|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನವರಾತ್ರಿ ವಿಶೇಷ: ಪರಿಪೂರ್ಣತೆಯನ್ನು ಕರುಣಿಸುವ ಸಿದ್ಧಿಧಾತ್ರಿ

ನವರಾತ್ರಿ ವಿಶೇಷ: ಪರಿಪೂರ್ಣತೆಯನ್ನು ಕರುಣಿಸುವ ಸಿದ್ಧಿಧಾತ್ರಿ



 "ಓಂ ಹ್ರೀಂ ಶ್ರೀಂ ಸಿದ್ಧಿದಾತ್ರೀ ದೇವ್ಯೈ ನಮ: 


ಇಂದು ಶರನ್ನವರಾತ್ರಿಯ ಕೊನೆಯ ದಿನ. ಆಶ್ವೀಜ ಮಾಸ ಶುಕ್ಲ ಪಕ್ಷದ ನವಮಿ ತಿಥಿ. ಶ್ರೀ ಭೂ ದುಗಾ೯ತ್ಮಕ ಮಹಾಲಕ್ಷ್ಮಿ ಇಂದು ವಾಗೀಶ್ವರಿ ಅಥವಾ ಸಿದ್ಧಿದಾತ್ರಿ ರೂಪದಲ್ಲಿ ಪ್ರಕಟಗೊಳ್ಳುತ್ತಾಳೆ. ಶ್ರೀದೇವಿ ಮಹಾತ್ಮೆ ಯ ಉಲ್ಲೇಖದಂತೆ ಆರುಣಾಸುರ, ಮಹಿಷಾಸುರ, ರಕ್ತ ಬೀಜಾಸುರ, ಚಂಡಮುಂಡ, ಶುಂಭ ನಿಶುಂಭ ರಂತಹ ದೈತ್ಯದಾನ ವರನ್ನೆಲ್ಲ ಸಂಹಾರ ಮಾಡಿ ಇಂದು ಶಾಂತರೂಪದಲ್ಲಿ ನೆಲೆನಿಂತ ದಿನ. ಈ ಎಲ್ಲ ಖಳ ಅಸುರರ ಉಪಟಳದಿಂದ ಮುಕ್ತಿ ನೀಡಿ ತನ್ನೆಲ್ಲ ಭಕ್ತರನ್ನು ಅನುಗ್ರಹಿಸಿದ ಪಾವನ ದಿನ ಇದಾಗಿದೆ. ಸಿದ್ಧಿಧಾತ್ರಿ ಯು ಸಿಂಹವಾಹಿನಿ. ಚತುರ್ಭುಜೆ, ಕಮಲವನ್ನು ಕೈಯಲ್ಲಿ ಹಿಡಿದು ಕೊಂಡು ಕಮಲದಲ್ಲಿ ವಿರಾಜಮಾನಳಾದ  ಕಮಲಿನಿ. ಸಿದ್ಧಿ ಎಂದರೆ ಪರಿಪೂರ್ಣತೆ- ಧಾತ್ರಿ ಎಂದರೆ ಒದಗಿಸಿಕೊಡುವವಳು. ಅಂದರೆ ಸದಾ ಪರಿಪೂರ್ಣತೆಯನ್ನು ಒದಗಿಸಿ ಕೊಡುವವಳು ಎಂದರ್ಥ. ಈಕೆಗೆ ನೇರಳೆ ಅಥವಾ ಗುಲಾಬಿ ವರ್ಣ ಇಷ್ಟವಾದ್ದರಿಂದ ಈ ಬಣ್ಣದ ಸೀರೆಯನ್ನು ನೀರೆಯರು ಸುಹಾಸಿನಿಯರು ಶ್ರೀಮಾತೆಗೆ ಉಡಿಸಿ ಅವರೂ ಇದೇ ಬಣ್ಣದ ಉಡುಪನ್ನು ಧರಿಸಿ ಅದೇ ಬಣ್ಣದ ಹೂವುಗಳನ್ನು ಕೂಡ ಅರ್ಚಿಸಿ  ಪೂಜಿಸಿದರೆ  ಬಹಳ ಶ್ರೇಯಸ್ಸು. ಈಕೆಗೆ ಎಳ್ಳಿನ ಉಂಡೆ, ಎಳ್ಳಿನ ಕಜ್ಜಾಯ ಅಚ್ಚು ಮೆಚ್ಚು.


"ಸಿದ್ಧಗಂಧರ್ವ ಯಕ್ಷಾದ್ಯೆಹಿ ಸುರಐಹಿ, ಅಮರೈರಪಿ | ಸೇವ್ಯಮಾನಾ ಸದಾ ಭೂಯಾತ್, ಸಿದ್ಧಿದಾ ಸಿದ್ದಿ ದಾಯಿನಿ "ಎ೦ಬ ಶ್ಲೋಕದೊಂದಿಗೆ ಹಿಮಾಲಯದ ನಂದನ ಪರ್ವತದ ವಾಸಿನಿಯಾಗಿರುವ ಈಕೆಯನ್ನು ವಿನಮ್ರ ಭಾವದಿಂದ ಆರಾಧನೆ ಗೈದರೆ ಕಾಮಿತ ಬಯಕೆಗಳು ಪರಿಪೂರ್ಣತೆಯನ್ನು ತಲುಪುತ್ತವೆ ಅಥವಾ ಸಿದ್ದಿಯನ್ನು ಕಾಣುತ್ತವೆ. ಸಿದ್ಧಿದಾತ್ರಿಯು ಅಷ್ಟದಶ ಸಿದ್ಧಿಯನ್ನು ಮೈಗೂಡಿಸಿಕೊಂಡವಳು.


ಆ 18 ಸಿದ್ಧಿಗಳು ಹೀಗಿವೆ. ಅಣಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಮಹಿಮಾ, ಈಶತ್ವ, ವಶಿತ್ವ, ಸರ್ವಕಾಮ ವಸಾಯಿತ, ಸರ್ವಜ್ಞತ್ವ, ದೂರಶ್ರವಣ, ಪರಕಾಯ ಪ್ರವೇಶ, ವಾಕ್ ಸಿದ್ಧಿ, ಕಲ್ಪವೃಕ್ಷತ್ವ, ಸೃಷ್ಟಿ, ಸಂಹಾರ ಕರಣ ಸಾಮರ್ಥ್ಯ, ಅಮರತ್ವ, ಸರ್ವನ್ಯಾಯ ತತ್ವ, ಭಾವನ ಮತ್ತು ಸಿದ್ಧಿ. ಪರಮಶಿವ ಕೂಡ ಸಿದ್ಧಿದಾತ್ರಿಯನ್ನು ಪೂಜಿಸಿ, ಪ್ರಾರ್ಥಿಸಿ ಆಕೆಯ ಸರ್ವ ಶಕ್ತಿಯನ್ನು ಸಿದ್ದಿ ಮಾಡಿಕೊಂಡದ್ದರಿಂದ ಆಕೆ ಅವನೊಂದಿಗೆ ಒಂದಾದ ಕಾರಣ ಶಿವ ಅರ್ಧನಾರೀಶ್ವರ ರೂಪವನ್ನು ಪಡೆದಿದ್ದ ಎನ್ನುವುದು ಪುರಾಣ ಕಥೆಗಳ ಸಾರ. ಈಕೆ ಕೇತು ಗ್ರಹದ ಅಧಿದೇವತೆ. ಹಾಗಾಗಿ ಆಕೆಯನ್ನು ಭಕ್ತಿಯಿಂದ ಭಜಿಸುವುದರಿಂದ ಕೇತುಗ್ರಹದಿಂದುಂಟಾಗುವ ಖಿನ್ನತೆ, ಒತ್ತಡ, ಮನೋವಿಕಾರಗಳನ್ನು, ಕೆಟ್ಟ ಯೋಚನೆಗಳಂತಹ ಕೆಟ್ಟ ದೋಷಗಳಿಂದ ಮುಕ್ತಿ ದೊರೆಯುತ್ತದೆ. ಮತ್ತು ಜೀವನದಲ್ಲಿ ನೆಮ್ಮದಿ, ಸುಖ ಸಂತೋಷಗಳನ್ನು ಕರುಣಿಸುತ್ತಾಳೆ. ಆದರೆ ಇನ್ನು ಅಸುರರನ್ನು ಸಂಹರಿಸಲು ಸಹಕರಿಸಿದ ಆಯುಧಗಳು ಹಾಗೂ ವಾಹನವನ್ನು ನೆನಪಿಸಿಕೊಳ್ಳುವ ಮತ್ತು ಭಕ್ತಿಯಿಂದ ಪೂಜಿಸುವ ದಿನವೂ ಇದಾಗಿದೆ. ಹಾಗಾಗಿ ಈ ಕಲಿಯುಗದಲ್ಲೂ ನಮ್ಮ ಒಳ್ಳೆಯ ಕಾಯಕಕ್ಕೆ ಜೀವನೋದ್ದಾರ ಕರ್ಮಗಳಿಗೆ ಸಹಕರಿಸುವ ವಾಹನ / ಆಯುಧಗಳಲ್ಲಿ ಅಡಗಿರುವ ದುಷ್ಟಶಕ್ತಿಗಳನ್ನು  ಪೂರ್ಣ ಫಲ ಅಥವಾ ನಿಂಬೆ ಹಣ್ಣಿನ ಮೂಲಕ ಹೊಡೆದೋಡಿಸಿ ದೇವಿಯನ್ನು ಆಹ್ವಾನಿಸಿ ಶ್ರದ್ದಾಭಕ್ತಿಯಿಂದ ನಮಿಸಿ ಪೂಜಿಸಬೇಕು.  


ವಾಗೀಶ್ವರಿ ದುರ್ಗೆಯನ್ನು ದುರ್ಗಾ ಅಷ್ಟೋತ್ತರ, ಅಂಗ ಪೂಜೆ, ಪತ್ರ ಪೂಜೆ ಪುಷ್ಪ ಪೂಜೆ ಸಪ್ತಶತಿ ಪಾರಾಯಣ ಹಾಗೂ 9, 18, 108 ಹೀಗೆ ಪಂಚ ದೀಪ ಸನ್ನಿಹಿತಳಾಗಿರುವ ಸಿದ್ಧಿಧಾತ್ರಿಗೆ ಪ್ರದಕ್ಷಣೆ ನಮಸ್ಕಾರವನ್ನು ಮಾಡುವ ಮೂಲಕ ಶ್ರದ್ದಾಭಕ್ತಿಯಿಂದ ಪೂಜಿಸಿದರೆ ವಿಶೇಷ ಫಲವನ್ನು ಆಕೆ ಕೊಡುತ್ತಾಳೆ.

ಹೀಗೆ ಶರನ್ನವರಾತ್ರಿಯ ಒಂಬತ್ತು ದಿನವೂ ಶ್ರೀ ಭೂ ದುರ್ಗೆಯನ್ನು ಹೃದಯ ಕಮಲದೊಳಗಿರಿಸಿ ಪೂಜಿಸಿದ ಸರ್ವಭಕ್ತರಿಗೂ ಆ ಮಂಗಳಮಯಿ ಮಾತೆ ಸಕಲ ಕಷ್ಟಗಳನ್ನು ದೂರ ಮಾಡಿ ಆಯುರ್ ಆರೋಗ್ಯ ಧನಕನಕಾದಿ ಸಕಲ ಸಂಪತ್ತನ್ನು ಕೊಟ್ಟು ಸದಾ ಸಂತಸದ ಜೀವನವನ್ನು ಸಾಗಿಸುವಂತೆ ಅನುಗ್ರಹಿಸಲಿ....

-ರಾಜೇಶ್ ಭಟ್ ಪಣಿಯಾಡಿ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم