಾರಣಾಂತಿಕ ಖಾಯಿಲೆಗಳ ಪಟ್ಟಿಯಲ್ಲಿ 2ನೇ ಅಗ್ರಸ್ಥಾನವನ್ನು (ಮೊದಲ ಸ್ಥಾನ ಹೃದಯಾಘಾತ) ಅಲಂಕರಿಸಿದೆ. ಕನ್ನಡದಲ್ಲಿ ಕ್ಯಾನ್ಸರ್ ರೋಗವನ್ನು ಅರ್ಬುದ ರೋಗ ಎಂದು ಕರೆಯಲಾಗುತ್ತದೆ. ವಿಶ್ವದಾದ್ಯಂತ ಕೊಟ್ಯಾಂತರ ಮಂದಿ ಕ್ಯಾನ್ಸರ್‌ನಿಂದಾಗಿ ಸಾಯುತ್ತಿದ್ದಾರೆ. ಸರಿಸುಮಾರು ವರ್ಷದಲ್ಲಿ 15 ಮಿಲಿಯನ್ ಮಂದಿ ಕ್ಯಾನ್ಸರ್‌ನಿಂದಾಗಿ ಬಳಲುತ್ತಿದ್ದಾರೆ ಮತ್ತು 8 ಮಿಲಿಯನ್ ಮಂದಿ ಸಾವನ್ನಪ್ಪುತ್ತಿದ್ದಾರೆ. ಬಾಯಿ, ಗಂಟಲು,  ಶ್ವಾಸಕೋಶ, ಕರುಳಿನ ಕ್ಯಾನ್ಸರ್ ಮತ್ತು ಪ್ರೋಸ್ಟೆಟ್ ಕ್ಯಾನ್ಸರ್ ಪುರುಷರಲ್ಲಿ ಹೆಚ್ಚಾಗಿರುತ್ತದೆ. ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಮತ್ತು ಜನನಾಂಗ (ಸರ್ವಿಕ್ಸ್ ಅಂದರೆ ಗರ್ಭಕೋಶದ ಕುತ್ತಿಗೆ)ದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿದಲ್ಲಿ ಕ್ಯಾನ್ಸರನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಮುಂದುವರಿದ ರಾಷ್ಟ್ರಗಳಲ್ಲಿ  ಒಂದು ಅಥವಾ 2ನೇ ಹಂತದಲ್ಲಿ ಗುರುತಿಸಿ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಾರೆ. ಆದರೆ ಭಾರತದಂತಹ  ಇನ್ನೂ ಮುಂದುವರಿಯುತ್ತಿರುವ ದೇಶಗಳಲ್ಲಿ ಜನರು ಬಡತನ ಮೂಢನಂಬಿಕೆ ಅನಕ್ಷರತೆ ಅಜ್ಞಾನ ಮತ್ತು ಮೂಲಭೂತ ಸೌಕರ್ಯದ ಕೊರತೆಯಿಂದಾಗಿ ವೈದ್ಯರ ಬಳಿ ಬರುವಾಗ ಕ್ಯಾನ್ಸರ್ ಮೂರು ಅಥವಾ ನಾಲ್ಕನೇ ಹಂತಕ್ಕೆ ತಲಪಿರುತ್ತದೆ. ಈ ಹಂತದಲ್ಲಿ ಕ್ಯಾನ್ಸರನ್ನು ಗುಣಮುಖವಾಗಿಸುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ. ಈ ನಿಟ್ಟಿನಲ್ಲಿ ನವಂಬರ್ 7ನ್ನು ಕ್ಯಾನ್ಸರ್ ಜಾಗೃತಿ ದಿನ ಎಂದು ಆಚರಿಸಿ ಜನರಲ್ಲಿ ಕ್ಯಾನ್ಸರ್ ಬಗೆಗಿನ ಮೂಢನಂಬಿಕೆ ಮತ್ತು ಅಜ್ಞಾನಗಳನ್ನು ತೊಡೆದು ಹಾಕಿ ಹೆಚ್ಚಿನ ತಿಳುವಳಿಕೆ ಮತ್ತು ಅರಿವು ನೀಡುವ ಕಾರ್ಯ ನಡೆಸಲಾಗುತ್ತದೆ.

 

ಭಾರತ ದೇಶವೊಂದರಲ್ಲಿ ವರ್ಷಕ್ಕೆ 10 ಲಕ್ಷ ಜನರು ಕ್ಯಾನ್ಸರ್‌ಗೆ ತುತ್ತಾಗುತ್ತಾರೆ. ಮತ್ತು ವಿಶ್ವದ ಕ್ಯಾನ್ಸರ್ ರ‍್ಯಾಂಕ್ ಪಟ್ಟಿಯಲ್ಲಿ ಭಾರತಕ್ಕೆ 5ನೇ ಸ್ಥಾನ ಲಭಿಸಿದೆ. ಈ ಪೈಕಿ ಶೇಕಡಾ 90ರಷ್ಟು ಕ್ಯಾನ್ಸರ್ ತಂಬಾಕಿನ ಸೇವನೆಯಿಂದ ಬರುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ತಂಬಾಕಿನ ವಿವಿಧ ರೂಪಗಳಾದ ಗುಟ್ಕಾ, ಪಾನ್‌ಪರಾಗ್, ಮಾರುತಿ ಮತ್ತು ಮಾಣಿಕ್‌ಚಂದ್ ಮುಂತಾದುವುಗಳಿಂದ ಬಾಯಿ, ಗಂಟಲು ಮುಂತಾದ ಅಂಗಗಳು ಕ್ಯಾನ್ಸರ್‌ಗೆ ತುತ್ತಾಗುತ್ತದೆ. ಇದರ ಜೊತೆಗೆ ಧೂಮಪಾನ, ಮಧ್ಯಪಾನ ಸೇರಿಕೊಂಡು ಶ್ವಾಸಕೋಶ ಕರುಳು, ಅನ್ನನಾಳ. ಯಕೃತ್, ಮೂತ್ರಪಿಂಡ ಇತ್ಯಾದಿ ಅಂಗಗಳು ಕ್ಯಾನ್ಸರ್‌ಗೆ ತುತ್ತಾಗುತ್ತದೆ. ಸಮಾಧಾನಕರವಾದ ಅಂಶವೆಂದರೆ ಕ್ಯಾನ್ಸರ್‌ನ್ನು ಈ ದುಶ್ಚಟಗಳಿಂದ ನಿಯಂತ್ರಿಸಿ ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಮತ್ತು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿದಲ್ಲಿ ಕ್ಯಾನ್ಸರ್‌ನ್ನು ಗುಣಪಡಿಸಬಹುದು.


ಅರ್ಬುದ ರೋಗಕ್ಕೆ ಕಾರಣಗಳು 


1. ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಸೇವನೆ 


2. ಧೂಮಪಾನ  ಮತ್ತು ಮಧ್ಯಪಾನ


3. ಅನುವಂಶೀಯ ಕಾರಣಗಳು


4. ಆರಾಮದಾಯಕ ಜೀವನ ಶೈಲಿ, ಅನಾರೋಗ್ಯಪೂರ್ಣ ಆಹಾರದ ಪದ್ಧತಿ ಮತ್ತು ಒತ್ತಡದ ಜೀವನ  ಇತ್ಯಾದಿ


5. ವಿಕಿರಣದ ಮುಖಾಂತರ


6. ಅತಿಯಾದ ಗರ್ಭನಿರೋಧಕ ಮಾತ್ರೆಗಳು ಮತ್ತು ಕೃತಕ ರಸದೂತ ಮಾತ್ರೆಗಳ  ಅನಿಯಂತ್ರಿತ ಬಳಕೆ


7. ವಾತಾವರಣದ ವೈಪರೀತ್ಯ, ವಾಯು ಮಾಲಿನ್ಯ, ವೃತ್ತಿ ಸಂಬAಧಿ ಕ್ಯಾನ್ಸರ್ ಕಾರಕ ವಸ್ತುಗಳ ದೇಹಕ್ಕೆ ಸೇರುವುದರಿಂದ 


8. ಅನಾರೋಗ್ಯಕರವಾದ ಲೈಗಿಂಕ ಜೀವನ  ಮತ್ತು ಹತ್ತು ಹಲವಾರು ಲೈಗಿಂಕ ಸಂಬಂಧಗಳು, ಹಲವಾರು ಬಾರಿ ಗರ್ಭಧರಿಸುವುದು ಇತ್ಯಾದಿ. 


9. ಹೆಪಟೈಟಿಸ್ ಬಿ ಮತ್ತು ಸಿ ವೈರಸ್‌ನ ಸೋಂಕು, ಎಬ್‌ಸ್ಟೈನ್ ಬಾರ್ ವೈರಸ್, ಹ್ಯೂಮನ್ ಪಾಪಿಲೋಮ ವೈರಾಸ್ ಇತ್ಯಾದಿ ವೈರಸ್ ಸೋಂಕಿನಿAದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.  


ಬಾಯಿ ಅರ್ಬುದ ರೋಗದ ಚಿಹ್ನೆಗಳು


1. ಪ್ರಾರಂಭಿಕ ಹಂತದಲ್ಲಿ ಖಾರ ಆಹಾರ ಪದಾರ್ಥಗಳನ್ನು ತಿನ್ನುವಾಗ ಬಾಯಿ ಉರಿಯುತ್ತದೆ. 


2. ಬಾಯಿಯಲ್ಲಿ ಹುಣ್ಣು ಅಥವಾ ಗಾಯ ಆಗುತ್ತದೆ ಮತ್ತು ಹುಣ್ಣು ಒಣಗುವುದೇ ಇಲ್ಲ


3. ಬಾಯಿಯಲ್ಲಿ ಗಡ್ಡೆ ಬೆಳೆಯುತ್ತದೆ. ಮತ್ತು ಮುಟ್ಟಿದಾಗ ರಕ್ತ ಬರುತ್ತದೆ.


4. ವಿಪರೀತ ನೋವು ಇರುತ್ತದೆ. ಮಾತ್ರೆ ತಿಂದರೂ ನೋವು ನಿವಾರಣೆಯಾಗುವುದಿಲ್ಲ


5. ಬಾಯಿ ತೆರೆಯಲು ಕಷ್ಟವಾಗಬಹುದು. ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿ 50 ಮಿ.ಮಿ. ಬಾಯಿ ತೆರೆಯಬಹುದು. ಅರ್ಬುದ ರೋಗದಲ್ಲಿ 20 ಮಿ.ಮಿ. ಗಿಂತ ಜಾಸ್ತಿ ಬಾಯಿ ತೆರೆಯಲು ಕಷ್ಟವಾಗಬಹುದು. 


6. ಮಾತಾನಾಡುವಾಗ ಮತ್ತು ಆಹಾರ ಪದಾರ್ಥ ಸೇವಿಸುವಾಗ ತೊಂದರೆ ಮತ್ತು ನೋವು ಆಗಬಹುದು. 


7. ಬಾಯಿಯಲ್ಲಿ ಬಿಳಿ ಮತ್ತು ಕೆಂಪು ಕಲೆಗಳು ಕಾಣಿಸಿಕೊಳ್ಳಬಹುದು. 


8. ನಾಲಗೆಯ ಮೇಲೆ ಗುಳ್ಳೆ ಅಥವಾ ಹುಣ್ಣು ಅಥವಾ ಗಡ್ಡೆಬೆಳೆದು ನಾಲಗೆಯ ಚಲನೆಯಲ್ಲಿ ಕಷ್ಟವಾಗಬಹುದು


9. ಅತಿಯಾದ ಎಂಜಲು (ಜೊಲ್ಲುರಸ) ಬಂದಂತೆ ಅನಿಸುವುದು


10. ಕುತ್ತಿಗೆಯ ಸುತ್ತ ಗಡ್ಡೆ ಅಥವಾ ಗುಳ್ಳೆ ಬೆಳೆದಂತೆ ಅನಿಸಬಹುದು.  ಗಡ್ಡೆ ಸುಮಾರು 2ರಿಂದ 10ರವರೆಗೆ ಇದ್ದು ಕಲ್ಲಿನಂತೆ ಗಟ್ಟಿಯಾಗಿರುತ್ತದೆ. ಆದರೆ ನೋವಿರುವುದಿಲ್ಲ.

 

ಸ್ತನದ ಕ್ಯಾನ್ಸರ್ ಚಿಹ್ನೆಗಳು


ಸ್ತನದಲ್ಲಿ ಗಡ್ಡೆಗಳು ಅಥವಾ ಸ್ತನಗಳ ಚರ್ಮ ದಪ್ಪಗಾದಂತೆ ಅಥವಾ ಬೆಳೆದಂತೆ ಭಾಸವಾಗುವುದು. ಮೊಲೆ ತೊಟ್ಟು ಮೊಲೆಯೊಳಗೆ ಹುದುಗಿಕೊಳ್ಳುವುದು. ಸ್ತನಗಳ ಗಾತ್ರದಲ್ಲಿ ವ್ಯತ್ಯಾಸವಾಗುವುದು. ಸ್ತನಗಳ ಚರ್ಮದಲ್ಲಿ ಡಿಂಪಲ್ ಅಥವಾ ಗುಳ್ಳೆ ಬೀಳುವುದು ಕಂಕುಳಗಳ ಕೆಳಗೆ ಗುಳ್ಳೆಗಳು ಅಥವಾ ಸಣ್ಣ  ಗಡ್ಡೆ ಬೆಳೆದಂತೆ ಭಾಸವಾಗುವುದು. ಮೊಲೆತೊಟ್ಟುಗಳಲ್ಲಿ ತುರಿಕೆ ಅಥವಾ ಒಡೆಯುವುದು ಹಾಗೂ  ಕೀವು ಸೋರುವುದು ರಕ್ತ ಸೂಸುವುದು ಇತ್ಯಾದಿ ಎರಡು ಸ್ತನಗಳು ಒಂದೇ ರೀತಿ ಆಗಿರದೇ ಗಾತ್ರ, ರಚನೆ ಮತ್ತು ಆಕಾರದಲ್ಲಿ ವ್ಯತ್ಯಾಸವಾಗುವುದು. ಇದರ ಜೊತೆಗೆ ನಿರಂತರವಾಗಿ ಸ್ತನಗಳಲ್ಲಿ ನೋವು ಇರಬಹುದು. ಕೆಲವೊಮ್ಮೆ ಬರೀ ಗೆಡ್ಡೆ ಬೆಳೆದು, ನೋವಿಲ್ಲದೇ ಇರಲೂ ಬಹುದು. ಮೇಲೆ ತಿಳಿಸಿದ ಯಾವುದೇ ಲಕ್ಷಣಗಳಿದ್ದಲ್ಲಿ ಕೂಡಲೇ ವೈದ್ಯರನ್ನು ಸಂದರ್ಶಿಸಿ ಸೂಕ್ತ ಸಲಹೆ ತೆಗೆದು ಕೊಳ್ಳಬೇಕು.

 

ನೆನಪಿರಲಿ ಪ್ರಾರಂಭಿಕ ಹಂತದಲ್ಲಿಯೇ ಸ್ತನದ ಕ್ಯಾನ್ಸರ್‌ನ್ನು ಗುರುತಿಸಿದ್ದಲ್ಲಿ ಗುಣಮುಖವಾಗಬಹುದು. ಕಡೇ ಹಂತದಲ್ಲಿ ಗುರುತಿಸಿದ್ದಲ್ಲಿ ಜೀವಕ್ಕೆ ಸಂಚಕಾರ ಬರಬಹುದು. ಆರೋಗ್ಯದ ವಿಚಾರದಲ್ಲಿ ಯಾವುದೇ ಮುಜುಗರ, ಸಂಕೋಚವಿಲ್ಲದೇ ವೈದ್ಯರ ಬಳಿ ನಿಮ್ಮ ಮನಸ್ಸಿನ ನೋವು, ಸಂಕಟ ಮತ್ತು ತೊಂದರೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. 40 ವರುಷ ದಾಟಿದ ಎಲ್ಲಾ ಮಹಿಳೆಯರಿಗೂ ಪ್ರತೀ 6 ತಿಂಗಳಿಗೊಮ್ಮೆ ಸ್ತನದ ಕ್ಯಾನ್ಸರ್ ಬಗ್ಗೆ ವೈದ್ಯರ ಬಳಿ ತೋರಿಸಿ ಮಾರ್ಗದರ್ಶನ ತೆಗೆದುಕೊಳ್ಳಬಹುದು.  


ಶ್ವಾಸಕೋಶದ ಕ್ಯಾನ್ಸರ್‌ನ ಚಿಹ್ನೆಗಳು


ಧೂಮಪಾನ ಶ್ವಾಸಕೋಶಗಳ ಬಹುದೊಡ್ಡ ವೈರಿ. ಸಾಮಾನ್ಯವಾಗಿ 60-70ರ ಹರೆಯದಲ್ಲಿ ಕಾಣುವ ಈ ರೋಗ, ಬದಲಾದ ಜೀವನ ಶೈಲಿ ಮತ್ತು ಧೂಮಪಾನದಿಂದಾಗಿ ಈಗೀಗ 30-40ರ ಹರೆಯದಲ್ಲಿ ಕಾಣಸಿಗುತ್ತದೆ. ಶೇಕಡಾ 90ರಷ್ಟು ಮಂದಿ ಧೂಮಪಾನದಿಂದಾಗಿಯೇ ಎದೆಗೂಡಿನ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ. ಪ್ರಾರಂಭಿಕ ಹಂತದಲ್ಲಿ ಹೆಚ್ಚಿನ ಲಕ್ಷಣಗಳು ಕಾಣದೇ ಇರಬಹುದು. ಆದರೆ ಮುಂದುವರಿದ ಕ್ಯಾನ್ಸರ್‌ನಲ್ಲಿ ಈ ಕೆಳಗಿನ ಲಕ್ಷಣಗಳು ಹೆಚ್ಚಾಗಿ ಕಾಣಸಿಗುತ್ತದೆ.


1. ವಿಪರೀತ ಮತ್ತು ನಿರಂತರ ಕೆಮ್ಮು ಇದ್ದು ಯಾವುದೇ ರೀತಿಯ ಔಷಧಗಳಿಗೆ ಕಡಿಮೆಯಾಗದೆ, ನಿರಂತರ 4, 5 ವಾರ ಕೆಮ್ಮಿದ್ದಲ್ಲಿ ವೈದ್ಯರ ಸಲಹೆ ಅತೀ ಅಗತ್ಯ. 


2. ಕೆಮ್ಮುವಾಗ ರಕ್ತ ವಸರುವುದು, ಕಫದ ಜೊತೆ ರಕ್ತ ಸೂಸುವುದು 


3. ಆಹಾರ ಸೇರದಿರುವುದು ಮತ್ತು ಹಸಿವಿಲ್ಲದಿರುವುದು ಇದರಿಂದಾಗಿ ದೇಹದ ತೂಕ ಕಡಿಮೆಯಾಗಬಹುದು


4. ಉಸಿರಾಡಲು ಕಷ್ಟವಾಗಬಹುದು. ಉಸಿರಾಡುವಾಗ ಜೋರಾಗಿ ಶಬ್ಧ ಬರಬಹುದು. ಉಸಿರಾಡುವಾಗ ಎದೆಭಾಗದಲ್ಲಿ ನೋವಾಗಬಹುದು. ದೀರ್ಘವಾದ ಶ್ವಾಸ ತೆಗೆಯಲು ಸಾಧ್ಯವಾಗದೇ ಇರಬಹುದು  


5. ಪದೇ ಪದೇ ಆಯಾಸಗೊಳ್ಳುವುದು, ಜೀವನದಲ್ಲಿ ನಿರಾಸಕ್ತಿ ಶ್ವಾಸಕೋಶದಲ್ಲಿ ಆಮ್ಲಜನಕದ ಪೂರೈಕೆ ಮತ್ತು ವಿನಿಮಯವಾಗದಿದ್ದಲ್ಲಿ ಜೀವನದ ಉತ್ಸಹ ಬತ್ತಿಹೋಗಬಹುದು. 


6. ಧ್ವನಿಯಲ್ಲಿ ಬದಲಾವಣೆ, ಮುಖದಲ್ಲಿ ಊದಿಕೊಳ್ಳುವುದು ಮತ್ತು ಕರ್ಕಶವಾದ ಧ್ವನಿ ಇತ್ಯಾದಿ ಉಂಟಾಗಬಹುದು


7. ಪದೇ ಪದೇ ಶ್ವಾಸನಾಳದ ಸೋಂಕಿಗೆ ತುತ್ತಾಗಿ ಜ್ವರ ಕಫ, ಕೆಮ್ಮು ಮತ್ತುಧಮ್ಮು ಕಟ್ಟುವುದು ಕೆಚ್ಚಾಗಿ ಕಾಡಬಹುದು. 


8. ಎದೆಗೂಡಿನ ಭಾಗದಲ್ಲಿ ನೋವು ಬರಬಹುದು. ಈ ನೋವು ತೋಳು, ಬೆನ್ನು ಮುಂತಾದ ಕಡೆಗೂ ಹರಡಬಹುದು. ಕೆಮ್ಮು ಇಲ್ಲದಿದ್ದರೂ ನಿರಂತರ ನೋವು ಇರಬಹುದು.

 

ಕ್ಯಾನ್ಸರ್ ರೋಗ ಅಂತಿಮ ಹಂತಕ್ಕೆ ತಲುಪಿದಾಗ, ದೇಹದ ಬೇರೆ ಭಾಗಗಳಿಗೂ ಹರಡಿ ಮೂಳೆಗಳಲ್ಲಿ ನೋವು ಮತ್ತು  ಮೂಳೆ ಮುರಿತ ಉಂಟಾಗಬಹುದು ಅದೇ ರೀತಿ ಮೆದುಳಿಗೂ ಹರಡಿದಲ್ಲಿ ತಲೆನೋವು ಅಪಸ್ಮಾರ, ಕೈಕಾಲುಗಳು ಸಂವೇಧನೆ ಮತ್ತು ನಿಯಂತ್ರಣ ಕಳೆದು ಕೊಳ್ಳುವುದು ಇತ್ಯಾದಿಗಳು ಕಾಣಿಸಿಕೊಳ್ಳಬಹುದು. ಇಲ್ಲಿ ಕೂಡಾ ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು. ಆದರೆ ಹೆಚ್ಚಿನ ಶ್ವಾಸಕೋಸ ಕ್ಯಾನ್ಸರ್ ಕಡೆ ಹಂತದಲ್ಲಿ ಗುರುತಿಸಲ್ಪಟ್ಟು ವೈದ್ಯರ ಬಳಿ ಬರುವಾಗಲೇ ಕಾಲ ಮಿಂಚಿ ಹೋಗಿರುತ್ತದೆ.  


ಜನನಾಂಗದ ಕ್ಯಾನ್ಸರ್ (ಸರ್ವಿಕ್ಸ್ ಅರ್ಬುದ ರೋಗ) 


ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್‌ನ ನಂತರದ ಸ್ಥಾನ ಜನನಾಂಗದ ಕ್ಯಾನ್ಸರ್‌ಗೆ ಸಲ್ಲುತ್ತದೆ. “ ಪಾಪ್ ಸ್ಮಿಯರ್” ಎಂಬ ಪರೀಕ್ಷೆಯ ಮುಖಾಂತರ ಆರಂಭಿಕ ಹಂತದಲ್ಲಿಯೇ ಗುರುತಿಸಿದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಬಹುದು ಪ್ರತೀ ಮಹಿಳೆ 40 ವರ್ಷ ದಾಟಿದ ಬಳಿಕ ಪ್ರತೀ ವರ್ಷಕೊಮ್ಮೆ ಸ್ತ್ರೀ ರೋಗದ ತಜ್ಞರ ಬಳಿ ತಪಾಸಣೆ ನಡೆಸಿದ್ದಲ್ಲಿ ಈ ರೋಗವನ್ನು ಪ್ರಾರಂಭದ ಹಂತದಲ್ಲಿ ಗುರುತಿಸಿ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು.  ಹ್ಯೂಮನ್ ಪ್ಯಾಪಿಲೋಮ ವೈರಸ್, ಅಪೌಷ್ಟಿಕತೆ, ಬೊಜ್ಜು, ಧೂಮಪಾನ, ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು, ಫಂಗಲ್ ಸೋಂಕು, ಹಣ್ಣು ಸೊಪ್ಪು ತರಕಾರಿ ರಹಿತ ಆಹಾರ, ರಸದೂತಗಳು ಮತ್ತು ಕೃತಕ ಗರ್ಭನಿರೋಧಕ ಮಾತ್ರೆಗಳ ಅತಿಯಾದ ಸೇವನೆ, ಜಾಸ್ತಿ ಮಕ್ಕಳನ್ನು ಹೆರುವುದು ಇತ್ಯಾದಿ ಹಲವಾರು ಕಾರಣಗಳಿಂದ ಜನನಾಂಗದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪ್ರಾರಂಭಿಕ ಹಂತದಲ್ಲಿ ಯಾವುದೇ ಸೂಚನೆ ಇರದಿರಬಹುದು. ತನ್ನಿಂತಾನೇ ರಕ್ತ ಜನನಾಂಗದಲ್ಲಿ ಒಸರುವುದು, ಲೈಂಗಿಕ ಕ್ರಿಯಾ ಸಮಯದಲ್ಲಿ ರಕ್ತ ಸೋರುವುದು, ಲೈಂಗಿಕ ಕ್ರಿಯಾ ಸಮಯದಲ್ಲಿ ವಿಪರೀತ ನೋವು, ಋತುಚಕ್ರದ ನಡುವೆ ಕೂಡ ನೋವು ಮತ್ತು ರಕ್ತಸ್ರಾವ ಮತ್ತು  ಸ್ವಾಭಾವಿಕ ಋತುಚಕ್ರದಲ್ಲಿ ಹೆಚ್ಚಿನ ರಕ್ತಸ್ರಾವ ಉಂಟಾಗಬಹುದು. ಅದೇ ರೀತಿ ಜನನಾಂಗದಿಂದ ವಾಸನೆಯುಕ್ತ ಸೋರಿಕೆ  ಉಂಟಾಗಬಹುದು. ಈ ರಕ್ತದ ಸೋರಿಕೆ ಋತುಚಕ್ರ ನಿಂತ ನಂತರವೂ ಉಂಟಾಗಬಹುದು ಮತ್ತು ಜನನಾಂಗದ ಒಳಗೆ ಗಡ್ಡೆ ಬೆಳೆದಂತೆ ಭಾಸವಾಗಬಹುದು. ಆರಂಭಿಕ ಹಂತದಲ್ಲಿಯೂ ಇವುಗಳನ್ನಲ್ಲಾ ಗುರುತಿಸಿ ಸೂಕ್ತ ಸ್ತ್ರೀ ರೋಗ ತಜ್ಞ ವೈದ್ಯರಲ್ಲಿ ಸಕಾಲದಲ್ಲಿ ತೋರಿಸಿ ಚಿಕಿತ್ಸೆ ಪಡೆದಲ್ಲಿ ಮುಂದೆ ಬರುವ ತೊಂದರೆಗಳನ್ನು ತಡೆಗಟ್ಟಬಹುದು.  

ತಡೆಗಟ್ಟುವುದು ಹೇಗೆ? 

ಧೂಮಪಾನ, ಮಧ್ಯಪಾನ ವರ್ಜಿಸಬೇಕು. ತಂಬಾಕು ಮತ್ತು ತಂಬಾಕು ಉತ್ಪನ್ನಗಳನ್ನು ಖಂಡಿತವಾಗಿಯೂ ಸೇವಿಸಬಾರದು. ಆರೋಗ್ಯಪೂರ್ಣ ಜೀವನ ಪದ್ಧತಿ, ಪರಿಪೂರ್ಣ ಸಮತೋಲಿತ ಆಹಾರ, ಶಿಸ್ತುಬದ್ಧ ಜೀವನ ಶೈಲಿ, ನಿರಂತರ ದೈಹಿಕ ವ್ಯಾಯಾಮ ಒತ್ತಡವಿಲ್ಲದ ಜೀವನ ಕ್ರಮ ರೂಡಿಸಿಕೊಳ್ಳಬೇಕು. ಕಲುಷಿತ ವಾತಾವರಣ, ವಿಕಿರಣ ಸೂಸುವ ವಾತಾವರಣವಿದ್ದಲ್ಲಿ ಅಥವಾ ವೃತ್ತಿ ಸಂಬಂಧಿ ಕ್ಯಾನ್ಸರ್‌ಕಾರಕ  ವಸ್ತುಗಳಿಗೆ  ತೆರೆದು ಕೊಳ್ಳುವ ಸಾಧ್ಯತೆ  ಹೆಚ್ಚಾಗಿ ಇದ್ದಲ್ಲಿ ವೃತ್ತಿಯನ್ನು ಬದಲು ಮಾಡಿ. ಅನುವಂಶೀಯ ಕಾರಣವಿದ್ದಲ್ಲಿ   ನಿರಂತರವಾಗಿ ವೈದ್ಯರ ಸಲಹೆ ಮತ್ತು ಮಾರ್ಗದರ್ಶನ ಪಡೆಯಿರಿ. ಅತಿಯಾದ ಗರ್ಭನಿರೋಧಕ ಮಾತ್ರೆ ಮತ್ತು ರಸದೂತಗಳ ಅನಿಯಂತ್ರಿಕ ಬಳಕೆಗೆ ಕಡಿವಾಣ ಹಾಕಬೇಕು. ಆರೋಗ್ಯಪೂರ್ಣ ಲೈಂಗಿಕತೆ ರೂಡಿಸಿಕೊಂಡು ವೈರಸ್ ಸೋಂಕು ತಗಲದಿದ್ದಲ್ಲಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಿ. ಕಾಲಕಾಲಕ್ಕೆ ನಿಯಮಿತವಾಗಿ ಮತ್ತು ನಿರಂತರವಾಗಿ ವೈದ್ಯರ ಮಾರ್ಗದರ್ಶನದಿಂದ ಅರ್ಬುದ ರೋಗವನ್ನು ಆರಂಭಿಕ ಹಂತದಲ್ಲಿ ಗುರುತಿಸಿದಲ್ಲಿ ನೂರು ಕಾಲ ಸುಖವಾಗಿ ಬದುಕಬಹುದು.

  

ಚಿಕಿತ್ಸೆ ಹೇಗೆ?


ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತದೆ. ಶೇಕಡಾ 90ರಷ್ಟು ಅರ್ಬುದ ರೋಗವನ್ನು ಸರ್ಜರಿ ಮುಖಾಂತರ ತೆಗೆಯಲಾಗುತ್ತದೆ. ಆದರೆ ಕೆಲವೊಂದು ಅರ್ಬುದ ರೋಗವನ್ನು ಕಿಮೋಥೆರಫಿಯಿಂದ ಗುಣಪಡಿಸಲಾಗುತ್ತದೆ. ಆರಂಭಿಕ ಹಂತದಲ್ಲಿ ಸರ್ಜರಿ ಖಂಡಿತವಾಗಿಯೂ ಉತ್ತಮ. ಆದರೆ ಮುಂದುವರಿದ ಹಂತದಲ್ಲಿ (3ನೆ ಮತ್ತು 4ನೆ ಹಂತದಲ್ಲಿ) ಸರ್ಜರಿಯ ಜೊತೆಗೆ ಕಿಮೋಥೆರಫಿ ಮತ್ತು ರೆಡೀಯೋಥೆರಫಿಯ ( ವಿಕಿರಣ ಚಿಕಿತ್ಸೆ)  ಅವಶ್ಯಕತೆ ಇರುತ್ತದೆ. ಚಿಕಿತ್ಸೆಯ ಆಯ್ಕೆ ಮತ್ತು ನಿರ್ಧಾರವನ್ನು ವೈದ್ಯರು ನಿರ್ಧರಿಸುತ್ತಾರೆ. ವೈದ್ಯರ ಸಲಹೆಯನ್ನು ಚಾಚೂ ತಪ್ಪದೇ ಪಾಲಿಸಿದಲ್ಲಿ ಖಂಡಿತವಾಗಿಯೂ ಕ್ಯಾನ್ಸರ್ ರೋಗವನ್ನು ಗೆಲ್ಲಬಹುದು.  


ಅರ್ಬುದ ರೋಗ ಮತ್ತು ಅಪನಂಬಿಕೆಗಳು


ಕ್ಯಾನ್ಸರ್ ಕಾಯಿಲೆ ಅಥವಾ ಅರ್ಬುದ ರೋಗ ಎನ್ನುವುದು ಜೀವಕೋಶಗಳ ಅನಿಯಂತ್ರಿತ ವಿಭಜನೆಯಿಂದಾಗಿ ಉಂಟಾಗುವ ಮಾಂಸದ ಗಡ್ಡೆಯಾಗಿರುತ್ತದೆ. ಆಂಗ್ಲಭಾಷೆಯಲ್ಲಿ ಟ್ಯೂಮರ್ ಎಂದೂ ಕರೆಯುತ್ತಾರೆ. ಈ ಟ್ಯೂಮರ್ ಗಡ್ಡೆಗಳಲ್ಲಿ ಎರಡು ವಿಧಗಳಿವೆ. ಮಾರಣಾಂತಿಕವಾಗುವ ವೇಗವಾಗಿ ಬೆಳೆಯುವ ಮತ್ತು ಮಾಂಸದ ಗಡ್ಡೆಯ ಸುತ್ತಕವಚವಿಲ್ಲದ ಟ್ಯೂಮರ್‌ಗಳನ್ನು ಮಾಲಿಗ್ನೆಂಟ್ ಅಥವಾ ತೀವ್ರತರವಾಗಿ ಬೆಳೆಯುವ ಟ್ಯೂಮರ್ ಎನ್ನಲಾಗುತ್ತದೆ. ಇನ್ನು ನಿಧಾನಗತಿಯಿಂದ ಬೆಳೆಯುವ ಮಾರಣಾಂತಿಕವಲ್ಲದ ಹಾಗೂ ಗಡ್ಡೆಯ ಸುತ್ತ ಹೊರಗವಚ ಅಥವಾ ಕ್ಯಾಪ್ಸೂಲ್ ಇರುವ ಮಾಂಸದ ಗಡ್ಡೆಗಳನ್ನು ಬಿನೈನ್ ಗಡ್ಡೆಗಳು ಎನ್ನಲಾಗುತ್ತದೆ. ಒಟ್ಟಿನಲ್ಲಿ ಎಲ್ಲಾ ಗಡ್ಡೆಗಳನ್ನು ಸಾವ್ರತ್ರಿಕವಾಗಿ ಟ್ಯೂಮರ್ ಅಥವಾ ಮಾಂಸದ ಗಡ್ಡೆ ಎಂದುದಾಗಿ ಸಂಬೋಧಿಸಲಾಗುತ್ತದೆ. ಹಾಗೂ ಮಾಲಿಗ್ನೆಂಟ್ ಗಡ್ಡೆಗಳಿಗೆ ಹೆಚ್ಚಾಗಿ ಕ್ಯಾನ್ಸ್ರ್ ಎಂದೂ ಸಂಭೋಧಿಸಲಾಗುತ್ತದೆ. ಈ ಟ್ಯೂಮರ್ ದೇಹದ ಬೇರೆ ಬೇರೆ ಅಂಗಾಂಶಗಳಿಂದ ಜನ್ಮ ತಾಳಬಹುದು ಮತ್ತು ಯಾವ ಜೀವಕೋಶಗಳಿಂದ ಹುಟ್ಟಿದೆ ಎಂಬುದರ ಆದಾರದ, ಮೇಲೆ ಗಡ್ಡೆಗಳನ್ನು ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಸಾಮಾನ್ಯವಾಗಿ ಚರ್ಮದ ಮೇಲ್ಭಾಗದ ಪದರದಿಂದ ಹುಟ್ಟುವ ತೇವ್ರತರವಾದ ಗಡ್ಡೆಗಳನ್ನು ಕಾರ್ಸಿನೋಮಾ ಎನ್ನಲಾಗುತ್ತದೆ. ಉದಾಹರಣೆಗೆ ಥೈರಾಯಿಡ್ ಕಾರ್ಸಿನೋಮ, ಮೆದೋಜಿರಕ ಕ್ಯಾನ್ಸರ್, ಸ್ತನದ ಕ್ಯಾನ್ಸರ್ ಇತ್ಯಾದಿ ಇನ್ನು ಚರ್ಮದ ಕೆಳಗಿನ ಭಾಗದ ಎಲುಬು ಮಾಂಸಖಂಡಗಳು, ರಕ್ತನಾಳಗಳು, ಸ್ನಾಯಗಳು, ಅಸ್ಥಿಮಜ್ಜೆಗಳ ಮುಂತಾದ ಅಂಗಾಂಶಗಳಿಂದ ಹುಟ್ಟಿ ಬರುವ ತೀವ್ರತರವಾದ ಕ್ಯಾನ್ಸರ್‌ಗೆ ಸಾರ್ಕೋಮ ಎನ್ನಲಾಗುತ್ತದೆ. ಸಾರ್ಕೋಮಾ ಹೆಚ್ಚಾಗಿ ರಕ್ತದ ಮುಖಾಂತರ ದೇಹದೆಲ್ಲೆಡೆ ಬೇಗನೆ ಹರಡುತ್ತದೆ. ಇನ್ನೂ ಕಾರ್ಸಿನೋಮಾ ಹೆಚ್ಚಾಗಿ ಲಿಂಫ್ ಎಂಬ ಜೀವಕೋಶಗಳ ದ್ರವ್ಯಗಳ ಮುಖಾಂತರ ಹರಡುತ್ತದೆ.

 

ತಪ್ಪು ಕಲ್ಪನೆಗಳು


1. ಕಾನ್ಸರ್ ಚಿಕಿತ್ಸೆಗೆ ಸ್ಪಂದಿಸುವುದಿಲ್ಲ :- ಹೆಚ್ಚಿನ ಎಲ್ಲಾ ಕ್ಯಾನ್ಸರ್‌ಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿದಲ್ಲಿ ಚಿಕಿತ್ಸೆಯಿಂದ ಗುಣಪಡಿಸಬಹುದು. ಚಿಕಿತ್ಸೆಯಿಂದ ಗುಣಪಡಿಸಲಾಗದ ಒಂದೆರಡು ಮೆದುಳಿನ ತೀವ್ರತರವಾದ ಕ್ಯಾನ್ಸರ್‌ಗಳು ಇದೆಯಾದರೂ, ಹೆಚ್ಚಿನ ಎಲ್ಲಾ ಕ್ಯಾನ್ಸರ್‌ಗಳು ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ನೀಡಿದರೆ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ.


2. ಕ್ಯಾನ್ಸರ್ ಇರುವವರನ್ನು ಮುಟ್ಟಬಾರದು, ಅದು ಸ್ಪರ್ಶದಿಂದ ಹರಡುತ್ತದೆ :- ಇದೊಂದು ಶುದ್ಧ ಸುಳ್ಳು. ಕ್ಯಾನ್ಸರ್ ಸೋಂಕು ರೋಗವಲ್ಲ, ಇದು ಜೀವಕೋಶಗಳಲ್ಲಿ ಉಂಟಾಗುವ ಅನಿಯಂತ್ರಿತ ವಿಭಜನೆ. ಆದ ಕಾರಣ ಕ್ಯಾನ್ಸರ್ ರೋಗಿಯನ್ನು ಧಾರಾಳವಾಗಿ ಸ್ಪರ್ಶಿಸಬಹುದು ಮತ್ತು ಅರ್ಸ್ಪಶ್ಯರಂತೆ ಕಾಣಲೇಬಾರದು.


3. ಕ್ಯಾನ್ಸರ್ ಎನ್ನುವುದು ವಯಸ್ಕರ ಕಾಯಿಲೆ ಸಣ್ಣ ವಯಸ್ಸಿನಲ್ಲಿ ಈ ಖಾಯಿಲೆ ಬರುವುದಿಲ್ಲ :- ಇದು ಕೂಡಾ ತಪ್ಪು ನಂಬಿಕೆ. ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ, ಮತ್ತು ಕಲುಷಿತ ವಾತಾವರಣದಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಕ್ಯಾನ್ಸರ್ ಕಂಡು ಬರುತ್ತಿದೆ. ಕೆಲವೊಂದು ವಿರಳ ಕ್ಯಾನ್ಸರ್‌ಗಳು ಸಣ್ಣ ಮಕ್ಕಳಲ್ಲಿ ಮಾತ್ರ ಕಂಡು ಬರುತ್ತದೆ. ಉದಾಹರಣೆಗೆ ಲಿಂಪೋಮಾ, ಅದೇ ರೀತಿ ಲ್ಯುಕೋಮಿಯಾ ಎಂಬ ರಕ್ತದ ಕ್ಯಾನ್ಸರ್ ಮಕ್ಕಳಲ್ಲಿ ಹೆಚ್ಚು ಕಂಡು ಬರುತ್ತದೆ. ಕ್ಯಾನ್ಸರ್‌ಗೆ ಯಾವುದೇ ವಯಸ್ಸಿನ ನಿರ್ಭಂಧವಿಲ್ಲ. 


4. ಶಸ್ತ್ರ ಚಿಕಿತ್ಸೆಯಿಂದಲೇ ಎಲ್ಲಾ ಕ್ಯಾನ್ಸರ್‌ಗಳನ್ನು ಗುಣಪಡಿಸಲಾಗುತ್ತದೆ:- ಇದು ಕೂಡ ತಪ್ಪು ಕಲ್ಪನೆ. ಹೆಚ್ಚಿನ ಎಲ್ಲಾ ಕ್ಯಾನ್ಸರ್ ಖಾಯಿಲೆಗೆ ಶಸ್ತç ಚಿಕಿತ್ಸೆ ಬೇಕೇ ಬೇಕು. ಆದರೆ ಕೆಲವೊಂದು ಕ್ಯಾನ್ಸರ್‌ಗಳಿಗೆ ಬರೀ ಕಿಮೋಥೆರಪಿ ಅಥವಾ ರೇಡಿಯೋಥೆರಫಿ ಮಾತ್ರ ನೀಡಲಾಗುತ್ತದೆ. ಯಾವ ಕ್ಯಾನ್ಸರ್‌ಗೆ ಯಾವ ಚಿಕಿತ್ಸೆ ಎಂಬುದನ್ನು ವೈದ್ಯರೇ ನಿರ್ಧರಿಸುತ್ತಾರೆ. ಉದಾಹರಣೆ ಗಂಟಲಿನ ಕ್ಯಾನ್ಸರಿಗೆ ವಿಕಿರಣ ಚಿಕಿತ್ಸೆ ಮತ್ತು ಸ್ತನದ ಕ್ಯಾನ್ಸರಿಗೆ ಕಿಮೋಥೆರಫಿ ಇತ್ಯಾದಿ. ಕೆಲವೊಮ್ಮೆ ಒಂದೇ ರೋಗಿಗೆ ಎಲ್ಲಾ ರೀತಿಯ ಚಿಕಿತ್ಸೆಯನ್ನು ಬಳಸಲಾಗುತ್ತದೆ. ಯಾವ ಅಂಗಾಂಶಗಳ ಕ್ಯಾನ್ಸರ್, ಅದರ ಗಾತ್ರ ಅದರ ಚರಿತ್ರೆ ಮತ್ತು ಹರಡುವ ವೇಗ ಇವುಗಳ ಮೇಲೆ ಅವಲಂಬಿತವಾಗಿ, ಯಾವ ಚಿಕತ್ಸೆ ಎಂದು ವೈದ್ಯರೇ ನಿರ್ಧರಿಸುತ್ತಾರೆ.  


5. ಎಲ್ಲಾ ಕ್ಯಾನ್ಸರ್ ಖಾಯಿಲೆ ಅನುವಂಶಿಕವಾಗಿ ಬರುತ್ತದೆ. ಇದು ತಪ್ಪ್ಪುಕಲ್ಪನೆ:- ಕೆಲವೊಂದು ಕ್ಯಾನ್ಸರ್ ಮಾತ್ರ ತಂದೆ ತಾಯಿಂದಿರಿಂದ ಮಕ್ಕಳಿಗೆ  ಬರಬಹುದು. ಉದಾ:- ಸ್ತನದ ಕ್ಯಾನ್ಸರ್ ಅಥವಾ ದೊಡ್ಡ ಕರುಳಿನ ಕ್ಯಾನ್ಸರ್. ಹೆಚ್ಚಿನ ಎಲ್ಲಾ ಕ್ಯಾನ್ಸರ್‌ಗಳು ಬಾಹ್ಯ ಕಾರಣಗಳಾದ ಮದ್ಯಪಾನ ಧೂಮಪಾನ ಮತ್ತು ಕಲುಷಿತ ವಾತಾವರಣದಿಂದ ಉಂಟಾಗುತ್ತದೆ.


6. ಕ್ಯಾನ್ಸರ್‌ನ್ನು ಲಸಿಕೆಯಿಂದ ತಡೆಗಟ್ಟಬಹುದು:- ಇದು ಕೂಡ  ತಪ್ಪು ಕಲ್ಪನೆ ಈ ವರೆಗೆ ಕ್ಯಾನ್ಸರ್‌ಗೆ ಲಸಿಕೆ ಬಂದಿಲ್ಲ ಈ ನಿಟ್ಟಿನಲ್ಲಿ ಸಂಶೋಧನೆ ನಡೆಯತ್ತಿದೆ.  ಆರೋಗ್ಯ ಪೂರ್ಣವಾದ ಸಮತೋಲಿತ ಆಹಾರ, ಉತ್ತಮ ದೈಹಿಕ ವ್ಯಾಯಾಮ, ನೈಸರ್ಗಿಕ ಜೀವನ ಪದ್ಧತಿ, ಮದ್ಯಪಾನ, ಧೂಮಪಾನ ರಹಿತ ಜೀವನ ಶೈಲಿ ರೂಡಿಸಿಕೊಂಡು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡಲ್ಲಿ ಕ್ಯಾನ್ಸರ್  ರೋಗ ಬರುವ ಸಾಧ್ಯತೆ ಕ್ಷೀಣಿಸುತ್ತದೆ.


7. ಕ್ಯಾನ್ಸರ್ ರೋಗವನ್ನು ರಕ್ತ ಪರೀಕ್ಷೆಯಿಂದ ಪತ್ತೆ ಹಚ್ಚಲು ಸಾಧ್ಯವಿಲ್ಲ:- ಇದೂ ಕೂಡಾ ತಪ್ಪು ನಂಬಿಕೆ. ಕೆಲವೊಂದು ಉದರದ ಕರುಳಿನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ಸ್ತನದ ಕ್ಯಾನ್ಸರ್, ಮೆದೋಜಿರಕ ಗ್ರಂಥಿಯ ಕ್ಯಾನ್ಸರ್, ಯಕೃತ್ತಿನ ಕ್ಯಾನ್ಸರ್, ಬಾಯಿಯ ಕ್ಯಾನ್ಸರ್‌ಗಳ ಇರುವಿಕೆಯನ್ನು ರಕ್ತದ ಪರೀಕ್ಷೆ ಮಾಡಿ ಆರಂಭಿಕ ಹಂತದಲ್ಲಿಯೇ ಕಂಡುಹಿಡಿಯಬಹುದು. ವೃಷಣದ ಕ್ಯಾನ್ಸರ್, ಸ್ತನದ ಕ್ಯಾನ್ಸರ್‌ಗಳನ್ನು ‘ಟ್ಯೂಮರ್ ಮಾರ್ಕರ್’ ಎಂಬ ಕ್ಯಾನ್ಸರ್  ಮಾಹಿತಿ ಇರುವ ಜೀನ್ ಮುಖಾಂತರ  ಪತ್ತೆ ಹಚ್ಚಬಹುದು. ಹೆತ್ತವರಲ್ಲಿ ಈ ರೀತಿ ಕ್ಯಾನ್ಸರ್ ಬಂದಿದಲ್ಲಿ, ಮಕ್ಕಳು ನಡು ವಯಸಿನಲ್ಲಿ ರಕ್ತ ಪರೀಕ್ಷೆ ಮಾಡಿಸಿ ಕ್ಯಾನ್ಸರ್ ಇರುವಿಕೆಯನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಬಹುದು.


8. ಎಲ್ಲಾ ಕ್ಯಾನ್ಸರ್‌ಗಳು ಬಹಳ ವೇಗದಲ್ಲಿ ಬೆಳೆಯುತ್ತದೆ ಮತ್ತು ಹರಡುತ್ತದೆ:- ಇದೂ ಕೂಡ ತಪ್ಪು ಕಲ್ಪನೆ. ಬಿನೈನ್ ಗಡ್ಡೆಗಳು ಬಹಳ ನಿಧಾನವಾಗಿ ಬೆಳೆಯುತ್ತದೆ ಮತ್ತು ಹರಡುವುದಿಲ್ಲ ಅದರ ಸುತ್ತಲೂ ಕವಚವಿರುತ್ತದೆ.  ನೋವು ಕೂಡ ಇರುವುದಿಲ್ಲ . ಅದರೆ ಮಾಲಿಗ್ನೆಂಟ್  ಗೆಡ್ಡೆಗಳು ಬಹಳ ವೇಗವಾಗಿ ಬೆಳೆಯುತ್ತದೆ ಮತ್ತು ಹರಡುತ್ತದೆ.  ಇದರ ಸುತ್ತ ಕವಚವಿರುವುದಿಲ್ಲ ಬಯಾಸ್ಸಿ ಪರೀಕ್ಷೆ ಮುಖಾಂತರ ಯಾವ ರೀತಿಯ ಕ್ಯಾನ್ಸರ್ ಎಂದು  ಪತ್ತೆ ಹಚ್ಚಿ ರೋಗ ನಿರ್ಣಯ ಮಾಡಿ ಸೂಕ್ತ  ಚಿಕಿತ್ಸೆ ನೀಡಲಾಗುತ್ತದೆ.


9. ಕ್ಯಾನ್ಸರ್  ರೋಗ ರಕ್ತ ಬೀಜಾಸುರನ ರೀತಿಯಲ್ಲಿ ಎಲ್ಲಡೆ ಮರಿ ಇಡುತ್ತದೆ.  ಮತ್ತು ರೋಗಿಯನ್ನು ಬೇಗನೆ ಕೊಲ್ಲುತ್ತದೆ:- ಇದೂ ಕೂಡಾ  ತಪ್ಪು ಕಲ್ಪನೆ . ಬಯಾಪ್ಸಿ ಪರೀಕ್ಷೆ ಮುಖಾಂತರ,  ಕ್ಯಾನ್ಸರ್ ರೋಗದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಬಳಿಕ, ಸ್ಕಾನ್ ಮುಖಾಂತರ ಗಡ್ಡೆಯ ಗಾತ್ರ ಅಕಾರ, ಉದ್ದ, ಅಗಲ, ಎತ್ತರ ಎಲ್ಲವನ್ನೂ ತಿಳಿಯಲಾಗುತ್ತದೆ. ಮತ್ತು ಪೆಟ್ ಸ್ಕ್ಯಾನ್ ಮುಖಾಂತರ ದೇಹದ ಬೇರೆ ಅಂಗಾಂಗಳಿಗೆ ಕ್ಯಾನ್ಸರ್  ಹರಡಿದೆಯೋ  ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ. ಕ್ಯಾನ್ಸರ್‌ನ  ಮೂಲ ಅಂಗಾಂಶಗಳ ಮಾಹಿತಿ, ಗಾತ್ರ, ಆಳ, ಮತ್ತು ಪ್ರಕೃತಿಗಳನ್ನು  ತಾಳೆ ಹಾಕಿ ರೋಗ ನಿರ್ಣಯ ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಎಲ್ಲಾ ಕ್ಯಾನ್ಸರ್‌ಗಳಿಗೆ ಚಿಕಿತ್ಸೆ ಲಭ್ಯವಿದೆ. ಆರಂಭಿಕ ಹಂತದಲ್ಲಿ ಗುರುತಿಸಿದಲ್ಲಿ ಶೇಕಡಾ  95ರಷ್ಟು ಕ್ಯಾನ್ಸರ್ ಗಳನ್ನು ಪರಿಣಾಮಕಾರಿಯಾಗಿ ಗುಣಪಡಿಸಬಹುದಾಗಿದೆ.


10. ಕ್ಯಾನ್ಸರ್ ರೋಗಕ್ಕೆ ಇಂಗ್ಲೀಷ್ ಮದ್ದಿಗಿಂತ ಆಯುರ್ವೇದದ ಚಿಕಿತ್ಸೆ ಹೆಚ್ಚು ಪರಿಣಾಮಕಾರಿ:- ಇದೊಂದು ಬಹಳ  ಅತಂಕಕಾರಿ ಮತ್ತು ಅಪಾಯಕಾರಿಯಾದ ತಪ್ಪು ಕಲ್ಪನೆ . ಹೆಚ್ಚಿನ ಎಲ್ಲಾ ಕ್ಯಾನ್ಸರ್‌ಳನ್ನು ಶಸ್ತ್ರ ಚಿಕಿತ್ಸೆ  ಹಾಗೂ ಕಿಮೊಥೆರಪಿ ಮತ್ತು ರೆಡಿಯೋಥೆರಪಿ ಯಿಂದ ಗುಣಪಡಿಸಬಹುದು ಎಂದು ಸಂಶೋಧನೆಗಳಿಂದ  ಮತ್ತು ಚರಿತ್ರೆಗಳಿಂದ ಸಾಬೀತಾಗಿದೆ. ಆಯುರ್ವೇದದ  ಅಥವಾ ಇನ್ನಾವುದೇ ಮಂತ್ರ, ತಂತ್ರ, ತಾಯಿತ ಹಾಗೂ ರ‍್ಯಾಯ ಚಿಕಿತ್ಸೆಯಿಂದ ಗುಣಪಡಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು  ಜನರು ಜೀರ್ಣಿಸಿಕೊಳ್ಳಬೇಕು. ಆರಂಭಿಕ ಹಂತದಲ್ಲಿರುವ ಕ್ಯಾನ್ಸರ್ ಗೆಡ್ಡೆಗೆ ಮಂತ್ರ, ತಂತ್ರ, ತಾಯಿತ, ಎಂದು ಒಡಾಡಿ ಸಮಯ ವ್ಯರ್ಥವಾದಲ್ಲಿ, ಕ್ಯಾನ್ಸರ್  ದೇಹದೆಲ್ಲೆಡೆ  ಹರಡಿ, ಪರಿಣಾಮಕಾರಿ ಚಿಕಿತ್ಸೆ  ನೀಡಲು ವೈದ್ಯರಿಗೆ ಸಾಧ್ಯವಾಗದು. ಈ ಕಾರಣದಿಂದ, ಸದ್ಯದ ಪರಿಸ್ಥಿತಿಯಲ್ಲಿ ಅಧುನಿಕ ವೈಜ್ಞಾನಿಕವಾದ  ಚಿಕಿತ್ಸಾ ಪದ್ಧತಿಯನ್ನು ಧಿಕ್ಕರಿಸಿ, ರ‍್ಯಾಯ ಚಿಕಿತ್ಸೆಗೆ ಮೊರೆ ಹೋಗುವುದು ಮೂರ್ಖತನದ ಪರಮಾವಧಿ ಎಂದುದು ನಿಸ್ಸಂಶಯವಾಗಿ ಹೇಳಬಹುದು. ಒಟ್ಟಿನಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಸ್ಪಂದಿಸುವ ಮತ್ತು ಗುಣಪಡಿಸಬಹುದಾದ ರೋಗ ಎಂಬ ಸತ್ಯವನ್ನು ಜನರು ಅರ್ಥಮಾಡಿಕೊಂಡು ಸಹಕರಿಸಿದರೆ ವೈದ್ಯರ  ಅರ್ಧ ಕೆಲಸ ಸುಗಮವಾದಂತೆ ಎಂಬುದು ಸರ್ವಕಾಲಿಕ ಸತ್ಯ. ನನಗೆ ಕ್ಯಾನ್ಸರ್ ರೋಗ ಬಂದಿದೆ ಎಂದು ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತೆ ವರ್ತಿಸಿ ಸಮಯ ವರ್ಥ ಮಾಡಿದ್ದಲ್ಲಿ, ಗುಣಪಡಿಸಬಹುದಾದ ಕ್ಯಾನ್ಸರ್ ಕೂಡಾ ದೇಹದೆಲ್ಲೆಡೆ  ಹರಡಿ ಗುಣಪಡಿಸಲಾಗದ  ಕ್ಯಾನ್ಸರ್ ಆಗಿ ಪರಿವರ್ತನೆಗೊಳ್ಳುವ ಸಾಧ್ಯತೆಯೂ ಇದೆ.


ಕ್ಯಾನ್ಸರ್ ಮತ್ತು ಹತ್ತು ಪ್ರಶ್ನೆಗಳು


ಕ್ಯಾನ್ಸರ್ ಬಗ್ಗೆ ಜನರಲ್ಲಿ ಭಯದ ಜೊತೆಗೆ ಹತ್ತು ಹಲವು ಸಂದೇಹಗಳು ಮತ್ತು ಕುತೂಹಲ ಇದ್ದೆ ಇದೆ. ಎಲ್ಲಾ ಕ್ಯಾನ್ಸರನ್ನು ಗುಣಪಡಿಸುವ ಔಷದಿ ಇಲ್ಲದ ಕಾರಣ ಜನರು ತಲೆಗೊಂದರಂತೆ ಮಾತನಾಡುತ್ತಾರೆ. ಕ್ಯಾನ್ಸರ್ ಗಳಲ್ಲಿ ನೂರು ವಿಧದ ಕ್ಯಾನ್ಸರ್‌ಗಳು ಇದೆ. ಕೆಲವೊಂದು ಕ್ಯಾನ್ಸರ್‌ಗಳಿಗೆ ಬರೀ ಸರ್ಜರಿಯ ಅವಶ್ಯಕತೆ ಇದ್ದಲ್ಲಿ, ಕೆಲವೊಂದು ಕ್ಯಾನ್ಸರ್‌ಗಳಿಗೆ ಬರೀ ಕಿಮೋಥೆರಪಿಯಿಂದಲೇ ಗುಣಮುಖವಾಗುವ ಸಾಧ್ಯತೆಯೂ ಇದೆ .ಉದಾಹರಣೆಗೆ ಲಿಂಪೋಮಾ ಎಂಬ ಕ್ಯಾನ್ಸರಿಗೆ ಸರ್ಜರಿಯ ಅವಶ್ಯಕತೆ ಇಲ್ಲ. ಬರೀ ಕಿಮೋಥೆರಪಿ ನೀಡಿ ರೋಗವನ್ನು ಗುಣಪಡಿಸಲಾಗುತ್ತದೆ. ಅದೇರೀತಿ ಬರ್ಕಿಟ್ಸ್ ಲಿಂಪೋಮಾ ಎಂಬ ರೋಗಕ್ಕೂ ಬರೀ ಕಿಮೋಥೆರಪಿ ಮಾತ್ರ ನೀಡಲಾಗುತ್ತದೆ. ಕ್ಯಾನ್ಸರ್ ಬರಲು ನಿರ್ದಿಷ್ಟವಾದ ಒಂದು ಕಾರಣ ಇಲ್ಲ. ಹತ್ತು ಹಲವು ಕಾರಣಗಳು ಸೇರಿ ಕ್ಯಾನ್ಸರ್ ಬರುವುದರಿಂದ  ಕೆಲವೊಂದು ಪ್ರಶ್ನೆಗಳಿಗೆ ಉತ್ತರ ನೀಡಲು ವೈದ್ಯರಿಗೂ ಬಹಳ ಕಷ್ಟವಾಗುತ್ತದೆ.


1. ನನ್ನಅಜ್ಜ ಕಳೆದ 40ವರ್ಷಗಳಿಂದ ಎಲೆ ಅಡಿಕೆ ಹೊಗೆಸೊಪ್ಪು ತಿನ್ನುತ್ತಿದ್ದಾರೆ ಆದರೂ ಅವರಿಗೆ ಕ್ಯಾನ್ಸರ್ ಬಂದಿಲ್ಲ ಯಾಕೆ?

 

ಇದೊಂದು ಉತ್ತರ ನೀಡಲುಬಹಳ ಕಷ್ಟಕರವಾದ ಪ್ರಶ್ನೆ. ಸಾಮಾನ್ಯವಾಗಿ ಎಲೆ ಅಡಿಕೆ ತಂಬಾಕು ಸೇವಿಸುವವರಲ್ಲಿ 90 ಶೇಕಡಾ ಮಂದಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಹಾಗೆಂದ ಮಾತ್ರಕ್ಕೆ ತಂಬಾಕು ಸೇವಿಸಿದ ಎಲ್ಲರಿಗೂ ಬಾಯಿ ಕ್ಯಾನ್ಸರ್ ಬರಲೇಬೇಕೆಂದಿಲ್ಲ. 


2. ನನ್ನ ತಂದೆಗೆ ಬೀಡಿ, ಸಿಗರೇಟು, ನಶ್ಯ, ತಂಬಾಕು ಅಥವಾ ಮಧ್ಯಪಾನ ಮುಂತಾದ ಯಾವುದೇ ಚಟಗಳಿಲ್ಲ. ಬರೀ ಶಾಖಹಾರಿ ಮತ್ತು ನಿರಂತರ ಯೋಗ, ಧ್ಯಾನ ಪ್ರಾಣಯಾಮ ಮಾಡುತ್ತಾರೆ. ಆದರೂಅವರಿಗೆ ಬಾಯಿ ಕ್ಯಾನ್ಸರ್ ಬಂದಿದೆ ಯಾಕೆ?


ಈ ಪ್ರಶ್ನೆಗೂ ವೈದ್ಯರ ಬಳಿ ಉತ್ತರ ಸಿಗಲಿಕ್ಕಿಲ್ಲ. ಕ್ಯಾನ್ಸರ್ ಬಂದಿರುವಎಲ್ಲಾ ರೋಗಿಗಳಿಗೂ ಚಟಗಳು ಇರಲೇಬೇಕೆಂದಿಲ್ಲ. ಕೆಲವೊಮ್ಮೆ ವಿರಳ ಸಂದರ್ಭಗಳಲ್ಲಿ ಯಾವುದೇ ದುರಾಭ್ಯಾಸವಿಲ್ಲದಿದ್ದರೂ ಬಾಯಿ ಕ್ಯಾನ್ಸರ್ ಬರುವ ಸಾಧ್ಯಾತೆ ಇದೆ .ಆದರೆ ಕೆಲವೊಂದು ವಂಶಪಾರಂರ‍್ಯವಾಗಿ ಬರಬಹುದು .ಆದರೆ ಬಾಯಿ ಕ್ಯಾನ್ಸರ್ ಖಂಡಿತವಾಗಿಯೂ ವಂಶಪಾರಂಪರ‍್ಯವಾಗಿ ಬರುವುದಿಲ್ಲ.


3. ವಿಕಿರಣದ ಕಾರಣದಿಂದ ಕ್ಯಾನ್ಸರ್ ಬರುತ್ತದೆ ಎಂದು ನಿವೇ ವೈದ್ಯರು ತಿಳಿಸುತ್ತೀರಿ ಮತ್ತೆ ಪುನಃ ವಿಕಿರಣ ಚಿಕಿತ್ಸೆಯನ್ನೇ ಕ್ಯಾನ್ಸರಿಗೆ ನೀಡುತ್ತೀರಿ ಯಾಕೆ? 


ಸಣ್ಣ ಪ್ರಮಾಣದದ ವಿಕಿರಣಕ್ಕೆ ದೇಹವನ್ನು ಪದೇ ಪದೇ ಒಡ್ಡುವುದರಿಂದ ದೇಹದಲ್ಲಿನ ಜೀವಕೋಶಗಳ ಒಳಗಿನ ವರ್ಣತಂತುವಿನ ರಚನೆಯಲ್ಲಿ ವ್ಯತ್ಯಾಸವಾಗಿ ಜೀವಕೋಶಗಳ ರೂಪಾಂತರ ಹೊಂದಿ, ತನ್ನ ವಿಭಜನೆಯ ಮೇಲಿನ ನಿಯಂತ್ರಣ ತಪ್ಪಿ ಹೋಗಿ ಕ್ಯಾನ್ಸರ್ ಜೀವಕೋಶಗಳಾಗಿ ಪರಿವರ್ತನೆ ಹೊಂದುತ್ತದೆ.ಆದರೆ ವಿಕಿರಣ ಚಿಕಿತ್ಸೆಯಲ್ಲಿ ಕ್ಯಾನ್ಸರ್ ಹೊಂದಿರುವ ಜೀವಕೋಶಗಳ ಮೇಲೆ ನಿರಂತರವಾಗಿ ವಿಕಿರಣ ನೀಡಿ, ಜೀವಕೋಶಗಳನ್ನು ನಾಶಪಡಿಸಲಾಗುತ್ತದೆ. ಇಲ್ಲಿ ಹೆಚ್ಚಿನ ವಿಕಿರಣವನ್ನು ತುಂಬ ಕಡಿಮೆ ಸಮಯದಲ್ಲಿ ಅವಧಿಗೆ ಜೀವಕೋಶಗಳಿಗೆ ತಾಗುವಂತೆ ಮಾಡಿ ಕ್ಯಾನ್ಸರ್ ಜೀವಕೋಶಗಳನ್ನು ಸಾಯಿಸಲಾಗುತ್ತದೆ.


4. ನಾನು ಬರಿ ಎಲೆ ಅಡಿಕೆ ಮಾತ್ರತಿನ್ನುತ್ತೇನೆ. ಆದರೆತಂಬಾಕು (ಹೊಗೆಸೊಪುö್ಪ) ಬಳಸುವುದಿಲ್ಲ ಹಾಗಾಗಿ ನನಗೆ ಕ್ಯಾನ್ಸರ್ ಬರಲಿಕ್ಕಿಲ್ಲ.

 

ಇದೊಂದು ಯಕ್ಷ ಪ್ರಶ್ನೆ ಎಂದರೂ ತಪ್ಪಲ್ಲ. ಯಾಕೆಂದರೆ ಎಲೆ, ಅಡಿಕೆಕೂಡಾ ಹೊಗೆ ಸೊಪ್ಪಿನಷ್ಟೆ ಅಪಾಯಕಾರಿ, ನಿರಂತರವಾಗಿ ಬಾಯಿಯೊಳಗಿನ ನುಣುಪಾದ ವಸಡು, ನಾಲಿಗೆ ಮತ್ತು ಬಾಯಿ ಮೆಲ್ಪದರಕ್ಕೆ ಅತ್ಯಾಚಾರ ಆದಾಗ, ಜೀವಕೋಶಗಳು ಮಾರ್ಪಾಡು ಹೊಂದಿ ಕ್ಯಾನ್ಸರ್ ಆಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ನಾನು ಬರೀ ಹೊಗೆಸೊಪ್ಪು ಇಲ್ಲದ ಎಲೆ ಅಡಿಕೆ ತಿನ್ನುತ್ತೇನೆ. ನನಗೆ ಕ್ಯಾನ್ಸರ್ ಬರುವುದಿಲ್ಲ ಎನ್ನುವುದು ಮೂರ್ಖತನದ ಪರಮಾವದಿ. ಅತಿಯಾದರೆ ಅಮೃತವೂ ವಿಷ ಎಂಬಂತೆ ಎಲ್ಲವನ್ನು ಹಿತಮಿತವಾಗಿ ಉಪಯೋಗಿಸಬೇಕು ಎಂಬ ಸತ್ಯವನ್ನು ಎಲ್ಲಾ ಮನುಷ್ಯರು ಮನಗಾಣಲೇಬೇಕು.  


5. ಆಹಾರ ಪದ್ದತಿಗೂ ಬಾಯಿ ಕ್ಯಾನ್ಸರ್‌ಗೂ ನೇರವಾದ ಸಂಬಂಧ ಇದೆಯೇ?

 

ನಮ್ಮ ಆಹಾರ ಪದ್ದತಿಗೂ, ನಮ ಜೀವನ ಶೈಲಿಗೂ ಮತ್ತು ಬಾಯಿ ಕ್ಯಾನ್ಸರ್‌ಗೂ ನೇರವಾದ ಸಂಬಂಧವಿದೆ. ನಾವು ತಿನ್ನುವ ಆಹಾರದಲ್ಲಿ ವಿಟಮಿನ್ ಎ, ಬಿ, ಸಿ, ಇ ಮತ್ತು ಡಿ ಇದ್ದಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ. ಹಸಿ ತರಕಾರಿ, ಸೊಪ್ಪು, ಕಾಯಿಪಲ್ಲೆಗಳು, ಕ್ಯಾರೆಟ್, ಮೂಲಂಗಿ ಮುಂತಾದ ತರಕಾರಿಗಳಲ್ಲಿ ಕ್ಯಾನ್ಸರ್ ನಿರೊಧಕ ಶಕ್ತಿ ಇರುವ ‘ಆಂಟಿ ಓಕ್ಸಿಡೆಂಟ್’ ಎಂಬ ರಾಸಾಯನಿಕ ಇರುತ್ತದೆ. ಈ ಕಾರಣದಿಂದಲೇ ಹಸಿ ತರಕಾರಿ ಹಣ್ಣು ಸೊಪ್ಪು ಕಾಯಿ ಪಲ್ಯೆಗಳನ್ನು ಹೆಚ್ಚು ಸೇವಿಸಬೇಕು. ಆಹಾರ ಕೆಡದಂತೆ ಬಳಸುವ ರಾಸಾಯನಿಕಗಳು ಮತ್ತು ಬಣ್ಣ ಮಿಶ್ರಿತ ಸಿದ್ದ ಆಹಾರಗಳು ಬಹುಷಃ ಜೀವಕೋಶಗಳ ಮೇಲೆ ದುಷ್ಪರಿಣಾಮ ಬೀರಿ, ಜೀವಕೋಶಗಳು ರೂಪಾಂತರ ಹೊಂದುವAತೆ ಪ್ರಚೋದಿಸುತ್ತದೆ.


6. ಬಾಯಿಯ ಸ್ವಚ್ಚತೆಗೂ, ಬಾಯಿಯ ಕ್ಯಾನ್ಸರ್‌ಗೂ ಸಂಬಂಧ ಇದೆಯೇ?

 

ಖಂಡಿತವಾಗಿಯೂ ಇದೆ, ಬಾಯಿಯನ್ನು ಯಾವಾಗಲೂ ಸ್ವಚ್ಚವಾಗಿ ಇಡತಕ್ಕದ್ದು, ಬಾಯಿ ಸ್ವಚ್ಚವಾಗಿರದಿದ್ದಲ್ಲಿ ಬಾಯಿಯಲ್ಲಿ ವೈರಾಣುಗಳು ವಿಜ್ರಂಬಿಸಿ, ಕ್ಯಾನ್ಸರ್ ಬೆಳೆಯಲು ಪೂರಕವಾದ ವಾತಾವರಣ ಕಲ್ಪಿಸಿ ಕೊಡಬಹುದು ಹ್ಯೂಮನ್ ಪಾಪಿಲೋಮ ಎಂಬ ವೈರಾಣು ಕ್ಯಾನ್ಸರ್‌ಕಾರಕ ಎಂದು ಸಂಶೋದನೆಗಳಿಂದ ಸಾಬೀತಾಗಿದೆ.


7. ಬಾಯಿ ಕ್ಯಾನ್ಸರ್ ಜಾಸ್ತಿ ಪುರುಷರಲ್ಲಿ ಬರುತ್ತದೆ ಮಹಿಳೆಯರಿಗೆ ಕಡಿಮೆ ಬರುತ್ತದೆ ಯಾಕೆ? 


ನಮ್ಮ ಭಾರತದೇಶದಲ್ಲಿ ಪುರುಷರು ಜಾಸ್ತಿ ತಂಬಾಕು ಮತ್ತು ದೂಮಪಾನ ಮಾಡುವ ಕಾರಣದಿಂದ ಪುರುಷರಿಗೆ ಹೆಚ್ಚು ಬಾಯಿ ಕ್ಯಾನ್ಸರ್ ಬರುತ್ತದೆ.ಆದರೆ ಪಾಶ್ಯಾತ್ಯ ದೇಶಗಳಲ್ಲಿ ಹೆಂಗಸರೂ ಗಂಡಸರಷ್ಟೆ ಧೂಮಪಾನ, ತಂಬಾಕು ಬಳಕೆ ಮಾಡುವುದರಿಂದ ಇಬ್ಬರಿಗೂ ಬಾಯಿ ಕ್ಯಾನ್ಸರ್ ಬರುವ ಸಮಾನ ಸಾಧ್ಯತೆ ಇದೆ.


8. ಗೊಮೂತ್ರಕುಡಿಯುವುದರಿಂದ ಬಾಯಿ ಕ್ಯಾನ್ಸರ್ ಸಂಪೂರ್ಣವಾಗಿ ಗುಣವಾಗುತ್ತದೆ ಸರ್ಜರಿ ಅಗತ್ಯವಿಲ್ಲ.

 

ಗೋಮೂತ್ರ ಕ್ಯಾನ್ಸರ್‌ ಗುಣಪಡಿಸುತ್ತದೆ ಎಂಬುದರ ಬಗ್ಗೆ ಯಾವುದೇ ಪುರಾವೆ ಇಲ್ಲ ಮತ್ತು ದೀರ್ಘಕಾಲಿಕ ಸಂಶೋದನೆ ನಡೆದಿಲ್ಲ. ಸರ್ಜರಿ ಬಾಯಿ ಕ್ಯಾನ್ಸರಿಗೆ ಸರಿಯಾದ ಚಿಕಿತ್ಸೆ ಎಂದು ಅಂಕಿ ಅಂಶಗಳಿಂದ ಮತ್ತು ಚರಿತ್ರೆೆಯಿಂದ ಸಾಬೀತಾಗಿದೆ.


9. ಸೆಲ್‌ಪೋನ್ ಜಾಸ್ತಿ ಬಳುಸುವುದರಿಂದ ಕ್ಯಾನ್ಸರ್ ಬರಲು ಸಾಧ್ಯತೆ ಇದೆಯಾ? 


ಈ ವಿಚಾರದ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆಯುತ್ತಿದೆ.  ದಿನವೊಂದರಲ್ಲಿ 6ರಿಂದ 10 ಗಂಟೆಗಳ ಕಾಲ ಮೊಬೈಲ್ ಬಳಸಿದಲ್ಲಿ, ಬಹಳಷ್ಟು ವಿಕಿರಣ ದೇಹಕ್ಕೆ ಮತ್ತು ಮೆದುಳಿಗೆ ಸೇರಿ ಜೀವಕೋಶಗಳಿಗೆ ಹಾನಿ ಮಾಡುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಬಹುದು.


10. ನಿರಂತವಾಗಿ ‘ಆಯಿಲ್ ಪುಲ್ಲಿಂಗ್’ ಮಾಡುವುದರಿಂದ ಬಾಯಿ ಕ್ಯಾನ್ಸರ್ ಬರುವುದಿಲ್ಲ ಇದು ನಿಜವೇ?

 

ಆಯಿಲ್ ಪುಲ್ಲಿಂಗ್ ಮತ್ತು ಬಾಯಿ ಕ್ಯಾನ್ಸರ್ ಬರದಿರುವುದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಯಾವುದೇ ಒಂದು ವಿಚಾರದ ಬಗ್ಗೆ ಸ್ಪಷ್ಟತೆ ಮತ್ತು ಸತ್ಯ ವಿಚಾರ ತಿಳಿಯಬೇಕಾದಲ್ಲಿ, ನಿರಂತರ ಸಂಶೋಧನೆ ನಡೆದು, ಪರಿಪೂರ್ಣ ಮಾಹಿತಿ ದೊರಕಿದ ಬಳಿಕವೇ ಸತ್ಯ ಹೊರ ಬರುತ್ತದೆ. ಆಯಿಲ್ ಪುಲ್ಲಿಂಗ್ ಮಾಡಿದರೆ ಬಾಯಿ ಕ್ಯಾನ್ಸರ್ ಬರುವುದಿಲ್ಲ ಎಂಬ ವಿಚಾರಕ್ಕೆ ಯಾವುದೇ ಪುರಾವೆ ಇರುವುದಿಲ್ಲ.


ಕೊನೆಮಾತು


ಅರ್ಬುದ ರೋಗ ಎನ್ನುವುದು ಗುಣಪಡಿಸಲಾಗದ ರೋಗ ಎನ್ನುವುದು ಖಂಡಿತವಾಗಿಯೂ ನಿಜವಲ್ಲ. ಆರಂಭಿಕ ಹಂತದಲ್ಲಿ ಗುರುತಿಸಿದಲ್ಲಿ ಸೂಕ್ತ  ಚಿಕಿತ್ಸೆ ನೀಡಬಹುದು. ಮತ್ತು ನಿರಂತರವಾಗಿ ವೈದ್ಯರ ಸಲಹೆ ಮಾರ್ಗದರ್ಶನಗಳ ಮುಖಾಂತರ ನೆಮ್ಮದಿಯಿಂದ ಬದುಕಬಹುದು. ಬಾಯಿ, ಸ್ತನ, ಜನನಾಂಗ ಮುಂತಾದ ಎಲ್ಲಾ ಅರ್ಬುದ ರೋಗಗಳನ್ನು ಆರಂಭದಲ್ಲಿ ಗುರುತಿಸಿದಲ್ಲಿ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು. ಆದರೆ ಮುಂದುವರಿದ ಹಂತದಲ್ಲಿ ಅರ್ಬುದ ರೋಗ ಚಿಕಿತ್ಸೆಗೆ ಖಂಡಿತ ಸ್ಪಂದಿಸಲಿಕ್ಕಿಲ್ಲ. ಮತ್ತು ಮಾರಣಾಂತಿಕವಾಗುವುದರಲ್ಲಿ  ಸಂಶಯವೇ ಇಲ್ಲ.  ಬಡತನ, ಅನಕ್ಷರತೆ ಅಜ್ಞಾನ, ಮೂಢನಂಬಿಕೆಗಳಿಂದ ತುಂಬಿರುವ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಕ್ಯಾನ್ಸರ್‌ನ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ. ಪ್ರತಿಯೊಬ್ಬ ವಿದ್ಯಾವಂತ ಪ್ರಜೆ ತಮ್ಮ ಹೊಣೆಗಾರಿಕೆಯನ್ನು ಅರಿತು ನಿಭಾಯಿಸಿದಲ್ಲಿ ಅರ್ಬುದ ರೋಗವನ್ನು ಖಂಡಿತವಾಗಿಯೂ ಜಯಿಸಬಹುದು ಮತ್ತು ಅದರಲ್ಲಿಯೇ ನಮ್ಮೆಲ್ಲರ ಸುಖ ಶಾಂತಿ ನೆಮ್ಮದಿ ಮತ್ತು ಭವಿಷ್ಯ ಅಡಗಿದೆ.  

ಡಾ|| ಮುರಲೀ ಮೋಹನ್ ಚೂಂತಾರು 

      BDS, MDS,DNB,MOSRCSEd(U.K), FPFA, M.B.A

      ಸುರಕ್ಷಾದಂತ ಚಿಕಿತ್ಸಾಲಯ

      ಹೊಸಂಗಡಿ – 671 323


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


 

0 تعليقات

إرسال تعليق

Post a Comment (0)

أحدث أقدم