ಮರಗೋಡುವಿನಲ್ಲಿ ನಡೆದ ವಿಜಯ ದಶಮಿ ಪಥಸಂಚಲನದ ಬೌದ್ಧಿಕ್ ನಲ್ಲಿ ಆರ್.ಎಸ್. ಎಸ್. ಮುಖಂಡ ಟಿ.ಸಿ.ಚಂದ್ರನ್ ಅಭಿಮತ
ಮಡಿಕೇರಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿತ್ಯ ಶಾಖೆಯಲ್ಲಿ ನಾವೆಲ್ಲರೂ ಮೈಗೂಡಿಸಿಕೊಳ್ಳುವ ಪ್ರಖರ ರಾಷ್ಟ್ರೀಯತೆಯ ಮೂಲಕ ಈ ದೇಶವನ್ನು ಶೀಘ್ರದಲ್ಲಿಯೇ ಪರಮ ವೈಭವ ಸ್ಥಿತಿಗೆ ಕೊಂಡೊಯ್ಯುವ ಎಲ್ಲಾ ಸಾಧ್ಯತೆಗಳೂ ನಿಚ್ಚಳವಾಗುತ್ತಿವೆಯೆಂದು ಕೊಡಗು ಜಿಲ್ಲೆಯ ಆರ್.ಎಸ್. ಎಸ್. ಪ್ರಮುಖರಾದ ಟಿ.ಸಿ. ಚಂದ್ರನ್ ಹೇಳಿದರು.
ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಮರಗೋಡುವಿನಲ್ಲಿ ಇಂದು ಆರ್.ಎಸ್. ಎಸ್. ಸಂಸ್ಥಾಪನಾ ದಿನದ ಪ್ರಯುಕ್ತ ವಿಜಯದಶಮಿ ಪಥಸಂಚಲನದ ವೇದಿಕೆ ಕಾರ್ಯಕ್ರಮದಲ್ಲಿ ಬೌದ್ಧಿಕ್ ನೀಡಿದ ಟಿ.ಸಿ. ಚಂದ್ರನ್ ಯಾವುದೇ ಕಾರಣಕ್ಕೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲು ಬಿಡುವುದಿಲ್ಲ ಎಂದವರು ಇಂದು ಭವ್ಯ ರಾಮ ಮಂದಿರಕ್ಕೆ ತೆರಳಲು ಕ್ಷಣಗಣನೆಯಲ್ಲಿದ್ದಾರೆ. ರಾಜಕೀಯ ಬೇಳೆ ಬೇಯಿಸಲೆಂದೇ ಒಂದೇ ದೇಶಕ್ಕೆ ಎರಡೆರಡು ಕಾನೂನು ಸೃಷ್ಟಿಸಿದವರು ಇಂದು ಈ ದೇಶದ ಒಂದೇ ಕಾನೂನಿಗೆ ತಲೆಬಾಗುವಂತಾಗಿದೆ. ಈ ದೇಶದೊಳಗೆ ಬಂದು ಅಕ್ರಮವಾಗಿ ನೆಲೆಸಿರುವ ಪರದೇಶದ ಬಹುಸಂಖ್ಯಾತರನ್ನು ಹೊರದಬ್ಬುವ ಪ್ರಕ್ರಿಯೆಯೂ ನಿರಾತಂಕವಾಗಿ ನಡೆಯುತ್ತಿದೆ. ಮುಖ ಸಂದರ್ಭಗಳಲ್ಲಿ ಇಡೀ ವಿಶ್ವವೇ ಭಾರತದ ನಿಲುವಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಂಘದ ನೂರಾರು ಪೂರ್ಣ ಗಣವೇಷಧಾರಿ ಸ್ವಯಂಸೇವಕರ ಪಥಸಂಚಲನ ಅರೆಕಾಡುವಿನಿಂದ ಮರಗೋಡು ತನಕ ಸಾಗಿತು. ಪಥಸಂಚಲನದ ಮಾರ್ಗದ್ದುದ್ದಕ್ಕೂ ಈ ದೇಶದ ಮಹಾಪುರುಷರ ಭಾವಚಿತ್ರವನ್ನು ಅಲಂಕರಿಸಿಲಾಗಿತ್ತು. ಸಂಚಲನ ಸಾಗುವ ಮಾರ್ಗದಲ್ಲಿ ಸ್ಥಳೀಯರು ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಂಘಚಾಲಕ್ ಚಕ್ಕೇರ ಮನು, ಕುಟ್ಟಂಡ ಮಿರನ್, ಚಂದ್ರ ಉಡೋತ್, ಶಿವರಾಜ್, ಮುಖ್ಯ ಶಿಕ್ಷಕ್ ಅರುಣ್, ಸೇರಿದಂತೆ ಸಂಘಪರಿವಾರದ ಮುಖಂಡರುಗಳು ಸ್ಥಳೀಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ