ಚಿತ್ರ ಕೃಪೆ: ಝೀ ನ್ಯೂಸ್
ಅಪ್ಪು ಎನ್ನುವ ಕನ್ನಡ ಪದ ಕೇಳಿದ ತಕ್ಷಣ ನನಗೂ, ನಿಮಗೂ ಕಣ್ಣೆದುರು ಬರುವ ವ್ಯಕ್ತಿ ಪುನೀತ್ ರಾಜ್ ಕುಮಾರ್. ಈ ಸಾಮಾಜಿಕ ಜಾಲತಾಣ ಮುಂಚೂಣಿಗೆ ಬರುವ ಮುನ್ನವೆ ಮನೆ ಮನೆಯ ದೃಶ್ಯ ಮಾಧ್ಯಮದ ಪರದೆಯ ಮೇಲೆ ನಮ್ಮೆಲ್ಲರಿಗೂ ಚಿರಪರಿಚಿತರಾದವರು ಅಪ್ಪು ಸರ್. ನಮ್ಮ ಬಾಲ್ಯದ ದಿನಗಳಲ್ಲಿ ಅವರು ಬಾಲ ನಟನಾಗಿ ನಟಿಸಿದ್ದ ಅದೆಷ್ಟೋ ಚಿತ್ರಗಳ ಮೂಲಕ ನಮ್ಮೆಲ್ಲರಿಗೂ ಅವರ ಜೊತೆ ಒಂದು ಅವಿನಾಭಾವ ಸಂಬಂಧ ಹುಟ್ಟಿಕೊಂಡಿತ್ತು. ಸಾಮಾಜಿಕ ಜೀವನದಲ್ಲಿ ಒಬ್ಬ ವ್ಯಕ್ತಿ ಎಷ್ಟು ಸುಸಂಸ್ಕೃತರಾಗಿ ಬದುಕಿ ತೋರಿಸಬಹುದು ಎನ್ನುವುದನ್ನು ಅಚ್ಚುಕಟ್ಟಾಗಿ ತೋರಿಸಿಕೊಟ್ಟವರು ಪುನೀತ್ ರಾಜ್ ಕುಮಾರ್. ಮುಖದ ಮೇಲೆ ಸದಾ ಒಂದು ನಗುವನ್ನು ಕೈ ರೀತಿ ಪ್ರತಿಷ್ಟಾಪನೆ ಮಾಡಿಕೊಂಡಿರುತ್ತಿದ್ದ ಈ ವ್ಯಕ್ತಿಯನ್ನು ನೋಡಿದಾಗಲೆಲ್ಲ ಎಲ್ಲರಿಗೂ ಬದುಕಿನ ಬಗೆಗೆ ಒಂದು ತೆರನಾದ ಉತ್ಸಾಹ ಮೂಡುತ್ತಿದ್ದಿದ್ದು ನಾನು ಹಲವು ವ್ಯಕ್ತಿಗಳಿಂದ ಕೇಳಲ್ಪಟ್ಟ ವಿಷಯ.
ನನಗೆ ಅವರ ಸಿನಿ ಬದುಕಿನಲ್ಲಿ ಅರಸು, ಮಿಲನ, ರಾಜಕುಮಾರ್ ಚಿತ್ರಗಳು ಮನಸ್ಸಿಗೆ ತುಂಬಾ ಹತ್ತಿರವಾದಂತವು. ಅವರ ನಟನೆ ಎಂದು ಅಸ್ವಾಭಾವಿಕ ಎಂದು ಚಿತ್ರ ನೋಡುಗರಿಗೆ ಅನ್ನಿಸಿರಲಿಲ್ಲ ಅದರ ಬದಲು ನಮ್ಮ ಕುಟುಂಬದಲ್ಲೂ ಇಂತಹ ವ್ಯಕ್ತಿ ಇರಬೇಕು ಎಂಬ ಭಾವನೆ ಹುಟ್ಟಿಸುವಂತಹ ಸಹಜ ನಟನಾ ಕೌಶಲ್ಯ ಅವರಲ್ಲಿತ್ತು. ತನ್ನ ಯಾವ ಸಿನಿಮಾದಲ್ಲೂ ಒಂದು ಕುಟುಂಬ ಸಮೇತ ಕುಳಿತು ನೋಡದೆ ಇರುವಂತಹ ಸನ್ನಿವೇಶವನ್ನು ತೋರಿಸುವ ಕಾರ್ಯ ಮಾಡಿದವರಲ್ಲ. ಇಂದಿನ ಯುವ ಪೀಳಿಗೆಯ ನಟ ನಟಿಯರಿಗೆ ಹುರಿದುಂಬಿಸಿ, ಪ್ರತಿಭೆಯನ್ನು ಗುರುತಿಸುವಂತಹ ಕಾರ್ಯದಲ್ಲು ಪುನೀತ್ ರಾಜ್ ಕುಮಾರ್ ಅವರು ಎಂದು ಎಲ್ಲರಿಗಿಂತಲೂ ಮುಂದೆ ಇದ್ದವರು.
ವಿಧಿಯ ಆಟವೋ ಅಥವಾ ಅಜಾಗರೂಕತೆಯೋ ಇಂದು ನಡೆಯಬಾರದ ಘಟನೆ ನಡೆದಾಗಿದೆ. ಇನ್ನೂ ಅಪ್ಪು ರವರು ಕರುನಾಡಿನ ಜನತೆಯ ಹೃದಯ ಸಿಂಹಾಸನದಲ್ಲಿ ರಾರಜಿಸುವರು. ದೈಹಿಕವಾಗಿ ನಾವು ವ್ಯಕ್ತಿಗಳನ್ನು ಮಾತ್ರ ಕಳೆದುಕೊಳ್ಳುವೆವು ಆದರೆ ವ್ಯಕ್ತಿತ್ವ ಎಂದಿಗೂ ಶಾಶ್ವತ ಅಂತಹ ವ್ಯಕ್ತಿತ್ವ ಪುನಿತ್ ರಾಜ್ ಕುಮಾರ್ ಅವರದ್ದು. ನಿಮ್ಮ ಕೊನೆಯ ಪಯಣಕ್ಕೆ ನಿಮ್ಮ ಎಲ್ಲ ಪ್ರೀತಿ ಪಾತ್ರ ರಿಂದ ನುಡಿನಮನ ಹಾಗೂ ನೀವೆಂದೂ ನಮ್ಮ ರಾಜರತ್ನ.
-ಪ್ರದೀಪ ಶೆಟ್ಟಿ ಬೇಳೂರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ