• ರುಚಿರುಚಿಯಾಗಿರುತ್ತದೆ.
• ತಯಾರಿಗೆ ಅರ್ಧ ಗಂಟೆ ಸಾಕು.
• ಯಾವ ಜಾತಿಯ ಬಾಳೆಕಾಯಿಯೂ ಓಕೆ.
• ಯಾವುದೇ ಕಲಬೆರಕೆ, ರಾಸಾಯನಿಕಗಳಿಲ್ಲದ ಆಹಾರ
• ನಾವು ಈಗ ಸೇವಿಸುವ ಅಕ್ಕಿ, ಗೋಧಿಯ ಉಪಾಹಾರಕ್ಕಿಂತ ಪೋಷಕಾಂಶ ದೃಷ್ಟಿಯಿಂದ ಉತ್ತಮ.
• ಕೃಷಿಕ ಕುಟುಂಬಗಳಿಗಿದು ಆತ್ಮನಿರ್ಭರ, ಬಹು ಮೆಚ್ಚುಗೆಯ ಆಹಾರ ಆಗಬಲ್ಲುದು
• ತುಂಬ ಬಲಿತ ಅಥವಾ ತುಂಬ ಎಳೆಯ ಕಾಯಿಗಿಂತ ನಡುವಿನದು ಒಳ್ಳೆಯದು.
• ರೆಸಿಸ್ಟೆಂಟ್ ಸ್ಟಾರ್ಚ್ ಇರುವ ಕರಣ ಸಕ್ಕರೆ ಕಾಯಿಲೆಯವರಿಗೂ ಅಡ್ಡಿ ಅಲ್ಲ, ಅನುಕೂಲ ಆಗಬಹುದು. ಅನುಮಾನ ಪರಿಹಾರಕ್ಕೆ ಡಾಕ್ಟರರು, ಪೋಷಕಾಂಶ ತಜ್ಞರನ್ನು ಕೇಳಿಕೊಳ್ಳಿ.
ಬಾಳೆಕಾಯಿಯಿಂದ ಒತ್ತು ಶ್ಯಾವಿಗೆ. ಬಾಕಾಹು ಹೇಗೋ, ಹಾಗೆಯೇ ಇದೂ ಹೊಸತಲ್ಲ. ಕಾಸರಗೋಡು, ದಕ ಜಿಲ್ಲೆಗಳ ಹಳೆ ತಲೆಮಾರಿಗಿದು ಗೊತ್ತು. ಇದು ಈ ಭಾಗದ ಸಾಂಪ್ರದಾಯಿಕ ಮುಂಜಾನೆ ಉಪಾಹಾರದ ತಿಂಡಿ. ಆದರೆ ಈಗ ಮರೆತೇಹೋಗಿದೆ. ಈಗಲೂ ಇದನ್ನು ಮಾಡಿ ಸವಿಯುವ ಬೆರಳೆಣಿಕೆಯ ಕುಟುಂಬಗಳು ಇದ್ದರೂ ಇರಬಹುದು.
ಯಾವುದೇ ಜಾತಿಯ ಬಾಳೆಕಾಯಿ ತೆಕ್ಕೊಳ್ಳಿ. ಸಿಪ್ಪೆ ಸಮೇತ ಇಡ್ಲಿ ಪಾತ್ರೆ/ ಪ್ರೆಶರ್ ಕುಕ್ಕರಿನಲ್ಲಿ ಬೇಯಿಸಿ. ಬಿಸಿ ಪೂರ್ತಿ ಆರುವ ಮೊದಲೇ ಸಿಪ್ಪೆ ಬಿಡಿಸಿ ಶಾವಿಗೆ ಮಣೆಯಲ್ಲಿ ಒತ್ತಿ. ಇದರಲ್ಲಿ ಉಪ್ಪು ಇರುವುದಿಲ್ಲ. ಹಾಗಾಗಿ ಉಪ್ಪು, ಹಸಿಮೆಣಸು, ಈರುಳ್ಳಿ ಮತ್ತು ನಿಮ್ಮ ಇಷ್ಟವಸ್ತುಗಳನ್ನು ಸೇರಿಸಿ ಒಗ್ಗರಣೆ ಮಾಡಿ.
ಶಾವಿಗೆ ಮಣೆ ಇಲ್ಲದಿದ್ದರೆ ಚಕ್ಕುಲಿ ಮುಟ್ಟಿನಲ್ಲೂ ಓಕೆ. ಸ್ವಲ್ಪ ಕಷ್ಟಕರ. ನಾವು ಕಳೆದ ಹತ್ತು ದಿನಗಳಲ್ಲಿ ಮೂರು ಬಾರಿ ಮಾಡಿದ್ದೇವೆ. ಚಕ್ಕುಲಿ ಮುಟ್ಟಿನಲ್ಲೇ. ಸ್ವಲ್ಪ ಕಷ್ಟ ಆದದ್ದು ತಿನ್ನುವಾಗ ಆದ ಆನಂದದಲ್ಲಿ ಮರೆತೇಹೋಯಿತು.
ಒಮ್ಮೆ ಮಾಡಿ ಸವಿದು ನೋಡಿ. ಮತ್ತೆ ನಿಮ್ಮ ಅನುಭವ ವಾಟ್ಸಪ್ ಗುಂಪುಗಳಲ್ಲಿ ಹಂಚಿಕೊಳ್ಳಿ. ಅಡಿಕೆ ಪತ್ರಿಕೆಗೂ ತಿಳಿಸಿ. (ವಾಟ್ಸಪ್: 80731 40917)
ಪಟಗಳು: ಡಾ.ಸರಿತಾ ಹೆಗ್ಡೆ, ಕೇವೀಕೆ ಕಾಸರಗೋಡು, ವಿನೋದ್ ರಾವ್ ಮಂದರ್ತಿ
- ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ