"ಯಾರಾದರೂ ಬಾಳೆ ಕೃಷಿಕರು ಅದರ ಹುಡಿ ಮಾಡಿ ಪ್ಯಾಕ್ ಮಾಡಿ ತನ್ನಿ. ಹುಡಿ ಆದಲೂ ಹೇಳಿಕೊಡುತ್ತೀನಿ, ಮಾರಿಯೂ ಕೊಡುತ್ತೇನೆ" ಎಂದು ಅವರೀಗ ಹೇಳತೊಡಗಿದ್ದಾರೆ.
"ನಾನು ರೈತಸಂಘದ ಸದಸ್ಯ. ಎಲ್ಲಿ ಹೋದರೂ ಸಂಸ್ಕರಣೆಯ ಬಗ್ಗೆಯೇ ಮಾತಾಡುತ್ತೇನೆ. ಅರಿವು ಮೂಡಿಸಲೆಂದೇ ಬಾಳೆಕಾಯಿ ಹುಡಿ, ಒಣ ಬಾಳೆಹಣ್ಣು, ಬಾಳೆಕಾಯಿ ಉಪ್ಪಿನಕಾಯಿ, ಮೆಣಸಿನಕಾಯಿ ಹುಡಿ, ಟೊಮೆಟೊ ಹುಡಿ ಇತ್ಯಾದಿಗಳನ್ನು ಮಾಡಿ ನಾಲ್ಕು ಮಂದಿಗೆ ಹೇಳಿದ್ದೇನೆ. ರೈತಮಟ್ಟದ ಮೌಲ್ಯವರ್ಧನೆಯೊಂದೇ ನಮಗೆ ಕೃಷಿಕರಿಗೆ ರಕ್ಷಾಮಾರ್ಗ" ಎನ್ನುತ್ತಾರೆ 48 ವಯಸ್ಸಿನ ಹೊಸಪೇಟೆಯ ಬಾಳೆ ಕೃಷಿಕ ಕಾಳಿದಾಸ.
ಇವರಿಗೆ ಆರೆಕ್ರೆ ಬಾಳೆ ಕೃಷಿ ಇದೆ. ಇದರಲ್ಲಿ ನಾಲ್ಕೆಕ್ರೆ ಸುಗಂಧಿ ಬಾಳೆ, ಎರಡೆಕ್ರೆ ಏಲಕ್ಕಿ ಜಾತಿಯದು. ವರ್ಷಗಳ ಹಿಂದೆಯೇ ಯೂ ಟ್ಯೂಬನ್ನೇ ಗುರುವಾಗಿಸಿ ’ಡ್ರೈ ಬನಾನಾ’ ಅಂದರೆ, ಒಣ ಬಾಳೆಹಣ್ಣು ( ಸುಕೇಳಿ, ಬನಾನಾ ಫಿಗ್) ಮಾಡಿದ್ದರು. ಆದರೆ ಸುಲಭದಲ್ಲಿ ಅದನ್ನು ಮಾರಲು ಆಗಿರಲಿಲ್ಲ. ಮತ್ತೆ "ಹೆಂಗೂ ನನ್ನ ಉದ್ದೇಶ ಕಮರ್ಶಿಯಲ್ ಅಲ್ಲ. ಸಹರೈತರಿಗೆ ಸಂದೇಶ ಮುಟ್ಟಿದರೆ ಸಾಕು" ಎಂದುಕೊಂಡರು.
ಬಾಳೆಕಾಯಿಯ ಚಿಪ್ಸ್ ಮಾಡಿ ಬಿಸಿಲಿನಲ್ಲಿ ಒಣಗಿಸಿ ಬಾಳೆಕಾಯಿ ಹುಡಿ (ಬಾಕಾಹು) ಮಾಡಿದ್ದರು. ಇದಕ್ಕೂ ಯೂ ಟ್ಯೂಬೇ ಪ್ರೇರಣೆ. ಆಫ್ರಿಕಾದಲ್ಲಿ ತಾಜಾ ಬಾಳೆಕಾಯಿಯನ್ನು ಒನಕೆ ಥರದ ಮರದ ಉಪಕರಣದಲ್ಲಿ ಕುಟ್ಟಿ ಹಿಟ್ಟು ಮಾಡಿ ರೊಟ್ಟಿ ಮಾಡಿ ತಿನ್ನುತ್ತಾರಂತೆ. ಇವರು ಬಿಸಿಲಲ್ಲಿ ಒಣಗಿಸಿ ಅದರದೇ ರೊಟ್ಟಿ ಮಾದಹೊರಟರೆ ಅದು ’ಜಿಗಿ’ ಬರಲಿಲ್ಲ. ಎತ್ತಿ ಒಲೆಗೆ ಹಾಕುವಾಗ ತುಂಡುತುಂಡಾಯಿತು. "ಹೆಂಡ್ತಿಗೆ ಹೀಗೆ ಹೊಸ ಪ್ರಯೋಗದ ಬಗ್ಗೆ ಹೇಳಿದರೆ ಅವರು ಸಿಟ್ಟಾಗಬಹುದು ಅಂತ ನನ್ನದೇ ಅಡುಗೆ ನೋಡ್ರಿ" ಅಂತ ತಮಾಷೆ ಬೇರೆ ಮಾಡುತ್ತಾರೆ.
ಬಹುಶಃ ಕಾಳಿದಾಸರದು ರಾಜ್ಯದ ಈ ಭಾಗದಲ್ಲೇ ಬಾಕಾಹುವಿನ ತಿಂಡಿ ತಿಂದ ಏಕೈಕ ಹುಟುಂಬ ಇರಬಹುದು.ಈ ವಿಚಾರ ಬೆಳಕಿಗೆ ತಂದದ್ದು ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಡಾ. ಜ್ಯೋತಿ ಆರ್. ಅವರು ವಾಟ್ಸಪ್ ಗುಂಪಿನಲ್ಲಿ ಬಾಕಾಹು ಸುದ್ದಿಯನ್ನು ಹರಿಬಿಟ್ಟಾಗ ಕಾಳಿದಾಸರ ಬಾಕಾಹು ಪ್ರಯೋಗದ ಬಗ್ಗೆ ತಿಳಿಯಿತು. ಈಗ ಕಾಳಿದಾಸರ ಹುಮ್ಮಸ್ಸು ಒಮ್ಮೆಲೇ ಏರಿದೆ.
ಕಾಳಿದಾಸರಿಗೆ ಬಾಳೆಕಾಯಿ ವ್ಯಾಪಾರದ ಅಂಗಡಿಯಿದೆ. "ಯಾರಾದರೂ ಬಾಳೆ ಕೃಷಿಕರು ಅದರ ಹುಡಿ ಮಾಡಿ ಪ್ಯಾಕ್ ಮಾಡಿ ತನ್ನಿ. ಹುಡಿ ಆದಲೂ ಹೇಳಿಕೊಡುತ್ತೀನಿ, ಮಾರಿಯೂ ಕೊಡುತ್ತೇನೆ" ಎಂದು ಅವರೀಗ ಹೇಳತೊಡಗಿದ್ದಾರೆ. ಕೊಪ್ಪಳ - ವಿಜಯನಗರ ಜಿಲ್ಲೆಗಳ ಉತ್ಸಾಹಿ ಬಾಳೆ ರೈತರು ಗಮನಿಸಿ.
ಕಾಳಿದಾಸರ ಸಂಪರ್ಕ - *88848 42030 (ಸಮಯ ಸಂಜೆ 5 ರಿಂದ 7)
ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
Key words: Banana Flour, Banana powder, ಬಾಕಾಹು, ಬಾಳೆಕಾಯಿ ಹುಡಿ, ಬಾಕಾಹು ಆಂದೋಲನ