ಬದಿಯಡ್ಕ: ಮುಳ್ಳೇರಿಯ ಮಂಡಲಾಂತರ್ಗತ ಕೊಡಗು, ಸುಳ್ಯ, ಈಶ್ವರಮಂಗಲ, ಗುತ್ತಿಗಾರು, ಚಂದ್ರಗಿರಿ, ಕಾಸರಗೋಡು, ಗುಂಪೆ, ಪಳ್ಳತ್ತಡ್ಕ, ಎಣ್ಮಕಜೆ, ಪೆರಡಾಲ, ಕುಂಬಳೆ, ನೀರ್ಚಾಲು ವಲಯಗಳ ಗುರುಭಿಕ್ಷಾ ಸೇವೆಯ ಸಹಿತ ಸರ್ವ ಸೇವೆಗಳು ಭಾದ್ರಪದ ಶುಕ್ಲದ ಬಿದಿಗೆ ತದಿಗೆಯ ಶುಭದಿವಸ ತಾ. 08. 09.2021 ಮತ್ತು 09.09.2021 ಗುರುವಾರದಂದು ಬೆಂಗಳೂರಿನ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀಮಹಾಸ್ವಾಮಿಗಳವರ ಹಾಗೂ ಶ್ರೀಕರಾರ್ಚಿತ ಸರ್ವದೇವತಾ ಸಾನ್ನಿಧ್ಯದಲ್ಲಿ ನಡೆದವು.
ಈ ಸಂದರ್ಭದಲ್ಲಿ ಹಾಜರಿದ್ದ ಎಲ್ಲ ವಲಯಗಳ ಪದಾಧಿಕಾರಿಗಳು, ಮಹಾಮಂಡಲ- ಮಂಡಲಗಳ ಪದಾಧಿಕಾರಿಗಳು ಮತ್ತು ನೆರೆದಿದ್ದ ಹಲವು ಶಿಷ್ಯ- ಭಕ್ತರ ಸಭೆಯು ಜಗದ್ಗುರುಗಳ ನೇತೃತ್ವದಲ್ಲಿ ಯಶಸ್ವಿಯಾಗಿ ಸೇರಿತು.
ಶ್ರೀ ಸಂಸ್ಥಾನದವರು ಸಭೆಯನ್ನುದ್ದೇಶಿಸಿ ಕೆಲವು ಮಹತ್ವ- ಪೂರ್ಣ ವಿಷಯಗಳ ಬಗ್ಗೆ ಅನುಗ್ರಹ ನುಡಿಗಳನ್ನಾಡಿದರು.
ಗೋಕರ್ಣದ ಅಶೋಕೆಯೆಂಬ ಪರಮಪುಣ್ಯ ಸ್ಥಳದಲ್ಲಿ ಈಗಾಗಲೇ ತಲೆಯೆತ್ತಿ ನಿಂತು ಕಾರ್ಯಾರಂಭ ಮಾಡಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸ್ಥಾಪನೆಯ ಉದ್ದೇಶದ ಬಗ್ಗೆ ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಸಂಸ್ಕಾರದಸಂಪೂರ್ಣವಾಗಿ ನಾಶವಾಗುತ್ತಿರುವ ಹವ್ಯಕ ಸಂಸ್ಕೃತಿಯ ಉಳಿವಿನ ಬಗ್ಗೆ ಜಾಗೃತಿಯನ್ನು ಮೂಡಿಸುವ ಮಾತುಗಳನ್ನಾಡಿದರು.
ಹವ್ಯಕ ಪರಂಪರೆಯ ಶ್ರೇಷ್ಠತೆ, ಹವ್ಯಕರ ಆಚಾರ- ವಿಚಾರ, ಆಹಾರ- ಪಾನಾದಿಗಳ ಪ್ರಾಮುಖ್ಯತೆಯಷ್ಟೇ ಅಲ್ಲದೆ, ವಿವಿವಿಗೆ ಹೆಚ್ಚೆಚ್ಚು ಮಕ್ಕಳನ್ನು ಸೇರಿಸುವಲ್ಲಿ ಎಲ್ಲ ಪದಾಧಿಕಾರಿಗಳೂ, ಶಿಷ್ಯ- ಭಕ್ತರೂ ಶ್ರಮಿಸಬೇಕು. ಅದರಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕೆಲಸದ ಜೊತೆಗೆ ದೇಶಪ್ರೇಮವನ್ನೂ ಬೆಳೆಸಬೇಕು. ಅದಕ್ಕಾಗಿಯೇ ಅಶೋಕೆಯಲ್ಲಿ ಗುರುಕುಲಗಳ ಸ್ಥಾಪನೆಯಾಗಿದೆ. ಇಂತಹದ್ದೊಂದು ವಿದ್ಯಾಸಂಸ್ಥೆ ಇಡೀ ವಿಶ್ವದಲ್ಲಿ ಮತ್ತೆಲ್ಲಿಯೂ ಕಾಣಸಿಗದು. ವಿಶ್ವವಿದ್ಯಾಪೀಠದ ಅಭಿವೃದ್ಧಿಗಾಗಿ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ