"ಏನಾದರಾಗಲಿ, ಜನರಿಗೆ ಇದರ ಪ್ರಯೋಜನ ಸಿಗಬೇಕು."
ಇದು 68ರ ಹರೆಯದ ಅತ್ಯುತ್ಸಾಹಿ ಕೃಷಿ ಮಹಿಳೆ ಕಾಸರಗೋಡು ಜಿಲ್ಲೆಯ ಸುಶೀಲಾ ಎಸ್.ಎನ್. ಭಟ್ ಪಾತನಡ್ಕ ಬಾಕಾಶಾದ ಬಗ್ಗೆ ಹೇಳುವ ಮಾತು.
ಸದ್ಯಕ್ಕೆ ಇವರು ಬಳ್ಳಾರಿಯ ಮಗಳ ಮನೆಯಲ್ಲಿದ್ದಾರೆ. ನಾಳೆ ಅಲ್ಲಿನ ಕೃಷಿ ವಿಜ್ಞಾನ ಕೇಂದ್ರದ ವಿನಂತಿಯ ಮೇರೆಗೆ ಆ ಊರಿನ ಹೆಣ್ಮಕ್ಕಳಿಗೆ ಬಾಕಾಶಾ ಮತ್ತು ಬಾಳೆಕಾಯಿಯ ಹಲವು ಮೌಲ್ಯವರ್ಧಿತ ಉತ್ಪನ್ನಗಳನ್ನು ಕಲಿಸಿಕೊಡಲಿದ್ದಾರೆ.
ನಂಬಲು ಕಷ್ಟ ಆಗಬಹುದು. ಸುಶೀಲಕ್ಕ ಅರ್ಧ ಶತಮಾನದಿಂದ ಬಾಳೆಕಾಯಿ ಶಾವಿಗೆ (ಬಾಕಾಶಾ) ಸವಿದವರು ಮಾತ್ರವಲ್ಲ. ಕೇಳಿದವರಿಗೆ ಇಂದಿಗೂ ಅದೇ ಹೊಸ ಉತ್ಸಾಹದೊಂದಿಗೆ ಹೇಳಿಕೊಡುತ್ತಿರುವ ಅಪರೂಪದ ಸಂಪನ್ಮೂಲ ವ್ಯಕ್ತಿ. "ನನ್ನ ಅಮ್ಮನೂ ಬಾಳೆಕಾಯಿ ಶಾವಿಗೆ ಮಾಡುತ್ತಿದ್ದರು, ಅತ್ತೆಯೂ ಮಾಡುತ್ತಿದ್ದರು" ಎಂದು ನೆನೆಯುತ್ತಾರೆ.
ಊರಿನ ಉಳಿದ ಕುಟುಂಬಗಳು ಬಾಕಾಶಾ ಮರೆತುಬಿಟ್ಟರೂ, ದಶಕಗಳಿಂದ ಈ ವಿದ್ಯೆಯನ್ನು ಜೀವಂತವಾಗಿಟ್ಟ ಕೀರ್ತಿ ಸುಶೀಲಾ ಭಟ್ ಅವರಿಗೆ ಸಲ್ಲಬೇಕು. ನೀವು ಒಂದು ಬಾಳೆಗೊನೆಯನ್ನು ತಂದು ಸುಶೀಲಕ್ಕನಿಗೆ ಒಪ್ಪಿಸಿಬಿಡಿ. ನಂತರ ಅವರ ವಿವರಣೆ ಕೇಳುತ್ತಾ ನಿಲ್ಲಿ.
"ಕದಳಿ (ಏಲಕ್ಕಿ) ಬಾಳೆ ಶಾವಿಗೆಗೆ ರುಚಿ. ಬೇಯಿಸಿ ಬಿಸಿಯಿದ್ದಾಗಲೇ ಒತ್ತಿ. ಸ್ವಲ್ಪ ಉಪ್ಪುನೀರು ಚಿಮುಕಿಸಿ ಹಾಗೆಯೇ ತಿನ್ನಿ. ಇಲ್ಲಾಂದ್ರೆ ಒಗ್ಗರಣೆ ಹಾಕಿ ಸವಿಯಿರಿ. ಉಳಿದರೆ ಮೂರು ಬಿಸಿಲಿಗೆ ಒಡ್ಡಿ ಡಬ್ಬದಲ್ಲಿ ತುಂಬಿ ಇಡಿ. ವರ್ಷವೊಂದಾದರೂ ಕೆಡದು. ಪಾಯಸ, ಚಿತ್ರಾನ್ನ, ಹುರಿದು ಕುರುಕುರು ಶಾವಿಗೆ - ಏನು ಬೇಕೋ ಅದನ್ನೆಲ್ಲಾ ಮಾಡಿಕೊಳ್ಳಿ" ಸುಶೀಲಕ್ಕನ ಮಾತಿನ ಓಘ, ಹುಮ್ಮಸ್ಸು ಕಂಡವರು ಅವರಿಗೆ ವಯಸ್ಸು 68 ಎಂದರೆ ನಂಬಲಾರರು.
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ