|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪರಿಚಯ: ಬಡಗುತಿಟ್ಟಿನ ಯುವ ಕಥಾಕರ್ತ ಅಕ್ಷಯ್‌ ಶೆಟ್ಟಿ ಮುಂಬಾರು

ಪರಿಚಯ: ಬಡಗುತಿಟ್ಟಿನ ಯುವ ಕಥಾಕರ್ತ ಅಕ್ಷಯ್‌ ಶೆಟ್ಟಿ ಮುಂಬಾರು



ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ನಮಗೆ ಅನೇಕ ಯುವ ಕಥಾಕರ್ತರು ನೋಡಲು ಸಿಗುತ್ತಾರೆ. ಅಂತಹ ಯುವ ಕಥಾಕರ್ತರಲ್ಲಿ ನಾವು ಇವತ್ತು ಪರಿಚಯ ಮಾಡುವ ಕಥಾಕರ್ತ ಅಕ್ಷಯ್ ಶೆಟ್ಟಿ ಮುಂಬಾರು.


ದಿನಾಂಕ 11.03.1986ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕಾವ್ರಾಡಿ ಗ್ರಾಮದ ಮುಂಬಾರುನಲ್ಲಿ ದಿ. ಬಗ್ವಾಡಿ ಬಾಲಕೃಷ್ಣ ಶೆಟ್ಟಿ ಮತ್ತು ರಾಜೀವಿ ಶೆಟ್ಟಿ ಇವರ ಪ್ರಥಮ ಪುತ್ರನಾಗಿ ಜನನ. ಪದವಿ ಶಿಕ್ಷಣ ಇವರ ವಿದ್ಯಾಭ್ಯಾಸ. ಬದುಕಿನ ಹಲವು ಏರುಪೇರುಗಳ ನಡುವೆ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಹಾಗೂ ಅಬುಧಾಬಿಯಲ್ಲಿನ ಉದ್ಯೋಗ ನಂತರ ತಂದೆಯ ಅಕಾಲಿಕ ಮರಣದಿಂದ ಅದನ್ನು ತನ್ನೂರಿನಲ್ಲಿ ಸ್ವಂತ ಉದ್ಯೋಗದಲ್ಲಿ ತೊಡಗಿಕೊಳ್ಳಬೇಕಾದ ಅನಿವಾರ್ಯತೆ ಬಂದಿತ್ತು. ಕಳೆದ ಒಂಭತ್ತು ವರ್ಷದಿಂದ ವೃತ್ತಿ ನಿರತ ಛಾಯಾಚಿತ್ರಗಾರರಾಗಿ ದುಡಿಯುತ್ತಿದ್ದಾರೆ. ಯಕ್ಷಗಾನ ಪ್ರಸಂಗ ಬರೆಯಲು ದಿವಂಗತ ಡಾಕ್ಟರ್ ವೈ ಚಂದ್ರಶೇಖರ್ ಶೆಟ್ಟಿ ಮತ್ತು ಕಂದಾವರ ರಘುರಾಮ ಶೆಟ್ಟಿ ಅವರ ಪ್ರೇರಣೆ ಎಂದು ಇವರು ಹೇಳುತ್ತಾರೆ.


ಯಕ್ಷಗಾನ ವೇಷ ಕುಣಿತದ ಬಗ್ಗೆ ಆಸಕ್ತಿ ಕಡಿಮೆ ಆದರೆ ನಾನೊಬ್ಬ  ಚೆಂಡೆವಾದಕನಾಗಬೇಕೆಂಬ ಮಹದಾಸೆಯನ್ನು ಹೊಂದಿದ್ದೆ ಹಾಗೂ ಹಲವು ದಿನಗಳ ಕಾಲ ಯಕ್ಷಗಾನ ತರಗತಿಗೂ ಕೂಡ ಹೋಗಿದ್ದೆ. ಆದರೆ ಕಾರಣಾಂತರಗಳಿಂದ ಅರ್ಧಕ್ಕೆ ನಿಲ್ಲಿಸಬೇಕಾಯಿತು ಎಂದು ಮುಂಬಾರು ಅವರು ಹೇಳುತ್ತಾರೆ.


ವಿಧಿ ವೈಷಮ್ಯ, ಚಂದ್ರಲೇಖ ಹಾಗೂ ಈ ವರ್ಷದ ಮೋಹ ಪಲ್ಲಕ್ಕಿ ಇವರು ಬರೆದಿರುವ ಕಲ್ಪನೆಯ ಕಥೆಗಳು. ಈ ಕಥೆಗಳಿಗೆ ಛಂದೋಬದ್ಧ ಯಕ್ಷ ಸಾಹಿತಿಗಳು ಆದ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರು ಸಾಹಿತ್ಯವನ್ನು  ನೀಡಿದ್ದರು. ಮುಂದಿನ ದಿನಗಳಲ್ಲಿ ಕರಾವಳಿಯ ಕಾರಣಿಕ ದೈವ ಕ್ಷೇತ್ರ ಹಾಗೂ ಅಸಂಖ್ಯಾತ ಭಕ್ತ ಕೋಟಿಗಳನ್ನು ಹೊಂದಿದ ಕ್ಷೇತ್ರವೊಂದರ ಇತಿಹಾಸವನ್ನು ಸಾರುವ ಕಥೆ ಸಿದ್ಧಗೊಳ್ಳುತ್ತಿದೆ ಎಂದು ಹೇಳುತ್ತಾರೆ.


ಯಕ್ಷಗಾನ ನೋಡುವುದು, ಕವನಗಳನ್ನು ರಚಿಸುವುದು, ಕ್ರಿಕೆಟ್ ಮತ್ತು ವಾಲಿಬಾಲ್ ಆಡವುದು ಇವರ ಹವ್ಯಾಸಗಳು.


ಹೊಸ ಪ್ರಸಂಗಗಳ ಬಗ್ಗೆ ಆಕ್ಷೇಪಗಳಿವೆ, ಅದರ ಬಗ್ಗೆ ನಿಮ್ಮ ಅಭಿಪ್ರಾಯ:-

ಹೊಸ ಪ್ರಸಂಗಗಳ ಬಗ್ಗೆ ಆಕ್ಷೇಪಗಳು ಸರಿಯಲ್ಲ ಅನ್ನೋದು ನನ್ನ ಅನಿಸಿಕೆ. ಯಾಕೆಂದರೆ ಯುವ ಪ್ರತಿಭೆಗಳು ಹೊರಬರಬೇಕು ಯುವ ಕನಸುಗಳಿಗೆ ಯಕ್ಷ ರಂಗ ವೇದಿಕೆಯಾಗಬೇಕು. ಆದರೆ ಈ ಕೃತಿಗಳು ಯಕ್ಷಗಾನದ ಚೌಕಟ್ಟನ್ನು ಬಿಟ್ಟು ಹೊರ ಹೋಗಬಾರದು, ಪೌರಾಣಿಕ ನೆಲೆಗಟ್ಟಿನಲ್ಲಿ ಪೌರಾಣಿಕ ಪ್ರಸಂಗಗಳಿಗೆ ಚ್ಯುತಿ ಬಾರದೆ ಹೊಸ ಪ್ರಸಂಗಗಳನ್ನು ಬರೆಯುವುದರಲ್ಲಿ ತಪ್ಪಿಲ್ಲ. ಆದರೆ ಅದು ಯಕ್ಷಗಾನ ರಂಗಕ್ಕೆ ಮತ್ತು ಯಕ್ಷಗಾನ ಕ್ಷೇತ್ರಕ್ಕೆ ಅವಮಾನಿಸುವಂಥಹ ರೀತಿಯಲ್ಲಿ ಇರಬಾರದು. ಇವಾಗಿನ ಕಮರ್ಷಿಯಲ್ ದಿನಗಳಲ್ಲಿ ಹೊಸ ಪ್ರಸಂಗಗಳ ಅನಿವಾರ್ಯತೆಯೂ ಕೂಡ ಮೇಳಗಳಿಗೆ ಇದೆ, ಇದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ ಇದರಲ್ಲೇನಾದರೂ ತಪ್ಪಿದ್ದರೆ ಕ್ಷಮೆ ಇರಲಿ .


ಪದ್ಯ ಬರೆಯುವ ಬಗ್ಗೆ ನಿಮ್ಮ ನಿಲುವು ಏನು:-

ಪದ್ಯ ಬರೆಯುವುದು ಒಂದು ನಿಜವಾಗ್ಲೂ ಒಂದು ಸಾಹಸದ ಕೆಲಸವೇ ಸರಿ. ಯಾಕಂತ ಹೇಳಿದ್ರೆ ಸಿನಿಮಾ ಕಥೆಗಳಿಗೆ ಸಾಹಿತ್ಯವನ್ನು ಕೊಡುವಂಥದ್ದು ಸವಾಲಿನ ಕೆಲಸವಲ್ಲ, ಆದರೆ ಯಕ್ಷಗಾನಕ್ಕೆ ಒಂದು ಸಾಹಿತ್ಯವನ್ನು ನೀಡುವಂಥದ್ದು ಅದು ದೊಡ್ಡ ಸವಾಲು. ಛಂದಸ್ಸನ್ನು ಪರಿಪೂರ್ಣವಾಗಿ ಅಧ್ಯಯನ ಮಾಡಿದ ಒಬ್ಬ ಕವಿಗಷ್ಟೇ ಅದಕ್ಕೆ ಸಾಹಿತ್ಯ ನೀಡಲು ಸಾಧ್ಯ. ಆದರೆ ಈಗಿನ ದಿನಗಳಲ್ಲಿ ಸಾಹಿತ್ಯದ ಜ್ಞಾನವೇ ಇಲ್ಲದವರು ಕೂಡ ಸಾಹಿತ್ಯವನ್ನು ಹಾಕಿ ಸಾಹಿತ್ಯದ ಘನತೆಯನ್ನು ಕಳೆಯುತ್ತಿರುವುದು ವಿಷಾದನೀಯ. ಅದಕ್ಕಾಗಿ ನನ್ನ ಕಥೆಗಳಿಗೆ ನಾನು ಒಬ್ಬ ಸಮರ್ಥ ಮತ್ತು ಶ್ರೇಷ್ಠ ಸಾಹಿತಿಯನ್ನು ಆರಿಸಿಕೊಂಡಿದ್ದು. ಯಕ್ಷಗುರು ಛಂದೋಬದ್ಧ ಯಕ್ಷ ಸಾಹಿತಿ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರ ಸಾಹಿತ್ಯ ನಿಜವಾಗಲೂ ಅತ್ಯದ್ಭುತ. ನಾನು ಕೂಡ ಸಾಹಿತ್ಯವನ್ನು ಹಾಕುವುದಕ್ಕೆ ಪ್ರಯತ್ನ ಮಾಡುತ್ತಿದ್ದೇನೆ. ಗುರುಗಳಾದ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರಲ್ಲಿ ಕೆಲವೊಂದು ಸಲಹೆ ಸೂಚನೆಗಳನ್ನು ಪಡೆಯುತ್ತಿರುತ್ತಾನೆ ಆಗಾಗ ಹಾಗೂ ಶ್ರೀ ಕ್ಷೇತ್ರ ಸೌಕೂರು ಅಮ್ಮನವರ ಕುರಿತಾದ ಎರಡು ಪದ್ಯಗಳನ್ನು ಕೂಡ ರಚಿಸಿದ್ದೆ, ಹಾಗೆ ಕೆಲವೊಂದು ಸಣ್ಣಪುಟ್ಟ ಸಾಹಿತ್ಯಗಳನ್ನು ಹಾಕಿದ್ದೆ. ಅದರಲ್ಲಿ ಸರಿ ತಪ್ಪುಗಳನ್ನು ತನ್ನ ಗುರುಗಳು ತಿದ್ದಿ ಹೇಳಿದ್ದಾರೆ.


ಪ್ರಸಂಗಗಳನ್ನು ಬಿಟ್ಟು ಕವನ ಹಾಗೂ ಲೇಖನ ಬರೆಯುವುದರಲ್ಲಿ  ತೊಡಗಿಸಿಕೊಂಡಿದ್ದೆ.


ತಾಳಮದ್ದಳೆ ಕ್ಷೇತ್ರದಲ್ಲಿ ಆಸಕ್ತಿ ಇದೆಯಾ? ಆ ಬಗ್ಗೆ ಮುಂದಿನ ಯೋಜನೆಗಳೇನು:-

ತಾಳಮದ್ದಳೆಯನ್ನು ನೋಡುವುದರ ಬಗ್ಗೆ ತುಂಬಾ ಆಸಕ್ತಿ ಇದೆ. ಅಲ್ಲಿನ ಚರ್ಚೆಗಳು ಮತ್ತು ಗಮನ ಸೆಳೆಯುವಂತಹ ಕೆಲವೊಂದು ವಿಚಾರಧಾರೆಗಳನ್ನು ಕೇಳುವುದಕ್ಕೆ ತುಂಬಾ ಇಷ್ಟ.


ಯಕ್ಷಗಾನ ಕ್ಷೇತ್ರದಲ್ಲಿ ನನಗೆ ಮಾರ್ಗದರ್ಶಕರಾದವರು ಮಿತ್ರರಾದ ಸುಧಾಕರ ಆಚಾರ್ಯ ಕಂಡ್ಲೂರು, ಅಮೃತ್ ರಾಜ್ ಶೆಟ್ಟಿ ಜಾಂಬೂರು, ಪೆರ್ಡೂರು ಮೇಳದ ಯಜಮಾನರಾದ ಕರುಣಾಕರ ಶೆಟ್ಟಿ ಅವರು ಹಾಗೆ ಸಾಲಿಗ್ರಾಮ ಮೇಳದ ಯಜಮಾನರಾದ ಪಿ ಕಿಶನ್ ಹೆಗ್ಡೆಯವರು, ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರು, ಹಾಗೆ ಪವನ್ ಕಿರಣ್ ಕೆರೆ, ಜನ್ಸಾಲೆ ರಾಘವೇಂದ್ರ ಆಚಾರ್ಯ ಇವರು, ಹಾಗೆ ಕೋಡಿ ವಿಶ್ವನಾಥ ಗಾಣಿಗ ಹಾಗೂ ರವಿಕುಮಾರ್ ಸೂರಾಲು ಅವರು, ಹಾಗೂ ಪೆರ್ಡೂರು ಮೇಳದ ಎಲ್ಲ ಹಿರಿಯ ಕಿರಿಯ ಕಲಾವಿದರುಗಳು, ಹಾಗೆ ಸೌಕೂರು ಮೇಳದ ಎಲ್ಲ ಹಿರಿಯ ಕಿರಿಯ ಕಲಾವಿದರುಗಳು, ಹಾಗೆ ಯಕ್ಷಾಭಿಮಾನಿಗಳು ಸಲಹೆ ಸೂಚನೆಗಳು ನೀಡಿದ್ದಾರೆ.


ನನ್ನ ವೃತ್ತಿ ಸಂಸ್ಥೆಯಾದ ಸೌತ್ ಕೆನರಾ  ಫೊಟೋಗ್ರಾಫರ್ ಅಸೋಸಿಯೇಷನ್ ಕುಂದಾಪುರ ವಲಯ ಗುರುತಿಸಿ ಗೌರವಿಸಿದೆ  ಹಾಗೂ ಉಡುಪಿಯಲ್ಲಿ ನಡೆದ ವೃತ್ತಿ ಸಂಸ್ಥೆಯ ಮಹಾಸಭೆಯಲ್ಲಿ ನನ್ನನ್ನು ಗುರುತಿಸಿ ಗೌರವಿಸಿದ್ದಾರೆ. ಹಾಗೆ ಅಂಪಾರು ಸರಕಾರಿ ಸೇವಾ ಬ್ಯಾಂಕ್ ತನ್ನ ವಾರ್ಷಿಕ ಮಹಾಸಭೆಯಲ್ಲಿ  ನನ್ನನ್ನ ಗುರುತಿಸಿ ಗೌರವಿಸಿದೆ ಹಾಗೆ ಇನ್ನೂ ಹಲವು ಗೌರವಗಳು ಇವರ ಮಡಿಲಿಗೆ ಸೇರಿದೆ. 


ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಯಕ್ಷಗಾನ ಕೇವಲ ಕಲೆಯಾಗಿ ಉಳಿಯದೆ ವ್ಯಾವಹಾರಿಕ ರಂಗವಾಗಿ  ಕೂಡ ಬೆಳೆದು ನಿಂತಿದೆ. ಹಿಂದೆಲ್ಲ ರಾತ್ರಿಯಿಂದ ಬೆಳಗಿನ ತನಕ ಕೂತು ಯಕ್ಷಗಾನಗಳನ್ನು ನೋಡುತ್ತಿದ್ದ ಕಾಲ ಮತ್ತು ಅಂತಹ ಸದಭಿರುಚಿಯ ಪ್ರೇಕ್ಷಕರನ್ನು ಕಾಣುತ್ತಿದ್ದೆವು. ಆದರೆ ಇಂದು ಫೇಸ್ಬುಕ್ ವಾಟ್ಸಾಪ್ ಮತ್ತು ಯೂಟ್ಯೂಬ್ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಯಕ್ಷಗಾನ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ ಎನ್ನುವ ಅನಿಸಿಕೆ. ಕಾರಣ ಇಡೀ ರಾತ್ರಿ ಕಾಣಬೇಕಾದ ಕಥೆಗಳನ್ನು ತುಂಡು ತುಂಡಾಗಿ ಕತ್ತರಿಸಿ ಯೂಟ್ಯೂಬ್ ವಾಟ್ಸಪ್ ಫೇಸ್ ಬುಕ್ ಗಳಲ್ಲಿ ಕತ್ತರಿಸಿ ಪ್ರಸಾರ ಮಾಡುತ್ತಿದ್ದು ಇಂದಿನ ಯಾಂತ್ರಿಕ ಯುಗದಲ್ಲಿ ವೃತ್ತಿ  ಬದುಕಿನ ಒತ್ತಡದಲ್ಲಿ ರಾತ್ರಿ ಇಡೀ ನಿದ್ದೆ ಬಿಡುವ ಗೋಜಿಗೆ ಯಾರೂ ಹೋಗುವುದಿಲ್ಲ ಬದಲಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಅಲ್ಪಸ್ವಲ್ಪ ನೋಡಿ ಸಮಾಧಾನ ಪಟ್ಟು ಕೊಳ್ಳುವವರು ಜಾಸ್ತಿ. ಇದರಿಂದ ಯಕ್ಷಗಾನ ರಂಗಕ್ಕೆ ಬಹುದೊಡ್ಡ ಹೊಡೆತ ಬೀಳುತ್ತಿದೆ. ಕಾರಣ ಡೇರೆ ಮೇಳ ಮತ್ತು ಬಯಲಾಟ ಮೇಳಗಳಲ್ಲಿ ಪ್ರೇಕ್ಷಕರ ಕೊರತೆ ಗಣನೀಯವಾಗಿ ಕಾಣುತ್ತಿದ್ದು, ಹಿಂದೆ ಆಟದ ರಂಗಸ್ಥಳದ ಮುಂದೆ ಜನ ಜಂಗುಳಿ ತುಂಬುತ್ತಿದ್ದ ಕಾಲವಿತ್ತು, ಆದರೆ ಇಂದು ಬೆರಣಿಕೆಯಷ್ಟು ಪ್ರೇಕ್ಷಕರ ನಡುವೆ ಕಲಾವಿದ ಪ್ರದರ್ಶನವನ್ನು ನೀಡಬೇಕಾದ ಅನಿವಾರ್ಯತೆ. ಅದಕ್ಕಾಗಿ ಇಂದಿನ ದಿನಗಳಲ್ಲಿ ಕಾಲಮಿತಿ ಪ್ರದರ್ಶನಗಳಿಗೆ ಜನ ಒಗ್ಗಿಕೊಳ್ಳುತ್ತಿದಾರೆ. ಆದರೆ ಕಾಲಮಿತಿ ಪ್ರದರ್ಶನಗಳು ಸರಿಯಲ್ಲ ಬೆಳಕಿನ ಸೇವೆ ಎಂದರ್ಥ ರಾತ್ರಿಯಿಂದ ಬೆಳಗಿನ ತನಕ ಸೇವೆ ನಡೆದಾಗಲೇ ಅದು ಪರಿಪೂರ್ಣವಾದ ಸೇವೆಯಾಗಿ ದೇವರಿಗೆ ಅರ್ಪಣೆ ಗೊಳ್ಳುತ್ತದೆ. ಆದರೆ ಬದಲಾದ ಕಾಲ ಗತಿಗೆ ಅನುಗುಣವಾಗಿ ಕಲೆ ಮತ್ತು ಕಲಾವಿದರು ಅದಕ್ಕೆ ಒಗ್ಗಿಕೊಳ್ಳುವುದು ಅನಿವಾರ್ಯತೆ ಇದೆ ಎಂದು ಮುಂಬಾರು ಅವರು ಹೇಳುತ್ತಾರೆ.


ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಮುಂದಿನ ದಿನಗಳಲ್ಲಿ ಯಕ್ಷಗಾನದ ಕಲಾವಿದರಿಗೆ ಒಂದು ಶಾಶ್ವತವಾದ ಗುರುತಿನ ಚೀಟಿಯನ್ನು ಕೊಡಬೇಕು. ಹಾಗೆ ಕಲಾವಿದರ ಅನುಭವ ಮತ್ತು ಸೇವೆಗಳನ್ನು ಗುರುತಿಸಿ ಅವರಿಗೊಂದು ಪ್ರಮಾಣಪತ್ರಗಳನ್ನು ಸರಕಾರದ ವತಿಯಿಂದ ನೀಡಬೇಕು. ಸರಕಾರದ ವತಿಯಿಂದಲೇ ಅವರಿಗೆ ಮಾಶಾಸನ ಮತ್ತು ಜೀವ ವಿಮೆ ಭದ್ರತೆಯನ್ನು ನೀಡಬೇಕು, ಬಸ್ ಗಳಲ್ಲಿ ಅವರಿಗೆ ಉಚಿತ ಪಾಸ್ ಗಳನ್ನು ನೀಡಬೇಕು. ಸರಕಾರ ಮಟ್ಟದಲ್ಲಿ ಯಕ್ಷರಂಗದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ದೊಡ್ಡ ಮಟ್ಟದ ಗೌರವ ಸನ್ಮಾನವನ್ನು ಮಾಡಬೇಕು. ಹಾಗೆ ಯಕ್ಷಗಾನ ಕಲಾವಿದರ ಮಕ್ಕಳುಗಳ ವಿದ್ಯಾಭ್ಯಾಸ ಮತ್ತು ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಮತ್ತು ಸಾಲ ನೀಡಬೇಕು, ಹಾಗೆ ನಿವೃತ್ತಿಯಾದ ಕಲಾವಿದರಿಗೆ ಸರಕಾರದಿಂದಲೇ ಒಂದು ಗೌರವ ಮೊತ್ತವನ್ನು ಕೊಡುವ ಹಾಗೆ ಸರ್ಕಾರ ಮಾಡಬೇಕು. ಈ ಬಗ್ಗೆ ಸರ್ಕಾರಗಳು ಗಮನ ಹರಿಸಬೇಕು, ಜನಪ್ರತಿನಿಧಿಗಳು ಇದಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು  ಹೇಳುತ್ತಾರೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ನಾವು ನಂಬಿರುವ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ.


- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post