ಮಂಗಳೂರು: ಕಾಸರಗೋಡಿನ ಬಳ್ಳಪದವಿನಲ್ಲಿರುವ ವೀಣಾವಾದಿನಿ ಸಂಗೀತ ವಿದ್ಯಾಪೀಠಮ್ ವತಿಯಿಂದ ಇದೇ ಶುಕ್ರವಾರ, ದಿನಾಂಕ 19ರಂದು ಸಂಜೆ 5.30ರಿಂದ ಉರ್ವ ಮಾರಿಗುಡಿಯಲ್ಲಿ 'ಗಾನಮಾಧುರಿ' ಎಂಬ ವಿಶೇಷ ಸಂಗೀತ ಕಚೇರಿ ಜರಗಲಿದೆ. ಕಾಸರಗೋಡಿನ ಯುವ ಪ್ರತಿಭಾವಂತ ಕಲಾವಿದ ವಿದ್ವಾನ್ ಬಳ್ಳಪದವು ಯೋಗೀಶ ಶರ್ಮ ದೇವೀ ಕೀರ್ತನೆಗಳ ಈ ಕಚೇರಿ ನಡೆಸಿಕೊಡಲಿದ್ದಾರೆ.
ಇಂದು ಮಂಗಳೂರಿನ ಪತ್ರಿಕಾಭವನದಲ್ಲಿ ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತ ಕುಮಾರ ಪೆರ್ಲ ಹಾಗೂ ಈಶ ಹಠಯೋಗ ಶಿಕ್ಷಕರೂ ಯೋಗಗುರುಗಳೂ ಆದ ಪ್ರವೀಣ್ ಕುಮಾರ್ ವೀಣಾವಾದಿನಿಯ ಯೋಜನೆಗಳ ಬಗ್ಗೆ ಹಾಗೂ 'ಗಾನಮಾಧುರಿ' ಕಾರ್ಯಕ್ರಮಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಿ ವಿವರಗಳನ್ನು ನೀಡಿದರು.
'ಗಾನಮಾಧುರಿ' ಸಂಗೀತ ಕಾರ್ಯಕ್ರಮಗಳು ದೇವೀ ಸನ್ನಿಧಿಯಲ್ಲಿ ಪ್ರತೀ ಪೌರ್ಣಮಿಯಂದು ಏರ್ಪಾಡಾಗಿದ್ದು, ಎರಡನೆಯದು ದಶಂಬರದಲ್ಲಿ ಉಡುಪಿಯ ಇಂದ್ರಾಣಿಯಲ್ಲಿ ಮತ್ತು ಮೂರನೆಯದು ಜನವರಿಯಲ್ಲಿ ಕಟೀಲಿನಲ್ಲಿ ಜರಗಲಿದೆ ಎಂದರು. ಫೆಬ್ರವರಿಯಲ್ಲಿ ವೀಣಾವಾದಿನಿಯ ವಾರ್ಷಿಕೋತ್ಸವದಲ್ಲಿ ಬಳ್ಳಪದವಿನಲ್ಲಿ 'ಗಾನಮಾಧುರಿ'ಯು ಸಂಪನ್ನಗೊಳ್ಳಲಿದ್ದು, ಆಗ ಸತತ ಒಂಬತ್ತನೆಯ ವರ್ಷದ ಶ್ರೀಚಕ್ರಪೂಜೆಯ ಜೊತೆಗೆ 'ಶ್ರೀಚಕ್ರ ಪ್ರತಿಷ್ಠೆ'ಯೂ ಜರಗಲಿದೆ ಎಂದರು.
ಕರಾವಳಿ ಜಿಲ್ಲೆಗಳಲ್ಲೇ ಇದೊಂದು ವಿಶೇಷ ಘಟನೆಯಾಗಿದ್ದು, ವೀಣಾವಾದಿನಿ ಸಂಗೀತ ವಿದ್ಯಾಪೀಠಮ್ ಸಂಸ್ಥೆಯು ಶಾಸ್ತ್ರೀಯ ಸಂಗೀತ ಕಲೆಯೊಂದಿಗೆ ಮಂತ್ರ, ತಂತ್ರ ಮತ್ತು ಯೋಗವಿದ್ಯೆಗೆ ನೀಡುವ ಮಹತ್ವಕ್ಕೆ ಈ ಘಟನೆ ಸಾಕ್ಷೀಭೂತವಾಗಲಿದೆ ಎಂದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ