|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸೇವೆಯ ಮಹತ್ವವನ್ನು ಮನದಟ್ಟು ಮಾಡಿದ ಅರ್ಥಪೂರ್ಣ ಸೇವಾ ಕಾರ್ಯಾಗಾರ

ಸೇವೆಯ ಮಹತ್ವವನ್ನು ಮನದಟ್ಟು ಮಾಡಿದ ಅರ್ಥಪೂರ್ಣ ಸೇವಾ ಕಾರ್ಯಾಗಾರ


ಬೆಂಗಳೂರು: ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಬಲಿಷ್ಠ ಯುವಜನತೆ ಅವಶ್ಯ. ತ್ಯಾಗ ಮತ್ತು ಸೇವೆ ಭಾರತ ದೇಶದ ಎರಡು ಪ್ರಮುಖ ಆದರ್ಶಗಳು. ಈ ಆದರ್ಶಗಳ ಅರಿವು ಇಂದಿನ ಯುವಜನತೆಗೆ ಅಗತ್ಯ. ಸೇವೆಯ ಮಹತ್ವವನ್ನು ಅರಿತಾಗ ಬದುಕು ಪಾವನವಾಗುತ್ತದೆ. ನಮ್ಮ ಸಂಪಾದನೆಯ ಅಲ್ಪ ಭಾಗವನ್ನು ಇತರರೊಡನೆ ಹಂಚಿಕೊಂಡಾಗ ಸಿಗುವ ಆನಂದವೇ ಬೇರೆ. ಇಂದಿನ ಯುವಜನತೆಗೆ ಸೇವೆಯ ಮಹತ್ವವನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಹೇಗೆ ತಮ್ಮನ್ನು ತಾವು ತೊಡಗಿಸಿಕೊಂಡು ಬದುಕನ್ನು ಸಾರ್ಥಕ ಪಡಿಸಿಕೊಳ್ಳಬಹುದು ಎಂಬುದನ್ನು ಮನದಟ್ಟು ಮಾಡಿಕೊಡುವ ನಿಟ್ಟಿನಲ್ಲಿ ಶ್ರೀ ವಿವೇಕಾನಂದ ಕಲಾ ಕೇಂದ್ರದವರು ಶ್ರೀಕೃಷ್ಣ ಪದವಿ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ''ಸೇವೆಯ ಮಹತ್ವ'' ಕಾರ್ಯಾಗಾರ ಅರ್ಥಪೂರ್ಣವಾಗಿದ್ದು, ಸಮಯೋಚಿತವಾಗಿದೆ ಎಂದು ಶ್ರೀ ಕೃಷ್ಣ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀ ಮನೋಹರ್ ಅವರು ತಿಳಿಸಿ, ಕಾರ್ಯಾಗಾರವನ್ನು ದೀಪ ಬೆಳಗಿ ಉದ್ಘಾಟನೆ ಮಾಡಿದರು.


ಸುಮಾರು 10 - 12 ವರ್ಷಗಳಿಂದ ನಮ್ಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಶ್ರೀ ವಿವೇಕಾನಂದ ಕಲಾ ಕೇಂದ್ರದವರು ಡಾ. ವಿ.ನಾಗರಾಜ್ ಹಾಗೂ ಡಾ. ಶ್ವೇತ ರವರ ನೇತೃತ್ವದಲ್ಲಿ ನಡೆಸಿಕೊಂಡು ಬರುತ್ತಿರುವ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಮಾಜಸೇವಾ ಕಾರ್ಯಕ್ರಮಗಳು ಅತ್ಯುತ್ತಮವಾಗಿದ್ದು ಯುಜನತೆಯ ಸರ್ವೋತೋಮುಖ ವ್ಯಕ್ತಿತ್ವಕ್ಕೆ ಈ ಕಾರ್ಯಕ್ರಮಗಳು ಪೂರಕವಾಗಿದೆ ಎಂದು ಶ್ಲಾಘಿಸಿದರು.


ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ ತುಣುಕುಗಳನ್ನು ಹಾಗೂ ವಿವೇಕಾನಂದರ ಸೇವಾ ಸಂದೇಶಗಳನ್ನು ದೈವಿಕ್ ಸ್ಫುಟವಾಗಿ ಉಲ್ಲೇಖಿಸಿದ ನಂತರ ಧ್ಯಾನದಿಂದ ಪ್ರಾರಂಭಗೊಂಡ ಸೇವಾ ಶಿಬಿರ, ಸೇವೆಯ ಅರ್ಥ, ಅದರ ಮಹತ್ವ, ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿ, ಇಡೀ ಜಗತ್ತಿನಲ್ಲಿ ಸಾಧನೆ ಮಾಡಿದ ದಿವ್ಯಾತ್ಮರನ್ನು ಸ್ಮರಿಸಿ, ಅವರ ಬದುಕಿನ ಕೆಲವು ಘಟನೆಗಳನ್ನು ಯುವಜನತೆಗೆ ತಿಳಿಸಿಕೊಡುವುದರ ಮೂಲಕ ಹೇಗೆ 50 ವರ್ಷಗಳ ಹಿಂದೆ ವಿವೇಕಾನಂದರ ಸಾರ್ಥಕ ಬದುಕು - ಸಂದೇಶಗಳು ತಮ್ಮನ್ನು ಆಕರ್ಷಿಸಿದವು ಹಾಗೂ ವಿವೇಕಾನಂದ ಕಲಾ ಕೇಂದ್ರವು ಪ್ರಾರಂಭದ ದಿನದಿಂದಲೂ ಉಚಿತವಾಗಿ ನಡೆಸಿಕೊಂಡು ಬರುತ್ತಿರುವ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸೇವಾ ಚಟುವಟಿಕೆಗಳಲ್ಲಿ ಯುವಜನತೆ ಹೇಗೆ ಪಾಲ್ಗೊಳ್ಳಬಹುದೆಂಬುದರ ಬಗ್ಗೆ ಮಾರ್ಗದರ್ಶನ ನೀಡಿದರು.


''ಸೇವೆಯ ಮಹತ್ವ'' ವನ್ನು ಅರಿತು ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುವ ಎಲ್ಲ ಯುವಜನತೆಗೆ ಕಲಾಕೇಂದ್ರದಲ್ಲಿ ಮುಕ್ತ ಸ್ವಾಗತವಿದೆ ಎಂದು, ಕಲಾಕೇಂದ್ರದ ಗೌ. ಕಾರ್ಯದರ್ಶಿಗಳಾದ ಡಾ. ವಿ. ನಾಗರಾಜ್ ಅವರು ಭರವಸೆ ನೀಡಿದರು. ಶ್ರೀ ಕೃಷ್ಣ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ರುಕ್ಮಾಂಗದ ನಾಯ್ಡು ಹಾಗೂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಉಷಾಕುಮಾರಿ ಅವರು ಕಲಾಕೇಂದ್ರದವರು ಯುವಜನತೆಗೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಅಭಿವಂದಿಸಿದರು.


ಇಡೀ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದ್ದ ಶ್ರೀಕೃಷ್ಣ ಪದವಿ ಕಾಲೇಜಿನ ಎನ್‌ಎಸ್‌ಎಸ್ ಸಂಯೋಜಕರಾದ ಶ್ರೀ ಅವಿನಾಶ್ ಹಾಗೂ ಡಾ. ಶ್ವೇತ, ಹರ್ಷ ದಂಪತಿಗಳು ಕಾರ್ಯಾಗಾರದಲ್ಲಿ ''ರಾಷ್ಟ್ರೀಯ ಸೇವಾ ಯೋಜನಗೆ'' ಸಂಬಂಧಪಟ್ಟಂತೆ ವೈವಿಧ್ಯಮಯವಾದ ಸಮೂಹ ಚಟುವಟಿಕೆಗಳು, ಸ್ಪರ್ಧೆಗಳನ್ನು ಆಯೋಜಿಸಿ ಯುವಜನತೆಯಲ್ಲಿ ''ಸೇವಾ ಮಹತ್ವ''ದ ಅರಿವನ್ನುಂಟು ಮಾಡಿ ಹೆಚ್ಚಿನ ಸೇವಾ ಕಾರ್ಯಗಳಲ್ಲಿ ಭಾಗವಹಿಸಿ ''ಆತ್ಮ ತೃಪ್ತಿ'' ಯನ್ನು ಪಡೆಯಬಹುದೆಂಬುದರ ಬಗ್ಗೆ ಮಾರ್ಗದರ್ಶನ ನೀಡಿದರು.


ಈ ಕಾರ್ಯಾಗಾರದಲ್ಲಿ ಪ್ರೊ. ರಾಜೀವ್ ಮತ್ತು ಶ್ರೀ ಅವಿನಾಶ್ ಅವರು ಶ್ರೀಕೃಷ್ಣ ಪದವಿ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಹೇಗೆ ರಾಷ್ಟ್ರೀಯ ಅಪತ್ಕಾಲದಲ್ಲಿ ಸೇವೆ ಸಲ್ಲಿಸುತ್ತಿದೆ ಹಾಗೂ ಪವರ್‌ಸ್ಟಾರ್ ಪುನೀತ್ ರಾಜಕುಮಾರವರ ಸೇವಾ ಕಾರ್ಯಗಳನ್ನು ಸ್ಮರಿಸಿ, ಅವರು ಇಂದಿನ ಯುವಜನತೆಗೆ ಹೇಗೆ ಮಾದರಿಯಾಗಿದ್ದಾರೆ ಎಂಬುದನ್ನು ಶಿಬಿರಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟದ್ದು ಸಮಯೋಜಿತವಾಗಿತ್ತು. ಶ್ರೀಕೃಷ್ಣ ಪದವಿ ಕಾಲೇಜಿನ ಪ್ರೊ. ಶ್ರೀಮತಿ ಮೇಘ ಹಾಗೂ ಡಾ. ಮುನಿನಂಜಪ್ಪ ಅವರು ಈ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.


ವರದಿ: ಸೌಮ್ಯ ಜೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post