ಆಂತರಿಕ ಕಾರಣಗಳಿಂದಾಗಿ ಮಿಝೋರಾಂನಲ್ಲಿ ಜನಜೀವನ ಆತಂಕಮಯ. ಆವಶ್ಯಕ ವಸ್ತು ಕೊರತೆ. ಡೀಸೆಲ್ ಕೊರತೆ. ನೆಟ್ವರ್ಕ್ ಅಲಭ್ಯತೆ- ಇವೆಲ್ಲವುಗಳ ನಡುವೆ ಜನಜೀವನ ದುಸ್ತರ. ಹೀಗಿದ್ದರೂ ಕರ್ನಾಟಕದಲ್ಲಿ ಜೂನ್ ಕೊನೆಯ ವಾರದಲ್ಲೆದ್ದ 'ಬಾಕಾಹು (ಬಾಳೆಕಾಯಿ ಹಿಟ್ಟು) ತರಂಗ ಮಿಝೋರಾಂ ತಲಪಿದೆ. ಅಲ್ಲಿನ ಬಾಳೆ ಕೃಷಿಕರಿಗೆ ಮನೆಮಟ್ಟದ ಬಾಳೆಕಾಯಿ ಹುಡಿ ತಯಾರಿಯಲ್ಲಿ ಆಸಕ್ತಿ ಮೂಡಿದೆ.
ರೈತಪರವಾದ ಈ ವಿದ್ಯೆಯನ್ನು ಅಲ್ಲಿ ಬಿತ್ತಿದವರು ಕೇರಳದ ಕೋಟ್ಟಯಂ ಜಿಲ್ಲೆಯ ಮೂಲದ ಸರಕಾರಿ ಅಧಿಕಾರಿ ಮಾಯಾ ಸುರೇಶ್. ಅಲ್ಲಿ ’ಕುಟುಂಬಶ್ರೀ ಎನ್ ಆರ್ ಓ’ದ ಮಾರ್ಗದರ್ಶಿ. ಇವರು ಕಷ್ಟದಲ್ಲಿರುವವರಿಗೆ ಪ್ರಯೋಜನಕರ ಎಂದು ಮನದಟ್ಟಾದ ವಿಚಾರ ತಿಳಿಸಿಕೊಡಲು ಎಷ್ಟು ಕಷ್ಟಪಡಲೂ ಹಿಂಜರಿಯದ ಅನನ್ಯ ಅಧಿಕಾರಿ. ಹಿಂದೆ ಮಹಾರಾಷ್ಟ್ರದ ಕೊಂಕಣ್ ನಲ್ಲಿದ್ದಾಗ ಹಳ್ಳಿಮೂಲೆಯಲ್ಲೂ ’ಹಲಸಿನ ಹಬ್ಬ’ ಹಮ್ಮಿಕೊಂಡ ಉತ್ಸಾಹಿ ಮಹಿಳೆ.
ಎರಡು ವಾರದ ಹಿಂದೆ, ಬಾಳೆಕಾಯಿಗೆ ಬೆಲೆಯೇ ಇಲ್ಲ. ಏನಾದರೂ ಮಾಡಬೇಕು ಎಂದು ಚಿಂತಿಸುವಾಗಲೇ ಮಾಯಾಗೆ ನಮ್ಮಿಂದ ವಾಟ್ಸಪ್ ಮೂಲಕ ಕರ್ನಾಟಕದ ’ಬಾಕಾಹು’ ಅಂದೋಳನದ ಒಂದು ಸುದ್ದಿ ಹೋಯಿತು ರಾತ್ರಿಯೇ ಅವರು ಫೋನಿಸಿ, ವಿವರ ಪಡೆದು ಕಾರ್ಯಪ್ರವೃತ್ತರಾದರು. ಅಲ್ಲಿನ ಸಮಸ್ಯೆಗಳಿಂದಾಗಿ ಪ್ರಾಯೋಗಿಕ ಉತ್ಪಾದನೆ ತಡವಾಯಿತು.
ಮಿಝೋರಾಂ ರಾಜ್ಯದ ’ರೂರಲ್ ಲೈವ್ಲಿಹುಡ್ ಪ್ರೋಗ್ರಾಮಿ’ನ ಭಾಗವಾಗಿ ನವ ಉದ್ಯಮಶೀಲರಿಗಾಗಿ ಈ ಕಾರ್ಯಕ್ರಮವನ್ನು 'ಕುಟುಂಬಶ್ರೀ ಎನ್ಆರ್ಓ ನಡೆಸಿದೆ. ಅಲ್ಲಿನ ಭಾಷೆ ಮಾಯಾಗೆ ಬಾರದು. ಆದರೂ ಛಲ ಬಿಡಲಿಲ್ಲ. ಅನುವಾದಕರಾಗಿ ಸಹಕರಿಸಿದವರು ಯೋಜನಾ ಅನುವುಗಾರ್ತಿ (ಫೆಸಿಲಿಟೇಟರ್) ಮಾರ್ಗರೆಟ್ ವಲ್ನಾಂಘಾಕಿ. ಇವರು ಸ್ಥಳೀಯ ಮಿಝೋ ಮಹಿಳೆ. ಕುಟುಂಬಶ್ರೀಯ ಕ್ಷೇತ್ರ ಸಮನ್ವಯಗಾರ್ತಿ ಜೋಹಾನ್ ಜೋಸೆಫ್ ಅವರ ತುಂಬು ಬೆಂಬಲ.
ಇನ್ನೆರಡು ದಿನ ಒಣಗಿದ ಮೇಲೆ ಮಿಝೋ ಗೃಹಿಣಿಯರು ಬಾಳೆಕಾಯಿಯ ಹುಡಿ ಮಾಡುತ್ತಾರೆ. ಅದರಿಂದ ಸ್ಥಳೀಯ ಆಹಾರ ತಯಾರಿಸುತ್ತಾರೆ. ನೋಡುತ್ತಿರಿ. ಮಿಜೋರಾಮಿನ ಹಳ್ಳಿಮೂಲೆಯ ಬಾಳೆ ರೈತರ ಕುಟುಂಬಗಳಲ್ಲೂ ಹೊಸ ಸಂಚಲನ ಆರಂಭವಾಗಲಿದೆ.
ಮಾಯಾ ಸುರೇಶ್ ಅವರಂಥ ಅಧಿಕಾರಿಗಳು ಕನಿಷ್ಠ ಬೇಕು ತಾಲೂಕಿಗೊಬ್ಬರು!
Maya Suresh- 94004 36087
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
Key Words: Banana Flour, Banana Powder, Bakahu, ಬಾಕಾಹು, ಬಾಳೆಕಾಯಿ ಹುಡಿ, ಬಾಕಾಹು ಆಂದೋಲನ,
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ