|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹೈಗುಂದ ಶಬ್ದದ ಅರ್ಥವೇನು?

ಹೈಗುಂದ ಶಬ್ದದ ಅರ್ಥವೇನು?


ಹವ್ಯಕರಿಗೆ 'ಹವೀಕ' ಎಂಬ ನಾಮಧೇಯವನ್ನಿತ್ತ (ತುಳುವರು 'ಹೈಗೆರ್' ಎನ್ನುವರು: ಹೈಗ ಪ್ರದೇಶದವರು ಹೈಗರು) ಹೈಗುಂದ ಶಬ್ದದ ಬಗ್ಗೆ ನಾನು ಹಲವಾರು ಕಡೆ ಬರೆದಿದ್ದೇನೆ ಮತ್ತು ಮಾತಾಡಿದ್ದೇನೆ. ಪ್ರಾಯಶಃ ಅದನ್ನು ನೋಡಿರದ ಹೊಸ ಜಿಜ್ಞಾಸುಗಳು ಮತ್ತೆ ಮತ್ತೆ ಈ ಬಗ್ಗೆ ನನ್ನನ್ನು ಕೇಳುತ್ತಿರುತ್ತಾರೆ.


'ಹಯ' ಮತ್ತು 'ಕುಂದ' ಎಂಬೆರಡು ಶಬ್ದಗಳು ಸೇರಿ ಹಯಗುಂದ ಎಂದಾಗಿದೆ. ಅನಂತರ 'ಹಯಗುಂದ>ಹೈಗುಂದ' ಎಂದಾಗಿದೆ. 'ಹಯ' ಎಂದರೆ ಪಶು, ಹಸು (ದನ) ಮತ್ತು 'ಕುಂದ' ಎಂದರೆ ಎತ್ತರದ ಬೆಟ್ಟಪ್ರದೇಶ. ತುಂಬ ಹಸುಗಳಿರುವ ಬೆಟ್ಟದ ತಪ್ಪಲು ಪ್ರದೇಶ ಎಂಬುದು ಹೈಗುಂದ ಶಬ್ದದ ಒಟ್ಟು ಅರ್ಥ.


ಕುಂದಾಪುರ ಎಂಬಲ್ಲಿಯೂ ಕುಂದ ಶಬ್ದ ಇದೆ. ಎತ್ತರದ ಬೆಟ್ಟಗಳುಳ್ಳ ತಪ್ಪಲು ಪ್ರದೇಶ ಎಂದು ಅದರ ಅರ್ಥ.


ಹವ್ಯಕರು ಕಾಲಾಂತರದಲ್ಲಿ ಗೋಕರ್ಣ, ಶಿರಸಿ ಮುಂತಾದೆಡೆಗಳಲ್ಲಿ ಹರಡಿಕೊಂಡರು. ಶಿರಸಿಗೆ ಹೋಗಿ ನೆಲಸಿದ ತರುವಾಯದಲ್ಲಿ ತಾವು ಬಂದ ಮೂಲಸ್ಥಾನ ಹೈಗುಂದದ ನೆನಪಿಗೆ ಹೈಗುಂದ ಎಂಬ ಅರ್ಥ ಕೊಡುವ 'ಶಿರಸಿ' ಎಂಬ ಹೆಸರನ್ನು ಇಟ್ಟುಕೊಂಡರು. ಹೈಗುಂದ ಶಬ್ದವು ಸಂಸ್ಕೃತೀಕರಣಗೊಂಡು 'ಶಿರಸಿ' ಎಂದಾಗಿದೆ (ಶಿರಸ್, ಶಿರಸೇ ಎಂಬುದು ಕ್ರಮೇಣ ಶಿರಸಿ ಎಂದಾಯಿತು).


ಕ್ರಿ. ಶ. ಐದನೇ ಶತಮಾನದಲ್ಲಿ (ಕ್ರಿ. ಶ. ಸುಮಾರು 450) ಕದಂಬ ಮಯೂರ ಶರ್ಮನ ಕಾಲದಲ್ಲಿ ಉತ್ತರ ಭಾರತದ ಅಹಚ್ಛತ್ರಪುರದಿಂದ ವಲಸೆ ಬಂದ ಕೆಲವು ಬ್ರಾಹ್ಮಣ ಕುಲಗಳಿಗೆ ಸಾವಿರ ಸಾವಿರಗಟ್ಟಲೆ ಇದ್ದ ತಮ್ಮ ಪಶುಗಳೊಂದಿಗೆ ನೀರು ಮತ್ತು ಮೇವಿನ ಆಶ್ರಯ ಇರುವ, ಭದ್ರತೆ ಇರುವ ಜಾಗ ಬೇಕಾಗಿತ್ತು. ಆಗ ಒದಗಿ ಬಂದ ಪ್ರದೇಶವೇ ಹೊನ್ನಾವರ ಬಳಿ ಶರಾವತಿ ನದಿಯ ದ್ವೀಪದಂತಹ ಜಾಗ ಹೈಗುಂದ. ಕಳ್ಳಕಾಕರಿಂದ ಮತ್ತು ಕ್ರೂರ ಕಾಡುಮೃಗಗಳಿಂದ ಇಲ್ಲಿ ಸಹಜ ಸ್ವಾಭಾವಿಕವಾದ ರಕ್ಷಣೆ ಹವ್ಯಕರಿಗೆ ಸಿಕ್ಕಿತು. ನದಿಯ ಸಣ್ಣ ಕವಲನ್ನು ಅಗೆದು ತುಸು ಆಳವೂ ಅಗಲವೂ ಮಾಡಿ ದ್ವೀಪಕ್ಕೆ ರಕ್ಷಣೆ ಮಾಡಿಕೊಂಡಂತಿದೆ.   


ಹವ್ಯಕ ಮಾಣಿ ಮಯೂರ ಶರ್ಮನೇ ಕ್ಷಾತ್ರ ಕೆಲಸಕ್ಕಿಳಿದು ಮಯೂರ ವರ್ಮ ಆದಂತೆ ತೋರುತ್ತದೆ. ಅಂದರೆ ಕದಂಬ ರಾಜ್ಯಸ್ಥಾಪಕರು ಹವ್ಯಕರೇ ಎಂಬುದರಲ್ಲಿ ಅನುಮಾನವಿಲ್ಲ (ಶರ್ಮ ಎಂದರೆ ಬ್ರಾಹ್ಮಣ, ವರ್ಮ ಎಂದರೆ ಕ್ಷತ್ರಿಯ).


ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿ ಸುಮಾರು ಒಂದು ಸಾವಿರದ ಐನೂರ ಎಪ್ಪತ್ತು ವರ್ಷಗಳಿಂದ ವಾಸಿಸುತ್ತಿರುವ ಹವ್ಯಕರದು ಒಂದು ರೋಚಕ ಇತಿಹಾಸ. ಈ ದೀರ್ಘ ಇತಿಹಾಸದಲ್ಲಿ ಹೈಗುಂದದಿಂದ ಗೋಕರ್ಣ ಮತ್ತು ಅಲ್ಲಿಂದ ಶಿರಸಿ, ಸಿದ್ದಾಪುರ, ಸಾಗರ ಮತ್ತು ಸುಮಾರು 1650 ರಲ್ಲಿ ದಕ್ಷಿಣ ಕನ್ನಡ, ಕಾಸರಗೋಡು ಅನಂತರ ಕೊಡಗು, ಕೇರಳ ಮುಂತಾದೆಡೆಗಳಿಗೆ ಹಬ್ಬಿಕೊಂಡ ಹವ್ಯಕರದು ಬ್ರಾಹ್ಮಣ್ಯದ ಅನುಷ್ಠಾನದೊಂದಿಗೆ ಆ ಕಾಲದ ಸಂಪತ್ತು ಎಂದು ಪರಿಗಣಿತವಾದ ಪಶು ಮತ್ತು ಕೃಷಿಯನ್ನು ಅವಲಂಬಿಸಿ ಜೀವಿಸುತ್ತ ಬಂದಿರುವ ಒಂದು ಸಾಹಸಶೀಲ ಬದುಕೇ ಸರಿ.


- ಡಾ. ವಸಂತಕುಮಾರ ಪೆರ್ಲ, ಮಂಗಳೂರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم