|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 54ನೆ ವರ್ಷದ ಪಟ್ಟಾಭಿಷೇಕ ವರ್ಧಂತಿ ಆಚರಣೆ ಭಾನುವಾರ

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 54ನೆ ವರ್ಷದ ಪಟ್ಟಾಭಿಷೇಕ ವರ್ಧಂತಿ ಆಚರಣೆ ಭಾನುವಾರ


ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡಯವರ 54ನೇ ವರ್ಷದ ಪಟ್ಟಾಭಿಷೇಕ ವರ್ಧಂತಿ ಆಚರಣೆ ನಾಳೆ ಭಾನುವಾರ ಸರಳವಾಗಿ ನಡೆಯಲಿದೆ.


ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿ ಹಾಗೂ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಯೆ ವಿಶೇಷ ಪೂಜೆ ನಡೆಯುತ್ತದೆ.


ಧರ್ಮಸ್ಥಳದಲ್ಲಿ ಎಲ್ಲೆಲ್ಲೂ ಸಂಭ್ರಮ, ಸಡಗರ ಹಾಗೂ ದೇವಸ್ಥಾನ ಮತ್ತು ಬೀಡನ್ನು (ಹೆಗ್ಗಡೆಯವರ ನಿವಾಸ) ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ದೇವಳದ ನೌಕರ ವೃಂದ, ಊರಿನ ನಾಗರಿಕರು, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ನೌಕರರು ಮತ್ತು ವಿದ್ಯಾರ್ಥಿಗಳು, ಊರ-ಪರವೂರ ಭಕ್ತರು, ಅಭಿಮಾನಿಗಳು ಬಂದು ಹೆಗ್ಗಡೆಯವರನ್ನು ಶ್ರದ್ಧಾ-ಭಕ್ತಿಯಿಂದ ಅಭಿನಂದಿಸಿ, ಗೌರವಿಸುತ್ತಾರೆ.


ಮಹೋತ್ಸವ ಸಭಾ ಭವನದಲ್ಲಿ ಸಂಜೆ 5 ಗಂಟೆಗೆ ನಡೆಯುವ ಸಮಾರಂಭದಲ್ಲಿ ತುಮಕೂರಿನ ನಿವೃತ್ತ ಜಿಲ್ಲಾಧಿಕಾರಿ ಸಿ. ಸೋಮಶೇಖರ್ ಅಭಿನಂದನಾ ಭಾಷಣ ಮಾಡುವರು. ಬಳಿಕ ಹೆಗ್ಗಡೆಯವರು ಮುಂದಿನ ವರ್ಷದ ಹೊಸ ಯೋಜನೆಗಳನ್ನು ಪ್ರಕಟಿಸುವರು.


ಹಿರಿಯ ನೌಕರರಾದ ಶುಭಚಂದ್ರರಾಜ ಮತ್ತು ತೋಟಗಾರಿಕಾ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಪೂಜಾರಿ ಅವರನ್ನು ಹೆಗ್ಗಡೆಯವರು ಸನ್ಮಾನಿಸುವರು.


ಅಪೂರ್ವ ಸಾಧನೆಗಳ ಸರದಾರ: 1968ರ ಅಕ್ಟೋಬರ್ 24 ರಂದು ನೆಲ್ಯಾಡಿ ಬೀಡಿನಲ್ಲಿ ಸಂಪ್ರದಾಯದಂತೆ ಧರ್ಮಸ್ಥಳದ 21ನೆ ಧರ್ಮಾಧಿಕಾರಿಯಾಗಿ ತನ್ನ ಇಪ್ಪತ್ತನೆ ವರ್ಷ ಪ್ರಾಯದಲ್ಲಿ ಪಟ್ಟಾಭಿಷಿಕ್ತರಾದ ಅಂದಿನ ವೀರೇಂದ್ರ ಕುಮಾರ್ ಧರ್ಮಸ್ಥಳವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ತಮ್ಮ ವಿನೂತನ ಯೋಜನೆಗಳ ಮೂಲಕ ಕಾರ್ಕಳದಿಂದ ಧರ್ಮಸ್ಥಳಕ್ಕೆ ಭಗವಾನ್ ಬಾಹುಬಲಿ ಮೂರ್ತಿಯ ಸಾಗಾಣಿಕೆ ಹಾಗೂ ರತ್ನಗಿರಿಯಲ್ಲಿ 1982 ರಲ್ಲಿ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ಪ್ರಥಮ ಮಹಾಮಸ್ತಕಾಭಿಷೇಕ, ಇದರ ಸವಿ ನೆನಪಿಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಉಜಿರೆಯಲ್ಲಿ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಕೇಂದ್ರದ ಪ್ರಾರಂಭ.


ಪ್ರಾಚೀನ ದೇಗುಲಗಳು ಹಾಗೂ ಐತಿಹಾಸಿಕ ಸ್ಮಾರಕಗಳ ಜೀರ್ಣೋದ್ಧಾರ ಮತ್ತು ಸಂರಕ್ಷಣೆಗಾಗಿ ಎಸ್.ಡಿ.ಎಂ. ಧರ್ಮೋತ್ಥಾನ ಟ್ರಸ್ಟ್, ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಅನುಷ್ಠಾನ, ಪ್ರತಿವರ್ಷ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆ, ಉಜಿರೆ, ಧಾರವಾಡ, ಮೈಸೂರು, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಕೆ.ಜಿ. ಯಿಂದ ಪಿ.ಜಿ. ವರೆಗಿನ ಶಿಕ್ಷಣ ಸಂಸ್ಥೆಗಳು, ಆಯುರ್ವೇದ ಮತ್ತು ಪಾರಂಪರಿಕ ಪ್ರಕೃತಿ ಚಿಕಿತ್ಸಾ ಪದ್ಧತಿಗೆ ಕಾಯಕಲ್ಪ, ಮದುವೆಗಾಗಿ ದುಂದುವೆಚ್ಚ ಹಾಗೂ ವರದಕ್ಷಿಣೆ ತಡೆಯಲು ಪ್ರತಿವರ್ಷ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ, ಭಜನಾ ತರಬೇತಿ ಕಮ್ಮಟ, ವರ್ಷದಲ್ಲಿ ಎರಡು ಬಾರಿ (ಅಗೋಸ್ತು 15 ಮತ್ತು ಜನವರಿ 14) ಎಲ್ಲಾ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನ- ಇವು ಹೆಗ್ಗಡೆಯವರ ಚಿಂತನ – ಮಂಥನದಿಂದ ಯಶಸ್ವಿಯಾಗಿ ಅನುಷ್ಠಾನಗೊಂಡ ಲೋಕಕಲ್ಯಾಣಕ್ಕಾಗಿ ಸೇವಾ ಕಾರ್ಯಗಳು. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವೇ ಕೆಲವು ಯೋಜನೆಗಳಿಗೆ ಮಾನ್ಯತೆ ನೀಡಿ ಅನುಷ್ಠಾನಗೊಳಿಸಿವೆ.


ಪ್ರಧಾನಿ ನರೇಂದ್ರ ಮೋದಿಯವರೆ ಹೆಗ್ಗಡೆಯವರ ಸೇವಾ ಕಾರ್ಯಗಳು ಹಾಗೂ ಸರಳ ವ್ಯಕ್ತಿತ್ವವನ್ನು ಶ್ಲಾಘಿಸಿ ಅಭಿನಂದಸಿದ್ದಾರೆ.


ಸರ್ಕಾರಿ ಅಧಿಕಾರಿಗಳಿಂದ ಹೆಗ್ಗಡೆಯವರಿಗೆ ಗೌರವಾರ್ಪಣೆ 

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 54ನೆ ವರ್ಷದ ಪಟ್ಟಾಭಿಷೇಕ ವರ್ಧಂತ್ಯುತ್ಸವ ಆಚರಣೆಯ ಸಂದರ್ಭ ಶುಕ್ರವಾರ ಬೆಳ್ತಂಗಡಿ ತಾಲ್ಲೂಕಿನ ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳು ಧರ್ಮಸ್ಥಳಕ್ಕೆ ಬಂದು ಹೆಗ್ಗಡೆಯವರಿಗೆ ಶ್ರದ್ಧಾ - ಭಕ್ತಿಯಿಂದ ಗೌರವಾರ್ಪಣೆ ಮಾಡಿದರು.


ತಹಸೀಲ್ದಾರ್ ಮಹೇಶ್ ಜೆ. ನೇತೃತ್ವದಲ್ಲಿ ಬಂದ ತಂಡದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕುಸುಮಾಕರ, ಮುಖ್ಯ ಪಶುವೈದ್ಯಾಧಿಕಾರಿ ಡಾ. ಮಂಜುನಾಯ್ಕ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು, ಆಡಳಿತ ವೈದ್ಯಾಧಿಕಾರಿ ಡಾ. ವಿದ್ಯಾವತಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಯ್ಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಧಾಕರ. ವಲಯ ಅರಣ್ಯಾಧಿüಕಾರಿ ತ್ಯಾಗರಾಜ್, ಸಹಾಯಕ ಕಾರ್ಯನಿರ್ವಹಣಾ ಅಭಿಯಂತರ ಸೂರ್ಯನಾರಾಯಣ ಭಟ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಜ ಜೈನ್, ಡಾ. ಜಯಕೀರ್ತಿ ಜೈನ್ ಧರ್ಮಸ್ಥಳ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ತಾರಕೇಸರಿ ಮೊದಲಾದವರು ಉಪಸ್ಥಿತರಿದ್ದರು.



ಪ್ಷೇಕ್ಷಕರ ಗಮನ ಸೆಳೆದ ಛದ್ಮವೇಷ ಸ್ಪರ್ಧೆ:

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 54ನೆ ವರ್ಷದ ಪಟ್ಟಾಭಿಷೇಕ ವರ್ಧಂತ್ಯುತ್ಸವ ಆಚರಣೆಯ ಅಂಗವಾಗಿ ದೇವಳ ನೌಕರರು ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರೇಕ್ಷಕರ ಗಮನ ಸೆಳೆದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم