|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯಕ್ಷಲೋಕದ ಕೋಲ್ಮಿಂಚು ಪ್ರಕಾಶ್ ಮೊಗವೀರ ಕಿರಾಡಿ

ಯಕ್ಷಲೋಕದ ಕೋಲ್ಮಿಂಚು ಪ್ರಕಾಶ್ ಮೊಗವೀರ ಕಿರಾಡಿ


ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ನಮಗೆ ಅನೇಕ ಯುವ ಪ್ರತಿಭೆಯನ್ನು ನೋಡಲು ಸಿಗುತ್ತಾರೆ. ಅಂತಹ ಯುವ ವೇಷಧಾರಿಯನ್ನು ನಾವು ಇವತ್ತು ಪರಿಚಯ ಮಾಡಲು ಹೊರಟಿದ್ದೇವೆ. ಯಕ್ಷಗಾನ ರಂಗದಲ್ಲಿ ಮಿಂಚಿನ ನಾಟ್ಯ, ಮಾತುಗಾರಿಕೆ, ವೇಷಗಳಿಂದ ಯಕ್ಷಗಾನ ರಂಗದಲ್ಲಿ ದೀಪದಂತೆ ಪ್ರಕಾಷಿಸುತ್ತ ಇರುವ ಪ್ರತಿಭೆ ಪ್ರಕಾಶ್ ಮೊಗವೀರ ಕಿರಾಡಿ.


ಸೆಪ್ಟೆಂಬರ್ 11ರಂದು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆವರ್ಸೆ ಗ್ರಾಮದ ಕಿರಾಡಿಯಲ್ಲಿ ಶ್ರೀಮತಿ ಪಾರ್ವತಿ ಹಾಗೂ ಶ್ರೀಯುತ ನಾರಾಯಣ ಮರಕಾಲ ಇವರ ಪ್ರೀತಿಯ ಮಗನಾಗಿ ಜನನ. 7ನೇ ತರಗತಿವರೆಗೆ ವಿದ್ಯಾಭ್ಯಾಸ. ಚಿಕ್ಕ ಪ್ರಾಯದಲ್ಲಿ ಇರುವಾಗ ಊರಿನಲ್ಲಿ ನಡೆಯುವ  ಯಕ್ಷಗಾನ ಬಯಲಾಟ ನೋಡಲು ತಮ್ಮ ಸಹೋದರಿಯ ಜೊತೆಗೆ ತೆರಳುತ್ತಿದ್ದರು. "ನಾನು ಕೂಡ ಮುಂದೆ ಯಕ್ಷಗಾನದಲ್ಲಿ ಒಬ್ಬ ಕಲಾವಿದ ಆಗಬೇಕು" ಎಂದು ಕನಸು ಕಾಣುತ್ತಿದ್ದರು.


ಇವರು ಯಕ್ಷಗಾನ ಕಲಿಕೆಯನ್ನು ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರುಗಳಾದ ಬನ್ನಂಜೆ ಸಂಜೀವ ಸುವರ್ಣ ಹಾಗೂ ನಗರ ಸುಬ್ರಮಣ್ಯ ಆಚಾರ್ ಹಾಗೂ ಎಲ್ಲಾ ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ಯಕ್ಷಗಾನದಲ್ಲಿ ಪರಿಪೂರ್ಣ ಕಲಾವಿದರಾಗಿ ಹೊರಹೊಮ್ಮಿದರು.


ಕಿರಾಡಿಯವರು ತಮ್ಮ ಯಕ್ಷ  ಜೀವನದ ಚೈತ್ರಯಾತ್ರೆಯನ್ನು ಆರಂಭಿಸಲು ಆಯ್ದುಕೊಂಡ ಮೇಳ ಮಂದಾರ್ತಿ ಮೇಳವನ್ನು. ಆರಂಭದಲ್ಲಿ ಬಾಲಗೋಪಾಲ, ದೇವೇಂದ್ರ, ರಕ್ಕಸ ಹೀಗೆ ಅನೇಕ ಪೋಷಕ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಬಬ್ರುವಾಹನ, ಕುಶ-ಲವ, ಸುಧನ್ವ, ಅರ್ಜುನ ಹೀಗೆ ಅನೇಕ ಪುಂಡು ವೇಷಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ಯುವ ಕಲಾವಿದನಾಗಿ ಗುರುತಿಸಿಕೊಂಡರು. ಸದಾ ಪುಂಡು ವೇಷ ಮಾಡುವ ಕಿರಾಡಿಯವರು ಮದನಾಕ್ಷಿ, ತಾರಾವಳಿಯಂಥ ಕಸೆ ವೇಷವನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಪೌರಾಣಿಕ, ಸಾಮಾಜಿಕ, ಐತಿಹಾಸಿಕ ಹಾಗೂ ಎಲ್ಲಾ ತರಹದ ಪ್ರಸಂಗಗಳು ನನಗೆ ಇಷ್ಟ ಹಾಗೂ ಎಲ್ಲಾ ತರಹದ ಪಾತ್ರವನ್ನು ತುಂಬಾ ಇಷ್ಟಪಟ್ಟು ಮಾಡುತ್ತೆನೆ ಎಂದು ಇವರು ಹೇಳುತ್ತಾರೆ.


ಕಿರಾಡಿಯವರು ಮಂದಾರ್ತಿ ಮೇಳದಲ್ಲಿ 4 ವರ್ಷ, ಸಾಲಿಗ್ರಾಮ ಮೇಳದಲ್ಲಿ 3 ವರ್ಷ, ಹಿರಿಯಡ್ಕ ಮೇಳದಲ್ಲಿ 1ವರ್ಷ ಹಾಗೂ ಪ್ರಸ್ತುತ 8 ವರ್ಷಗಳಿಂದ ಪೆರ್ಡೂರು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ.


ಪ್ರತೀ ವರ್ಷ ಕೋಟೇಶ್ವರದಲ್ಲಿ ನಡೆಯುವ ಕೋಟೇಶ್ವರ ಯಕ್ಷೊತ್ಸವದಲ್ಲಿ "ಕೋಟೇಶ್ವರ ಯಕ್ಷೊತ್ಸವ ಪ್ರಶಸ್ತಿ" ನೀಡಿ ಗೌರವಿಸಿದ್ದಾರೆ ಹಾಗೂ ಹಲವು ಸಂಘ ಸಂಸ್ಥೆಗಳಿಂದ ಸನ್ಮಾನ ಇವರ ಮುಡಿಗೆ ದೊರಕಿದೆ. ತಾಳಮದ್ದಲೆ ಹಾಗೂ ಯಕ್ಷಗಾನ ನೋಡುವುದು ಇವರ ಹವ್ಯಾಸಗಳು.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಹೀಗೆ ಹೇಳುತ್ತಾರೆ ಕಿರಾಡಿಯವರು:-

ಯಕ್ಷಗಾನ ಮಾತ್ರ ಅಲ್ಲಾ ಎಲ್ಲರ ಪರಿಸ್ಥಿತಿ ಕಷ್ಟ ಆಗಿದೆ, ಯಕ್ಷಗಾನ ಮೊದಲಿನಂತೆ ಆಗಬೇಕಾದರೆ ಕಲಾ ಪ್ರೋತ್ಸಾಹಕರ ಸಂಘಟಕರ ಬದುಕು ಸರಿ ಆಗಬೇಕು ಆಗ ಕಲೆ ಕಲಾವಿದರ ಯಕ್ಷಗಾನ ಸ್ಥಿತಿ ಸರಿ ಹೋಗುತ್ತೆ.


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ ಕಿರಾಡಿಯವರು:-

ಸಂತೋಷ ಆಗುತ್ತೆ, ಈಗ ಪ್ರೇಕ್ಷಕರ ವರ್ಗದಲ್ಲಿ ತಿಳಿದವರು ಹೆಚ್ಚು ಇರ್ತಾರೆ, ಹಾಗೂ ಯುವ ಜನತೆ ಹೆಚ್ಚಾಗಿ ಯಕ್ಷಗಾನಕ್ಕೆ ಬರ್ತಾರೆ, ಇದನ್ನು ನೋಡಿ ತುಂಬಾನೇ ಖುಷಿ ಆಗುತ್ತೆ.


ಜನ್ಮ ಕೊಟ್ಟ ಅಮ್ಮ, ಪೆರ್ಡೂರು ಮೇಳದಲ್ಲಿ ಅವಕಾಶ ಕೊಟ್ಟಿರುವ ವೈ. ಕರುಣಾಕರ ಶೆಟ್ಟಿಯವರು, ಗುರುವಾಗಿ ಮಾರ್ಗದರ್ಶನ ನೀಡುತ್ತಿರುವ ಪವನ್ ಕಿರಣ್ ಕೆರೆಯವರು ಹಾಗೂ ಮೇಳದ ಪ್ರತಿಯೊಬ್ಬ ಕಲಾವಿದರೂ ನನಗೆ ಮಾದರಿ ಎನ್ನುತ್ತಾರೆ ಕಿರಾಡಿಯವರು.


ಇವರಿಗೆ ಇವರು ನಂಬಿರುವ ಕಲಾಮಾತೆ  ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ.


- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post