ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ಅಧ್ಯಯನ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕರ ಸಂಘ (ಮಾನುಷ) ದ ಸಹಯೋಗದೊಂದಿಗೆ ನಡೆಯುತ್ತಿರುವ ತುಳುನಾಡು ಮತ್ತು ಕೊಡಗಿನ ಇತಿಹಾಸ ಕುರಿತ ಉಪನ್ಯಾಸ ಸರಣಿಯ ಎರಡನೇ ವರ್ಚುವಲ್ ಕಾರ್ಯಕ್ರಮ- ʼತುಳುನಾಡಿನ ಪ್ರಾಗಿತಿಹಾಸ- ಒಂದು ಅವಲೋಕನʼ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿ, ಬ್ರಹ್ಮಾವರದ ಸೈಂಟ್ ಮೇರೀಸ್ ಸಿರಿಯನ್ ಕಾಲೇಜಿನ ಪ್ರಾಗಿತಿಹಾಸ ಮತ್ತು ಪುರಾತತ್ವ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಶಿವತಾರಕ್ ಕೆ ಬಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊರೆತಿರುವ ಆದಿಹಳೆ ಶಿಲಾಯುಗ, ಸೂಕ್ಷ್ಮ ಶಿಲಾಯುಗ, ನೂತನ ಶಿಲಾಯುಗ, ಬೃಹತ್ ಶಿಲಾಯುಗ ಮತ್ತು ಪ್ರಾಗ್ ಚಿತ್ರಗಳ ಕುರುಹುಗಳನ್ನು ಚಿತ್ರ ಸಹಿತ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಅನಸೂಯ ರೈ, ಅತಿಥಿಗಳು ಪ್ರಾಗಿತಿಹಾಸದ ದಾಖಲೀಕರಣದಲ್ಲಿ ಡಾ. ಪಿ ಗುರುರಾಜ ಭಟ್, ಡಾ. ವಸಂತ ಶೆಟ್ಟಿ ಮತ್ತು ಡಾ. ರಾಜೇಂದ್ರನ್ ಅವರ ಕೊಡುಗೆಯನ್ನು ವಿವರಿಸಿರುವುದು ಅಧ್ಯಯನಶೀಲರಿಗೆ ಅನುಕೂಲವಾಗಲಿದೆ, ಎಂದು ಅಭಿಪ್ರಾಯಪಟ್ಟರು.
ಸ್ವಾಗತ ಮತ್ತು ವ್ಯಕ್ತಿಪರಿಚಯ ನಡೆಸಿಕೊಟ್ಟ ವಿಭಾಗದ ಮುಖ್ಯಸ್ಥ ಡಾ. ಗಣಪತಿ ಗೌಡ, ಉಪನ್ಯಾಸ ಸರಣಿಗೆ ಉತ್ತಮ ಸ್ಪಂದನೆ ದೊರೆತಿದ್ದು, ಮನವಿಯ ಮೇರೆಗೆ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ, ಎಂದರು. ಡಾ. ಕುಮಾರಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಡಾ. ರಂಜಿತ್ ಧನ್ಯವಾದ ಸಮರ್ಪಿಸಿದರು. ಮಾನುಷದ ಸದಸ್ಯರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ