ನಿಟ್ಟೆ : “ಸ್ವಾವಲಂಬನೆಯ ಬದುಕಿಗೆ ಪದವಿ ಶಿಕ್ಷಣವೇ ಮೊದಲ ಮೆಟ್ಟಿಲು. ಪದವಿ ಶಿಕ್ಷಣವನ್ನು ಪೂರೈಸುವುದೆಂದರೆ ಸ್ವತಂತ್ರ ಜೀವನದ ಆರಂಭ” ಎಂದು ಮಂಗಳೂರು ನಗರ ಪೋಲಿಸ್ ಆಯುಕ್ತರಾದ ಎನ್. ಶಶಿಕುಮಾರ್ ಅವರು ಹೇಳಿದರು.
ಇವರು ಡಾ.ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ 09-11-2021 ಮಂಗಳವಾರ ನಡೆದ 2021-22 ರ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ಓರಿಯೆಂಟೇಷನ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಕನಸುಗಳು ಇರುವುದು ಸಾಧಿಸುವುದಕ್ಕೆ ಹೊರತು ಹೇಳಿಕೊಂಡು ಓಡಾಡುವುದಕ್ಕಲ್ಲ, ಕನಸುಗಳನ್ನು ನನಸು ಮಾಡಿಕೊಳ್ಳುವುದರ ಕಡೆಗೆ ವಿದ್ಯಾರ್ಥಿಗಳು ಹೆಚ್ಚಿನ ಗಮನವನ್ನು ನೀಡಬೇಕು. ಸರಿಯಾದ ಗುರಿ ಮತ್ತು ಮಾರ್ಗದರ್ಶನಗಳು ಇದ್ದರೆ ಮಾತ್ರ ಬದುಕಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ನಮ್ಮ ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಅದೇ ನಿಜವಾದ ದೇಶ ಕಟ್ಟುವ ಕೈಂಕರ್ಯ ಎಂಬುವುದಾಗಿ ವಿದ್ಯಾರ್ಥಿಗಳೊಂದಿಗೆ ತಮ್ಮ ಮನದಾಳದ ಮಾತುಗಳನ್ನು ಅವರು ಹಂಚಿಕೊಂಡರು. ನಂತರ ಸುಮಾರು 90 ನಿಮಿಷಗಳ ಕಾಲ ಸ್ಪರ್ಧಾತ್ಮಕ ಪರೀಕ್ಷಗಳ ತಯಾರಿ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎನ್ಎಂಎಎಂಐಟಿ ಪ್ರಾಂಶುಪಾಲ ಪ್ರೋ.ನಿರಂಜನ್ ಚಿಪ್ಲೊಂಕರ್ ಭಾಗವಹಿಸಿದರು. ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸಿ, ವಿದ್ಯಾರ್ಥಿಗಳು ತಾವು ಪ್ರವೇಶ ಪಡೆದ ಪದವಿ ಶಿಕ್ಷಣವನ್ನು ಪ್ರೀತಿಸಬೇಕು ಹಾಗೂ ಆಳವಾದ ಅಧ್ಯಯನ ನಡೆಸುವ ಕಡೆ ಪ್ರಯತ್ನಶೀಲರಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ಕ್ಯಾಂಪಸ್ ನ ಕುಲಸಚಿವ ಶ್ರೀ ಯೋಗೀಶ್ ಹೆಗ್ಡೆ ವಹಿಸಿದ್ದರು. ಇವರು ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಜನೆಗೆ ಹೆಚ್ಚಿನ ಮಹತ್ವ ನೀಡಬೇಕು. ಸ್ವಾವಲಂಬಿ ಮತ್ತು ವಿಶ್ವಗುರು ಭಾರತದ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕು. ಶಿಕ್ಷಣದ ಜತೆಗೆ ಪರಂಪರೆ, ಸಂಸ್ಕೃತಿಯನ್ನು ಉಳಿಸಿಕೊಂಡು ಗುರುಹಿರಿಯರಲ್ಲಿ ಗೌರವ ಪ್ರೀತಿಯನ್ನು ಇಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಡಾ. ವೀಣಾ ಬಿ.ಕೆ. ಅತಿಥಿ ಗಣ್ಯರನ್ನು ಸ್ವಾಗತಿಸಿ , ಹೊಸ ವಿದ್ಯಾರ್ಥಿಗಳಿಗೆ ನಿಟ್ಟೆ ಶಿಕ್ಷಣ ಸಂಸ್ಥೆಯ ಪರಿಚಯವನ್ನು ಮಾಡಿಕೊಟ್ಟರು. ಪ್ರೋ. ರಮೇಶ್, ಸ್ಟೂಡೆಂಟ್ ವೆಲ್ ಫೇರ್ ಆಫೀಸರ್ ವಂದಿಸಿದರು. ಉಪನ್ಯಾಸಕ ಸಚಿನ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ