ದೃಢಸಂಕಲ್ಪದ ನಿಲುವು ಸಾಕಾರಗೊಳ್ಳುತ್ತದೆ: ಮುರಳೀಧರ ಯಾದವ್
ಬದಿಯಡ್ಕ: ನಿಸ್ವಾರ್ಥವಾದ ಸೇವೆಗೈಯುವವರಿಗೆ ಸಮಾಜದಲ್ಲಿ ಯಾವತ್ತೂ ಪ್ರಧಾನವಾದ ಸ್ಥಾನವಿರುತ್ತದೆ. ಹಿಂದೂ ರಾಷ್ಟ್ರ, ಸನಾತನ ಸಂಸ್ಕೃತಿ, ಸಂಸ್ಕಾರವನ್ನು ಉಳಿಸಬೇಕೆಂಬ ರಾಷ್ಟ್ರೀಯ ಸ್ವಯಂಸೇವಕ ಸಂಘದ ದೃಢ ಸಂಕಲ್ಪವು ಸಾಕಾರಗೊಳ್ಳುವತ್ತ ಸಾಗುತ್ತಿದೆ ಎಂದು ಸಾಮಾಜಿಕ, ಧಾರ್ಮಿಕ ಮುಂದಾಳು ಮುರಳೀಧರ ಯಾದವ್ ನಾಯ್ಕಾಪು ಹೇಳಿದರು.
ವಿಶ್ವಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ ಬದಿಯಡ್ಕ ಪ್ರಖಂಡದ ನೇತೃತ್ವದಲ್ಲಿ ಶನಿವಾರ ಸಂಜೆ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ನಡೆದ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವಹಿಂದೂ ಪರಿಷತ್ ಬದಿಯಡ್ಕ ಪ್ರಖಂಡ ಅಧ್ಯಕ್ಷ ಲಕ್ಷ್ಮಣ ಪ್ರಭು ಕರಿಂಬಿಲ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವಿಶ್ವಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಜಯದೇವ ಖಂಡಿಗೆ ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ ಕಾರ್ಯಕರ್ತರ ಕಠಿಣ ಪರಿಶ್ರಮವಿದ್ದರೆ ಎಂತಹ ಸವಾಲುಗಳನ್ನೂ ದಿಟ್ಟವಾಗಿ ಎದುರಿಸಲು ಸಾಧ್ಯವಿದೆ. ಸಮಾಜ ಸೇವೆಯೊಂದಿಗೆ ಸಂಘಟನೆಯನ್ನು ಬಲಪಡಿಸುವುದು ನಮ್ಮ ಪ್ರಧಾನ ಗುರಿಯಾಗಿರಬೇಕು ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಚಾಲಕ ಶಿವಶಂಕರ ಭಟ್ ಗುಣಾಜೆ ಮಾತನಾಡಿ ಉತ್ತರದ ಹಿಮಾಲಯದಿಂದ ದಕ್ಷಿಣದ ಭೂಭಾಗವೆಲ್ಲಾ ಅಖಂಡ ಭಾರತವಾಗಿತ್ತು. ದೇಶ ವಿಭಜನೆಯಿಂದ ಅದೆಲ್ಲವೂ ಬೇರೆ ಬೇರೆ ದೇಶಗಳಾಗಿವೆ. ಸಂಕಲ್ಪದಿಂದ ಏನನ್ನೂ ಸಾಧಿಸಲು ಸಾಧ್ಯವಿದೆ ಎಂಬುದಕ್ಕೆ ದೇಶದಲ್ಲಿನ ಇತ್ತೀಚೆಗಿನ ಕೆಲವು ವಿದ್ಯಮಾನಗಳು ಉದಾಹರಣೆಗಳಾಗಿವೆ ಎಂದರು.
ಇದೇ ಸಂಧರ್ಭದಲ್ಲಿ ವಿಶ್ವಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಜಯದೇವ ಖಂಡಿಗೆ ಅವರನ್ನು ಸನ್ಮಾನಿಸಲಾಯಿತು. ಬಜರಂಗದಳ ಬದಿಯಡ್ಕ ಪ್ರಖಂಡ ಸಂಚಾಲಕ ಸುನಿಲ್ ಕಿನ್ನಿಮಾಣಿ ಉಪಸ್ಥಿತರಿದ್ದರು.
ವಿಶ್ವಹಿಂದೂಪರಿಷತ್ ಬದಿಯಡ್ಕ ಪ್ರಖಂಡ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ರೈ ಪುತ್ರಕ್ಕಳ ಸ್ವಾಗತಿಸಿ, ಪದಾಧಿಕಾರಿ ಸೂರ್ಯನಾರಾಯಣ ಧನ್ಯವಾದವನ್ನಿತ್ತರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ